ಕನ್ನಡದ ಖ್ಯಾತ ಕಲಾವಿದ ಆರ್ ಎಸ್ ರಾಜಾರಾಮ್ ಇನ್ನಿಲ್ಲ
ಕನ್ನಡದ ಖ್ಯಾತ ರಂಗಭೂಮಿ ಕಲಾವಿದ ಆರ್ ಎಸ್ ರಾಜಾರಾಮ್ (84) ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ರಾಜಾರಾಮ್ ಅವರ ನಿಧನಕ್ಕೆ ನಟ ಸೃಜನ್ ಲೋಕೇಶ್ ಸಂತಾಪ ಸೂಚಿಸಿದ್ದಾರೆ.
Recommended Video
ವಿಗಡವಿಕ್ರಮರಾಯ, ಎಚ್ಚಮನಾಯಕ, ಟಿಪ್ಪುಸುಲ್ತಾನ್, ಕಿತ್ತೂರು ಚೆನ್ನಮ್ಮ, ಕಾಕನ ಕೋಟೆ, ತುಘಲಕ್, ಅಗ್ನಿ ಮತ್ತು ಮಳೆ ಮುಂತಾದ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಖ್ಯಾತಿ ಗಳಿಸಿಕೊಂಡಿದ್ದ ಪ್ರಖ್ಯಾತ ಕಲಾವಿದರಾದ ರಾಜಾರಾಮ್ ಇಂದು (ಮೇ 10) ಕೊನೆಯುಸಿರೆಳೆದರು.
ಆರ್ ಎಸ್ ರಾಜಾರಾಮ್ ಅವರು 1938ರ ಜುಲೈ 10ರಂದು ಕೋಲಾರ ಜಿಲ್ಲೆಯ ಕೆ.ಜಿ.ಎಫ್ನಲ್ಲಿ ಜನಿಸಿದರು. ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದರು.

ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದ ರಾಜಾರಾಮ್ ಮಲ್ಲೇಶ್ವರದ ಸ್ನೇಹಿತರೊಡನೆ 'ರಸಿಕ ರಂಜನಿ ಕಲಾವಿದರು' ಸ್ಥಾಪಿಸಿದರು. ಪರ್ವತವಾಣಿ, ಕೈಲಾಸಂ, ದಾಶರಥಿದೀಕ್ಷಿತ್, ಕೆ. ಗುಂಡಣ್ಣ ಮುಂತಾದವರ ನಾಟಕಗಳಲ್ಲಿ ಅಭಿನಯಿಸಿದರು. ರಾಜಾರಾಮ್ ಸರಸ್ವತಿ ಕಲಾ ನಿಕೇತನ, ಪ್ರಧಾನ ಮಿತ್ರ ಮಂಡಲಿ, ಸುಪ್ರಭಾತ ಕಲಾವಿದರು, ಕಮಲ ಕಲಾ ಮಂದಿರ ಮುಂತಾದ ಸಂಸ್ಥೆಗಳೊಡನೆ ನಿರಂತರ ಒಡನಾಟ ಹೊಂದಿದ್ದರು.
ರಾಜಾರಾಮ್ 1964ರಲ್ಲಿ ಸಚಿವಾಲಯ ಉದ್ಯೋಗಿಗಳೊಡನೆ 'ಸಚಿವಾಲಯ ಸಾಂಸ್ಕೃತಿಕ ಸಂಘ' ಸ್ಥಾಪಿಸಿದರು. ಆ ಮೂಲಕ ಕೋಲ್ಕತ್ತದಲ್ಲಿ ನಡೆದ ಸಚಿವಾಲಯ ಕ್ಲಬ್ ನೌಕರರ ನಾಟಕ ಸ್ಪರ್ಧೆಗಳಲ್ಲಿ ಭಾಗಿಯಾದರು.
ಕರ್ನಾಟಕ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಂಗೀತ ಮತ್ತು ನಾಟಕ ವಿಭಾಗದ ಅನೇಕ ನಾಟಕಗಳಲ್ಲಿಯೂ ನಟಿಸಿದರು. ರಾಜಾರಾಮ್ ಅವರು 1972ರಿಂದ 'ನಟರಂಗ' ಮತ್ತು 1983ರಿಂದ 'ವೇದಿಕೆ'ಯ ರಂಗ ಚಟುವಟಿಕೆಗಳಲ್ಲಿ ತೊಡಗಿ ಸಿ.ಆರ್. ಸಿಂಹ ಅವರ ನಿರ್ದೇಶನದಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದರು.
ಇದಲ್ಲದೆ ಬಿ.ವಿ. ಕಾರಂತ, ಎಂ.ಎಸ್. ಸತ್ಯು, ಶ್ರೀನಿವಾಸ್ ಜಿ. ಕಪ್ಪಣ್ಣ, ಜಯತೀರ್ಥ ಜೋಶಿ, ಸಿ.ಎಚ್. ಲೋಕನಾಥ್, ಆರ್. ನಾಗೇಶ್, ಪ್ರಕಾಶ್ ಬೆಳವಾಡಿ ಮುಂತಾದವರ ನಿರ್ದೇಶನದಲ್ಲಿ ನಟಿಸಿದ್ದಾರೆ. ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಕಾಶ್ಮೀರ ಮುಂಬಯಿ, ಚಂಡಿಗರ್ ಮುಂತಾದೆಡೆ ನಾಟಕ ಪ್ರದರ್ಶನದಲ್ಲಿ ಭಾಗಿಯಾದರು.
ರಾಜಾರಾಮ್ ಅವರು ಹಲವು ಚಲನಚಿತ್ರಗಳು ಮತ್ತು ಕಿರುತೆರೆಯ ಧಾರಾವಾಹಿಗಳಲ್ಲೂ ಅಭಿನಯಿಸಿದ್ದರು.
(ಮಾಹಿತಿ ಕೃಪೆ- ಕನ್ನಡ ಸಂಪದ ಫೇಸ್ಬುಕ್ ಖಾತೆ)


Click it and Unblock the Notifications











