ದೈವಾರಾಧಕರ ಆಕ್ಷೇಪ, 2 ವಾರದ ಕಲೆಕ್ಷನ್ ಬಗ್ಗೆ ರಿಷಬ್ ಶೆಟ್ಟಿ ಮೈಸೂರಿನಲ್ಲಿ ಪ್ರತಿಕ್ರಿಯೆ
ರಿಷಬ್ ಶೆಟ್ಟಿ ಮತ್ತು ತಂಡ 'ಕಾಂತಾರ- 1' ಸಿನಿಮಾ ವಿಜಯಯಾತ್ರೆ ಆರಂಭಿಸಿದೆ. ದೊಡ್ಡಮಟ್ಟದಲ್ಲಿ ಚಿತ್ರವನ್ನು ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಲು ಮುಂದಾಗಿದೆ. ಮೈಸೂರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಜಯಯಾತ್ರೆಗೆ ನಾಂದಿ ಹಾಡಿದ್ದಾರೆ. ಇದೇ ವೇಳೆ ರಿಷಬ್ ಶೆಟ್ಟಿ ಮಾಧ್ಯಮಗಳ ಜೊತೆ ಮಾತನಾಡಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣದ 'ಕಾಂತಾರ- 1' ಸಿನಿಮಾ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಶೀಘ್ರದಲ್ಲೇ 1000 ಕೋಟಿ ರೂ. ಕ್ಲಬ್ ಲೆಕ್ಕಾಚಾರ ಶುರುವಾಗಿದೆ. ಚಿತ್ರದಲ್ಲಿ ಕರಾವಳಿ ದೈವಗಳನ್ನು ರಿಷಬ್ ಶೆಟ್ಟಿ ತೋರಿಸಿದ್ದಾರೆ. ಬಹಳ ಶ್ರದ್ಧಾಭಕ್ತಿಯಿಂದ ಆ ದೃಶ್ಯಗಳಲ್ಲಿ ನಟಿಸಿದ್ದಾರೆ. ಆದರೆ ಕೆಲವರು ಇದನ್ನು ಅನುಕರಣೆ ಮಾಡುವ ಸಾಹಸ ಮಾಡುತ್ತಿದ್ದಾರೆ. 3 ವರ್ಷಗಳ ಹಿಂದೆ 'ಕಾಂತಾರ' ಚಿತ್ರ ಬಂದಾಗ ಕೂಡ ಇದೇ ರೀತಿ ಆಗಿತ್ತು. ಪ್ರೀಕ್ವೆಲ್ ಬಳಿಕ ಮತ್ತೆ ಅದೇ ಮುಂದುವರೆದಿದೆ.

ಬೆಂಗಳೂರು ತುಳುಕೂಟ, ದೈವಾರಾಧಕರು ಕೂಡ 'ಕಾಂತಾರ- 1' ಚಿತ್ರದಲ್ಲಿ ದೈವಗಳನ್ನು ತೋರಿಸಿರುವುದಕ್ಕೆ ಅದನ್ನು ಕೆಲವರು ಅನುಕರಣೆ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಿತ್ರತಂಡಕ್ಕೆ ಪತ್ರ ಬರೆದಿದ್ದರು. ಇದೆಲ್ಲದರ ಬಗ್ಗೆ ರಿಷಬ್ ಶೆಟ್ಟಿ ಮಾತನಾಡಿದ್ದಾರೆ. ಚಿತ್ರದ 2 ವಾರಗಳ ಕಲೆಕ್ಷನ್ ಬಗ್ಗೆ ಕೇಳಿದ ಪ್ರಶ್ನೆಗೆ ಈ ಲೆಕ್ಕ ನಿರ್ಮಾಪಕರ ಬಳಿ ಕೇಳಬೇಕು ಎಂದಿದ್ದಾರೆ.
ದೈವಾರಾಧಕರ ವಿರೋಧದ ಬಗ್ಗೆ ರಿಷಬ್ ಶೆಟ್ಟಿ ಮಾತನಾಡಿ "ನಾನು ಕೂಡ ದೈವವನ್ನು ನಂಬುವವನು. ಆರಾಧನೆ ಮಾಡುವವನು. ದೈವದ ಅನುಮತಿ ಇಲ್ಲದೇ ಏನು ಮಾಡಿಲ್ಲ, ದೈವವನ್ನು ತೋರಿಸುವಾಗ ಯಾವುದೇ ತಪ್ಪು ಆಗದಂತೆ ನೋಡಿಕೊಂಡಿದ್ದೇವೆ. ಹಿರಿಯರ ಮಾರ್ಗದರ್ಶನದಂತೆ ಮಾಡಿರುವುದು. ಪ್ರತಿ ವಿಚಾರದ ಬಗ್ಗೆ ಅವರದ್ದೇ ಅಭಿಪ್ರಾಯ ಇರುತ್ತದೆ. ಅದನ್ನು ಹೇಳುವ ಹಕ್ಕು ಇರುತ್ತದೆ, ಹೇಳುತ್ತಾರೆ. ನಾನು ದೈವವನ್ನು ನಂಬುತ್ತೇನೆ, ಹೇಗೆ ಚಿತ್ರದಲ್ಲಿ ತರಬೇಕೋ ತಂದಿದ್ದೇನೆ. ನಾನೇ ಮೊದಲಲ್ಲ, ಈ ಹಿಂದೆ ಕೂಡ ಕೆಲವರು ದೈವವನ್ನು ತೆರೆಗೆ ತಂದಿದ್ದಾರೆ. ಮುಂದೆ ತರುವವರು ಒಳ್ಳೆ ರೀತಿಯಲ್ಲಿ ತರಲಿ ಎಂದು ಕೇಳಿಕೊಳ್ಳುತ್ತೇನೆ" ಎಂದಿದ್ದಾರೆ.
ದೇಶ ವಿದೇಶಗಳಲ್ಲಿ ಸಿನಿಮಾ ಗೆಲ್ಲುತ್ತಿರುವ ಬಗ್ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. "ಬಹಳ ಖುಷಿಯಾಗುತ್ತಿದೆ. ನಾನು ಕೆರಾಡಿ ಎಂಬ ಊರಿನಿಂದ ಬಂದು ಚಿತ್ರರಂಗದಲ್ಲಿ ಕೆಲಸ ಮಾಡಿ ಅದು ಇಷ್ಟು ದೊಡ್ಡದಾಗಿ ಜನರನ್ನು ತಲುಪುತ್ತಿದೆ. ಮೊದಲು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದೆವು. ಈಗ ಹೊರಗಿನವರು ಕೂಡ ನೋಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಇದು ವಿಶೇಷ ಶಕ್ತಿ ಕೊಡುತ್ತದೆ. ಪಾರ್ಟ್-2 ಯಾವಾಗ ಗೊತ್ತಿಲ್ಲ. ಮುಂದಿನ ಸಿನಿಮಾ 'ಜೈ ಹನುಮಾನ್' ಎಂದು ಮಾತ್ರ ಹೇಳಬಲ್ಲೆ" ಎಂದು ತಿಳಿಸಿದ್ದಾರೆ.
ಅಮಿತಾಬ್ ಬಚ್ಚನ್ ಭೇಟಿ ಬಗ್ಗೆ ಕೂಡ ರಿಷಬ್ ಶೆಟ್ಟಿ ನೆನಪಿಸಿಕೊಂಡಿದ್ದಾರೆ. ಅಣ್ಣಾವ್ರ ಜೊತೆಗಿನ ಒಡನಾಟವನ್ನು ಬಿಗ್ಬಿ ತಮ್ಮ ಬಳಿ ಹಂಚಿಕೊಂಡಿದ್ದಾಗಿ ಹೇಳಿದ್ದಾರೆ. ಫ್ಯಾನ್ಸ್ ವಾರ್ ಬೇಡ ಎಂದು ರಿಷಬ್ ಶೆಟ್ಟಿ ಮನವಿ ಮಾಡಿದ್ದಾರೆ. ಯಾರು ಕೂಡ ದೈವದ ಅನುಕರಣೆ ಮಾಡಬೇಡಿ, ಒಬ್ಬ ಆರಾಧಕನಾಗಿ ನನಗೂ ಬೇಸರವಾಗುತ್ತದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
'ಕಾಂತಾರ- 1' ಚಿತ್ರದ ಕಲೆಕ್ಷನ್ ಬಗ್ಗೆ ಕೇಳಿದ ಪ್ರಶ್ನೆಗೆ "ನಿರ್ಮಾಪಕರ ಬಳಿ ಕೇಳಬೇಕಾದ ಪ್ರಶ್ನೆ ನನ್ನ ಬಳಿ ಕೇಳಿದ್ರೆ ಹೇಗೆ? ಜನ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ ಅಷ್ಟು ಸಾಕು. ಅದಕ್ಕೆ ನಾನು ಋಣಿ. ಈ ಲೆಕ್ಕಾಚಾರದ ವಿಚಾರದಲ್ಲಿ ನಾನಿಲ್ಲ. ಹೊಂಬಾಳೆ ಸಂಸ್ಥೆಗೆ ಧನ್ಯವಾದ. ಇವತ್ತು ದೇಶದ ಹೆಮ್ಮೆಯ ಸಿನಿಮಾ ನಿರ್ಮಾಣ ಸಂಸ್ಥೆಯಾಗಿದೆ" ಎಂದು ರಿಷಬ್ ಶೆಟ್ಟಿ ವಿವರಿಸಿದ್ದಾರೆ.


Click it and Unblock the Notifications











