ಈ ವಾರ ಪರಭಾಷೆಯವರ ಹೃದಯ ಗೆಲ್ತಾರಾ ಕನ್ನಡದ ಈ ಇಬ್ಬರು ನಟಿಯರು..?
ಪ್ರತಿಭಾ ಪಲಾಯನ ಅನ್ನುವುದು ಇಂದು ನಿನ್ನೆಯದಲ್ಲ. ಬಹಳ ಹಿಂದೆಯಿಂದಲೂ ಕೂಡ ಪ್ರತಿಭೆ ಇದ್ದೋರು ಒಂದ್ಕಡೆಯಿಂದ ಮತ್ತೊಂದ್ಕಡೆ ಹೋಗೋದು ನಡೀತಾನೆ ಇದೆ. ಅದರಲ್ಲಿಯೂ ಕನ್ನಡ ಚಿತ್ರರಂಗದಲ್ಲಿ ಈ ಪಲಾಯನ ತುಸು ಹೆಚ್ಚೇ ಇದೆ. ರಶ್ಮಿಕಾ ಮಂದಣ್ಣ .. ಶ್ರೀಲೀಲಾ .. ರುಕ್ಮಿಣಿ ವಸಂತ್ .. ಆಶಿಕಾ ರಂಗನಾಥ್ .. ಮೇಘಾ ಶೆಟ್ಟಿ ..
ಹೀಗೆ ಕಳೆದ ಕೆಲ ವರ್ಷಗಳಲ್ಲಿ ಕನ್ನಡ ಚಿತ್ರರಂಗದಿಂದ ಇಲ್ಲಿಯವರೆಗೆ ಅನೇಕ ನಾಯಕಿಯರು ಪರಭಾಷೆಗೆ ವಲಸೆ ಹೋಗಿದ್ದಾರೆ. ಈ ಸಾಲಿನಲ್ಲಿ ಸೇರ್ಪಡೆಯಾಗಿರುವ ಸಪ್ತಮಿ ಗೌಡ ಮತ್ತು ಚೈತ್ರಾ ಆಚಾರ್ ಈ ವಾರ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ.

ಹೌದು, ಕಾಂತಾರ ಮೂಲಕ ಭಾಷೆಯ ಭೇದ ಭಾವ ಇಲ್ಲದೇ, ಎಲ್ಲ ವರ್ಗದ ಜನರ ಹೃದಯವನ್ನ ಗೆದ್ದ ಸಪ್ತಮಿಗೌಡ .. ಜಯಂ ಹೀರೋ ನಿತಿನ್ ಅಭಿನಯದ 'ತಮ್ಮುಡು' ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ್ದಾರೆ.
ಈ ಚಿತ್ರ ಈ ವಾರ { ಜುಲೈ 4 } ಬಿಡುಗಡೆಯಾಗಲಿದೆ. ಇನ್ನು ತಮ್ಮುಡು ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಲು, ಸಪ್ತಮಿ ಗೌಡ ತೂಕ ಇಳಿಸಿಕೊಂಡಿದ್ದಾರೆ. ಸ್ಲಿಮ್ ಆಗಿದ್ದಾರೆ. ಇನ್ನೂ ರೇಸ್ ಕೋರ್ಸ್ ಮೈದಾನದಲ್ಲಿನ ಜಾಕಿಗಳಿಗೂ ಸೆಡ್ಡು ಹೊಡೆಯುವಂತೆ ಸಪ್ತಮಿ ಗೌಡ ಈ ಚಿತ್ರಕ್ಕೆ ಕುದುರೆ ಸವಾರಿಯನ್ನ ಕಲಿತಿದ್ದಾರೆ. ಚಿತ್ರದಲ್ಲಿ ಸಪ್ತಮಿ ಗೌಡ ಅವರ ಲುಕ್ ಕಾಂತಾರ ಚಿತ್ರದ ಲೀಲಾಳನ್ನು ನೆನಪಿಸುವಂತೆ ಇದೆ.
ವಕೀಲ್ ಸಾಬ್ ಅಂತಹ ಚಿತ್ರವನ್ನ ನಿರ್ದೇಶಿಸಿರುವ ವೇಣು ಶ್ರೀರಾಮ್ ಈ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ಟಾಲಿವುಡ್ನ ಖ್ಯಾತ ನಿರ್ಮಾಪಕ ದಿಲ್ ರಾಜು ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಇವೆಲ್ಲ ಕಾರಣಗಳಿಂದ ತಮ್ಮುಡು ಸಪ್ತಮಿ ಗೌಡ ಪಾಲಿಗೆ ವಿಶೇಷವಾದ ಸಿನಿಮಾ.
ಇಂತಹ ತಮ್ಮುಡು ಸಪ್ತಮಿ ಗೌಡ ಅವರಿಗೆ ವಿಶೇಷವಾದ ಗೆಲುವನ್ನು ಕೂಡ ತಂದು ಕೊಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. ತೆಲುಗು ಚಿತ್ರಪ್ರೇಮಿಗಳ ಹೃದಯವನ್ನು ಸಪ್ತಮಿ ಗೆಲ್ತಾರಾ ಎಂಬ ಪ್ರಶ್ನೆಗೆ ಉತ್ತರ ಈ ಶುಕ್ರವಾರ ಸಿಗಲಿದೆ.

ಮತ್ತೊಂದು ಕಡೆ ಇದೇ ಶುಕ್ರವಾರ ಸಿದ್ಧಾರ್ಥ್ ಅಭಿನಯದ 40ನೇ ಚಿತ್ರ 3BHK ಕೂಡ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ಕನ್ನಡ ಚಿತ್ರರಂಗದ ಗಾಯಕಿ ಕಂ ನಾಯಕಿ ಚೈತ್ರಾ ಆಚಾರ್ ಅಭಿನಯಿಸಿದ್ದಾರೆ. ಈ ಮೂಲಕ ಚೈತ್ರಾ ಕಾಲಿವುಡ್ಗೆ ಕಾಲಿಡುತ್ತಿದ್ದಾರೆ.
ಐಶ್ವರ್ಯ ಎಂಬ ಪಾತ್ರವನ್ನು ಚೈತ್ರಾ ಈ ಚಿತ್ರದಲ್ಲಿ ನಿರ್ವಹಿಸಿದ್ದಾರೆ. ಇನ್ನು ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಚಿತ್ರದ ಟ್ರೇಲರ್ ಅನೇಕ ಗಮನ ಸೆಳೆದಿದ್ದು ಚಿತ್ರ ಗೆಲ್ಲುವ ನಿರೀಕ್ಷೆ ಇದೆ. ಸಿದ್ದಾರ್ಥ್ ಜೊತೆ ಚಿತ್ರದಲ್ಲಿ ಹಿರಿಯ ನಟ ಶರತ್ ಕುಮಾರ್, ಯೋಗಿ ಬಾಬು, ದೇವಯಾನಿ, ಮೀತಾ ರಘುನಾಥ್ ಇದ್ದಾರೆ. ಶ್ರೀ ಗಣೇಶ್ ಈ ಚಿತ್ರವನ್ನು ನಿರ್ದೇಶಿಸಿದ್ದು ಅರುಣ್ ವಿಶ್ವ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಇದೇ ಜುಲೈ 4ಕ್ಕೆ ತಮ್ಮಡು ಜೊತೆಯಲ್ಲಿಯೇ 3BHK ಕೂಡ ತೆರೆಗೆ ಬರುತ್ತಿದ್ದು, ಈ ಚಿತ್ರದ ಮೂಲಕ ಚೈತ್ರಾ ಆಚಾರ್ ತಮಿಳುನಾಡಿನಲ್ಲಿ ಕೂಡ ಮೋಡಿ ಮಾಡುತ್ತಾರಾ ಎನ್ನುವುದನ್ನು ಸದ್ಯ ಕಾದು ನೋಡಬೇಕಿದೆ. ಅಂದ್ಹಾಗೇ ಈ ಚಿತ್ರ ಮಾತ್ರವಲ್ಲದೇ ಚೈತ್ರಾ ಆಚಾರ್ ಮತ್ತೊಂದು ತಮಿಳು ಚಿತ್ರದಲ್ಲಿ ಕೂಡ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ರಾಜು ಮುರುಗನ್ ನಿರ್ದೇಶನದ ಈ ಚಿತ್ರದಲ್ಲಿ ಶಶಿಕುಮಾರ್ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಒಟ್ನಲ್ಲಿ ಸದ್ಯ ಕನ್ನಡದ ಇಬ್ಬರು ಪ್ರತಿಭಾವಂತ ನಟಿಯರಾದ ಸಪ್ತಮಿ ಗೌಡ ಮತ್ತು ಚೈತ್ರಾ ಆಚಾರ ಈ ವಾರ ತಮಿಳು ಮತ್ತು ತೆಲುಗು ಚಿತ್ರರಂಗಕ್ಕೆ ಬಲಗಾಲಿಟ್ಟು ಕಾಲಿಡುತ್ತಿದ್ದಾರೆ. ಇಬ್ಬರ ಈ ಪ್ರಯತ್ನಕ್ಕೆ ಜನ ಬೆಂಬಲ ಸಿಗಲಿ.. ಇಬ್ಬರು ಕೂಡ ಬೇರೆಯವರಂತೆ ಕನ್ನಡ ಚಿತ್ರರಂಗವನ್ನು ಮರೆಯದಿರಲಿ ಎನ್ನುವುದೇ ಕನ್ನಡ ಕಲಾಭಿಮಾನಿಗಳ ಆಶಯ.


Click it and Unblock the Notifications










