ಈ ವಾರ 5 ಚಿತ್ರಗಳು ರಿಲೀಸ್, 2016ಕ್ಕೆ ಗುಡ್ ಬೈ!
ಡಿಸೆಂಬರ್ 30...ಸ್ಯಾಂಡಲ್ ವುಡ್ ಗೆ ಈ ವರ್ಷದ ಕೊನೆಯ ವಾರ. ಈ ವಾರ ಬಿಟ್ಟರೇ, ಮುಂದಿನ ವಾರದಿಂದ ಹೊಸ ವರ್ಷಕ್ಕೆ ಸೇರ್ಪಡೆಯಾಗುತ್ತದೆ. ಹೀಗಾಗಿನೇ ವರ್ಷಾಂತ್ಯಕ್ಕೆ ಪ್ರೇಕ್ಷಕರನ್ನ ರಂಜಿಸಲು ಒಂದಲ್ಲ, ಎರಡಲ್ಲ ಐದು ಚಿತ್ರಗಳು ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿದೆ.
ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಈ ವಾರದ ದೊಡ್ಡ ಸಿನಿಮಾವಾಗಿದ್ರೆ, ರಾಕೇಶ್ ಅಡಿಗ, ಸಂಜನಾ, ಅಮೃತಾ ಅಭಿನಯದ 'ಮಂಡ್ಯ ಟು ಮುಂಬೈ' ಚಿತ್ರ ಮತ್ತೊಂದು ನಿರೀಕ್ಷೆಯ ಚಿತ್ರ. ಇನ್ನೂ ಇವೆರೆಡು ಸ್ಟಾರ್ ಚಿತ್ರಗಳ ಮಧ್ಯೆ ಹೊಸಬರ 'ಹ್ಯಾಪಿ ಮ್ಯಾರೀಡ್ ಲೈಫ್', 'ಬಳ್ಳಾರಿ ದರ್ಬಾರ್' ಹಾಗೂ ಭಕ್ತಿ ಪ್ರಧಾನ ಚಿತ್ರ 'ಓಂಕಾರ ಅಯ್ಯಪ್ಪ' ಚಿತ್ರಗಳು ವರ್ಷದ ಕೊನೆಯ ವಾರದಲ್ಲಿ ತೆರೆಕಾಣುತ್ತಿವೆ.
ಈ ಐದು ಚಿತ್ರಗಳ ಒಂದು ಸಣ್ಣ ಪರಿಚಯ ಹಾಗೂ ಅವುಗಳ ವಿಶೇತೆಗಳನ್ನ ನಾವು ಹೇಳ್ತಿವಿ. ಇಯರ್ ಎಂಡ್ ಸ್ಪೆಷಲ್ ಗೆ ಯಾವ ಚಿತ್ರಕ್ಕೆ ಹೋಗ್ಬೇಕು ಎಂದು ನೀವೇ ನಿರ್ಧಾರ ಮಾಡಿ.

'ಕಿರಿಕ್ ಪಾರ್ಟಿ' ಜೊತೆ ಹೊಸ ವರ್ಷ!
ರಕ್ಷಿತ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಕಿರಿಕ್ ಪಾರ್ಟಿ' ಈ ವಾರ ಥಿಯೇಟರ್ ಗೆ ಲಗ್ಗೆಯಿಡುತ್ತಿದೆ. ರಿಷಬ್ ಶೆಟ್ಟಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ರಕ್ಷಿತ್ ಶೆಟ್ಟಿ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ. ಇಂಜಿನಿಯರ್ ಸ್ಟೂಡೆಂಟ್ ಜೀವನದ ಸುತ್ತಾ ಸ್ಕ್ರಿಪ್ಟ್ ಮಾಡಲಾಗಿದ್ದು, ಪೂರ್ತಿ ಕಾಮಿಡಿಯಾಗಿ ನಿರೂಪಣೆ ಮಾಡಲಾಗಿದೆಯಂತೆ.[ರಕ್ಷಿತ್ ಶೆಟ್ಟಿಯ 'ಕಿರಿಕ್ ಪಾರ್ಟಿ'ಯೊಂದಿಗೆ 2016ಕ್ಕೆ ಗುಡ್ ಬೈ!]

ಸಿನಿಮಾ ಪೂರ್ತಿ 'ಕಿರಿಕ್' ಅಂತೆ!
ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗಡೆ, ನಾಯಕಿಯರಾಗಿ ಸಾಥ್ ಕೊಟ್ಟಿದ್ದು, ಅಚ್ಯುತ್ ಕುಮಾರ್, ಅರವಿಂದ್ ಅಯ್ಯರ್, ಅಶ್ವಿನ್ ರಾವ್ ಪಲಕಿ, ಶಂಕರ್ ಮೂರ್ತಿ, ಧನಂಜಯ್ ರಂಜನ್, ಚಂದನ್ ಮತ್ತು ಗಿರೀಶ್ ಕೃಷ್ಣ ಸೇರಿದಂತೆ ಹಲವರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಈಗಾಗಲೇ ಹಿಟ್ ಆಗಿದ್ದು, ತೆರೆಮೇಲೆ ಕಿರಿಕ್ ಹುಡುಗರ ಹಾವಳಿ ಹೇಗಿರುತ್ತೆ ಅಂತಾ ಕಾದು ನೋಡಬೇಕಿದೆ.

ಚಿತ್ರಮಂದಿರಕ್ಕೆ ಈ ವಾರ 'ಮಂಡ್ಯ ಟು ಮುಂಬೈ'
ರಾಕೇಶ್ ಅಡಿಗ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಮಂಡ್ಯ ಟು ಮುಂಬೈ' ಈ ವಾರ ಪ್ರೇಕ್ಷಕರೆದುರು ಬರುತ್ತಿದೆ. ರಾಜಶೇಖರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಅಮೃತಾ ರಾವ್ ಹಾಗೂ ಸಂಜನಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಮಾಧುರಿ ಇಟಗಿ ಚಿತ್ರದ ಒಂದು ಹಾಡಿಗೆ ಹೆಜ್ಜೆ ಹಾಕಿದ್ದು, ಉಳಿದಂತೆ ಚಿತ್ರದಲ್ಲಿ ನವೀನ್ ಕೃಷ್ಣ, ಸಾಧುಕೋಕಿಲಾ, ತಿಲಕ್ ಶೇಖರ್, ಪೆಟ್ರೋಲ್ ಪ್ರಸನ್ನ, ಮೈಕೋ ನಾಗರಾಜ್, ಚಿರಾಗ್ ರಾಜ್, ಚಂದನ್ ವಿಜಯ್, ತ್ರಿಪಟಿ ಗಣೇಶ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.[ಈ ವಾರದಿಂದ ಸ್ಯಾಂಡಲ್ ವುಡ್ ನಲ್ಲಿ 'ಮಂಡ್ಯ' ಹುಡುಗರ ದರ್ಬಾರ್!]

ತೆರೆ ಮೇಲೆ 'ಬಳ್ಳಾರಿ ದರ್ಬಾರ್'
ಗಣಿ ತವರು ಬಳ್ಳಾರಿಯಲ್ಲಿ ನಡೆದಂಥ ಒಂದಷ್ಟು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಕಥೆ ಹೆಣೆಯಲಾಗಿರುವ 'ಬಳ್ಳಾರಿ ದರ್ಬಾರ್' ಈ ವಾರ ನಿಮ್ಮ ಮುಂದೆ ಬರಲಿದೆ. ಈ ಹಿಂದೆ 'ತೂಫಾನ್' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಸ್ಮೈಲ್ ಶ್ರೀನು ರವರೇ 'ಬಳ್ಳಾರಿ ದರ್ಬಾರ್' ಚಿತ್ರ ನಿರ್ದೇಶನ ಮಾಡಿದ್ದಾರೆ. ಪೊಲಾ ಶ್ರೀನಿವಾಸಬಾಬು, ಸಂಪತ್ ಕುಮಾರ್, ಶುಭಶ್ರೀ, ಆಶಿನಿ, ಮಮತರಾವುತ್, ನಯನ, ಗುರುನಾಥ ಮುಂತಾದ ಇತರರ ತಾರಾಬಳಗವಿದೆ. ಲವ್ ದರ್ಬಾರ್, ಮನಿ ದರ್ಬಾರ್, ಹಾಗೂ ರಿವೇಂಜ್ ದರ್ಬಾರ್ ಅಂಶಗಳೇ ವಿಜೃಂಭಿಸಲಿರುವ 'ಬಳ್ಳಾರಿ ದರ್ಬಾರ್' ಚಿತ್ರಕ್ಕೆ ಎನ್.ಶ್ರೀನಿವಾಸ್ ಬಂಡವಾಳ ಹೂಡಿದ್ದಾರೆ.[ಗಣಿ ನಾಡಿನ ನೈಜ ಘಟನೆಯ 'ಬಳ್ಳಾರಿ ದರ್ಬಾರ್' ಈ ವಾರ ತೆರೆಗೆ]

ಭಕ್ತಿ ಪ್ರಧಾನ 'ಓಂಕಾರ ಅಯ್ಯಪ್ಪನೇ'
ಶ್ರೀ ಸದ್ಗುರ ಸಾಯಿ ಕ್ರಿಯೇಷನ್ಸ್ ಅಡಿಯಲ್ಲಿ ಟಿ.ಎ.ಸೆಂಧಿಲ್ ನಿರ್ಮಾಣದ ಚಿತ್ರ 'ಓಂಕಾರ ಅಯ್ಯಪ್ಪನೇ' ಈ ವಾರ ತೆರೆಕಾಣುತ್ತಿದೆ. ಓಂ ಸಾಯಿ ಪ್ರಕಾಶ್ ಅವರು ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ದಿಶಾ ಪೂವಯ್ಯ, ರೋಜಾ, ರವಿಚೇತನ್, ನವೀನ್ ಕೃಷ್ಣ, ರಮೇಶ್ ಭಟ್, ಟಿ.ಎ.ಸೆಂಧಿಲ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ನ್ಯೂ ಇಯರ್ ಸ್ಪೆಷಲ್ 'ಹ್ಯಾಪಿ ಮ್ಯಾರೀಡ್ ಲೈಫ್'
ಆನಂದ್ ವಠಾರ್ ನಿರ್ದೇಶನದ 'ಹ್ಯಾಪಿ ಮ್ಯಾರೀಡ್ ಲೈಫ್' ಚಿತ್ರವೂ ಈ ವಾರ ಗಾಂಧಿನಗರಕ್ಕೆ ಎಂಟ್ರಿ ಕೊಡುತ್ತಿದೆ. ವಿದ್ಯೆ ಹಾಗೂ ಸಮಯಕ್ಕೆ ಬೆಲೆ ನೀಡದ ವ್ಯಕ್ತಿ ಜೀವನದಲ್ಲಿ ಏನೆಲ್ಲಾ ನಡೆಯುತ್ತೆ ಎಂಬುದೇ ಚಿತ್ರಕಥೆ. ಮಲ್ಲೇಶ್.ಎನ್.ಕೆ ಅವರು ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.

ನಿಮ್ಮ ಆಯ್ಕೆ ಯಾವುದು?
ಈ 5 ಚಿತ್ರಗಳಲ್ಲಿ ನಿಮ್ಮ ಆಯ್ಕೆ ಯಾವುದು ? ನೀವು ಯಾವ ಸಿನಿಮಾಗೆ ಹೋಗುತ್ತೀರಾ ಎಂದು ಕೆಳಗೆ ನೀಡಲಾಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications











