ಇವನಂತ ಗುಳ್ಳೆನರಿ ಮತ್ತೊಬ್ಬ ಸಿಗಲ್ಲ, ಹೊಲಸು ಎಂದು ಬೈದವರಿಗೆ ಕಾರ್ತಿಕ್ ಗೌಡ ತಿರುಗೇಟು; ಇದು ಆದಿಪುರುಷ್ ವಿಷಯ!
ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಓಂ ರಾವತ್ ನಟನೆಯ ಬಹುನಿರೀಕ್ಷಿತ ಚಿತ್ರ ಆದಿಪುರುಷ್ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಚಿತ್ರ ಇದೇ ಶುಕ್ರವಾರ ಜೂನ್ 16ರಂದು ವಿಶ್ವದಾದ್ಯಂತ ಬಿಡುಗಡೆಗೊಳ್ಳಲಿದೆ.
ಮೂಲತಃ ಹಿಂದಿ ಭಾಷೆಯ ಚಿತ್ರವಾಗಿರುವ ಆದಿಪುರುಷ್ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗುತ್ತಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಆದಿಪುರುಷ್ ಮೊದಲಿಗೆ ತನ್ನ ಕಳಪೆ ವಿಎಫ್ಎಕ್ಸ್ನಿಂದಾಗಿ ಕೆಟ್ಟದಾಗಿ ಟ್ರೋಲ್ ಆಗಿತ್ತು. ಆದರೀಗ ಟ್ರೈಲರ್ ಹಾಗೂ ಹಾಡುಗಳಿಂದ ಬೇಡಿಕೆ ಹೆಚ್ಚಿಸಿಕೊಂಡಿದ್ದು ದೊಡ್ಡಮಟ್ಟದ ಹೈಪ್ ಹುಟ್ಟುಹಾಕಿದೆ.

ಉತ್ತರ ಭಾರತದ ಭಾಗಗಳಲ್ಲಿ ದೊಡ್ಡ ಮಟ್ಟದ ಹೈಪ್ ಹುಟ್ಟುಹಾಕಿರುವ ಆದಿಪುರುಷ್ ಚಿತ್ರಕ್ಕೆ ದಕ್ಷಿಣ ಭಾರತದಲ್ಲಿಯೂ ಅಷ್ಟೇ ಮಟ್ಟದ ನಿರೀಕ್ಷೆ ಇದೆ. ಸೌತ್ನ ಬಿಗ್ಗೆಸ್ಟ್ ಸ್ಟಾರ್ಗಳಲ್ಲಿ ಓರ್ವರಾದ ಪ್ರಭಾಸ್ ಚಿತ್ರದಲ್ಲಿ ನಾಯಕನಾಗಿರುವ ಕಾರಣ ಈ ಮಟ್ಟದ ಹೈಪ್ ಸೌತ್ನಲ್ಲಿ ಹುಟ್ಟಿಕೊಂಡಿದೆ.
ಹೀಗೆ ಸಿಕ್ಕಾಪಟ್ಟೆ ಹೈಪ್ ಹುಟ್ಟುಹಾಕಿರುವ ಆದಿಪುರುಷ್ ಚಿತ್ರದ ಮುಂಗಡ ಬುಕಿಂಗ್ ನಿನ್ನೆಯಿಂದ ದೇಶದಾದ್ಯಂತ ಆರಂಭಗೊಂಡಿದ್ದು, ಪ್ರಭಾಸ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಮುಗಿಬಿದ್ದು ಟಿಕೆಟ್ಗಳನ್ನು ಆನ್ಲೈನ್ ಟಿಕೆಟ್ ಬುಕಿಂಗ್ ಅಪ್ಲಿಕೇಶನ್ಗಳ ಮೂಲಕ ಕಾಯ್ದಿರಿಸಿಕೊಳ್ಳುತ್ತಿದ್ದಾರೆ.
ಇನ್ನು ಕರ್ನಾಟಕದಲ್ಲಿಯೂ ಸಹ ಆದಿಪುರುಷ್ ಹವಾ ಜೋರಾಗಿದ್ದು, ಕನ್ನಡ ಸಿನಿ ರಸಿಕರು ಟಿಕೆಟ್ಗಳನ್ನು ದೊಡ್ಡ ಸಂಖ್ಯೆಯಲ್ಲಿಯೇ ಖರೀದಿಸುತ್ತಿದ್ದಾರೆ. ರಾಜ್ಯದಲ್ಲಿಯೂ ಸಹ ಮುಂಗಡ ಬುಕಿಂಗ್ ನಿನ್ನೆಯಿಂದ ( ಜೂನ್ 11 ) ಆರಂಭಗೊಂಡಿದ್ದು, ಇಲ್ಲಿ ತೆಲುಗು ಹಾಗೂ ಹಿಂದಿ ಅವತರಣಿಕೆಗಳ ಮುಂಗಡ ಬುಕಿಂಗ್ ಓಪನ್ ಆಗಿವೆ.
ಹೀಗೆ ಕೇವಲ ತೆಲುಗು ಹಾಗೂ ಹಿಂದಿ ಭಾಷೆಯ ಬುಕಿಂಗ್ ಆರಂಭಿಸಿ ಕನ್ನಡ ಅವತರಣಿಕೆಯ ಒಂದೇ ಒಂದು ಶೋನ ಬುಕಿಂಗ್ ಅನ್ನೂ ಸಹ ತೆರೆಯದೇ ಇರುವುದು ಇದೀಗ ಕನ್ನಡ ಪ್ರೇಮಿಗಳ ಕೋಪಕ್ಕೆ ಎಡೆ ಮಾಡಿಕೊಟ್ಟಿದೆ.
ಹೌದು, ಕರ್ನಾಟಕದಲ್ಲಿ ಆದಿಪುರುಷ್ ಚಿತ್ರವನ್ನು ಕೆಆರ್ಜಿ ಸ್ಟುಡಿಯೊಸ್ ವಿತರಣೆ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಕೆಆರ್ಜಿ ಸ್ಟುಡಿಯೊಸ್ ಸಂಸ್ಥೆಯ ಮಾಲೀಕ ಕಾರ್ತಿಕ್ ಗೌಡ ವಿರುದ್ಧ ಕಿಡಿಕಾರುತ್ತಿದ್ದಾರೆ. ಕನ್ನಡ ಅವತರಣಿಕೆ ಪ್ರದರ್ಶನಗಳ ಬುಕಿಂಗ್ ತೆರೆಯದೇ ತೆಲುಗು ಹಾಗೂ ಹಿಂದಿ ಭಾಷೆಯ ಪ್ರದರ್ಶನಗಳ ಬುಕಿಂಗ್ ಅನ್ನು ಮಾತ್ರ ತೆರೆದಿರುವುದು ಸದ್ಯ ವಿವಾದವಾಗಿದೆ.
ಈ ವಿಷಯದ ಕುರಿತಾಗಿ ಟ್ವೀಟ್ ಮಾಡಿರುವ ನೆಟ್ಟಿಗನೋರ್ವ "ಇವನಂತಾ ಗುಳ್ಳೆನರಿ ಇನ್ನೊಬ್ಬ ಸಿಗಲ್ಲ! ಕನ್ನಡ ಅವತರಣಿಕೆ ಬುಕಿಂಗ್ ತೆರೆಯದೆ. ತೆಲುಗು ಮತ್ತೆ ಹಿಂದಿ ಅವತರಣಿಕೆಗಳಿಗೆ ಊರು ತುಂಬ ಲೆಕ್ಕವಿಲ್ಲದಷ್ಟು ಪ್ರದರ್ಶನ ಕೊಟ್ಟಿದ್ದಾನೆ. ಕನ್ನಡ ಅವತರಣಿಕೆಗೆ ಬಿಡುಗಡೆಯ ಹಿಂದಿನ ದಿನ ಒಂದೆರೆಡು ಪ್ರದರ್ಶನ ಕೊಟ್ಟು ಕನ್ನಡ ಅವತರಣಿಕೆಗೆ ಬೇಡಿಕೆ ಇಲ್ಲ ಅನ್ನೋ ನನ್ ಮಗ ಇವನೇ! ಅತೀ ಹೊಲಸು ಇರೋ ಚಿತ್ರರಂಗ ಅಂದ್ರೆ ಬಹುಶಃ ಕರ್ನಾಟಕದ್ದೇ ಇರಬೇಕು! @Karthik1423 ನನ್ನು ಚೆನ್ನಾಗಿ ತೊಳೆದು ಬನ್ನಿ!" ಎಂದು ಬರೆದುಕೊಂಡಿದ್ದಾರೆ.
ಕಾರ್ತಿಕ್ ಗೌಡ ಆದಿಪುರುಷ್ ಚಿತ್ರದ ಬುಕಿಂಗ್ ಕುರಿತಾಗಿ ಹಂಚಿಕೊಂಡಿದ್ದ ಟ್ವೀಟ್ಗೆ ಈ ರೀತಿಯಾದ ಪ್ರತಿಕ್ರಿಯೆ ಬಂದಿದ್ದು, ಇದಕ್ಕೆ ಕಾರ್ತಿಕ್ ಗೌಡ ಉತ್ತರವನ್ನೂ ಸಹ ನೀಡಿದ್ದಾರೆ. "ತಾಳ್ಮೆ ಇರಲಿ ಸರ್. ಒಂದು ರಾತ್ರಿ ಕಳೆಯುವುದರೊಳಗೆ ಎಲ್ಲವೂ ಬದಲಾಗಲ್ಲ. ಅದಕ್ಕೆ ಸಮಯ ಬೇಕಿದೆ. ಕನ್ನಡ ಅವತರಣಿಕೆಯ ಹೆಚ್ಚು ಶೋಗಳನ್ನು ಬಿಡುಗಡೆ ಮಾಡುತ್ತೇವೆ. ಇಲ್ಲಿಯವರೆಗೂ ಕನ್ನಡಕ್ಕೆ ಡಬ್ ಆದ ಚಿತ್ರಗಳು ಪಡೆದುಕೊಂಡಿದ್ದ ಶೋಗಳಿಗಿಂತ ಹೆಚ್ಚು ಶೋಗಳನ್ನು ನೀಡುತ್ತೇವೆ. ಗುಳ್ಳೆ ನರಿ ಹಾಗೂ ಹೊಲಸು ಎಂಬ ಶಬ್ದಗಳನ್ನು ಬೇರೆ ಸಮಯಕ್ಕೆ ಇಟ್ಟುಕೊಳ್ಳಿ. ಅಂದ್ಹಾಗೆ ತಾವು ಡೇರ್ ಡೆವಿಲ್ ಮುಸ್ತಾಫಾ ನೋಡಿದ್ದೀರ ಎಂದು ಭಾವಿಸುತ್ತೇನೆ. ನಿಮ್ಮ ಟ್ವೀಟ್ ನೀವು ಡೇರ್ ಡೆವಿಲ್ ಎಂಬುದನ್ನು ಹೇಳುತ್ತಿದೆ" ಎಂದು ಬರೆದುಕೊಂಡು ಉತ್ತರ ನೀಡಿದ್ದಾರೆ.


Click it and Unblock the Notifications











