ಕನ್ನಡಿಗರನ್ನು ಮತ್ತೆ ಕೆಣಕಿದ ರಶ್ಮಿಕಾ ಮಂದಣ್ಣ, ಕನ್ನಡ ಚಿತ್ರರಂಗದಿಂದ ಒಬ್ಬರು ನೆನಪಾಗಲಿಲ್ವಾ ?
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರೀಲಿ ಕೊಡೆ ಹಿಡಿದ - ಇದು ತೀರಾ ಓಲ್ಡ್ ಗಾದೆ. ಆದರೆ ಈ ರಶ್ಮಿಕಾ ಮಂದಣ್ಣ ಅವರಂತಾ ನಟಿಯರು ಈ ಮಾತನ್ನು ಇವತ್ತಿಗೂ ಜೀವಂತವಾಗಿಟ್ಟಿದ್ದಾರೆ. ಇದಕ್ಕೆ ರಶ್ಮಿಕಾ ಮಂದಣ್ಣ ಮೊನ್ನೆ ಮಾತನಾಡಿದ ಮಾತೇ ಸಾಕ್ಷಿ.
ಹೌದು, ಎಲ್ಲರಿಗೆ ಗೊತ್ತಿರುವಂತೆ ರಶ್ಮಿಕಾ ಮಂದಣ್ಣ ಅವರ ವೃತ್ತಿ ಜೀವನಕ್ಕೆ ಮೊದಲು ಅಡಿಪಾಯ ಹಾಕಿದ್ದೇ ಕನ್ನಡ ಚಿತ್ರರಂಗ. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದು ರಾತ್ರೋ ರಾತ್ರಿ ಸ್ಟಾರ್ ಆದ ನಟಿ ರಶ್ಮಿಕಾ ಮಂದಣ್ಣ. ಅಭಿನಯಿಸಿದ ಚೊಚ್ಚಲ ಚಿತ್ರವನ್ನೇ ಟ್ರಂಪ್ ಕಾರ್ಡಾಗಿ ಇಟ್ಟುಕೊಂಡು ತೆಲುಗು ಚಿತ್ರರಂಗವನ್ನು ಪ್ರವೇಶಿಸಿದ ರಶ್ಮಿಕಾ ಬೆರಳೆಣಿಕೆಯ ದಿನಗಳಲ್ಲೇ ಬಹುಬೇಡಿಕೆಯ ನಟಿಯಾಗಿ ಬೆಳೆದದ್ದು ಕನ್ನಡಿಗರಿಗೆ ಹೆಮ್ಮೆ.

ಆದರೆ ರಶ್ಮಿಕಾಗೆ ಅದ್ಯಾವಾಗ ಪರ ಭಾಷೆಗಳಿಂದ ಅವಕಾಶಗಳು ದುಬಾರಿಯಾಗುತ್ತಾ ಹೋಯಿತೋ ಪಾಪ ರಶ್ಮಿಕಾ ಅಡ್ಡದಾರಿಯ ಮೇಲೆ ಅಡ್ಡದಾರಿಯನ್ನು ಹಿಡಿಯುಲು ಶುರು ಮಾಡಿದರು. ಆರಂಭದಲ್ಲಿ ಯಶ್ ಅವರನ್ನ ಅಲ್ಲಗಳೆದು ಮಾತನಾಡಿದ್ದ ರಶ್ಮಿಕಾ ತೆಲುಗಿನಲ್ಲಿ ಅವಕಾಶ ದೊರೆಯುತ್ತಿದ್ದಂತೆ ಎಂಗೇಜ್ ಆಗಿದ್ದ ರಕ್ಷಿತ್ ಶೆಟ್ಟಿಯವರನ್ನು ಎಡಗಾಲಲ್ಲಿ ಒದ್ದು ವಿಜಯ್ ದೇವರಕೊಂಡನ ಟೀಮು ಸೇರಿಬಿಟ್ಟರು. ಇಂಥಾ ರಶ್ಮಿಕಾ ಈಗ ಇನ್ನೊಮ್ಮೆ ಕನ್ನಡಿಗರನ್ನು ಕೆರಳಿಸಿದ್ದಾರೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ರಶ್ಮಿಕಾ ಸದ್ಯ ಪುಷ್ಪ 2 ಚಿತ್ರದ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಸಂಭ್ರಮಿಸುತ್ತಿದ್ದಾರೆ. ಕೇವಲ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲ, ಬಾಲಿವುಡ್ನಲ್ಲಿ ಕೂಡ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಬೆಳೆಯುತ್ತಿದ್ದಾರೆ. ಸಂತೋಷ..!
ಆದರೆ ಹೀಗೆ ಬೆಳೆದ ಮೇಲೆ ಅವಕಾಶ ಕೊಟ್ಟ ಕನ್ನಡ ಚಿತ್ರರಂಗವನ್ನು ಇಷ್ಟು ಬೇಗ ಕಡೆಗಣಿಸಿದ್ದು, ಒದ್ದು ನಡೆದಿದ್ದು ಎಷ್ಟು ಸರಿ ಎನ್ನುವುದು ಸದ್ಯದ ಪ್ರಶ್ನೆ. ಇದಕ್ಕೆ ಕಾರಣವಾಗಿದ್ದು ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ಒಂದು ಸಂದರ್ಶನ.
ಹೌದು, ಅಸಲಿಗೆ ಪುಷ್ಪ 2 ಚಿತ್ರದಿಂದ ಕೀರ್ತಿ -ಖ್ಯಾತಿ ಹೆಚ್ಚಾದ ಖುಷಿಯಲ್ಲಿ ರಶ್ಮಿಕಾ ಮಂದಣ್ಣ ಇಂಡಿಯಾ ಟುಡೇ ಸೇರಿ ಅನೇಕರಿಗೆ ಸಂದರ್ಶನಗಳನ್ನು ನೀಡಿದ್ದಾರೆ. ಆ ಪೈಕಿ ಒಂದು ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಅವರ ನೆಚ್ಚಿನ ಸೆಲೆಬ್ರಿಟಿಗಳ ಕುರಿತು ಪ್ರಶ್ನೆಯನ್ನು ಕೇಳಲಾಗಿದೆ. ಹೀಗೆ ಕೇಳಲಾದ ಕೆಲ ಪ್ರಶ್ನೆಗಳಲ್ಲಿ ನಿಮ್ಮ ನೆಚ್ಚಿನ ಬಾಲ್ಯದ ಕ್ರಶ್ ಯಾರೆಂಬ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ರಶ್ಮಿಕಾ ಮಂದಣ್ಣ ಶಾರುಖ್ ಖಾನ್ ಅವರಿಂದ ಹಿಡಿದು ರಜಿನಿಕಾಂತ್ವರೆಗೆ ಇಳಯ ದಳಪತಿ ವಿಜಯ್ ಅವರಿಂದ ಹಿಡಿದು ಚಿರಂಜೀವಿವರೆಗೆ ಹೆಸರನ್ನು ಹೇಳಿದ್ದಾರೆ. ಆದರೆ ಅಪ್ಪಿ ತಪ್ಪಿ ಕೂಡ ಕನ್ನಡದ ಸ್ಟಾರ್ಗಳ ಹೆಸರನ್ನು ರಶ್ಮಿಕಾ ಮಂದಣ್ಣ ಹೇಳಿಲ್ಲ.
ಇದಾದ ನಂತರ ನಿಮ್ಮೆ ನೆಚ್ಚಿನ ನಿರ್ದೇಶಕರು ಯಾರು, ಯಾರ ಜೊತೆ ಕೆಲಸ ಮಾಡಲು ನೀವು ತುದಿಗಾಲಿನಲ್ಲಿ ನಿಂತಿದ್ದೀರಾ ಎನ್ನುವ ಪ್ರಶ್ನೆಯನ್ನು ರಶ್ಮಿಕಾ ಮಂದಣ್ಣ ಅವರಿಗೆ ಕೇಳಲಾಗಿದೆ. ಇದಕ್ಕೆ ಸಂಜಯ್ ಲೀಲಾ ಬನ್ಸಾಲಿ ಎಂಬ ಉತ್ತರವನ್ನು ರಶ್ಮಿಕಾ ಹೇಳಿದ್ದಾರೆ. ಕೃತಜ್ಞತಾ ಭಾವಕ್ಕಾದರೂ ರಶ್ಮಿಕಾ ಮಂದಣ್ಣ ಕನ್ನಡದ ಚಿತ್ರ ನಿರ್ದೇಶಕರ ಹೆಸರು ಹೇಳಬೇಕಿತ್ತು. ಕೊನೆ ಪಕ್ಷ ಕಿರಿಕ್ ಪಾರ್ಟಿ ಮೂಲಕ ತಮ್ಮನ್ನು ನಾಯಕಿಯನ್ನಾಗಿಸಿದ ರಿಷಬ್ ಶೆಟ್ಟಿ ಅವರ ಹೆಸರನ್ನಾದರೂ ಹೇಳಬೇಕಿತ್ತು. ಆದರೆ ರಶ್ಮಿಕಾ ಕನ್ನಡದ ಒಬ್ಬ ನಿರ್ದೇಶಕರ ಹೆಸರನ್ನು ಕೂಡ ತೆಗೆದುಕೊಂಡಿಲ್ಲ. ಬದಲಿಗೆ ಸಂಜಯ್ ಲೀಲಾ ಬನ್ಸಾಲಿ ಅವರನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ.
ರಶ್ಮಿಕಾ ಅವರ ಈ ನಡೆ ಮತ್ತು ನುಡಿ ಸದ್ಯ ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡ ಚಿತ್ರರಂಗದಿಂದ ತಮ್ಮ ವೃತ್ತಿ ಜೀವನವನ್ನು ಶುರು ಮಾಡಿದ ರಶ್ಮಿಕಾ ಮಂದಣ್ಣ ಅವರಿಗೆ ಕನ್ನಡ ಚಿತ್ರರಂಗದಿಂದ ಯಾರೊಬ್ಬರು ಈ ತರಹದ ಸಂದರ್ಶನಗಳನ್ನು ನೀಡುವಾಗ ನೆನಪಾಗುವುದಿಲ್ವಾ ಎನ್ನುವ ಪ್ರಶ್ನೆ ಕೂಡ ಅನೇಕರಿಗೆ ಕಾಡುತ್ತಿದೆ. ಇದಕ್ಕೆ ಪೂರಕವಾಗಿ ರಶ್ಮಿಕಾ ಮಂದಣ್ಣ ಅವರ ಕನ್ನಡಾಭಿಮಾನದ ಕುರಿತು ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.


Click it and Unblock the Notifications











