ಕಡೆತನಕ 'ರಣವಿಕ್ರಮ' ಗುಟ್ಟು ಬಿಟ್ಟುಕೊಡದ ಪವನ್
'ರಣವಿಕ್ರಮ' ಚಿತ್ರದ ಬಗ್ಗೆ ಚಿತ್ರತಂಡದ ಮಾತಿಲ್ಲ ಕಥೆ ಇಲ್ಲ ಬರಿ ರೋಮಾಂಚನ ಅನ್ನುತ್ತಿದೆ. ಪವರ್ ಸ್ಟಾರ್ ಪುನೀತ್ ಮತ್ತು ಚಿತ್ರತಂಡ ಇತ್ತೀಚೆಗೆ ಟಾಟಾ ಡೊಕೋಮೋ ನೆಟ್ ವರ್ಕ್ ನೊಂದಿಗೆ ಟೈ ಅಪ್ ಮಾಡಿಕೊಂಡು ಪ್ರಚಾರ ಮಾಡೋಕೆ ಶುರುಮಾಡಿದೆ.
ಇದು ಪುನೀತ್ ರ ಈ ಹಿಂದಿನ ಪವರ್ ಸ್ಟಾರ್ ಚಿತ್ರದಿಂದಲೇ ಶುರುವಾಗಿತ್ತು, ಈಗ ಮುಂದುವರೆದಿದೆ. ಪವರ್ ಸ್ಟಾರ್ ಚಿತ್ರದ ನಂತರ ಮುಂದಿನ ಚಿತ್ರವಾದ ರಣವಿಕ್ರಮದಲ್ಲೂ ಈ ಸಂಗಮ ಸಹಕಾರ ಮುಂದುವರೆದಿದೆ.

ಆದ್ರೆ ಚಿತ್ರ ರಿಲೀಸಾಗೋಕೆ ಮೂರು ದಿನ ಮಾತ್ರ ಬಾಕಿ ಇದೆ. ಅತುರಾತುರವಾಗಿ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿರೋದ್ರಿಂದ ಕಂಪ್ಲೀಟ್ ಚಿತ್ರತಂಡ ಬಿಜಿಯಾಗಿದೆ. ನಿರ್ದೇಶಕ ಪವನ್ ಒಡೆಯರ್ ಚೆನ್ನೈನಲ್ಲಿ ಚಿತ್ರದ ಕೆಲಸ ಮುಗಿಸೋದು ಬಾಕಿ ಉಳಿಸಿಕೊಂಡಿದ್ದಾರಂತೆ. ['ರಣವಿಕ್ರಮ'ನಿಗೆ ಸವಾಲಾದ ಸನ್ ಆಫ್ ಸತ್ಯಮೂರ್ತಿ]
ಚಿತ್ರದ ಬಗ್ಗೆ ಹಾಗಿದೆ, ಹೀಗಿದೆ ಅಂತ ಹೇಳಿ ಸುಮ್ನೆ ನಿರೀಕ್ಷೆ ಮೂಡಿಸಲ್ಲ. ಚಿತ್ರವನ್ನ ನಿಮಗೆ ತೋರಿಸಿದ ನಂತ್ರಾನೇ ಮಾತ್ನಾಡ್ತೀವಿ ಅಂತಾರೆ ಪವರ್ಸ್ಟಾರ್+ಪವನ್ ಒಡೆಯರ್. ಇದು ಥಿಯೇಟರ್ ವರೆಗೂ ಚಿತ್ರದ ಬಗ್ಗೆ ಗೌಪ್ಯತೆ ಕಾದಿಡೋ ಪ್ರಯತ್ನ ಇರಬಹುದು. ಆದ್ರೂ ಚಿತ್ರದ ಬಗ್ಗೆ ಸ್ವಲ್ಪ ಹಂಚಿಕೊಂಡಿದ್ರೆ ನಾವೂ ಜನ್ರಿಗೆ ಒಂದಷ್ಟು ವಿಷಯ ಹೇಳ್ಬಹುದಿತ್ತು ಅಂತ ಪತ್ರಕರ್ತರು ಗೊಣಗಿಕೊಳ್ತಿದ್ರು.

ಪುನೀತ್ ರಾಜ್ ಕುಮಾರ್ ಚಿತ್ರ ಎಂದರೆ ನಿರೀಕ್ಷೆಗಳು ಹೆಚ್ಚಾಗಿಯೇ ಇರುತ್ತವೆ. ಆ ಎಲ್ಲಾ ನಿರೀಕ್ಷೆಗಳನ್ನು ಪವನ್ ಒಡೆಯರ್ ನಿಜ ಮಾಡುತ್ತಾರಾ ಎಂಬುದನ್ನು ಕಾದುನೋಡಬೇಕು. ಪುನೀತ್ ಅಭಿನಯದ 'ಮೈತ್ರಿ' ಚಿತ್ರದ ಬಳಿಕ ಬರುತ್ತಿರುವ ಚಿತ್ರ ಇದಾಗಿದ್ದು, ಅಭಿಮಾನಿಗಳು ಭರ್ಜರಿ ಆಕ್ಷನ್ ನಿರೀಕ್ಷಿಸಿದ್ದಾರೆ.
ಪೊಲೀಸ್ ಪಾತ್ರದ ಜೊತೆಗೆ ಫ್ಯಾಮಿಲಿ ಹೀರೋ ಪುನೀತ್ ಸಿನಿಮಾ ಅಂದಮೇಲೆ ಅಲ್ಲೊಂದು ಪ್ಯೂರ್ ಲವ್, ಒಂಚೂರು ಸೆಂಟಿಮೆಂಟ್ ಇರಲೇಬೇಕು. ಅದೆಲ್ಲವನ್ನೂ ಕೊಂಚ ಕೊಂಚ ಬೆರೆಸಿರೋ ಪವನ್ ಒಡೆಯರ್ ಹದವಾದ ಪಾಕ ತಯಾರಿಸಿ ಪ್ರೇಕ್ಷಕರ ಮುಂದಿಡುತ್ತಿದ್ದಾರೆ.

ಅಂಜಲಿ ಹಾಗೂ ಆದಾ ಶರ್ಮಾ ಚಿತ್ರದ ನಾಯಕಿಯರಾಗಿದ್ದು ವಿ ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ. ಸರಿಸುಮಾರು ರು.18 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಚಿತ್ರ ಇದಾಗಿದೆ. ಇದೇ ಮೊದಲ ಬಾರಿಗೆ ಖಾಕಿ ಖದರ್ ತೋರಿಸಲಿದ್ದಾರೆ ಪುನೀತ್ ರಾಜ್ ಕುಮಾರ್.


Click it and Unblock the Notifications











