'ಕಾಂತಾರ' ಚಾಪ್ಟರ್-1 ಚಿತ್ರತಂಡಕ್ಕೆ ಮತ್ತೆ ಸಂಕಷ್ಟ; ತಹಶೀಲ್ದಾರ್ ನೋಟಿಸ್
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ'-1 ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ಪದೇ ಪದೆ ಸುದ್ದಿ ಆಗುತ್ತಿದೆ. ಚಿತ್ರತಂಡಕ್ಕೆ ಮತ್ತೆ ಮತ್ತೆ ಶಾಕ್ ಎದುರಾಗುತ್ತಿದೆ. ಈಗಾಗಲೇ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದ 3 ಕಲಾವಿದರು ಸಾವನ್ನಪ್ಪಿದ್ದಾರೆ. ಈ ಸಾವುಗಳಿಗೂ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲದೇ ಇದ್ದರೂ ತಂಡಕ್ಕೆ ಸಮಸ್ಯೆ ಎದುರಾಗುವಂತಾಗಿದೆ. ಇದೀಗ ಚಿತ್ರತಂಡಕ್ಕೆ ನೋಟಿಸ್ ಜಾರಿಯಾಗಿದೆ.
ಎರಡು ದಿನಗಳ ಹಿಂದೆ 'ಕಾಂತಾರ-1' ಸಿನಿಮಾ ಚಿತ್ರೀಕರಣದ ವೇಳೆ ಮಾಣಿ ಡ್ಯಾಮ್ ಹಿನ್ನೀರಿನಲ್ಲಿ ದೋಣಿ ಮಗುಚಿ ಅವಘಡ ಸಂಭವಿಸಿದ್ದಾಗಿ ವರದಿಯಾಗಿತ್ತು. ಆದರೆ ಈ ಬಗ್ಗೆ ಯಾವುದೇ ಸುದ್ದಿ ಹೊರಬಾರದಂತೆ ಚಿತ್ರತಂಡ ನೋಡಿಕೊಳ್ಳುತ್ತಿದೆ ಎನ್ನುವ ಆರೋಪ ಕೇಳಿಬರ್ತಿದೆ. ಹಾಗಾಗಿ ಸ್ಪಷ್ಟನೆ ಕೋರಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಹಶೀಲ್ದಾರ್ ರಶ್ಮಿ ನೋಟಿಸ್ ನೀಡಿದ್ದಾರೆ.

ಸಿನಿಮಾ ಚಿತ್ರೀಕರಣಕ್ಕೆ ಪಡೆದ ಅನುಮತಿ ಪತ್ರ ಹಾಜರುಪಡಿಸುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ. 3 ದಿನಗಳ ಒಳಗಾಗಿ ಅನುಮತಿ ಪತ್ರ ಹಾಜರುಪಡಿಸಲು ಸೂಚಿಸಿದ್ದು ತಪ್ಪಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಎಚ್ಚರಿಸಿದ್ದಾರೆ. ಹಾಗಾಗಿ ತಂಡ ಕೂಡಲ ಪ್ರತಿಕ್ರಿಯಿಸಬೇಕಿದೆ.
"ಜೂನ್ 15ರಂದು ನಡೆದ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಅವಶ್ಯವಿರುವುದರಿಂದ ಸಮರ್ಪಕ ದಾಖಲೆಗಳೊಂದಿಗೆ ಈ ನೋಟೀಸ್ ತಲುಪಿದ 3 ದಿನಗಳ ಒಳಗಾಗಿ ಸಮಜಾಯಿಷಿ ನೀಡಲು ಸೂಚಿಸಿದೆ. ಒಂದು ವೇಳೆ ತಪ್ಪಿದಲ್ಲಿ ನಿಮ್ಮ ಸಮಜಾಯಿಷಿ ಏನು ಇಲ್ಲವೆಂದು ಭಾವಿಸಿ ಚಿತ್ರೀಕರಣಕ್ಕೆ ನೀಡಿರುವ ಅನುಮತಿ ರದ್ದುಪಡಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ತಿಳಿಯಿರಿ" ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ದೋಣಿ ಮುಗಿಚಿದ ಘಟನೆ ಬಗ್ಗೆ ಸರಿಯಾದ ಮಾಹಿತಿ ಲಭ್ಯವಿಲ್ಲ. ಹೊಂಬಾಳೆ ಫಿಲ್ಮ್ಸ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದರ್ಶ್ ಟಿವಿ9 ಕನ್ನಡ ವಾಹಿನಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಚಿತ್ರೀಕರಣದ ವೇಳೆ ಯಾವುದೇ ದುರಂತ, ಜೀವನ ಹಾನಿ ಸಂಭವಿಸಿಲ್ಲ. ನಾವು ಚಿತ್ರೀಕರಣದ ನಡೆಸುತ್ತಿದ್ದ ಜಾಗಕ್ಕಿಂತ ಕೊಂಚ ಹಿಂಭಾಗದಲ್ಲಿ ದೋಣಿಯನ್ನು ಬ್ಯಾಕ್ಡ್ರಾಪ್ ರೀತಿ ನಿಲ್ಲಿಸಿದ್ದೆವು. ಜೋರು ಗಾಳಿಗೆ ಅದು ಮುಗುಚಿ ಬಿದ್ದಿತ್ತು. ಯಾರಿಗೂ ಅದರಿಂದ ಸಮಸ್ಯೆ ಆಗಲಿಲ್ಲ. ದೋಣಿ ಇದ್ದ ಜಾಗದಿಂದ ನಾವು ದೂರ ಇದ್ದೆವು" ಎಂದಿದ್ದರು.
ನಾವು ಚಿತ್ರೀಕರಣಕ್ಕೆ ಬೇಕಾದ ಎಲ್ಲಾ ಅನುಮತಿಯನ್ನು ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯಿಂದ ಪಡೆದುಕೊಂಡಿದ್ದೇವೆ. ಮರುದಿನವೇ ಚಿತ್ರೀಕರಣ ಮುಂದುವರೆಸಿದ್ದೇವೆ. ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನೀರಿನಲ್ಲಿ ಚಿತ್ರೀಕರಣ ಇಲ್ಲದೇ ಇದ್ದರೂ ನುರಿತ ಈಜುಗಾರರು, ಸ್ಕೂಬಾ ಡ್ರೈವರ್ಸ್ ಎಲ್ಲರನ್ನು ಬಳಸಿಕೊಳ್ಳುತ್ತಿದ್ದೇವೆ. ದೋಣಿ ಸೆಟ್ ಅನ್ನು ಬ್ಯಾಕ್ಡ್ರಾಪ್ ಹಾಕಿದ್ದೇವೆ. ಯಾವುದೇ ಪರಿಕರ ಕೂಡ ಹಾಳಾಗಿಲ್ಲ" ಎಂದು ಆದರ್ಶ್ ವಿವರಣೆ ನೀಡಿದ್ದರು.
ಕಳೆದ ನವೆಂಬರ್ನಲ್ಲಿ 'ಕಾಂತಾರ-1' ಸಿನಿಮಾ ಚಿತ್ರೀಕರಣಕ್ಕೆ ಬರುತ್ತಿದ್ದ ಸಹ ಕಲಾವಿದರಿದ್ದ ಮಿನಿ ಬಸ್ ಪಟ್ಟಿಯಾಗಿತ್ತು. ಇದರಲ್ಲಿ ಕೆಲವರಿಗೆ ಪೆಟ್ಟಾಗಿತ್ತು. ಇದೇ ವರ್ಷ ಮೇ 6ರಂದು ಕಪಿಲ್ ಎಂಬ ಕೇರಳ ಮೂಲದ ಸಹ ನಟ ಸೌಪರ್ಣಿಕ ನದಿಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಹಾಸ್ಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾಗಿದ್ದರು. 'ಕಾಂತಾರ-1' ನಟಿಸುತ್ತಿದ್ದ ಕೇರಳ ಮೂಲದ ಮತ್ತೊಬ್ಬ ಸಹ ನಟ ವಿಜು ವಿಕೆ ಎಂಬುವವರು 4 ದಿನಗಳ ಹಿಂದೆ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದರು.
ಪದೇ ಪದೆ ಚಿತ್ರತಂಡಕ್ಕೆ ಸಮಸ್ಯೆ ಎದುರಾಗುತ್ತಲೇ ಇದೆ. ಅದೆಲ್ಲವನ್ನು ಮೀರಿ ಸಿನಿಮಾ ಮಾಡಿ ಮುಗಿಸಲು ಚಿತ್ರತಂಡ ಮುಂದಾಗಿದೆ. ಕೊನೆ ಹಂತದ ಚಿತ್ರೀಕರಣ ನಡೀತಿದೆ. ಸಾಕಷ್ಟು ಸಹ ಕಲಾವಿದರನ್ನು ಬಳಸಿಕೊಳ್ಳಲಾಗುತ್ತಿದೆ. ಅಕ್ಟೋಬರ್ 2ಕ್ಕೆ ಸಿನಿಮಾ ತೆರೆಗೆ ಬರಲಿದೆ. ಎರಡೂವರೆ ವರ್ಷಗಳ ಹಿಂದೆ ಬಂದಿದ್ದ 'ಕಾಂತಾರ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಹಾಗಾಗಿ ಪ್ರೀಕ್ವೆಲ್ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ.


Click it and Unblock the Notifications











