ಧ್ರುವ ಸರ್ಜಾ 'ಕೆಡಿ' ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ನಟನೆ; ಆದ್ರೆ ಇದು ಕನ್ನಡ ಚಿತ್ರ ಅನ್ನೋದೇ ಆಕೆಗೆ ಗೊತ್ತಿಲ್ಲ!?

ನಿನ್ನೆ ( ಮಾರ್ಚ್ 22 ) ಯುಗಾದಿ ಹಬ್ಬದ ಪ್ರಯುಕ್ತ ಭಾರತ ಸಿನಿಮಾ ರಂಗದ ಹಲವು ಹೊಸ ಸಿನಿಮಾಗಳ ಅಪ್ಡೇಟ್ಗಳು ಹೊರಬಿದ್ದವು. ಕೆಲ ಚಿತ್ರಗಳು ಈ ವಿಶೇಷ ದಿನದ ಪ್ರಯುಕ್ತ ಬಿಡುಗಡೆಗೊಂಡರೆ, ಚಿತ್ರೀಕರಣದ ಹಂತದಲ್ಲಿರುವ ಸಿನಿಮಾಗಳು ಹಾಡುಗಳು, ಟೀಸರ್, ಟ್ರೈಲರ್ ಹಾಗೂ ವಿಶೇಷ ಪೋಸ್ಟರ್ಗಳನ್ನು ಹಂಚಿಕೊಳ್ಳುವ ಮೂಲಕ ಹಬ್ಬದ ಮೆರುಗನ್ನು ಹೆಚ್ಚಿಸಿದವು.
ಇನ್ನು ರಾಜ್ಯದಲ್ಲಿಯೂ ಯುಗಾದಿ ಆಚರಣೆ ಜೋರಾದ ಕಾರಣ ಈ ದಿನದಂದು ಕನ್ನಡ ಸಿನಿ ಮಂದಿ ಸಹ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾಹಿತಿಗಳನ್ನು ನೀಡಿದ್ದಾರೆ. ಹಲವಾರು ಚಿತ್ರಗಳು ವರ್ಷದ ಮೊದಲ ಹಬ್ಬಕ್ಕೆ ಶುಭ ಕೋರಿ ಪೋಸ್ಟರ್ಗಳನ್ನು ಹಂಚಿಕೊಂಡಿವೆ. ಇನ್ನು ನಿನ್ನೆ ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಕಾಂಬಿನೇಶನ್ನ ಕೆಡಿ ಮತ್ತು ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಶನ್ನ ಕಾಟೇರ ಈ ಎರಡು ಸ್ಟಾರ್ ನಟರ ಚಿತ್ರಗಳ ಪ್ರಮುಖ ಪಾತ್ರಗಳು ರಿವೀಲ್ ಆದವು.
ಕಾಟೇರ ಚಿತ್ರತಂಡ ಕನಸಿನ ರಾಣಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ತಮ್ಮ ಚಿತ್ರದಲ್ಲಿ ನಿರ್ವಹಿಸಿಸಲಿರುವ ಪಾತ್ರವನ್ನು ರಿವೀಲ್ ಮಾಡಿದೆ. ಚಿತ್ರದಲ್ಲಿ ನಾಯಕಿ ಪಾತ್ರವನ್ನು ರಾಧನಾ ರಾಮ್ ನಿರ್ವಹಿಸುತ್ತಿದ್ದು, ಈ ಪಾತ್ರಕ್ಕೆ ಪ್ರಭಾವತಿ ಎಂದು ಹೆಸರನ್ನು ಇಡಲಾಗಿದೆ. ಇನ್ನು ಕೆಡಿ ಚಿತ್ರದಲ್ಲಿ ನಟಿ ಶಿಲ್ಪಾ ಶೆಟ್ಟಿ ಅಭಿನಯಿಸುತ್ತಿದ್ದು, ವಿಶೇಷ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ 'ಸತ್ಯವತಿ' ಎಂಬ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ನಟಿಸಲಿದ್ದಾರೆ ಎಂಬುದನ್ನು ಬಹಿರಂಗಪಡಿಸಲಾಗಿದೆ.
ತೊಂಬತ್ತರ ದಶಕದ ಸೀರೆ, ಹೇರ್ಸ್ಟೈಲ್, ಕನ್ನಡಕ ಹಾಗೂ ಕೈಯಲ್ಲೊಂದು ಬ್ಯಾಗ್ ಹಿಡಿದು ನಡೆದು ವಿಂಟೇಜ್ ಕಾರೊಂದರ ಮುಂದೆ ಶಿಲ್ಪಾ ಶೆಟ್ಟಿ ನಡೆದು ಬರುತ್ತಿರುವ ಪೋಸ್ಟರ್ ಇದಾಗಿದ್ದು, ಈ ಪೋಸ್ಟರ್ ಅನ್ನು ಶಿಲ್ಪಾ ಶೆಟ್ಟಿ ತಾನೂ ಸಹ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಪೋಸ್ಟರ್ ಹಂಚಿಕೊಳ್ಳುವಾಗ ಶಿಲ್ಪಾ ಶೆಟ್ಟಿ ಬರೆದಿರುವ ಸಾಲುಗಳು ಇದೀಗ ಕನ್ನಡಿಗರ ಕೋಪಕ್ಕೆ ಕಾರಣವಾಗಿವೆ.
ಹೌದು, ಕೆಡಿ ಚಿತ್ರದ ತಮ್ಮ ಪೋಸ್ಟರ್ ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ ತೆಲುಗಿನಲ್ಲಿ 'ಯುಗಾದಿ ಶುಭಾಕಾಂಕ್ಷಲು' ಎಂದು ತೆಲುಗಿನಲ್ಲಿ ಶುಭ ಕೋರಿದ್ದಾರೆ. ಈ ಟ್ವೀಟ್ನಲ್ಲಿ ಎಲ್ಲಿಯೂ ಸಹ ಕನ್ನಡವಿಲ್ಲ. ಕನ್ನಡ ಚಿತ್ರದ ಪೋಸ್ಟರ್ ಹಂಚಿಕೊಳ್ಳುವಾಗ, ಕನ್ನಡ ಚಿತ್ರರಂಗಕ್ಕೆ ಹಲವು ವರ್ಷಗಳ ಬಳಿಕ ಮರಳಿ ಬರುತ್ತಿರುವ ವಿಷಯವನ್ನು ಯುಗಾದಿ ಹಬ್ಬದ ವಿಶೇಷ ದಿನದಂದು ತಿಳಿಸುವಾಗ ಕನ್ನಡದ ಬದಲು ತೆಲುಗು ಬಂದದ್ದಾದರೂ ಯಾಕೆ ಎಂಬ ಪ್ರಶ್ನೆ, ಬೇಸರ ಹಾಗೂ ಗೊಂದಲ ಕನ್ನಡಿಗರಲ್ಲಿ ಮನೆ ಮಾಡಿದೆ.

ಇನ್ನು ಶಿಲ್ಪಾ ಶೆಟ್ಟಿ ಮಾಡಿರುವ ಈ ಟ್ವೀಟ್ ಕಂಡ ಕೂಡಲೇ ಪ್ರತಿಕ್ರಿಯಿಸಿರುವ ಹಲವಾರು ನೆಟ್ಟಿಗರು ಕನ್ನಡ ಚಿತ್ರದ ಪೋಸ್ಟರ್ಗೂ ತೆಲುಗು ಭಾಷೆಗೂ ಯಾವ ಸಂಬಂಧ, ಅನುಭವಿ ನಟಿಯಾಗಿ ಈ ರೀತಿ ಮಾಡೋದು ಸರಿನಾ, ಮೂಲತಃ ಕರ್ನಾಟಕದವರೇ ಆಗಿ ಕನ್ನಡ ಕಡೆಗಣನೆ ಎಷ್ಟು ಸರಿ ಎಂದು ಕಿಡಿಕಾರಿದ್ದಾರೆ.
ಇನ್ನು ರವಿಚಂದ್ರನ್ ಜತೆ 1998ರಲ್ಲಿ ಪ್ರೀತ್ಸೋದ್ ತಪ್ಪಾ ಸಿನಿಮಾದಲ್ಲಿ ನಟಿಸುವ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದ ನಟಿ ಶಿಲ್ಪಾ ಶೆಟ್ಟಿ ನಟಿಸುತ್ತಿರುವ ನಾಲ್ಕನೇ ಕನ್ನಡ ಸಿನಿಮಾ ಇದಾಗಿದೆ. ಪ್ರೀತ್ಸೋದ್ ತಪ್ಪಾ ಬಳಿಕ ಒಂದಾಗೋಣ ಬಾ ಹಾಗೂ ಉಪೇಂದ್ರ ನಟನೆಯ ಆಟೋ ಶಂಕರ್ ಚಿತ್ರದಲ್ಲಿ ಸಹ ನಟಿಸಿದ್ದರು. 2005ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಆಟೋಶಂಕರ್ ಶಿಲ್ಪಾ ಶೆಟ್ಟಿ ನಟಿಸಿದ್ದ ಕೊನೆಯ ಕನ್ನಡ ಸಿನಿಮಾವಾಗಿತ್ತು. ಹೀಗೆ 18 ವರ್ಷಗಳ ಬಳಿಕ ಶಿಲ್ಪಾ ಶೆಟ್ಟಿ ಕನ್ನಡ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ಪ್ರೇಮ್ ನಿರ್ದೇಶನವಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ.


Click it and Unblock the Notifications











