ಚಿತ್ರಮಂದಿರ ಬಂದ್ 150: ಈಗ 'ಥಿಯೇಟರ್ ತೆಗೆಯುವ ಸಮಯ'ದ ಕೂಗು
ಕೊರೊನಾ ವೈರಸ್ ಎನ್ನುವುದು ಮನುಷ್ಯನ ಬದುಕನ್ನೆ ಬದಲಾಯಿಸಿದೆ. ದೈನಂದಿನ ಜೀವನದ ದಿಕ್ಸೂಚಿಗೆ ತಿರುವು ನೀಡಿದೆ. ಇದರ ಪರಿಣಾಮ ಹಲವು ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿದವು. ಪ್ರಸ್ತುತ, ಒಂದೊಂದೇ ಕ್ಷೇತ್ರ ಕಾರ್ಯಾರಂಭ ಮಾಡಿದ್ದು, ಮೊದಲಿನ ಸ್ಥಿತಿಯತ್ತ ಸಾಗಿದೆ.
Recommended Video
ಆದರೆ, ಚಿತ್ರರಂಗದ ಪಾಲಿಗೆ ಹೃದಯಭಾಗ ಆಗಿರುವ ಚಿತ್ರಮಂದಿರಗಳು ಕಾರ್ಯನಿರ್ವಹಿಸುವುದಕ್ಕೆ ಮಾತ್ರ ಸರ್ಕಾರ ಅನುಮತಿ ನೀಡಿಲ್ಲ. ಭಾರತೀಯ ಚಿತ್ರೋಧ್ಯಮ ಬಂದ್ ಆಗಿ ಸುಮಾರು 150 ದಿನ ಆಗಿದೆ. ಸದ್ಯ, ಶೂಟಿಂಗ್ ಮಾಡಲು ಒಪ್ಪಿಗೆ ಸಿಕ್ಕಿದರೂ, ಥಿಯೇಟರ್ ತೆರೆಯಲು ಸಮ್ಮತಿಸಿಲ್ಲ.
ಸಾಮಾಜಿಕ ಜಾಲತಾಣದಲ್ಲಿ, ಥಿಯೇಟರ್ ತೆಗೆಯುವ ಸಮಯ ಎಂಬ ಅಭಿಯಾನ ಆರಂಭವಾಗಿದೆ. #TimetoOpenTheatres ಹ್ಯಾಷ್ ಟ್ಯಾಗ್ ಮೂಲಕ ಟ್ರೆಂಡ್ ಆಗುತ್ತಿದೆ. ಇದಕ್ಕೆ ಸೌತ್ ಇಂಡಸ್ಟ್ರಿ ಸಾಥ್ ನೀಡಿದೆ. ಮುಂದೆ ಓದಿ....

ಥಿಯೇಟರ್ ಮುಚ್ಚಿ 143 ದಿನ ಆಯ್ತು
ಮಾರ್ಚ್ 24 ರಂದು ದೇಶದಲ್ಲಿ ಲಾಕ್ಡೌನ್ ಘೋಷಣೆ ಆಯಿತು. ಅಲ್ಲಿಂದ ಇಲ್ಲಿಯವರೆಗೂ 143 ದಿನ ಕಳೆದಿದೆ. ಇಲ್ಲಿಯವರೆಗೂ ಚಿತ್ರಮಂದಿರಗಳು ತೆಗೆದಿಲ್ಲ. ಚಿತ್ರಮಂದಿರ ಮಾಲೀಕರು, ಥಿಯೇಟರ್ ಸಿಬ್ಬಂದಿ, ಕಾರ್ಮಿಕರು ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ, #TimetoOpenTheatres ಎಂದು ಅಭಿಯಾನ ಆರಂಭವಾಗಿದೆ.

ಕರ್ನಾಟಕದಲ್ಲಿ 153 ದಿನ ಆಯ್ತು
ದೇಶದಲ್ಲಿ ಲಾಕ್ಡೌನ್ ಜಾರಿಯಾಗುವುದಕ್ಕೂ 10 ದಿನ ಮುಂಚಿತವಾಗಿ ಕರ್ನಾಟಕದಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಹಾಗಾಗಿ, ದೇಶದಲ್ಲಿ 143 ಆಗಿದ್ದರೂ ಕರ್ನಾಟಕದ ಪಾಲಿಗೆ 153 ದಿನಗಳ ಕಾಲ ಚಿತ್ರಮಂದಿರ ಮುಚ್ಚಿದೆ. ಕೆಜಿಎಪ್ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಸಹ ಈ ಟ್ರೆಂಡ್ ಗೆ ಬೆಂಬಲ ವ್ಯಕ್ತಪಡಿಸಿ ಥಿಯೇಟರ್ ತೆಗೆಯಿರಿ ಎಂದು ವಿನಂತಿಸಿದ್ದಾರೆ.

ಸರ್ಕಾರ ಸಹಾಯ ಮಾಡಬೇಕಿದೆ
ಸಂಘಟಿತ ಕಾರ್ಮಿಕರು, ಚಾಲಕರು ಹಾಗೂ ಇನ್ನಿತರರಿಗೆ ಸರ್ಕಾರದಿಂದ ಆರ್ಥಿಕ ಪ್ಯಾಕೇಜ್ ಘೋಷಣೆಯಾಗಿತ್ತು. ಇದರಲ್ಲಿ ಚಿತ್ರರಂಗದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಯಾವುದೇ ನೆರವು ಸಿಕ್ಕಿಲ್ಲ. ಸಣ್ಣ ಪುಟ್ಟ ಚಿತ್ರಮಂದಿರಗಳಿಗೆ ಸರ್ಕಾರ ಬೆಂಬಲಿಸಬೇಕಿದೆ. ಕರೆಂಟ್ ಬಿಲ್, ಇತ್ಯಾದಿ ಬಿಲ್ಗಳನ್ನು ಮನ್ನಾ ಮಾಡಬೇಕಿದೆ ಎಂಬ ಆಗ್ರಹವೂ ಚಿತ್ರಮಂದಿರದ ಮಾಲೀಕರು ಮಾಡುತ್ತಿದ್ದಾರೆ.

ಡಿಸಿಎಂ ಭೇಟಿ ಮಾಡಿದ ಶಿವರಾಜ್ ಕುಮಾರ್
ನಿನ್ನೆಯಷ್ಟೇ ಕನ್ನಡ ಹಿರಿಯ ನಟ ಶಿವರಾಜ್ ಕುಮಾರ್ ಅವರು ಕರ್ನಾಟಕ ಉಪಮುಖ್ಯಮಂತ್ರಿ ಆಶ್ವಥ್ ನಾರಾಯಣ ಅವರನ್ನು ಭೇಟಿ ಮಾಡಿ, ಚಿತ್ರರಂಗಕ್ಕೆ ನೆರವು ನೀಡಲು ಹಾಗೂ ಚಿತ್ರಮಂದಿರ ತೆರೆಯಲು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ಸರ್ಕಾರ ಸಹ ಇಂಡಸ್ಟ್ರಿ ಬಗ್ಗೆ ಗಮನ ಹರಿಸುವುದಾಗಿ ಡಿಸಿಎಂ ಭರವಸೆ ನೀಡಿದ್ದಾರೆ. ಹಾಗಾಗಿ, ಸದ್ಯದಲ್ಲೆ ಸಿನಿಮಾ ಚಿತ್ರಮಂದಿರ ತೆರೆಯಲು ಅನುಮತಿ ಸಿಕ್ಕರೂ ಅಚ್ಚರಿ ಇಲ್ಲ.


Click it and Unblock the Notifications











