'ಕನ್ನಡತಿ' ಧಾರಾವಾಹಿ ನಟ ಕಿರಣ್ ರಾಜ್ ಕಾರು ಅಪಘಾತ; ಗಂಭೀರ ಪೆಟ್ಟು
ರಸ್ತೆ ಅಪಘಾತದಲ್ಲಿ ಕನ್ನಡ ನಟ ಕಿರಣ್ ರಾಜ್ ಗಾಯಗೊಂಡಿದ್ದಾರೆ. ಘಟನೆಯಲ್ಲಿ ನಟನ ಎದೆಗೆ ಬಲವಾದ ಪೆಟ್ಟು ಬಿದ್ದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿರಣ್ ರಾಜ್ ಹೀರೊ ಆಗಿ ನಟಿಸಿರು 'ರಾನಿ' ಚಿತ್ರ ನಾಳೆ(ಸೆಪ್ಟೆಂಬರ್ 12) ಬಿಡುಗಡೆ ಆಗಬೇಕಿದೆ.
ಇತ್ತೀಚೆಗೆ ನಿರ್ದೇಶಕ ನಾಗಶೇಖರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿತ್ತು. ಇದೀಗ ತಮ್ಮ 'ರಾನಿ' ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಕಿರಣ್ ರಾಜ್ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಬೆಂಗಳೂರಿನ ಕೆಂಗೇರಿ ಬಳಿ ಕಾರಿಗೆ ಅಡ್ಡವಾಗಿ ಬಂದ ಮುಂಗುಸಿಯನ್ನು ತಪ್ಪಿಸಲು ಹೋಗಿ ಕಾರು ಡಿವೈಡರ್ಗೆ ಗುದ್ದ ಈ ಅಪಘಾತ ಸಂಭವಿಸಿದೆ ಎಂದ ವರದಿಯಾಗಿದೆ. ಅಪಘಾತದ ಬಳಿಕ ಕಿರಣ್ ರಾಜ್ ಪ್ರಜ್ಞಾಹೀನ ಸ್ಥಿತಿಗೆ ಜಾರಿದ್ದರು.
ಕಾರಿನಲ್ಲಿ 'ರಾನಿ' ಚಿತ್ರದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್ ಕೂಡ ಪ್ರಯಾಣಿಸುತ್ತಿದ್ದರು. ಅವರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ನಿನ್ನೆ ರಾತ್ರಿ(ಸೆಪ್ಟಂಬರ್ 10) ಗುಟ್ಟಯ್ಯನ ಪಾಳ್ಯ ಬಳಿ ಇರುವ ನಿರಾಶ್ರಿತರ ಕೇಂದ್ರಕ್ಕೆ ಊಟ ನೀಡಲು ಹೋಗುವ ಸಮಯದಲ್ಲಿ ಕಾರು ಅಪಘಾತವಾಗಿದೆ. ಮರ್ಸಿಡಿಸ್ ಬೆನ್ಜ್ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಕಿರಣ್ ರಾಜ್ಗೆ ಪ್ರತಿವಾರ ನಿರಾಶ್ರಿತರ ಕೇಂದ್ರಕ್ಕೆ ಊಟ ಕೊಡುವ ಅಭ್ಯಾಸವಿತ್ತು. ಅದೇ ರೀತಿ ಈ ಬಾರಿ ಹೋಗುವಾಗ ಈ ದುರ್ಘಟನೆ ನಡೆದಿದೆ. ಹಿಂದಿ ಧಾರಾವಾಹಿಗಳಲ್ಲಿ ಮೊದಲಿಗೆ ನಟಿಸಿದ ಕಿರಣ್ ರಾಜ್ ಬಳಿಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. 'ಕನ್ನಡತಿ' ಧಾರಾವಾಹಿಯ ಹರ್ಷ ಪಾತ್ರ ಒಳ್ಳೆ ಹೆಸರು ತಂದುಕೊಟ್ಟಿತ್ತು.
ತೀವ್ರ ನಿಗಾ ಘಟಕದಲ್ಲಿ ಕಿರಣ್ ರಾಜ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಸಮಯದಲ್ಲಿ 'ರಾನಿ' ಸಿನಿಮಾ ಬಿಡುಗಡೆ ಆಗುತ್ತಾ? ಎನ್ನುವ ಗೊಂದಲ ಕೂಡ ಕಾಡುತ್ತಿದೆ. ಸಿನಿಮಾ ರಿಲೀಸ್ ಸಮಯದಲ್ಲೇ ಈ ಅಪಘಾತ ನಡೆದಿರುವುದು ಬೇಸರದ ಸಂಗತಿ. ಸೀಟ್ ಬೆಲ್ಟ್ ಧರಿಸಿದ್ದರಿಂದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್ಗೆ ಪೆಟ್ಟಾಗಿಲ್ಲ. ಆದರೆ ಕಿರಣ್ ರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗ್ತಿದೆ. ಕೆಂಗೇರಿಯ ಬೆಂಗಳೂರು ಹಾಸ್ಪಿಟಲ್ನಲ್ಲಿ ಚಿಕಿತ್ಸೆ ಮುಂದುವರೆದಿದೆ.
ಗುರುತೇಜ್ ಶೆಟ್ಟಿ ನಿರ್ದೇಶನದ 'ರಾನಿ' ಸಿನಿಮಾ ಭರ್ಜರಿ ಪ್ರಚಾರದಿಂದ ಸದ್ದು ಮಾಡುತ್ತಿತ್ತು. ಬಹಳ ಉತ್ಸಾಹದಿಂದ ನಾಯಕ ಕಿರಣ್ ರಾಜ್ ಪ್ರಚಾರ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಪತ್ರಕರ್ತರಿಗಾಗಿ ನಿನ್ನೆ ಸಂಜೆ ಚಿತ್ರದ ಸ್ಪೆಷಲ್ ಶೋ ಏರ್ಪಡಿಸಲಾಗಿತ್ತು. ಇದೆಲ್ಲದರ ನಡುವೆ ಈ ಕಾರು ಅಪಘಾತ ಸಂಭವಿಸಿದೆ.


Click it and Unblock the Notifications











