ಎಂಎ.. ಎಲ್ಎಲ್ಬಿ ಮಾಡಿದ್ದ ಮಂಡ್ಯ ರವಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದೇಕೆ?
ಸುಮಾರು 15 ವರ್ಷಗಳಿಂದ ಕಿರುತೆರೆಯಲ್ಲಿ ನಟಿಸಿದ್ದ ಮಂಡ್ಯ ರವಿ ಬಾಲ್ಯದಿಂದಲೇ ನಟನೆಯ ಗೀಳು ಹತ್ತಿಸಿಕೊಂಡಿದ್ದರು. ಇವರ ಮೂಲ ಹೆಸರು ರವಿ ಪ್ರಸಾದ್ ಆಗಿದ್ದು, ನಟನ ಕ್ಷೇತ್ರದಲ್ಲಿ ಮಂಡ್ಯ ರವಿ ಎಂದೇ ಚಿರಪರಿಚಿತರಾಗಿದ್ದರು.
ಎಂ.ಎ ಹಾಗೂ ಎಲ್ಎಲ್ಬಿಯಲ್ಲಿ ಪದವಿ ಪಡೆದಿದ್ದ ಮಂಡ್ಯ ರವಿ, ಇದು ತನ್ನ ಆಸಕ್ತಿಯ ಕ್ಷೇತ್ರವಲ್ಲ ಎಂದು ನಿರ್ಧರಿಸಿ ನಟನೆ ಕ್ಷೇತ್ರವನ್ನು ಆಯ್ದುಕೊಂಡರು. ಬಾಲ್ಯದಿಂದಲೇ ನಟನೆಯ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಅವರು ಸ್ಥಳೀಯ ಹವ್ಯಾಸಿ ರಂಗಭೂಮಿ ಕಲಾವಿದರ ತಂಡ ಸೇರಿಕೊಂಡರು. ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಮಂಡ್ಯ ರವಿ ಟಿ.ಎಸ್ ನಾಗಾಭರಣ ಅವರ ನಿರ್ದೇಶನದಲ್ಲಿ ಮೂಡಿ ಬಂದ ಮಹಾಮಾಯಿ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು.
ಅಂದಿನಿಂದ ನಟನಾ ಕ್ಷೇತ್ರದಲ್ಲಿ ನಾಗಲೋಟ ಆರಂಭಿಸಿದ್ದ ಮಂಡ್ಯ ರವಿ, ಮಿಂಚು, ಮುಕ್ತ ಮುಕ್ತ, ಚಿತ್ರಲೇಖ, ಯಶೋಧೆ, ಪುಟ್ಟ ಗೌರಿ ಮದುವೆ, ಮಗಳು ಜಾನಕಿ, ನಮ್ಮನೆ ಯುವರಾಣಿ, ವರಲಕ್ಷ್ಮೀ ಸ್ಟೋರ್ಸ್, ಅರ್ಧಾಂಗಿ ಧಾರವಾಹಿಗಳಲ್ಲಿ ನಟಿಸಿದ್ದರು. ಪೋಷಕ ಪಾತ್ರ ಹಾಗೂ ವಿಲನ್ ಪಾತ್ರದಲ್ಲಿ ಪ್ರೇಕ್ಷಕರ ಕಣ್ಣು ಕುಕ್ಕುವಂತೆ ನಟಿಸುತ್ತಿದ್ದ ಅವರು, ಮುಕ್ತ ಮುಕ್ತ ಧಾರವಾಹಿಯ ಮಧು ಹಾಗೂ ಮಗಳು ಜಾನಕಿಯ ಚಂದು ಭಾರ್ಗಿ ಪಾತ್ರದ ಮೂಲಕ ಮನೆ ಮನೆ ಮಾತಾಗಿದ್ದರು.

ಇನ್ನು ನಿರ್ದೇಶಕ ಟಿ.ಎನ್ ಸೀತಾರಾಮ್ ಅವರ ಅತ್ಯಾಪ್ತರಾಗಿದ್ದ ಮಂಡ್ಯ ರವಿ, ಸೀತಾರಾಮ್ ಅವರ ನಿರ್ದೇಶನದ ಎಲ್ಲಾ ಧಾರಾವಾಹಿಗಳಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ಅಲ್ಲದೇ ಅವರ ನಟನೆಯ ಕಾಫಿ ತೋಟ ಚಿತ್ರದಲ್ಲಿ ಕೂಡ ನಟಿಸಿದ್ದರು. ಸದ್ಯ ಅರ್ಧಾಂಗಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಮಂಡ್ಯ ರವಿ ಮರಳಿ ಮನಸಾಗಿದೆ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದರು. ಮರಳಿ ಮನಸಾಗಿದೆ ಸಿನಿಮಾದ ಚಿತ್ರೀಕರಣ ನಡೆಸುತ್ತಿದ್ದು, ಇಡೀ ಚಿತ್ರತಂಡಕ್ಕೆ ರವಿ ಅಗಲಿಕೆ ಆಘಾತ ತಂದಿದೆ.
ಮೂಲತಃ ಮಂಡ್ಯ ಜಿಲ್ಲೆಯವರಾದ ರವಿ ಪ್ರಸಾದ್, ಸದ್ಯ ಮಂಡ್ಯದಲ್ಲೇ ಕುಟುಂಬಸ್ಥರೊಂದಿಗೆ ವಾಸವಿದ್ದು, ಶೂಟಿಂಗ್ ಸಮಯದಲ್ಲಷ್ಟೇ ಬೆಂಗಳೂರಿಗೆ ಬರುತ್ತಿದ್ದರು. ರವಿ ಅವರ ತಂದೆ ಡಾ.ಮುದ್ದೇ ಗೌಡ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಕನ್ನಡ ಪ್ರಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಸದ್ಯ ನಿವೃತ್ತಿ ಹೊಂದಿದ್ದಾರೆ. ರವಿ ಅವರ ತಂದೆ ಮುದ್ದೇ ಗೌಡ ಅವರು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಕಿರುತೆರೆಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಮಂಡ್ಯ ರವಿ, ಪತ್ನಿ ಮಾಲತಿ, ಪುತ್ರ, ಅಕ್ಕ ಸೇರಿದಂತೆ ತಮ್ಮ ಅಪಾರ ಬಳಗವನ್ನು ಅಗಲಿದ್ದಾರೆ.


Click it and Unblock the Notifications











