ಲೋಕನಾಥ್ ಅಂಕಲ್ ಜೊತೆ ಲೋಕಾಭಿರಾಮ ಹರಟೆ

ಇಂತಹ ಅವಿಸ್ಮರಣೀಯ ಕಲಾವಿದ ಲೋಕನಾಥ್ ಜೊತೆ ಮುಖಾಮುಖಿಯಾಗುವ ಸುವರ್ಣಾವಕಾಶ ಈ ಬಾರಿಯ 'ಬೆಳ್ಳಿಹೆಜ್ಜೆ' ಕಾರ್ಯಕ್ರಮದಲ್ಲಿ ಚಿತ್ರರಸಿಕರಿಗೆ ಸಿಗುತ್ತಿದೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸಿಕೊಡುತ್ತಿರುವ ತನ್ನ ವಿಭಿನ್ನ ಕಾರ್ಯಕ್ರಮದಲ್ಲಿ ಲೋಕನಾಥ್ ಅಂಕಲ್ ಅವರೊಂದಿಗೆ ಲೋಕಾಭಿರಾಮವಾಗಿ ಹರಟಬಹುದು. ಇದೇ ಶನಿವಾರ (ಅ.27) ಸಂಜೆ 5 ಗಂಟೆಗೆ ಪ್ರಿಯದರ್ಶಿನಿ ಚಿತ್ರಮಂದಿರ, ಬಾದಾಮಿ ಹೌಸ್, ಬೆಂಗಳೂರಿನಲ್ಲಿ ಕಾರ್ಯಕ್ರಮ ಇರುತ್ತದೆ.
ಮೊದಲೇ ಸಂಪ್ರದಾಯಸ್ಥ ಕುಟುಂಬ. ನಾಟಕ, ಅಭಿನಯ, ಬಣ್ಣ ಸುಣ್ಣ ಎಂದರೆ ಮನೆಯವರ ತೀವ್ರ ವಿರೋಧ. ಈ ಎಲ್ಲಾ ವಿರೋಧಗಳನ್ನು ಮೆಟ್ಟಿನಿಂತ ಅವರು ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಬಹಳ ಉನ್ನತಮಟ್ಟಕ್ಕೇರಿದರು. ಜನರು ಅವರನ್ನು ಪ್ರೀತಿಯಿಂದ 'ಲೋಕನಾಥ್ ಅಂಕಲ್' ಎಂದು ಕರೆದು ತಮ್ಮ ಹೃದಯದಲ್ಲಿ ಸ್ಥಾನಕೊಟ್ಟಿದ್ದಾರೆ.
ಸಿ.ಎಚ್. ಲೊಕನಾಥ್ ಅವರು 'ಸಂಸ್ಕಾರ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಬಳಿಕ ಗೆಜ್ಜೆ ಪೂಜೆ, ಬಂಗಾರದ ಮನುಷ್ಯ, ದೂರದ ಬೆಟ್ಟ, ಭೂತಯ್ಯನ ಮಗ ಅಯ್ಯು, ಶರಪಂಜರ, ನಾಗರಹಾವು, ಬಂಗಾರದ ಪಂಜರ, ಮಿಂಚಿನ ಓಟ, ಹೊಸ ನೀರು, ಕಾಲೇಜುರಂಗ, ನಾಗರಹಾವು, ಕಥಾ ಸಂಗಮ, ಸಿಂಗಾಪೂರಿನಲ್ಲಿ ರಾಜಾ ಕುಳ್ಳ, ಮನೆ ಮನೆ ಕಥೆ...ಹೀಗೆ ಆರುನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ರಂಗಭೂಮಿಯಲ್ಲೂ ತಮ್ಮದೇ ಆದಂತಹ ಛಾಪು ಮೂಡಿಸಿರುವ ಅವರು ರಕ್ತಾಕ್ಷಿ, ವಿಗಡವಿಕ್ರಮರಾಯ, ಬಿರುದಂತೆಂಬರ ಗಂಡ, ಬಹದ್ದೂರ್ ಗಂಡು, ಬಿಡುಗಡೆ, ಗೆಲಿಲಿಯೋ, ಡಾ.ಫಾಸ್ಟಸ್, ತನುವು ನಿನ್ನದೆ ಮನವು ನಿನ್ನದೆ, ಚಂದ್ರಹಾಸ ಸೇರಿದಂತೆ ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಕಲಾಪಾಂಡಿತ್ಯವನ್ನು ಮೆರೆದಂತಹವರು. ಇಂತಹ ಅಪ್ಪಟ ಕಲಾವಿದನೊಂದಿಗೆ ಲೋಕಾಭಿಮಾನವಾಗಿ ಹರಟೋಣ ಬನ್ನಿ. (ಒನ್ಇಂಡಿಯಾ ಕನ್ನಡ)


Click it and Unblock the Notifications











