'ಕಾಂತಾರ -1' ಟ್ರೈಲರ್ನಲ್ಲಿ ಕಂಡ ಈ 'ಬ್ರಹ್ಮ ರಾಕ್ಷಸ' ಯಾರು?
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ- 1' ಸಿನಿಮಾ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಈಗಾಗಲೇ ಟ್ರೈಲರ್ ಬಿಡುಗಡೆಯಾಗಿ ಸಖತ್ ಸದ್ದು ಮಾಡ್ತಿದೆ. 24 ಗಂಟೆಗಳಲ್ಲಿ ಒಟ್ಟು 107 ಮಿಲಿಯನ್ ವೀವ್ಸ್ ಸಾಧಿಸಿ ದಾಖಲೆ ಬರೆದಿದೆ. ಇನ್ನು ಟ್ರೈಲರ್ನಲ್ಲಿರುವ ವಿಚಾರಗಳ ಬಗ್ಗೆ ಸಿನಿರಸಿಕರು ಕೂಲಂಕುಷವಾಗಿ ವಿಶ್ಲೇಷಿಸುತ್ತಿದ್ದಾರೆ.
ಮೇಲ್ನೋಟಕ್ಕೆ ಟ್ರೈಲರ್ನಲ್ಲೇ ರಿಷಬ್ ಶೆಟ್ಟಿ ಕಥೆ ಹೇಳಿಬಿಟ್ಟಂತೆ ಕಾಣುತ್ತದೆ. ಆದರೆ ಸಿನಿಮಾದಲ್ಲಿ ಬೇರೆ ಏನೋ ಟ್ವಿಸ್ಟ್, ಸರ್ಪ್ರೈಸ್ಗಳು ಇದೆ ಎನ್ನುವ ಲೆಕ್ಕಾಚಾರವೂ ನಡೀತಿದೆ. ಕೆಲ ಪಾತ್ರಗಳನ್ನು ಟ್ರೈಲರ್ನಲ್ಲಿ ರಿವೀಲ್ ಮಾಡಿಲ್ಲ. ಅದೆಲ್ಲವೂ ತೆರೆಮೇಲೆ ಥ್ರಿಲ್ ಕೊಡುವ ಸುಳಿವು ಸಿಕ್ಕಿದೆ. ಅದರಲ್ಲೂ ಮುಖ್ಯವಾಗಿ ಟ್ರೈಲರ್ನಲ್ಲಿ 1 ನಿಮಿಷ 19 ಸೆಕೆಂಡ್ನಲ್ಲಿ ಒಬ್ಬ ಹಿಂದೆ ತಿರುಗಿ ವಿಚಿತ್ರ ವೇಷದಲ್ಲಿ ದಂಡ ಹಿಡಿದು ನಿಲ್ಲುವ ಫ್ರೇಮ್ ಇದೆ. ಅದು ಯಾರಪ್ಪಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

'ಕಾಂತಾರ- 1' ಚಿತ್ರದಲ್ಲಿ ಜ್ಯೂ. ಎನ್ಟಿಆರ್ ನಟಿಸುತ್ತಾರೆ, ಮೋಹನ್ ಲಾಲ್ ಸಣ್ಣ ಪಾತ್ರ ಮಾಡಿದ್ದಾರೆ ಅಂತೆಲ್ಲಾ ಗುಸುಗುಸು ಕೇಳಿಬಂದಿತ್ತು. ಆದರೆ ಆ ಬಗ್ಗೆ ಅಧಿಕೃತವಾಗಿ ಮಾಹಿತಿ ಸಿಗಲಿಲ್ಲ. ಟ್ರೈಲರ್ನಲ್ಲಿ ಕೂಡ ಅವರ ಝಲಕ್ ಕಾಣಿಸಿಲ್ಲ. ಹಾಗಾಗಿ ಅದೆಲ್ಲಾ ಬರೀ ವದಂತಿ ಎನ್ನುವುದು ಈಗ ಅರ್ಥವಾಗುತ್ತಿದೆ. ಹಾಗಿದ್ದರೆ ಹೀಗೆ ಕಂಬಳಿ ಹೊದ್ದು ಮುಖ ತೋರಿಸದೇ ಕಾಣಿಸಿಕೊಂಡಿರುವವರು ಯಾರು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಈ ಹಿಂದೆ ಸೆಲೆಬ್ರೆಟಿ ಜಿಮ್ ಕೋಚ್, ನಟ ರಾಘವೇಂದ್ರ ಎಸ್ ಹೊಂಡದಕೇರಿ ಕೂಡ 'ಕಾಂತಾರ'-1 ಚಿತ್ರದಲ್ಲಿ ನಟಿಸಿದ್ದಾರೆ ಎಂದು ಗುಲ್ಲಾಗಿತ್ತು. ಸದ್ಯ ಟ್ರೈಲರ್ನಲ್ಲಿ ಕಾಣುತ್ತಿರುವ ಈ ಪಾತ್ರದಂತೆಯೇ ಒಂದಷ್ಟು ಗೆಟಪ್ಗಳಲ್ಲಿ ರಾಘವೇಂದ್ರ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದರು. ಅದು 'ಕಾಂತಾರ- 1' ಚಿತ್ರಕ್ಕಾಗಿ ಅಲ್ಲ, ಮೋಹನ್ ಲಾಲ್ ನಟನೆಯ 'ವೃಷಭ' ಚಿತ್ರದ ಪಾತ್ರಕ್ಕಾಗಿ ಹಾಕಿಕೊಂಡಿದ್ದ ಮೇಕಪ್ ಎನ್ನುವುದು ಈಗ ಸ್ಪಷ್ಟವಾಗುತ್ತಿದೆ. ಆದರೆ ತಾವು 'ಕಾಂತಾರ'-1 ಚಿತ್ರದ ನಟ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ಹಾಗಾಗಿ ಇದು ಸಹಜವಾಗಿಯೇ ಕುತೂಹಲ ಮೂಡಿಸಿದೆ.

'ಕಾಂತಾರ- 1' ಚಿತ್ರದಲ್ಲಿ ಅಚ್ಯುತ್ ಕುಮಾರ್ ಸಹ ನಟಿಸಿದ್ದಾರೆ ಎನ್ನಲಾಗ್ತಿದೆ. ಆದರೆ ಟ್ರೈಲರ್ನಲ್ಲಿ ಆ ಬಗ್ಗೆ ಸುಳಿವು ಸಿಕ್ಕಿಲ್ಲ. ಗುಲ್ಶನ್ ದೇವಯ್ಯ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿರುವುದು ಗೊತ್ತಾಗುತ್ತಿದೆ. ರಾಜ ಕುಲಶೇಖರನಿಗಿಂತ ದೊಡ್ಡ ವಿಲನ್ ಇರ್ತಾನಾ ಎನ್ನುವುದನ್ನು ಕಾದು ನೋಡಬೇಕಿದೆ. ಬರೋಬ್ಬರಿ 250 ದಿನಗಳ ಕಾಲ ರಿಷಬ್ ಶೆಟ್ಟಿ ಸಿನಿಮಾ ಚಿತ್ರೀಕರಣ ಮಾಡಿದ್ದಾರೆ. ಭಾರೀ ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗಿರುವುದು ಗೊತ್ತಾಗುತ್ತಿದೆ.
'ಕಾಂತಾರ' ಚಿತ್ರಕ್ಕೆ ಕೆಲಸ ಮಾಡಿದ್ದ ತಂಡವೇ ಪ್ರೀಕ್ವೆಲ್ಗೆ ಕೂಡ ಕೆಲಸ ಮಾಡಿದೆ. ಚಿತ್ರದಲ್ಲಿ ತುಳುನಾಡಿನ ಆದಿದೈವ ಬೆರ್ಮರ್ ಕಥೆ ಹೇಳಿದ್ದಾರೆ ಎನ್ನುವ ಚರ್ಚೆ ನಡೀತಿತ್ತು. ಆದರೆ ಚಿತ್ರಕ್ಕೆ ಬರಹಗಾರರಾಗಿ ಕೆಲಸ ಮಾಡಿರುವ ಶನೀಲ್ ಗೌತಮ್(ರವಿಯಣ್ಣ) ಅದನ್ನು ನಿರಾಕರಿಸಿದ್ದಾರೆ. ನಾಯಕ ಹೆಸರು ಮಾತ್ರ ಬೆರ್ಮೆ ಎಂದು ಹೇಳಿದ್ದಾರೆ. ಚಿತ್ರದಲ್ಲಿ ಬೇರೆಯದ್ದೇ ಕಥೆ ಇರುತ್ತದೆ ಎಂದಿದ್ದಾರೆ.
3 ಹಾಗೂ 4ನೇ ಶತಮಾನದ ಕಾಲಘಟ್ಟದಲ್ಲಿ 'ಕಾಂತಾರ- 1' ಸಿನಿಮಾ ಕಥೆ ನಡೆಯುತ್ತದೆ. ಅಂದರೆ ಹೆಚ್ಚು ಕಮ್ಮಿ ಕದಂಬರ ಆಳ್ವಿಕೆಯ ಕಾಲಘಟ್ಟ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಟ್ರೈಲರ್ ನೋಡಿದರೆ 'ಬ್ರಹ್ಮರಾಕ್ಷಸ' ಎನ್ನುವ ಪ್ರಸ್ತಾಪ ಬರುತ್ತದೆ. ಟ್ರೈಲರ್ನಲ್ಲಿ ಕಂಡ ಆ ಪಾತ್ರ ಬ್ರಹ್ಮರಾಕ್ಷಸನಾ? ಎಂದು ಕೆಲವರು ಊಹಿಸುತ್ತಿದ್ದಾರೆ. ಈ ಎಲ್ಲಾ ಊಹಾಪೋಹಗಳಿಗೆ ಅಕ್ಟೋಬರ್ 2ರಂದು ತೆರೆಮೇಲೆ ಸ್ಪಷ್ಟನೆ ಸಿಗಲಿದೆ.
ದೇಶಾದ್ಯಂತ 7000 ಸ್ಕ್ರೀನ್ಗಳಲ್ಲಿ 'ಕಾಂತಾರ- 1' ಸಿನಿಮಾ ಬಿಡುಗಡೆ ಆಗಲಿದೆ. 30ಕ್ಕೂ ಅಧಿಕ ದೇಶಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು ಶೀಘ್ರದಲ್ಲೇ ಬಿಡುಗಡೆ ಆಗುತ್ತದೆ ಎನ್ನಲಾಗ್ತಿದೆ. ಸೆಪ್ಟೆಂಭರ್ 27ರಿಂದ ಬೇರೆ ಬೇರೆ ರಾಜ್ಯಗಳಿಗೆ ತೆರಳಿ ರಿಷಬ್ ಶೆಟ್ಟಿ ಸಿನಿಮಾ ಪ್ರಚಾರ ಮಾಡಲಿದ್ದಾರೆ.


Click it and Unblock the Notifications











