ಕಿಚ್ಚ ಸುದೀಪ್ ಗೆ ಕನ್ನಡಪರ ಸಂಘಟನೆಗಳು ಗೌರವ ಸಲ್ಲಿಸಿದ್ದೇಕೆ?
ಡಬ್ಬಿಂಗ್ ವಿರೋಧಿ ಹೋರಾಟ ಸ್ಯಾಂಡಲ್ ವುಡ್ ನಲ್ಲಿ ಅನೇಕ ವರ್ಷಗಳಿಂದ ಕೇಳಿ ಬರುತ್ತಿತ್ತು. ಬೇರೆ ಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆದರೆ ಕನ್ನಡ ಚಿತ್ರಗಳಿಗೆ ತೊಂದರೆ ಆಗಲಿದೆ ಎನ್ನುವ ಕೂಗು ಅನೇಕ ವರ್ಷಗಳಿಂದ ಕೇಳಿ ಬರುತ್ತಿತ್ತು. ಡಬ್ಬಿಂಗ್ ವಿರೋಧಿಸಿ ಸಾಕಷ್ಟು ಪ್ರತಿಭಟನೆಗಳು ನಡೆದಿದೆ.
ವಿರೋಧದ ನಡುವೆಯೂ ಕೆಲವರು ಡಬ್ಬಿಂಗ್ ಪರವಾಗಿ ಧ್ವನಿ ಎತ್ತುವ ಜೊತೆಗೆ, ಕೆಲವು ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿ ರಿಲೀಸ್ ಮಾಡಿದ್ದಾರೆ. ಆದ್ರೆ ಈ ಚಿತ್ರಗಳು ರಿಲೀಸ್ ಆಗಿದ್ದೆ ಗೊತ್ತಾಗಿಲ್ಲ. ಇತ್ತೀಚಿಗೆ ಸೈರಾ ನರಸಿಂಹ ರೆಡ್ಡಿ ಸಿನಿಮಾ ಕನ್ನಡಕ್ಕೆ ಡಬ್ ಆಗಿ ದೊಡ್ಡ ಮಟ್ಟಕ್ಕೆ ರಿಲೀಸ್ ಆಗಿದೆ. ಸೈರಾ ಕನ್ನಡದಲ್ಲಿ ಸಕ್ಸಸ್ ಆಗಲು ಕಾರಣವಾದ ಅಂಶಗಳಲ್ಲಿ ಕಿಚ್ಚ ಸುದೀಪ್ ಕೂಡ ಒಬ್ಬರು.
ಸೈರಾ ಚಿತ್ರದಲ್ಲಿ ಸುದೀಪ್ ಪಾತ್ರಕ್ಕೆ ಸ್ವತಹ ಅವರೆ ಕನ್ನಡಕ್ಕೆ ಡಬ್ ಮಾಡಿದ್ದರು. ಸೈರಾ ಮೂಲಕ ಡಬ್ಬಿಂಗ್ ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕಾರಣ ಸುದೀಪ್ ಗೆ ಇಂದು ಅನೇಕ ಕನ್ನಡ ಪರ ಸಂಘಟನೆಗಳು ಗೌರವ ಸಲ್ಲಿಸಿದ್ದಾರೆ. ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ದಾ.ಪಿ ಅಂಜನಪ್ಪ ಟ್ವೀಟ್ ಮಾಡಿದ್ದಾರೆ.

"ಡಬ್ಬಿಂಗ್ ಅಭಿಯಾನದಲ್ಲಿ ಸೈರಾ ಸಿನೆಮಾ ಒಂದು ಮೈಲುಗಲ್ಲು. ಡಬ್ಬಿಂಗ್ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ಬನವಾಸಿ ಬಳಗ @karave_KRV, ಕರವೇ ಕನ್ನಡಪರ ಸಂಘಟನೆಗಳ ಗೆಳೆಯರೊಂದಿಗೆ ಸೈರಾದಲ್ಲಿ ತಾವೇ ಸ್ವತಃ ಡಬ್ ಮಾಡಿ ಡಬ್ಬಿಂಗ್ ಚಿತ್ರವನ್ನು ಜನ ಸಾಮಾನ್ಯರು ಮೆಚ್ಚುವಂತೆ ಮಾಡಿರುವ ಕಿಚ್ಚ ಸುದೀಪ್ ಸಾರ್ ರನ್ನು ಭೇಟಿ ಮಾಡಿ ಅಭಿನಂದಿಸಿದೆವು" ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಇವರಿಗೆ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಕೂಡ ಸಾಥ್ ನೀಡಿದ್ದಾರೆ, "ಡಬ್ಬಿಂಗ್ ಪರ ಹೋರಾಟ ಹಲವು ದಶಕಗಳದು ಹಾಗೂ ಹಲವು ಹೋರಾಟಗಾರರದು. ಆದರೆ, ಆ ಹೋರಾಟಕ್ಕೆ ಅಗತ್ಯ ಗೆಲುವು ಸಿಕ್ಕಿದ್ದು ಕಿಚ್ಚ ಸುದೀಪ್ ಅವರ ಸೈರಾ ನರಸಿಂಹರೆಡ್ಡಿ ಸಿನಿಮಾದಿಂದ. ಕೃತಜ್ಞತಾಪೂರ್ವಕವಾಗಿ ಕರವೇ, ಕರ್ನಾಟಕ ರಣಧೀರರ ಪಡೆ, ಬನವಾಸಿ ಬಳಗ, ಕರುನಾಡ ಯೋಧರು ಸೇರಿದಂತೆ 10 ಕನ್ನಡ ಸಂಘಟನೆಗಳು ಸುದೀಪ್ರನ್ನು ಅಭಿನಂದಿಸಿದರು" ಎಂದು ಟ್ವೀಟ್ ಮಾಡಿದ್ದಾರೆ.


Click it and Unblock the Notifications











