Kantara-2: ಕಾಂತಾರ-2 ಬಜೆಟ್ ಎಷ್ಟು ಕೋಟಿ ಎಂದು ನಟ ರಿಷಬ್ ಶೆಟ್ಟಿ ಹೇಳ್ತಾರೆ ನೋಡಿ!
ಕಾಂತಾರ ಸಿನಿಮಾದಂತಹ ಭರ್ಜರಿ ಹಿಟ್ ನೀಡಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸದ್ಯ ಸೈಮಾ ಪ್ರಶಸ್ತಿ ಪಡೆದು ಬೀಗುತ್ತಿದ್ದಾರೆ. ಇದರ ಜೊತೆಗೆ ತಮ್ಮ ಬಹುನಿರೀಕ್ಷಿತ ಸಿನಿಮಾ 'ಕಾಂತಾರ 2' ಸಿನಿಮಾ ಬಗ್ಗೆ ಅಪ್ಡೇಟ್ ನೀಡುತ್ತಿದ್ದಾರೆ. ಕಾಂತಾರ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದೆ.
ಸದ್ಯ ಕನ್ನಡ ಚಿತ್ರರಂಗದಲ್ಲಿ ಶೆಟ್ರು ತಂಡದಿಂದ ಬಹುನಿರೀಕ್ಷಿತ ಸಿನಿಮಾ ಕಾಂತಾರ 2. ಸೈಮಾ ಪ್ರಶಸ್ತಿ ಪಡೆದ ಬಳಿಕ ಈಗ ಮತ್ತೆ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂತಾರ 2 ಸಿನಿಮಾ ಬಜೆಟ್, ಚಿತ್ರೀಕರಣ ಬಗ್ಗೆ ಸುವರ್ಣ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕಾಂತಾರ 2 ಸಿನಿಮಾದಲ್ಲಿ ರಿಷಬ್ ಬ್ಯುಸಿ
ಕನ್ನಡದ ಬಹುನಿರೀಕ್ಷಿತ ಸಿನಿಮಾ ಕಾಂತಾರ 2 ಚಿತ್ರೀಕರಣ ಇನ್ನೇನು ಆರಂಭವಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ರಿಷಬ್ ಶೆಟ್ಟಿ ತಿಳಿಸಿದ್ದಾರೆ. ಈಗಾಗಲೇ ಅವರು ಸ್ಕ್ರಿಪ್ಟ್ ಮತ್ತು ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
ಕಾಂತಾರ ಸಿನಿಮಾ ಚಿತ್ರೀಕರಣದ ಘಟನೆಗಳನ್ನು ನೆನಪಿಸಿಕೊಂಡಿರುವ ರಿಷಬ್ ಶೆಟ್ಟಿ, ಕಾಂತಾರ ಮೊದಲನೇ ಭಾಗ ನಮ್ಮ ಊರಿನಲ್ಲಿ ಮಾತ್ರ ಚಿತ್ರೀಕರಣ ನಡೆದಿತ್ತು. ಆದರೆ, ಈ ಬಾರಿ ನಿರೀಕ್ಷೆ ಹೆಚ್ಚಿದೆ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದು ಊರು ಮತ್ತು ಬೇರೆ ಭಾಗಗಳಲ್ಲೂ ಸಿನಿಮಾ ಶೂಟಿಂಗ್ ಮಾಡುತ್ತೇವೆ. ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದಿದ್ದಾರೆ.

ಕಾಂತಾರ- ಭಾಗ ಎರಡರ ಬಜೆಟ್ ಎಷ್ಟು?
ಈಗಾಗಲೇ ಸಾಮಾಜಿಕ ಮಾಧ್ಯಮಗಳು ಮತ್ತು ವರದಿಗಳು ಕಾಂತಾರ 2 ಸಿನಿಮಾ ಬಜೆಟ್ ಬಗ್ಗೆ ಹಲವು ಬಾರಿ ಉಲ್ಲೇಖಿಸಿದೆ. ಆದರೆ, ಅದರ ನಿಜವಾದ ಬಜೆಟ್ ಎಷ್ಟು ಎಂದು ಸರಿಯಾಗಿ ಯಾರಿಗೂ ತಿಳಿದಿಲ್ಲ. ಇತ್ತೀಚೆಗೆ ಟೋಬಿ ನಟ ರಾಜ್ ಬಿ ಶೆಟ್ಟಿ ಕಾಂತಾರ 2 ಸಿನಿಮಾದ ಬಜೆಟ್ ಹೆಚ್ಚುಕಮ್ಮಿ 100 ಕೋಟಿ ರೂಪಾಯಿ ಎಂದಿದ್ದರು.
"ಕಾಂತಾರ-2 ಸಿನಿಮಾ ಬರವಣಿಗೆ ಹಂತದಲ್ಲಿದೆ. ರಿಷಬ್ ಶೆಟ್ಟಿ ಕಥೆ, ಚಿತ್ರಕಥೆ ಸಿದ್ಧಪಡಿಸುತ್ತಿದ್ದಾರೆ. ಇದು ಮೊದಲ ಭಾಗಕ್ಕಿಂತ ಬಹಳ ದೊಡ್ಡ ಸಿನಿಮಾ. ಹೆಚ್ಚುಕಮ್ಮಿ 100 ಕೋಟಿ ರೂಪಾಯಿ ಬಜೆಟ್. 'ಕಾಂತಾರ' ಚಿತ್ರವನ್ನು ಮಾಡಿದ ಬಜೆಟ್ಕ್ಕಿಂತ 10 ಪಟ್ಟು ಹೆಚ್ಚು ಮೊತ್ತದಲ್ಲಿ ಮುಂದಿನ ಸಿನಿಮಾ ಮೂಡಿ ಬರಲಿದೆ" ಎಂದಿದ್ದಾರೆ.
ಇನ್ನು, ಇವೆಲ್ಲದರ ಬಗ್ಗೆ ರಿಷಬ್ ಶೆಟ್ಟಿ ತಾವೇ ಮಾಹಿತಿ ನೀಡಿದ್ದಾರೆ. ಈ ಹಿಂದೆ ಕಾಂತಾರ ಮಾಡುವಾಗ ನಾನೊಬ್ಬ ಸಾಧಾರಣ ನಟ. ಆಗ ನನ್ನ ನಂಬಿ 16 ಕೋಟಿ ರೂಪಾಯಿ ಬಜೆಟ್ ಹಾಕುವುದು ತುಂಬಾ ದೊಡ್ಡದೇ. ಈಗ ಹೊಂಬಾಳೆ ಫಿಲಂಸ್ಗೆ ನಾನೊಂದು ಕತೆ ಹೇಳಿದ್ದು, ಅವರಿಗೆ ಆ ಕತೆ ತುಂಬಾ ಇಷ್ಟವಾಗಿದೆ. ಅವರು ಅದಕ್ಕೆ ತಕ್ಕಂತೆ ಬಜೆಟ್ ನೀಡುತ್ತಾರೆ ಎಂದು ಹೇಳಿದ್ದಾರೆ.
ಕಾಂತಾರ ಸಿನಿಮಾಗೆ ಸಿಕ್ಕ ಇಂತಹ ಪ್ರತಿಕ್ರಿಯೆ ಸಿಕ್ಕಿದ್ದು ಮುಂಬರುವ ಸಿನಿಮಾಗೆ ಹೆಚ್ಚು ಗಮನ ನೀಡಬೇಕಾದ ಕಾರಣ ನಾನು ಇನ್ನು ಅನಿವಾರ್ಯ ಕಾರ್ಯಕ್ರಮಗಳನ್ನು ಬಿಟ್ಟರೆ ಬೇರೆ ಯಾವುದಕ್ಕೂ ಹೋಗುವುದಿಲ್ಲ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.


Click it and Unblock the Notifications










