ಅಣ್ಣಾವ್ರ ಮೊಮ್ಮಗ ವಿನಯ್ ಎಂಟ್ರಿಗೆ ಮುಹೂರ್ತ ಫಿಕ್ಸ್
ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ಚಿತ್ರ 'ಸಿದ್ದಾರ್ಥ'. ಕಾರಣ ಗೊತ್ತೇ ಇದೆ ಅಣ್ಣಾವ್ರ ಮೊಮ್ಮಗ ವಿನಯ್ ರಾಜ್ ಕುಮಾರ್ ಸ್ಯಾಂಡಲ್ ವುಡ್ ಅಂಗಳಕ್ಕೆ ಅಡಿಯಿಡುತ್ತಿರುವುದು. ರಾಜ್ ಕುಟುಂಬದ ಕುಡಿ ಎಂದರೆ ಕೇಳಬೇಕೆ? ಇಡೀ ಚಿತ್ರೋದ್ಯಮವೇ ಬೆರಗುಗಣ್ಣಿನಿಂದ ನೋಡುವಂತಾಗಿದೆ.
ಸಿದ್ದಾರ್ಥ ಚಿತ್ರ ಯಾವಾಗ ಬಿಡುಗಡೆಯಾಗುತ್ತಿದೆ ಎಂಬ ವಿಶೇಷ ಮಾಹಿತಿ ಫಿಲ್ಮಿಬೀಟ್ ಕನ್ನಡಕ್ಕೆ ಸಿಕ್ಕದೆ. ಇದೇ ಜನವರಿ ತಿಂಗಳು 22 ಅಥಾವಾ 23ರಂದು ಚಿತ್ರ ಬಿಡುಗಡೆಯಾಗಲಿದೆ. ಹಾಗೆಯೇ, ಕೆ ಜಿ ರಸ್ತೆಯ ಕಪಾಲಿ ಚಿತ್ರಮಂದಿರದ ಸಹಿತ ರಾಜ್ಯದಾದ್ಯಂತ ಸುಮಾರು 175ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಸಿದ್ದಾರ್ಥ' ಸಿಡಿದೇಳಲಿದ್ದಾನೆ. [ಯೂಟ್ಯೂಬಲ್ಲಿ ಝೇಂಕರಿಸಿದ 'ಸಿದ್ದಾರ್ಥ' ಟ್ರೇಲರ್]

'ಸಿದ್ದಾರ್ಥ' ಚಿತ್ರತಂಡ ಚಿತ್ರದ ಪ್ರಚಾರಕ್ಕಾಗಿ ಮೈಸೂರು ಕಡೆ ಶನಿವಾರ (ಜ.10) ತೆರಳಿದೆ. ಬಿಡದಿ, ಚನ್ನಪಟ್ಟಣ, ರಾಮನಗರ ಮುಂತಾದೆಡೆ ಚಿತ್ರತಂಡಕ್ಕೆ ಅದ್ದೂರಿ ಸ್ವಾಗತ ದೊರೆತಿದೆ, ಅಭಿಮಾನಿಗಳ ಅಭಿಮಾನಕ್ಕೆ ಮೂಕವಿಸ್ಮಿತನಾಗಿದ್ದೇನೆಂದು ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಫಿಲ್ಮಿಬೀಟಿಗೆ ತಿಳಿಸಿದರು.
ಚಿತ್ರದ ಜನಪ್ರಿಯ ಹಾಡೊಂದನ್ನು ಇದೇ ಸಂಕ್ರಾತಿ ಹಬ್ಬದ ದಿನದಿಂದ ಟಿವಿಯಲ್ಲಿ ನೋಡಬಹುದಾಗಿದೆ ಎಂದು ರಾಘಣ್ಣ ವಿವರ ನೀಡಿದರು. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟ್ರೇಲರ್ ಯೂಟ್ಯೂಬ್ ನಲ್ಲಿ ಭಾರಿ ಸದ್ದು ಮಾಡಿದೆ.

ಪೂರ್ಣಿಮಾ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ಡಾ.ರಾಜ್ ಕುಮಾರ್ ಅರ್ಪಿಸಿ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಿಸುತ್ತಿರುವ ಅದ್ದೂರಿ ಚಿತ್ರ 'ಸಿದ್ದಾರ್ಥ'. ಚಿತ್ರಕ್ಕೆ ರಘು ಸಮರ್ಥ ಸಂಭಾಷಣೆ, ಸಾಹಿತ್ಯ ಜಯಂತ್ ಕಾಯ್ಕಿಣಿ, ಎಂ.ವಿ. ಕೃಷ್ಣಕುಮಾರ್ ಛಾಯಾಗ್ರಹಣ, ವಿ.ಹರಿಕೃಷ್ಣ ಸಂಗೀತ, ಮೋಹನ್ ಪಂಡಿತ್ ಕಲೆ, ಚಿನ್ನಿಪ್ರಕಾಶ್ ನೃತ್ಯ, ಸಚಿನ್ ಸಂಕಲನ ರವಿವರ್ಮ ಸಾಹಸ, ಚೆನ್ನ ನಿರ್ಮಾಣ ಮೇಲ್ವಿಚಾರಣೆ, ಮಲ್ಲಿಕಾರ್ಜುನ ನಿರ್ಮಾಣ ನಿರ್ವಹಣೆ ಅನಂತಮೂರ್ತಿ ನಿರ್ದೇಶನ ಸಹಕಾರವಿದ್ದು, ಚಿತ್ರಕಥೆ ಮತ್ತು ನಿರ್ದೇಶನ ಪ್ರಕಾಶ್ ಜಯರಾಮ್.
ಈ ಚಿತ್ರದ ಮೂಲಕ ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ನಾಯಕ ನಟನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದು, ಡಾ.ರಾಜ್ ಕುಟುಂಬದ ಮೂರನೇ ತಲೆಮಾರಿನ ನಾಯಕ ಇವರಾಗಲಿದ್ದು, ಇವರೊಂದಿಗೆ ಅಪೂರ್ವ ಆರೋರ, ಆಶಿಷ್ ವಿದ್ಯಾರ್ಥಿ, ಅಶ್ವಿನಿಗೌಡ, ಅಚ್ಯುತ ಕುಮಾರ್, ಸಾಧುಕೋಕಿಲ, ಅಶೋಕ್, ಸುಧಾರಾಣಿ, ನಿಕ್ಕಿ, ಗುರುನಂದನ್, ನಯನ, ದೀಪಿಕಾ, ಉಮೇಶ್, ಅಲೋಕ್, ಜೀವನ್, ವಿನೋದ್, ಮಣಿಶೆಟ್ಟಿ ಮುಂತಾದವರು ಉಳಿದ ತಾರಾ ಬಳಗದಲ್ಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











