ಕನ್ನಡದ ಹಿರಿಯ ನಿರ್ಮಾಪಕ ಭಕ್ತವತ್ಸಲಂ ನಿಧನ
ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರಾಗಿದ್ದ ಭಕ್ತವತ್ಸಲಂ ಅವರು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಪ್ರಾರಂಭದಲ್ಲಿ ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ಯಮದ ಉನ್ನತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಆ ಬಳಿಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಚಿತ್ರರಂಗದಲ್ಲಿ ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕರ ವಲಯದಲ್ಲಿ ಗುರುತಿಸಿಕೊಂಡರು.
ಭಕ್ತವತ್ಸಲಂ ಅವರು 1971 ರಲ್ಲಿ 'ಸಂಪೂರ್ಣ ರಾಮಾಯಣ' ಸಿನಿಮಾವನ್ನು ನಿರ್ಮಾಣ ಮಾಡಿದರು. ಈ ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಅದರ ಜೊತೆಗೆ 'ಕನ್ನೇಶ್ವರರಾಮ' ಚಿತ್ರಕ್ಕೆ ಬಂಡವಾಳ ಹಾಕಿದ್ದ ಅವರು ಆ ಬಳಿಕ ಅನೇಕ ಭಾಷೆಗಳಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ 7 ವರ್ಷ ಕಾರ್ಯ ನಿರ್ವಹಿಸಿದರು. ಅಷ್ಟೆ ಅಲ್ಲದೆ ಸೌತ್ ಇಂಡಿಯ ಫಿಲ್ಮ್ ಚೆಂಬರ್ ಅಧ್ಯಕ್ಷರಾಗಿದ್ದರು. ಪ್ರಯೋಗಾತ್ಮಕ ಹಾಗೂ ಒಳ್ಳೆಯ ಕಥೆ ಹೊಂದಿರುವ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು.
ಕರ್ನಾಟಕ ಚಿತ್ರರಂಗದ ಬಗ್ಗೆ ಹಾಗೂ ವಿಶ್ವ ಸಿನಿಮಾ ಬೆಳವಣಿಗೆ ಬಗ್ಗೆ ಅನೇಕ ಪುಸ್ತಕಗಳನ್ನು, ಲೇಖನಗಳನ್ನು ಬರೆದಿದ್ದಾರೆ. ಇನ್ನು ಡಾ.ರಾಜ್ ಕುಮಾರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.


Click it and Unblock the Notifications











