"ಬೆಂಗಳೂರಲ್ಲಿ ಕನ್ನಡಿಗರು ಕಮ್ಮಿ, ನಾವು ಎಲ್ಲಾ ಭಾಷಿಕರಿಗಾಗಿ ಸಿನ್ಮಾ ಮಾಡ್ತಿದ್ದೀವಿ": ಸುಪ್ರೀತ್ ಹೇಳಿಕೆಗೆ ಆಕ್ರೋಶ
ಕನ್ನಡ ಚಿತ್ರರಂಗದ ಸಮಸ್ಯೆ ಬಗ್ಗೆ ಸದ್ಯ ಭಾರೀ ಚರ್ಚೆ ಆಗುತ್ತಿದೆ. ಮುಖ್ಯವಾಗಿ ಸ್ಟಾರ್ ನಟರು ಯಾಕೆ ಹೆಚ್ಚು ಸಿನಿಮಾ ಮಾಡುತ್ತಿಲ್ಲ, ಪ್ಯಾನ್ ಇಂಡಿಯಾ ಹುಚ್ಚಿಗೆ ಬಿದ್ದು ಒಂದು ಸಿನಿಮಾ ಮಾಡಲು ಮೂರ್ನಾಲ್ಕು ವರ್ಷ ವ್ಯಯಿಸುತ್ತಿದ್ದಾರೆ. ಹೀಗೆ ಮುಂದುವರೆದರೆ ಚಿತ್ರಮಂದಿಗಳೆಲ್ಲಾ ಬಂದ್ ಆಗಿ ಚಿತ್ರರಂಗವೇ ಇಲ್ಲವಾಗುತ್ತದೆ ಎನ್ನುವ ಚರ್ಚೆ ನಡೀತಿದೆ.
ಸುದೀಪ್, ಯಶ್, ಧ್ರುವ ಸರ್ಜಾ ಇತ್ತೀಚೆಗೆ ಸಿನಿಮಾ ಮಾಡುವ ಸ್ಪೀಡ್ ಕಮ್ಮಿ ಮಾಡಿದ್ದಾರೆ. ಇದೇ ವಿಚಾರದ ಬಗ್ಗೆ ಸ್ಟಾರ್ ನಟರಿಗೂ ಪ್ರಶ್ನೆಗಳು ಎದುರಾಗುತ್ತಿದೆ. ಇತ್ತೀಚೆಗೆ ನಡೆದ 'KD' ಸಿನಿಮಾ ಸುದ್ದಿಗೋಷ್ಠಿಯಲ್ಲಿ ಕೂಡ ಇದೇ ವಿಚಾರ ಭಾರೀ ಸದ್ದು ಮಾಡಿತು. ನಿರ್ದೇಶಕ ಪ್ರೇಮ್ ಮಾತನಾಡಿ ಹಿಂದಿನ ಕಾಲದಲ್ಲಿ ಸಿನಿಮಾ ಮಾಡುತ್ತಿದ್ದ ಸ್ಟೈಲ್ ಬೇರೆ, ಈಗಿನ ಸ್ಟೈಲ್ ಬೇರೆ. ಈಗ ಹೆಚ್ಚು ಸಮಯ ಬೇಕು ಎಂದಿದ್ದಾರೆ.

ದೊಡ್ಡ ಸಿನಿಮಾಗಳಿಲ್ಲದೇ ಚಿತ್ರಮಂದಿರಗಳ ಬಾಗಿಲು ಬಂದ್ ಆಗುತ್ತದೆ. ಯಾಕೆ ಸಿನಿಮಾ ತಡ ಮಾಡುತ್ತಿದ್ದೀರಾ? ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರೇಮ್ ಜೊತೆ ನಿರ್ಮಾಪಕ ಸುಪ್ರೀತ್ ಉತ್ತರಿಸುವ ಪ್ರಯತ್ನ ಮಾಡಿದರು. ಈ ವೇಳೆ ನಿರ್ಮಾಪಕ ಸುಪ್ರೀನ್ ನೀಡಿದ ಹೇಳಿಕೆ ವೈರಲ್ ಆಗುತ್ತಿದೆ. ಈ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಮ್ಮಿ ಇದೆ" ಎಂದು ಸುಪ್ರೀತ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕನ್ನಡಿಗರು ಇಲ್ಲ ಎಂದ ಮೇಲೆ ಕನ್ನಡ ಸಿನಿಮಾ ಮಾಡಿದ್ಯಾಕೆ? ನಿಮ್ಮ 'KD' ಸಿನಿಮಾ ಯಾರು ನೋಡಲ್ಲ ಬಿಡಿ. ಬೇರೆ ಭಾಷಿಕರು ಹೆಚ್ಚು ಇದ್ದಾರಲ್ಲ ಅವರೇ ನೋಡಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆ ಸುಪ್ರೀತ್ ಮಾತನಾಡಿರುವ ವೀಡಿಯೋ ವೈರಲ್ ಆಗುತ್ತಿದೆ.
ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರ ಜಾಸ್ತಿಯಿದೆ. ಕನ್ನಡ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್ಗಳಲ್ಲಿ ಹೆಚ್ಚು ಶೋಗಳು ಸಿಗಲ್ಲ. ಸಿಕ್ಕರೂ ಯಾವುದೋ ಟೈಮ್ಗೆ ಕೊಡ್ತಾರೆ. ನಿಮ್ಮ 'KD' ಚಿತ್ರದ ವಿಚಾರದಲ್ಲೂ ಬೇರೆ ಭಾಷೆ ಸಿನಿಮಾಗಳಿಗೆ ಹೆಚ್ಚು ಶೋ ಕೊಡುತ್ತಾರೆ, ಮಲ್ಟಿಪ್ಲೆಕ್ಸ್ ಸ್ಥಿತಿ ಇದು ಎಂದು ಪತ್ರಕರ್ತರು ಪ್ರಶ್ನೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನಿರ್ಮಾಪಕ ಸುಪ್ರೀತ್, "ಬೆಂಗಳೂರಿನಲ್ಲಿ ಎಷ್ಟು ಭಾಷೆಯ ಸಿನಿಮಾಗಳು ಬಿಡುಗಡೆ ಆಗುತ್ತೆ ಗೊತ್ತಾ ನಿಮಗೆ? ಎಂದು ಮರುಪ್ರಶ್ನೆ ಹಾಕಿದರು.

"ಬೆಂಗಳೂರಿನಲ್ಲಿ ಕನ್ನಡ ಗೊತ್ತಿರುವ ಜನಸಂಖ್ಯೆ ಎಷ್ಟು ಇದೆ ಮೇಡಂ? ಬೆಂಗಳೂರಿನಲ್ಲಿ ಕನ್ನಡ ಮಾತನಾಡುವ ಜನರಿರುವುದೇ ಕಮ್ಮಿ ಅಲ್ವಾ? ವೈಟ್ಫೀಲ್ಡ್ ಸೇರಿದಂತೆ ಕೆಲವೆಡೆ ಕನ್ನಡಿಗರು ಕಮ್ಮಿ ಇದ್ದಾರೆ. ನಾವು ಕನ್ನಡ ಮಾತ್ರವಲ್ಲದೇ ಎಲ್ಲಾ ಭಾಷೆಯ ಜನ ಸಿನಿಮಾ ನೋಡಬೇಕು ಎಂದು ಮಾಡುತ್ತಿದ್ದೇವೆ. ಅದಕ್ಕೆ ಇಷ್ಟು ಸಮಯ ತಗೊಂಡು ಈ ರೀತಿ ಮೇಕಿಂಗ್ ಮಾಡ್ತಿರೋದು" ಎಂದಿದ್ದಾರೆ.
"ನಾವು ಸಿನಿಮಾ ಬಿಡುಗಡೆ ಮಾಡುವಾಗ ಒಳ್ಳೆ ಸಮಯದಲ್ಲಿ ಮಾಡ್ತೀವಿ. ಒಳ್ಳೆ ಸ್ಕ್ರೀನ್ಸ್ ತಗೋತ್ತೀವಿ. ಅವರವರ ತಾಕತ್ತಿಗೆ ತಕ್ಕಂತೆ ಸ್ಕ್ರೀನ್ಗಳು, ಶೋಗಳು ತಗೋತ್ತಾರೆ" ಎಂದು ಸುಪ್ರೀತ್ ವಿವರಿಸಿದ್ದಾರೆ. 'ಸಖತ್', 'ಭರಾಟೆ', 'ಬಂಪರ್' ಸಿನಿಮಾಗಳನ್ನು ಸುಪ್ರೀತ್ ನಿರ್ಮಾಣ ಮಾಡಿದ್ದಾರೆ. ಸದ್ಯಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕನಾಗಿ 'KD' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್ 'KD' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಡಿಸೆಂಬರ್ನಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ವರಲಕ್ಷ್ಮಿ ಹಬ್ಬಕ್ಕೆ ಟೀಸರ್ ರಿಲೀಸ್ ಆಗಲಿದೆ. ಆಗಸ್ಟ್ 25ಕ್ಕೆ ಮೊದಲ ಸಾಂಗ್ ಹೊರತರಲು ಚಿತ್ರತಂಡದ ಮನಸ್ಸು ಮಾಡಿದೆ.


Click it and Unblock the Notifications











