ಸಸ್ಪೆನ್ಸ್ ಥ್ರಿಲ್ಲರ್ ಜೊತೆ ಒಂದೊಳ್ಳೆ ಸಂದೇಶ ನೀಡುವ 'ವಿಸ್ಪರ್'
ಮನುಷ್ಯನ ಜೀವನದಲ್ಲಿ ಒತ್ತಡ, ಕೋಪಕ್ಕೆ ಹಲವು ಕಾರಣಗಳಿರುತ್ತೆ. ಕೆಲವೊಮ್ಮೆ ಈ ಕೋಪ, ಒತ್ತಡದಿಂದ ತಮ್ಮ ಜೀವನ ಮಹತ್ವದ ಕ್ಷಣಗಳನ್ನ ಹಾಗೂ ಮಹತ್ವದ ವ್ಯಕ್ತಿಗಳನ್ನೇ ಕಳೆದುಕೊಳ್ಳಬೇಕಾಗುತ್ತದೆ. ಕಳೆದುಕೊಂಡ ನಂತರ ಆ ನೋವನ್ನ ಬೇರೆಯದ್ದೇ ರೀತಿಯಲ್ಲಿ ಅನುಭವಿಸಬೇಕಾಗುತ್ತೆ.
ತಮ್ಮ ಜೀವನ ಸೊಗಸಾಗಿರಲೆಂದು, ಪ್ರೀತಿ ಸಂತಸದಿಂದ ತುಂಬಿರಲೆಂದು ಹೆಣ್ಣುಮಕ್ಕಳು ಏನೇನೋ ಕನಸು ತುಂಬಿಕೊಂಡಿರುತ್ತಾರೆ. ಆದರೆ, ಕೇಳುವ ವ್ಯವಧಾನ ಗಂಡನಿಗೆ ಇರಬೇಕಲ್ಲವೆ? ಕೋಪದ ಕೈಯಲ್ಲಿ ಸಂಬಂಧಗಳು ಮಾತ್ರವಲ್ಲ ಭವಿಷ್ಯವೂ ನಾಶವಾಗುತ್ತದೆ. ಇಂತಹ ಒಂದೊಳ್ಳೆ ಸಂದೇಶದೊಂದಿಗೆ ತಯಾರಾಗಿರುವ ಕಿರುಚಿತ್ರವೇ 'ವಿಸ್ಪರ್'.
ಹೇಮಾದ್ರಿ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಈ ಕಿರುಚಿತ್ರವನ್ನ ಅರವಿಂದ್ ಸೇತುರಾಮ್ ರಚಿಸಿ, ನಿರ್ದೇಶನ ಮಾಡಿದ್ದಾರೆ. ಜೊತೆಗೆ ಅವರೇ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಈ ಕಿರುಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ವೀಕ್ಷಕರ ಮೆಚ್ಚುಗೆ ಗಳಿಸಿಕೊಂಡಿದೆ.

ಹೆಂಡತಿಯನ್ನ ಕಳೆದುಕೊಂಡ ವ್ಯಕ್ತಿಯೊಬ್ಬ, ಅವಳ ಮರಣದ ನಂತರವೂ ಆಕೆಯ ಭ್ರಮೆಯಲ್ಲಿ ಬದುಕಲು ಆರಂಭಿಸಿರುತ್ತಾನೆ. ಏನೋ ಹೇಳಲು ಬಯಸಿದ್ದ ಆತನ ಪತ್ನಿ ಅದನ್ನ ಹೇಳದೆ ಸಾವಿಗೀಡಾರುತ್ತಾರೆ. ಆಕೆಯ ಸಾವಿಗೆ ಪರೋಕ್ಷವಾಗಿ ಪತಿಯೇ ಕಾರಣವಾಗಿದ್ದರಿಂದ ಅದು ಆತ ಮಾನಸಿಕವಾಗಿ ನೊಂದುಹೋಗಿರುತ್ತಾನೆ.
ತಾನು ಪ್ರೀತಿಸುತ್ತಿದ್ದ ಪತ್ನಿಯನ್ನ ತನ್ನ ಕೋಪದಿಂದ ಕಳೆದುಕೊಂಡೆ ಎಂಬ ಪಶ್ಚಾತ್ತಾಪ ಆತನನ್ನ ಭ್ರಮೆಯ ರೂಪದಲ್ಲಿ ಕಾಡುತ್ತಿರುತ್ತೆ. ಗಂಡ ಹೆಂಡಿರ ಮಧುರ ಸಂಬಂಧಕ್ಕೆ ಹಾಳು ಕೋಪ ಕೊಳ್ಳಿ ಇಟ್ಟುಬಿಡುತ್ತದೆ. ಇದು ಕಾಲ್ಪನಿಕ ಕಥೆ ಅನ್ನಿಸಿದರೂ ಪ್ರತಿದಿನ ಹಲವರ ಜೀವನದಲ್ಲಿ ನಡೆಯುವ ಸತ್ಯ ಕಥೆಯೇ. ಇಂತಹ ವಿಭಿನ್ನವಾದ ಕಥಾಹಂದರ ಇಟ್ಟುಕೊಂಡು ಕುತೂಹಲಭರಿತವಾಗಿ ಸಿನಿಮಾ ಮಾಡಲಾಗಿದೆ.
ಕೋಪೋದ್ರಿಕ್ತ ಗಂಡನಾಗಿ ಅರವಿಂದ್ ಸೇತುರಾಮ್ ಅವರ ಪತ್ನಿ ಪಾತ್ರದಲ್ಲಿ ಸುದೇಷ್ಣಾ ಹಾಗೂ ವೈದ್ಯರ ಪಾತ್ರದಲ್ಲಿ ಶ್ರೀನಿವಾಸ್ ಎಸ್ ಪಾಂಧರೆ ಅವರು ನಟಿಸಿದ್ದಾರೆ. ಕಾರ್ತಿಕ್ ದೇವ ಅವರ ಛಾಯಾಗ್ರಹಣವಿದ್ದು, ಅರುಣ್ ವಿಜಯ್ ಹಿನ್ನೆಲೆ ಸಂಗೀತವನ್ನ ಈ ಚಿತ್ರ ಒಳಗೊಂಡಿದೆ. ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ಮತ್ತಷ್ಟು ಜೀವ ತುಂಬಿದೆ.
ಈ ಹಿಂದೆ 'ಉಂಗ್ಲಿ ಎಕ್ಸಿಟ್' ಎಂಬ ಮೂಕಿ ಕಿರುಚಿತ್ರವನ್ನ ಹೇಮಾದ್ರಿ ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದರು. ಈ ಚಿತ್ರವನ್ನ ಅರವಿಂದ್ ಸೇತುರಾಮ್ ಅವರೇ ನಿರ್ದೇಶನ ಮಾಡಿ, ನಟಿಸಿದ್ದರು.


Click it and Unblock the Notifications











