"ನೀವು ನೋಡಿರೋದು 'ಕಾಂತಾರ' ಪಾರ್ಟ್- 2.. ಪಾರ್ಟ್- 1 ಮುಂದೆ ಬರಲಿದೆ": ಟ್ವಿಸ್ಟ್ ಕೊಟ್ಟ ರಿಷಬ್ ಶೆಟ್ಟಿ
ನಿರ್ದೇಶಕ- ನಟ ರಿಷಬ್ ಶೆಟ್ಟಿ ಇದೇ ಮೊದಲ ಬಾರಿಗೆ 'ಕಾಂತಾರ' ಸಿನಿಮಾ ಮುಂದುವರೆದ ಭಾಗದ ಬಗ್ಗೆ ಮಾತನಾಡಿದ್ದಾರೆ. 'ಕಾಂತಾರ' ಸಿನಿಮಾ ಶತದಿನೋತ್ಸವ ಸಂಭ್ರಮದಲ್ಲಿ ರಿಷಬ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸಾಮಾನ್ಯವಾಗಿ ಎರಡನೇ ಭಾಗ ಅಂದಾಗ ಕಥೆಯ ಮುಂದುವರೆದ ಭಾಗವನ್ನು ತೋರಿಸಲಾಗುತ್ತದೆ. ಆದರೆ 'ಕಾಂತಾರ' ವಿಚಾರದಲ್ಲಿ ಅದು ಉಲ್ಟಾ ಆಗ್ತಿದೆ. ಕಾಂತಾರ ಸೀಕ್ವೆಲ್ ಬದಲು ಈ ಬಾರಿ ಪ್ರೀಕ್ವೆಲ್ ಪ್ರೇಕ್ಷಕರ ಮುಂದೆ ಬರಲಿದೆ. ವಿನಯ ನಗರದ ಬಂಟರ ಸಂಘದ ಸಭಾಂಗಣದಲ್ಲಿ 'ಕಾಂತಾರ' ಚಿತ್ರದ ಶತದಿನೋತ್ಸವ ಸಂಭ್ರಮಾಚರಣೆಯಲ್ಲಿ ಇಡೀ ಚಿತ್ರತಂಡ ಭಾಗಿ ಆಗಿತ್ತು. ಈ ವೇಳೆ ವೇದಿಕೆ ಏರಿ ಮಾತನಾಡಿದ ರಿಷಬ್ ಶೆಟ್ಟಿ 'ಕಾಂತಾರ' ಸರಣಿಯ ಮುಂದಿನ ಸಿನಿಮಾ ಬಗ್ಗೆ ಹೇಳಿದ್ದಾರೆ.
ನಿರ್ಮಾಪಕ ವಿಜಯ್ ಕಿರಗಂದೂರ್ ಕೆಲ ಆಂಗ್ಲ ಪತ್ರಿಕೆಗಳಿಗೆ ಹೇಳಿಕೆ ಕೊಟ್ಟಿದ್ದು ಬಿಟ್ಟರೆ 'ಕಾಂತಾರ' ಪ್ರೀಕ್ವೆಲ್ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಮಾತನಾಡಿರಲಿಲ್ಲ. ಇದೇ ಮೊದಲ ಬಾರಿಗೆ ರಿಷಬ್ ಶೆಟ್ಟಿ ಮೌನ ಮುರಿದಿದ್ದಾರೆ.

ಸಿನಿಮಾ ಹಿಟ್ ಆಗಲು ಪ್ರೇಕ್ಷಕರು ಕಾರಣ
'ಕಾಂತಾರ' ಶತದಿನೋತ್ಸವ ವೇದಿಕೆಯಲ್ಲಿ ಮಾತನಾಡಿದ ರಿಷಬ್ ಶೆಟ್ಟಿ "ಸಿನಿಮಾ ಬಿಡುಗಡೆಯಾದ ಬಹುತೇಕ ಥಿಯೇಟರ್ಗಳಲ್ಲಿ ಎಷ್ಟೋ ದಿನಗಳ ಕಾಲ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿದೆ. ಅದಕ್ಕೆ ಜನರು ಕಾರಣ. ಯಾಕಂದರೆ ಈ ಸಿನಿಮಾವನ್ನು ಹೊತ್ತು ಅಂತರಾಷ್ಟ್ರೀಯಮಟ್ಟಕ್ಕೆ ಹೋಗಲು ಕಾರಣಕರ್ತರು ಪ್ರೇಕ್ಷಕರು. ನಾವು ಅವರನ್ನು ಮರೆಯುವಂತಿಲ್ಲ. ಅವರಿಗೆ ಧನ್ಯವಾದ. ಮಾಧ್ಯಮ ಹಾಗೂ ನಮ್ಮ ತಂಡದ ಎಲ್ಲರ ಸಹಕಾರದಿಂದ ಬೆಂಬಲದಿಂದ ಇಷ್ಟು ದೊಡ್ಡಮಟ್ಟಕ್ಕೆ ಸಿನಿಮಾ ತಲುಪಿದೆ"

ಭಾರತ ಚಿತ್ರರಂಗದಲ್ಲಿ ಇದೇ ಮೊದಲು
"ಹೊಂಬಾಳೆ ಪ್ರೊಡಕ್ಷನ್ ರೀತಿಯ ಅದ್ಭುತ ಸಿನಿಮಾ ನಿರ್ಮಾಣ ಸಂಸ್ಥೆ ಇದ್ದಾಗ ನಾವು ಕೆರಾಡಿಯಂತಹ ಊರಿನಲ್ಲಿ. ಇಲ್ಲಿಂದ 500 ಕಿಲೋ ಮೀಟರ್ ದೂರದಲ್ಲಿ ಶೂಟ್ ಮಾಡಿದ ಚಿತ್ರವನ್ನು ಎಲ್ಲಿಗೆ ಬೇಕಾದರೂ ತೆಗೆದುಕೊಂಡು ತಾಕತ್ತು ಇರುವುದು ಹೊಂಬಾಳೆ ಸಂಸ್ಥೆಗೆ ಧನ್ಯವಾದ. ಭಾರತೀಯ ಚಿತ್ರರಂಗ ಇತಿಹಾಸದಲ್ಲಿ ಫಸ್ಟ್ ಟೈಮ್ ಅನ್ಸುತ್ತೆ, ಒಂದು ಪ್ರಾದೇಶಿಕ ಸಿನಿಮಾ, ಬರೀ ಕನ್ನಡಕ್ಕೆ ರಿಲೀಸ್ ಆಗಿ ಅದರ ಪಾಡಿಗೆ ಅದೇ ಪ್ಯಾನ್ ಇಂಡಿಯಾ ರಿಲೀಸ್ ಆಗಿ ವರ್ಲ್ಡ್ ರಿಲೀಸ್ ಆಗಿರೋದು.

ಪಾರ್ಟ್- 2 ಆಯ್ತು ಪಾರ್ಟ್-1 ಬರುತ್ತೆ
"ನೆಟ್ಫ್ಲಿಕ್ಸ್ನಲ್ಲಿ ಶೀಘ್ರದಲ್ಲೇ ಇಂಗ್ಲೀಷ್ನಲ್ಲೂ ಬರಬಹುದು ಅಂತ ಹೇಳ್ತಿದ್ದಾರೆ. ತುಳುನಲ್ಲೂ ರಿಲೀಸ್ ಆಗಿತ್ತು. ಇಂಗ್ಲೀಷ್ಗೂ ಹೋದರೆ 7 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆದಂತಾಗುತ್ತದೆ. ನಿಮ್ಮ ಎಲ್ಲರ ಸಹಕಾರಕ್ಕೆ ಧನ್ಯವಾದ. 'ಕಾಂತಾರ' ಪಾರ್ಟ್- 2 ಯಾವಾಗ ಅಂತ ಚರ್ಚೆ ನಡೀತಿತ್ತು. ಆದರೆ ನೀವು ನೋಡಿರೋದು ಪಾರ್ಟ್- 2. ಪಾರ್ಟ್- 1 ಅತಿ ಶೀಘ್ರದಲ್ಲೇ ಬರುತ್ತದೆ. ಅಷ್ಟು ಮಾತ್ರ ಹೇಳಬಹುದು. ಶೀಘ್ರದಲ್ಲಿ ನೀವೇ ನೋಡ್ತೀರಾ" ಎಂದಿದ್ದಾರೆ.

2 ನಿಮಿಷ ಕಥೆ ಹೇಳಿ ಒಪ್ಪಿಸಿದ್ದೆ
"ಹೊಂಬಾಳೆ ಸಂಸ್ಥೆ ಭಾರತೀಯ ಚಿತ್ರರಂಗಕ್ಕೆ 3000 ಕೋಟಿ ಹಾಕುತ್ತಿದೆ. ಅದು ಬರೀ ಲೆಕ್ಕಕ್ಕೆ ಅಷ್ಟೇ. ಸಿನಿಮಾ ಮುಖಾಂತರವಾಗಿ ನಮ್ಮ ಭಾಷೆ, ನಮ್ಮ ನಾಡು, ನುಡಿ, ಸಂಸ್ಕೃತಿ ಇತಿಹಾಸವನ್ನು ಬಹಳ ಪರಿಣಾಮಕಾರಿಯಾಗಿ ಈ ತಲೆಮಾರಿಗೆ ತಲುಪಿಸಬೇಕು ಎನ್ನುವುದು ಸಂಸ್ಥೆಯ ಗುರಿಯಾಗಿದೆ. ನನ್ನ ಗುರಿಯೂ ಅದೇ. ನಾನು ಮೊದಲು ಕಾರ್ತಿಕ್ ಗೌಡ ಅವರಿಗೆ 2 ನಿಮಿಷ ಕಥೆ ಹೇಳಿದ್ದೆ. ನಂತರ ವಿಜಯ್ ಸರ್ಗೂ 2 ನಿಮಿಷ ಕಥೆ ಹೇಳ್ದೆ. ಆ ಮೇಲೆ ಇಡೀ ಹೊಂಬಾಳೆ ಸಂಸ್ಥೆ ಸ್ಕ್ರಿಪ್ಟ್ ಸಮೇತ ಹೇಳಿದ್ದೆ. ನಾವು ಏನು ಅಂದುಕೊಂಡೆವೋ ಅದಕ್ಕಿಂತ ಬಜೆಟ್ ಎರಡರಷ್ಟಾಗಿತ್ತು. ನಾನು ಆಗ ಜಾಸ್ತಿ ಬಜೆಟ್ ಅಂದುಕೊಂಡಿದ್ದೆ. ಮಡದಿ ಪ್ರಗತಿ ಹತ್ತಿರ ಹೇಳ್ತಿದ್ದೆ ದೊಡ್ಡ ಬಜೆಟ್ ಸಿನಿಮಾ ಅಂತ. ಪ್ಯಾನ್ ಇಂಡಿಯಾ ಆದ್ಮೇಲೆ ಅದು ಲೋ ಬಜೆಟ್ ಸಿನಿಮಾ ಆಗ್ಬಿಡ್ತು" ಎಂದು ರಿಷಬ್ ವಿವರಿಸಿದ್ದಾರೆ.


Click it and Unblock the Notifications











