ಪ್ಯಾಟೆ ಹುಡುಗರ ಕಾಡುಜನರ ಕಾಳಗ 'ಹರಿ ಓಂ'
ಸಿನಿಮಾನಾ ಪ್ಯಾಷನ್ನಾಗಿಸಿಕೊಂಡು ಪ್ಯಾಷನೇಟಾಗಿ ಸಿನಿಮಾ ಮಾಡೋ ಒಂದು ವರ್ಗವಿದೆ. ಸಿದ್ಧಸೂತ್ರಗಳಿಗೆ ಬದ್ಧವಾಗದೆ ತಮ್ಮ ಆಲೋಚನೆಗೆ ಬದ್ಧವಾಗಿ, ಅದನ್ನು ಸಿನಿಮಾಂತರವಾಗಿಸುವಾಗ ಅನೇಕತರದ ಸವಾಲುಗಳು ಎದುರಾದರೂ ಎದೆಗುಂದದೆ ತಾವು ಕಂಡ ಕನಸನ್ನು ಬೆಳ್ಳಿತೆರೆಯ ಮೇಲೆ ಕುಂಚದಿಂದ ಜಾರಿದ ಕಲಾಕೃತಿಯಂತೆ ಅರಳಿಸುತ್ತಾರೆ.
ಇದೇ ಹಾದಿಯಲ್ಲಿ ಹೆಜ್ಜೆಯಿಟ್ಟಿರುವ ಯುವ ಉತ್ಸಾಹಿ ನಿರ್ದೇಶಕ-ನಿರ್ಮಾಪಕ 'ಜಾನ್ ಜಾನಿ ಜನಾರ್ಧನ್'. ಜಾನಿ ಹಾಗೂ ಗೆಳೆಯರು ಹುಟ್ಟು ಹಾಕಿರುವ 'Priswes Studios' ಫ್ರೆಂಚ್ ಭಾಷೆಯಲ್ಲಿ 'My Soul Mate', ಇಂಗ್ಲಿಷ್ ನಲ್ಲಿ 'Party People', 'Black' (Animation) ಕಿರುಚಿತ್ರಗಳನ್ನು ನಿರ್ಮಿಸಿದೆ.
ಜೊತೆಗೆ ತೆಲುಗಿನ '143 Hyderbad' ಚಿತ್ರಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ಯಶಸ್ವಿಯಾಗಿ ಮಾಡಿಕೊಟ್ಟಿರುವ ಬೆಂಗಳೂರಿನ ಈ ಯುವತಂಡಕ್ಕೆ ಕೆಲದಿನಗಳ ಹಿಂದೆ ಅಮೆರಿಕಾದ ಟಿವಿ ಚಾನೆಲ್ ವೊಂದು 8 ಎಪಿಸೋಡಿನ ಕಾಮಿಡಿ ಸೀರಿಯಲ್ಲೊಂದನ್ನು ನಿರ್ಮಿಸಲು ಅವಕಾಶ ಕಲ್ಪಿಸಿಕೊಟ್ಟಿದೆ.

ಇದೊಂದು ತ್ರಿಭಾಷಾ ಚಿತ್ರ 'ಹರಿ ಓಂ'
ಹಾಲಿವುಡ್ ನಲ್ಲೊಂದು ಹೆಜ್ಜೆಯಿಟ್ಟಿರುವ ಈ ಕನ್ನಡಿಗರು ಕನ್ನಡ-ತಮಿಳು-ತೆಲುಗಿನಲ್ಲಿ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ ಅದೇ 'ಹರಿ ಓಂ'. ಇದುವರಿಗೆ ತಾವು ತಯಾರಿಸುವ ಎಲ್ಲಾ ಚಿತ್ರಗಳಲ್ಲಿ ಹೊಸ ಪ್ರತಿಭೆಗಳಿಗೆ ಮುಕ್ತ ಅವಕಾಶವನ್ನು ನೀಡಿರುವ ಈ ತಂಡ ಇದೀಗ 'ಹರಿ ಓಂ'ಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಆಡಿಷನ್ ಮಾಡಿ 200 ಹೊಸಕಲಾವಿದರನ್ನು ಆಯ್ಕೆ ಮಾಡಿದ್ದು ಇವರನ್ನೆಲ್ಲಾ 'ಹರಿಓಂ' ಮೂಲಕ ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ.

ಕಲಾವಿದರಿಗೆ ಮೂರು ತಿಂಗಳ ತರಬೇತಿ
ಆಯ್ಕೆಯಾದ ಕಲಾವಿದರಿಗೆ ಕಳೆದ ಮೂರು ತಿಂಗಳಿಂದ ಪಾತ್ರಕ್ಕೆ ಬೇಕಾದ ಬಾಡಿಲಾಂಗ್ವೇಜ್, ಸಂಭಾಷಣೆ, ಪಾತ್ರಕ್ಕೆ ಬೇಕಾದ ಟೈಮಿಂಗ್ ನೊಂದಿಗೆ ಇವರೆನ್ನೆಲ್ಲಾ ಪರಿಪೂರ್ಣ ಕಲಾರೂಪಗಳಾಗಿಸಿ ಶೂಟಿಂಗ್ ಗೆ ಅಣಿಗೊಳಿಸಲಾಗುತ್ತಿದೆ.

ಹರಿ ಓಂ ಚಿತ್ರದ ಕಥೆ ಏನೆಂದರೆ...
'ಹರಿ ಓಂ' ಆಧುನಿಕ ಸಮಾಜದೊಂದಿಗೆ ಕಾಡುಜನರ ಸಂಸ್ಕೃತಿ, ಸಂಪ್ರದಾಯಗಳನ್ನು ಮುಖಾಮುಖಿಯಾಗಿಸುವ ಕಥಾಹೂರಣವನ್ನು ಹೊಂದಿದ್ದು ಇದು ಪ್ಯಾಟೆ ಹುಡುಗರ ಮನಸ್ಥಿತಿಗೂ ಕಾಡುಜನರ ಭಾವನೆಗಳಿಗೂ ಮಧ್ಯೆ ನಡೆಯುವಂತ ಸಾಂಸ್ಕೃತಿಕ-ಸಾಮಾಜಿಕ ಕಾಳಗ ಎನ್ನುತ್ತಾರೆ ನಿರ್ದೇಶಕ ಜನಾರ್ಧನ್.

ಕೈಜೋಡಿಸಿದ ಚಿತ್ರಕಲಾ ಪರಿಷತ್ತಿನ ವಿದ್ಯಾರ್ಥಿಗಳು
ಇಡೀ ಕಥೆ ಎರಡು ವ್ಯವಸ್ಥೆಗಳ ಮಧ್ಯೆ ನಡುವೆ ಹೋರಾಟವಾಗಿದ್ದು, ಚಿಕ್ಕಮಗಳೂರಿನ ಹತ್ತಿರದಲ್ಲಿ ಇದಕ್ಕಾಗಿ ಸುಮಾರು 300 ವರ್ಷಗಳ ಹಿಂದಿನ ಒಂದು ವಿಶೇಷವಾದ ಹಾಗೂ ವಿಶಾಲವಾದ ಮನೆಯೊಂದನ್ನು ನಿರ್ಮಿಸಲಾಗುತ್ತಿದ್ದು ಇದನ್ನು ಚಿತ್ರಕಲಾ ಪರಿಷತ್ತಿನ ಸುಮಾರು 15 ವಿದ್ಯಾರ್ಥಿಗಳು ರೂಪಿಸಿದ್ದು ಈ ಮನೆ ನಿರ್ಮಾಣಕ್ಕಾಗಿ ಸುಮಾರು 50 ಕಲಾವಿದರು ಹಗಲಿರಳು ಶ್ರಮಿಸುತ್ತಿದ್ದಾರೆ.

ಹೊಸ ಪ್ರಯೋಗಾತ್ಮಕ ಚಿತ್ರವಿದು
ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಸೋದರ ಪ್ರಣವ್ ರಾಯ್ ಸಂಗೀತ ನಿರ್ದೇಶಕರಾಗಿ, ಶಾಂತಿಸಾಗರ್ ಛಾಯಾಗ್ರಾಹಕರಾಗಿ, ವಿನೋದ ಸಂಕಲನಕಾರರಾಗಿ ಪರಿಚಿತರಾಗುತ್ತಿದ್ದಾರೆ. ಹೊಸ ಪ್ರಯೋಗಗಳಿಂದ ಮಾತ್ರ ಕನ್ನಡ ಸಿನಿಮಾರಂಗ ಬೆಳೆಯಲು ಸಾಧ್ಯ ಹೀಗಾಗಿ ಜನಾರ್ಧನ್ ಹಾಗೂ ಅವರ ತಂಡದ ಈ ಪ್ರಯತ್ನಕ್ಕೆ ಆಲ್ ದ ಬೈಸ್ಟ್ ಹೇಳೋಣ.


Click it and Unblock the Notifications











