'ಕಾಂತಾರ- 1' ಮೇನ್ ವಿಲನ್ ಅಚ್ಯುತ್? ಬೇರೆ ಯಾವೆಲ್ಲಾ ಅಸ್ತ್ರ ರಿಷಬ್ ಬತ್ತಳಿಕೆಯಲ್ಲಿದೆ?
ಸದ್ಯ ಎಲ್ಲೆಲ್ಲೂ 'ಕಾಂತಾರ' ಫೀವರ್ ಜೋರಾಗಿದೆ. ಇನ್ನು ಎರಡು ವಾರ ಇದು ಕಮ್ಮಿ ಆಗುವ ಸುಳಿವು ಸಿಗುತ್ತಿಲ್ಲ. ಸೋಶಿಯಲ್ ಮೀಡಿಯಾ ತುಂಬಾ 'ಕಾಂತಾರ- 1' ಟ್ರೈಲರ್ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಿದೆ. ಸಿನಿಮಾ ಕಥೆ ಏನು? ಎನ್ನುವ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ ಟ್ರೈಲರ್ನಲ್ಲೇ ಎಲ್ಲವನ್ನು ಹೇಳಿಲ್ಲ, ತೆರೆಮೇಲೆ ಬೇರೆ ಏನನ್ನೋ ಹೇಳುತ್ತಾರೆ ಎನ್ನುವವರು ಇದ್ದಾರೆ.
ಹೊಂಬಾಳೆ ಫಿಲ್ಮ್ಸ್ ಮಹತ್ವಾಕಾಂಕ್ಷೆಯ ಸಿನಿಮಾ ಇದು. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ತಯಾರಾಗಿದೆ. ಅದಕ್ಕೆ ತಕ್ಕಂತೆ ಮಾರ್ಕೆಟಿಂಗ್, ಪ್ರಮೋಷನ್ ರಿಲೀಸ್ ಪ್ಲ್ಯಾನ್ ನಡೀತಿದೆ. 5 ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಟ್ರೈಲರ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಅಭಿಮಾನಿಗಳು ರಿಪೀಟ್ ಮೋಡ್ನಲ್ಲಿ ಟ್ರೈಲರ್ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಫಸ್ಟ್ ಡೇ ಸಿನಿಮಾ ನೋಡಬೇಕು ಎಂದು ಕಾಯುತ್ತಿದ್ದಾರೆ. ಇನ್ನು ಟ್ರೈಲರ್ ಅನ್ನು ಡಿ-ಕೋಡ್ ಮಾಡುವ ಪ್ರಯತ್ನವನ್ನು ಮುಂದುವರೆಸಿದ್ದಾರೆ.

ಟ್ರೈಲರ್ ನೋಡಿದರೆ ಚಿತ್ರದ ಒನ್ಲೈನ್ ಸ್ಟೋರಿ ಏನು ಎನ್ನುವುದು ಗೊತ್ತಾಗುತ್ತಿದೆ. ಹೆಣ್ಣು, ಹೊನ್ನು, ಮಣ್ಣಿಗಾಗಿ ನಡೆಯುವ ಯುದ್ಧದ ಕಥೆ ಎನ್ನುವುದು ಮೇಲ್ನೋಟಕ್ಕೆ ಅರ್ಥವಾಗುತ್ತಿದೆ. ಬೆರ್ಮೆ ಹಾಗೂ ಆತನ ಬುಡಕಟ್ಟು ಸಮುದಾಯ. ರಾಜ ಕುಲಶೇಖರನ ದುರಾಸೆ, ಅಹಂಕಾರ. ಇದೆಲ್ಲದರ ನಡುವೆ ಬೆರ್ಮೆ ಹಾಗೂ ಕನಕವತಿಯ ಪ್ರೀತಿ ಪ್ರೇಮ ಪ್ರಣಯ. ಬುಡಕಟ್ಟು ಜನರ ದೈವ ನಂಬಿಕೆ, ಆಚಾರ- ವಿಚಾರ. ಹೀಗೆ ಸಾಕಷ್ಟು ಸಂಗತಿಗಳು ಚಿತ್ರದಲ್ಲಿದೆ.
ಇನ್ನು ಈ ಹಿಂದೆ 'ಕಾಂತಾರ' ಚಿತ್ರದಲ್ಲಿದ್ದ ಕಲಾವಿದರು ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೇರೆ ಬೇರೆ ವೇಷಗಳಲ್ಲಿ ಮಿಂಚಿದ್ದಾರೆ. ಒಂದಷ್ಟು ಹೊಸ ಕಲಾವಿದರು ಸೇರಿಕೊಂಡಿದ್ದಾರೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಿನಿಮಾ ಮೂಡಿ ಬಂದಿರುವುದು ಗೊತ್ತಾಗುತ್ತಿದೆ. ವಿಷ್ಯುವಲಿ ಸಿನಿಮಾ ಕಣ್ಣಿಗೆ ಹಬ್ಬ ಎನ್ನುವಂತಿದೆ. ರಿಷಬ್ ಶೆಟ್ಟಿ ಅಂಡ್ ಟೀಂ ಪರಿಶ್ರಮ ಗೊತ್ತಾಗುತ್ತಿದೆ. ಆದರೆ ಟ್ರೈಲರ್ನಲ್ಲೇ ರಿಷಬ್ ಎಲ್ಲವನ್ನು ಹೇಳಿಲ್ಲ. ಕೆಲ ವಿಚಾರಗಳನ್ನು ರಟ್ಟು ಮಾಡದೇ ಸಿನಿಮಾದಲ್ಲಿ ತೋರಿಸಲು ಉಳಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.

ಹಿಂದಿನ ಚಿತ್ರದಲ್ಲಿ ದೇವೇಂದ್ರ ಸುತ್ತೂರು ಆಗಿ ನೆಗೆಟಿವ್ ರೋಲ್ನಲ್ಲಿ ಅಚ್ಯುತ್ ಕುಮಾರ್ ನಟಿಸಿದ್ದರು. ಬಹಳ ಹೊತ್ತು ಅಚ್ಯುತ್ ಖಳ ಎನ್ನುವುದನ್ನು ರಿವೀಲ್ ಮಾಡಿರಲಿಲ್ಲ. ಆರಂಭದಲ್ಲಿ ಅದು ಕಾಡುಬೆಟ್ಟು ಶಿವ ಹಾಗೂ ಫಾರೆಸ್ಟ್ ಆಫೀಸರ್ ಮುರಳಿ(ಕಿಶೋರ್) ನಡುವಿನ ಸಂಘರ್ಷದ ಕಥೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಟ್ರೈಲರ್ ನೋಡಿದಾಗಲೂ ಅದೇ ಅನ್ನಿಸಿತ್ತು. ಆದರೆ ಸಿನಿಮಾ ನೋಡ್ತಾ ನೋಡ್ತಾ ಅದಕ್ಕಿಂತ ಬೇರೆಯದ್ದೇ ತಿರುವುದು ಪಡೆದುಕೊಂಡಿತ್ತು.
'ಕಾಂತಾರ'-1 ಟ್ರೈಲರ್ ನೋಡಿದಾಗಲೂ ಇಂತಹ ಸಾಕಷ್ಟು ವಿಚಾರಗಳನ್ನು ರಿಷಬ್ ಗುಟ್ಟಾಗಿಯೇ ಇಟ್ಟಿದ್ದಾರೆ ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. ಚಿತ್ರದ ಪಾತ್ರವರ್ಗದ ಬಗ್ಗೆ ಚಿತ್ರತಂಡ ಮೊದಲಿನಿಂದಲೂ ಕುತೂಹಲ ಉಳಿಸಿಕೊಂಡಿತ್ತು. ರುಕ್ಮಿಣಿ ಹಾಗೂ ಜಯರಾಂ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಗುಸುಗುಸು ಕೇಳಿಬಂದಿತ್ತು. ಆದರೆ ಚಿತ್ರತಂಡ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಲಿಲ್ಲ. ಅದೇ ರೀತಿ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್ ನಟಿಸಿದ್ದಾರಾ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. ಚಿತ್ರದ ಸೆನ್ಸಾರ್ ಕಾಪಿಯಲ್ಲಿ ಕೂಡ ಕಲಾವಿದರ ಪಟ್ಟಿಯಲ್ಲಿ ಅಚ್ಯುತ್ ಕುಮಾರ್ ಅವರ ಹೆಸರಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿಯಿಲ್ಲ.
ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಚಿತ್ರ ಅಷ್ಟು ಅದ್ಭುತವಾಗಿ ಮೂಡಿ ಬರಲು ಅವರು ಶ್ರಮಿಸಿದ್ದಾರೆ. ಆದರೆ 'ಕಾಂತಾರ' ಚಿತ್ರದಲ್ಲಿ ರಾಜನ ಮಡದಿಯಾಗಿ ಪ್ರಗತಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಹಾಗಾಗಿ ಚಾಪ್ಟರ್-1ನಲ್ಲಿ ಕೂಡ ಆಕೆ ನಟಿಸಿರಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ.


Click it and Unblock the Notifications











