ಖ್ಯಾತ ನಟ ಚೇತನ್ ರಾಮರಾವ್ ಆಸ್ಪತ್ರೆಗೆ ದಾಖಲು

ಮೈಸೂರಿನ ಬಿಜಿಎಸ್ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದಕ್ಕಾಗಿ ಈಗಾಗಲೆ ರು.7 ಲಕ್ಷಗಳವರೆಗೂ ಖರ್ಚಾಗಿದೆ. ಇನ್ನು ತಮ್ಮಿಂದ ವೈದ್ಯಕೀಯ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರ ಪತ್ನಿ ಪಾರ್ವತಿ ಅವರು ಅಸಹಾಯಕತೆಯನ್ನು ಮಾಧ್ಯಮಗಳ ಮುಂದೆ ತೋಡಿಕೊಂಡಿದ್ದಾರೆ.
"ತಮ್ಮ ಚಿನ್ನಾಭರಣಗಳನ್ನೂ ಅಡವಿಟ್ಟು ಆಸ್ಪತ್ರೆ ಬಿಲ್ ಕಟ್ಟಿದ್ದೇನೆ. ಬಾಕಿ ಹಣವನ್ನು ಕಟ್ಟಲು ಸಾಧ್ಯವಾಗುತ್ತಿಲ್ಲ. ಸರ್ಕಾರಕ್ಕೂ ತಮ್ಮ ಕೂಗು ಕೇಳಿಸುತ್ತಿಲ್ಲ. ಚಿತ್ರರಂಗದ ಹಲವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಧನ ಸಹಾಯಕ್ಕಾಗಿ ಕೇಳಿಕೊಂಡೆವು. ಇದುವರೆಗೂ ಯಾರೂ ತಮ್ಮ ಕಡೆ ತಿರುಗಿಯೂ ನೋಡಿಲ್ಲ" ಎಂದು ಕಣ್ಣೀರಿಟ್ಟಿದ್ದಾರೆ ಪಾರ್ವತಿ.
"ತಮಗೆ ಮೂವರು ಹೆಣ್ಣು ಮಕ್ಕಳಿದ್ದು ಅವರಿಗೂ ಮದುವೆ ಮಾಡಲಾಗಿದೆ. ಈಗ ಪತಿಯ ಅನಾರೋಗ್ಯದ ಕಾರಣ ಸಾಕಷ್ಟು ಹಣ ಖರ್ಚು ಮಾಡಿದ್ದೇವೆ. ಇನ್ನು ತಮ್ಮಿಂದ ವೈದ್ಯಕೀಯ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಸರಕಾರ ಇತ್ತ ಗಮನಹರಿಸಿ ವೈದ್ಯಕೀಯ ವೆಚ್ಚ ಭರಿಸಬೇಕು" ಎಂದು ಅವರು ಮರುಗಿದ್ದಾರೆ.
"ಚೇತನ್ ರಾಮ್ ರಾವ್ ಅವರು ಮಂಡಿ ನೋವಿನಿಂದ ಬಳಲುತ್ತಿದ್ದು 15 ದಿನಗಳ ಹಿಂದೆ ತಮ್ಮ ಆಸ್ಪತ್ರೆಗೆ ದಾಖಲಾದರು. ಇದಕ್ಕೂ ಮುನ್ನ ಅವರು ಬೇರೊಂದು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಪುನಃ ನೋವು ಕಾಣಿಸಿಕೊಂಡ ಕಾರಣ ಅವರು ನಮ್ಮ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರ್ಥಿಕ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಎಷ್ಟು ಸಾಧ್ಯವೋ ಅಷ್ಟು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಡಾ.ಬಾಲಕೃಷ್ಣೇ ಗೌಡ ತಿಳಿಸಿದ್ದಾರೆ.
ಚೇತನ್ ರಾಮರಾವ್ ಅವರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದೊಂದಿಗೆ ಐದು ದಶಕಗಳ ನಂಟು ಅವರದು. 1968ರ ಡಾ.ರಾಜ್ ಕುಮಾರ್ ಜೊತೆಗಿನ 'ಮಾರ್ಗದರ್ಶಿ' ಚಿತ್ರದ ಮೂಲಕ ಅವರ ಬಣ್ಣದ ಜಗತ್ತಿನ ಪಯಣ ಆರಂಭವಾಯಿತು. ರಂಗಭೂಮಿಯಲ್ಲೂ ಅವರು ಸಕ್ರಿಯರಾಗಿದ್ದರು.
ಆಪರೇಷನ್ ಡೈಮಂಡ್ ರಾಕೆಟ್ ಸೇರಿದಂತೆ ಬಾಳು ಬೆಳಗಿತು, ರಾಜ ನನ್ನ ರಾಜ, ಲಗ್ನ ಪತ್ರಿಕೆ, ಹುಲಿಯ ಹಾಲಿನ ಮೇವು, ಒಲವೇ ಗೆಲುವು ಹಾಗೂ ಆಪ್ತರಕ್ಷಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವಾರ್ತಾ ಇಲಾಖೆಗಾಗಿ ಅವರು 'ಕುಡಿಯುವ ನೀರು' ಎಂಬ ಡಾಕ್ಯುಮೆಂಟರಿಯನ್ನೂ ಮಾಡಿದ್ದಾರೆ. ಕಲಾದ್ರೋಣ, ನಟ ಚತುರ, ಕಲಾಭೀಷ್ಮ, ಕಲಾ ರತ್ನ ಪ್ರಶಸ್ತಿಗಳು ಅವರನ್ನು ವರಿಸಿವೆ.
ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಪ್ರಸಾದ್ ಹಾಗೂ ಸಹಕಾರಿ ಸಚಿವ ಎಚ್ ಎಸ್ ಮಹದೇವ ಪ್ರಸಾದ್ ಅವರಿಗೆ ಪತ್ರ ಬರೆದು ತಮ್ಮ ಸಂಕಟ ಹೇಳಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೂ ಈ ಬಗ್ಗೆ ಹೇಳಿದ್ದೇವೆ. ಇದುವರೆಗೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎನ್ನುತ್ತಾರೆ ಪಾರ್ವತಿ ರಾಮರಾವ್.


Click it and Unblock the Notifications











