ದರ್ಶನ್ ಬಳಿಕ ಗಣೇಶ್, ಅಜಯ್ ರಾವ್ ಮಕ್ಕಳು ಚಿತ್ರರಂಗಕ್ಕೆ: ಯಾರ ಕೈ ಹಿಡಿಯುತ್ತೆ ಅದೃಷ್ಟ!
ಸಾಮಾನ್ಯವಾಗಿ ಬಾಲಿವುಡ್ನಲ್ಲಿ ಸ್ಟಾರ್ ಕಿಡ್ಸ್ ಹೆಚ್ಚಾಗಿ ಗಮನ ಸೆಳೆಯುತ್ತಾರೆ. ಅಲ್ಲಿ ಸ್ಟಾರ್ ನಟ ನಟಿಯರಿಗೆ ಮಕ್ಕಳು ಹುಟ್ಟಿದಾಗಿನಿಂದ ಹಿಡಿದು ಅವರು ಮೊದಲ ಸಿನಿಮಾ ಮಾಡುವವರೆಗೂ ಅವರ ಪ್ರತಿ ಚಲನ ವಲನಗಳು ಸುದ್ದಿ ಆಗುತ್ತವೆ. ಜೊತೆಗೆ ಅವರಿಗೆ ಹುಟ್ಟಿನಿಂದಲೇ ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ.
ಈಗ ತಮಿಳು ಮತ್ತು ತೆಲುಗು ಸಿನಿಮಾ ರಂಗದಲ್ಲೂ ಸ್ಟಾರ್ ಮಕ್ಕಳಿಗೆ ಹೆಚ್ಚಿನ ಫ್ಯಾನ್ ಫಾಲೋಯಿಂಗ್ ಇರುತ್ತೆ. ಅದಾಗಲೇ ಅಲ್ಲು ಅರ್ಜುನ್ ಮಕ್ಕಳು ಬಿಗ್ ಸ್ಕೀನ್ ಮೇಲೆ ಕಾಣಿಸಿಕೊಳ್ಳೋಕೆ ಸಿದ್ದವಾಗಿದ್ದಾರೆ.
ಕನ್ನಡದಲ್ಲೂ ಸ್ಟಾರ್ ನಟರ ಮಕ್ಕಳು ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಲಿದ್ದಾರೆ. ಇತ್ತೀಚೆಗೆ ಈ ಬೆಳವಣಿಗೆ ಹೆಚ್ಚಾಗಿದೆ. ಸಾಲು ಸಾಲು ಸಿನಿಮಾ ತಾರೆಯರ ಮಕ್ಕಳು ಬಣ್ಣ ಹಚ್ಚೋಕೆ ಮುಂದಾಗಿದ್ದಾರೆ.

ಚಿತ್ರರಂಗಕ್ಕೆ ಅಜಯ್ ರಾವ್ ಪುತ್ರಿ 'ಚರಿಷ್ಮಾ'!
ಕನ್ನಡದ ನಟ ಅಜಯ್ ರಾವ್ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾಳೆ. ಈ ಪುಟ್ಟ ಬಾಲಕಿ, ಬಾಲ ನಟಿ ಆಗಿ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡುತ್ತಿದ್ದಾಳೆ. ಅಜಯ್ ರಾವ್ ಅಭಿನಯದ 'ಲವ್ ಯು ರಚ್ಚು' ಚಿತ್ರದಲ್ಲಿ ಚರಿಷ್ಮಾ ವಿಶೇಷ ಪಾತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾಳೆ.
ನಟ ಅಜಯ್ ರಾವ್ ಮಗಳ ಜೊತೆಗೆ ಒಟ್ಟಿಗೆ ಅಭಿನಯಿಸುತ್ತಾ ಇದ್ದಾರೆ. ಈ ಚಿತ್ರದಲ್ಲಿ ಒಂದು ಸನ್ನಿವೇಷಕ್ಕೆ ಮಗು ಬೇಕಾಗಿತ್ತಂತೆ. ಈ ಪಾತ್ರಕ್ಕೆ ಅಜಯ್ ರಾವ್ ಮಗಳನ್ನೇ ಚಿತ್ರದ ನಿರ್ಮಾಪಕ ಗುರುದೇಶ್ ಪಾಂಡೆ ಆಯ್ಕೆ ಮಾಡಿದ್ದಾರೆ. ಅದಕ್ಕೆ ಅಜಯ್ ರಾವ್ ದಂಪತಿಗಳು ಕೂಡ ಓಕೆ ಎಂದಿದ್ದಾರೆ. ಹಾಗಾಗಿ ಚರಿಷ್ಮಾ ಅಪ್ಪನೊಂದಿಗೆ ಈ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾಳೆ.

'ಸಖತ್' ಚಿತ್ರದಲ್ಲಿ ಅಪ್ಪನ ಪ್ರತಿರೂಪ ವಿಹಾನ್ ಗಣೇಶ್!
ನಟ ಗಣೇಶ್ ಪುತ್ರ ವಿಹಾನ್ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾನೆ. ಗಣೇಶ್ ಅಭಿನಯದ 'ಸಖತ್' ಚಿತ್ರದಲ್ಲಿ ವಿಹಾನ್ ಅಭಿನಯಿಸಿದ್ದಾನೆ. ಈ ಚಿತ್ರದಲ್ಲಿ ಗಣೇಶ್ ಬಾಲು ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾಲು ಪಾತ್ರದ ಬಾಲ್ಯವನ್ನು ಗಣೇಶ್ ಪುತ್ರ ವಿಹಾನ್ ನಿಭಾಯಿಸಿದ್ದಾರೆ.
ವಿಹಾನ್ ತೆರೆಯ ಮೇಲೆ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುಳಿವು ಕೊಟ್ಟಿದೆ ಸದ್ಯ ರಿಲೀಸ್ ಆಗಿರುವ ಟೀಸರ್. ವಿಹಾನ್ ಬಾಲು ಆಗಿ ಅಪ್ಪನ ಪಾತ್ರವನ್ನು ಪ್ರತಿನಿಧಿಸಿದ್ದಾನೆ.

ಪುತ್ರ ವಿನೀಶ್ ಸಿನಿಮಾ ಜೀವನದ ಭವಿಷ್ಯ ನುಡಿದಿರೋ ದರ್ಶನ್!
ಇನ್ನೂ ಕನ್ನಡದ ಮತ್ತೊಬ್ಬ ಸ್ಟಾರ್ ನಟ ದರ್ಶನ್ ಅವರ ಪುತ್ರ ವಿನೀಶ್ ಈಗಾಗಲೇ ಅಪ್ಪನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಯಜಮಾನ' ಸಿನಿಮಾದ ಹಾಡಿನಲ್ಲಿ ವಿನೀಶ್ ಕೊನೆಯದಾಗಿ ಅಭಿನಯಿಸಿದ್ದಾರೆ. ಅದಕ್ಕೂ ಮುನ್ನ 'ಐರಾವತ' ಚಿತ್ರದಲ್ಲಿ ದರ್ಶನ್ ಪುತ್ರ ಬೆಳ್ಳಿ ತೆರೆ ಮೇಲೆ ಬಂದಿದ್ದರು.
ಇನ್ನು ವಿನೀಶ್ ಕೇವಲ ಹೀಗೆ ಬಾಲ ನಟನಾಗಿ ಅಭಿನಯಿಸುವುದು ಮಾತ್ರವಲ್ಲ, ಮುಂದೆ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾ ಮಾಡಲಿದ್ದಾರೆ. ಈ ವಿಚಾರವನ್ನು ಈಗಾಗಲೇ ನಟ ದರ್ಶನ್ ಅವರು ಮಾತನಾಡಿದ್ದರು. ಸಂದರ್ಶನ ಒಂದರಲ್ಲಿ ಮಾತನಾಡುವಾಗ, ನಿಮ್ಮ ಮಗ ಹೀರೋ ಆಗುತ್ತಾರ ಎನ್ನು ಪ್ರಶ್ನೆಗೆ ಉತ್ತರಿಸಿದ ದರ್ಶನ್ "ಮುಂದೆ ಸಿನಿಮಾ ರಂಗದಲ್ಲಿ ನಮ್ಮದು ಒಂದು ಬ್ರ್ಯಾಂಡ್ ಇರಬೇಕಲ್ಲವ" ಎಂದು ಹೇಳಿದ್ದರು.

ಇಂದಿನ ಸ್ಟಾರ್ ಕುಡಿಗಳು ಮುಂದಿನ ತಾರೆಯರು!
ಕನ್ನಡ ಚಿತ್ರರಂಗದಲ್ಲಿ ಹಲವು ತಾರೆಯರು ತಮ್ಮ ಮಕ್ಕಳನ್ನು ಕಿರಿ ವಯಸ್ಸಿಗೆ ಸಿನಿಮಾರಂಗಕ್ಕೆ ತರಲು ಮುಂದಾಗಿದ್ದಾರೆ. ಈಗಾಗಲೇ ಸಿನಿಮಾ ತಾರೆಯರು ಮಕ್ಕಳು ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಉದಾಹರಣೆಗಳು ಸಾಕಷ್ಟು ಇವೆ. ಇದೀಗ ಅಜಯ್ ರಾವ್ ಮತ್ತು ಗಣೇಶ್ ಮಕ್ಕಳು ಬಣ್ಣ ಹಚ್ಚೋಕೆ ಮುಂದಾಗಿದ್ದಾರೆ. ಈ ಸ್ಟಾರ್ ಮಕ್ಕಳು ಮುಂದೆ ಬೆಳ್ಳಿ ಪರದೆ ಮೇಲೆ ಸ್ಟಾರ್ಗಳಾಗಿ ಮಿಂಚುವ ಸೂಚನೆ ಕೊಟ್ಟಿದ್ದಾರೆ.


Click it and Unblock the Notifications











