"ಅಪಘಾತಗಳನ್ನೂ ದುರಂತಗಳನ್ನೂ ತಮ್ಮ ಇಮೇಜು ಬೆಳೆಸಿಕೊಳ್ಳಲು ಬಳಸುವುದನ್ನು ಬಿಡಬೇಕು"
ಶುಕ್ರವಾರ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಮೂರು ರೈಲುಗಳ ಅಪಘಾತದಲ್ಲಿ 250ಕ್ಕೂ ಅಧಿಕ ಮಂದಿ ಮೃತಪಟ್ಟು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ದುರಂತಕ್ಕೆ ಕಾರಣ ಏನು ಎಂದು ಸಿಬಿಐ ತನಿಖೆ ಆರಂಭಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಈ ವಿಚಾರವಾಗಿ ಇದೀಗ ನಟ ಕಿಶೋರ್ ಪ್ರತಿಕ್ರಿಯಿಸಿದ್ದಾರೆ.
ಬಹುಭಾಷಾ ನಟ ಕಿಶೋರ್ ದೇಶದ ಆಗುಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಕೆಲವರು ವಿಚಾರಗಳ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸುತ್ತಾರೆ. ಇದೀಗ ಬಾಲಸೋರ್ನಲ್ಲಿ ನಡೆದ ರೈಲು ಅಪಘಾತದ ಬಗ್ಗೆ ಕಿಶೋರ್ ಇನ್ಸ್ಟಾ ಪೋಸ್ಟ್ ವೈರಲ್ ಆಗ್ತಿದೆ. "ಯಾರ ಮೇಲೆ ಕಠಿಣ ಕ್ರಮ ? ಯಾರು ಕಾರಣ ?? ಇಷ್ಟು ಭೀಕರ ಸಾವು ನೋವು ತಡೆಗಟ್ಟಬಹುದಿತ್ತೇ? ರೈಲ್ವೆ ಮಂತ್ರಿ ಈಗ ಹೋಗಿ ನಿಂತು ಕ್ಯಾಮೆರಾ ಮುಂದೆ ಕಣ್ಣೀರು ಸುರಿಸುವ ನಾಟಕ ಬಿಟ್ಟು ಇಂದಿಗೂ ಖಾಲಿಯಿರುವ 3 ಲಕ್ಷಕ್ಕೂ ಹೆಚ್ಚು ರೈಲ್ವೆ ನೌಕರರನ್ನು 1500ಕ್ಕೂ ಹೆಚ್ಚು ರೈಲ್ವೆ ಸುರಕ್ಷತೆಗೆ ಬೇಕಾದ ಖಾಲಿಯಾಗೇ ಉಳಿದಿರುವ ಹುದ್ದೆಗಳನ್ನು ತುಂಬಿ ಹಳಿ ನಿರ್ವಹಣೆ ಸಮರ್ಪಕವಾಗಿಸಬಹುದಿತ್ತೇ ? ಎಂದು ಪ್ರಶ್ನಿಸಿದ್ದಾರೆ.

"ಕೋಟ್ಯಂತರ ರೂಪಾಯಿ ವ್ಯಯಿಸಿ ತಿಂಗಳಿಗೊಂದು ರೈಲಿಗೆ ಹಸಿರು ನಿಶಾನೆ ತೋರಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಬದಲು, 'ಕವಚ' ತಂತ್ರಜ್ಞಾನಕ್ಕೆ ಪ್ರಾಮುಖ್ಯತೆ ಕೊಟ್ಟು ಎಲ್ಲೆಡೆ ಅಳವಡಿಸಬಹುದಿತ್ತೇ ?
ಹಾಗೆ ನೋಡಿದರೆ ಕಳೆದ 6-7 ವರ್ಷಗಳಲ್ಲಿ 1000 ಕ್ಕೂ ಹೆಚ್ಚು ರೈಲುಗಳು ಹಳಿತಪ್ಪಿ ಅಪಘಾತಕ್ಕೀಡಾಗಿದ್ದರೂ, 2021ರ ಸಿಎಜಿ ರಿಪೋರ್ಟನ್ನು ಕಡೆಗಣಿಸಿ ಸುರಕ್ಷತೆಗಿಂತ ದೇಶದ ಸ್ವತ್ತನ್ನು ಮಾರಿ ದುಡ್ಡು ಮಾಡುವುದರಲ್ಲೇ ನಿರತವಾದ ಸರ್ಕಾರವೇ ಈ ದುರಂತಕ್ಕೆ ಕಾರಣವಲ್ಲವೇ??? ಅಪರಾಧಿ ಸರ್ಕಾರವೇ ಅಪರಾಧದ ತನಿಖೆ ಮಾಡಿ ಅಪರಾಧಿ ಯಾರೆಂದು ಕಂಡು ಹಿಡಿಯುತ್ತದಂತೆ... ಎಂಥ ವಿಪರ್ಯಾಸ!"
"ಇಲ್ಲಿ ಹಳಿ ತಪ್ಪಿರುವುದು ರೈಲು ಬೋಗಿಗಳಲ್ಲ.. ನಮ್ಮ ಸರ್ಕಾರ...
ಮೂರ್ಖ ಸರ್ಕಾರದ, ನಾಲಾಯಕ್ಕು ಮಂತ್ರಿಗಳ, ಪ್ರಜೆಗಳೆಲ್ಲ ಬರೀ ಮತಗಳಂತೆ ಕಾಣುವ ಪ್ರಚಾರಿ ಪ್ರಧಾನಿಯ ಸಂಕುಚಿತ ದೃಷ್ಟಿಯನ್ನು ಮುಚ್ಚಿ ಹಾಕಲು ಹೋಗಿ, ಆಡಳಿತ ಪಕ್ಷ ಮತ್ತದರ ಬೂಟು ನೆಕ್ಕುವ ಮಾಧ್ಯಮಗಳು ಇಮೇಜ್ ಮ್ಯಾನೇಜ್ಮೆಂಟ್ ಮಾಡುತ್ತಾ ತಪ್ಪನ್ನೂ ಸರಿಯೆಂದು ಸಾಧಿಸ ಹೊರಟರೆ ಕಳೆದು ಕೊಂಡ ಪ್ರಾಣಗಳಿಗೆ ನೊಂದು ಜರ್ಜರಿತವಾದ ಕುಟುಂಬಗಳ ಕಣ್ಣೀರಿಗೆ ಅರ್ಥವಿಲ್ಲದೇ ಹೋದೀತು"

"ಮಡಿದ ನೂರಾರು ಅಮಾಯಕರ ಜೀವಗಳಿಗೆ ಅಶ್ರುತರ್ಪಣ. ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳಲಿ. ಅಪಘಾತಗಳನ್ನೂ ದುರಂತಗಳನ್ನೂ ತಮ್ಮ ಇಮೇಜು ಬೆಳೆಸಿಕೊಳ್ಳಲು ಬಳಸುವುದನ್ನು ಬಿಟ್ಟು ಚುನಾವಣೆಯಾಚೆಗಿನ ತಮ್ಮ ಕರ್ತವ್ಯವನ್ನು ಇನ್ನಾದರೂ ನಿಭಾಯಿಸಲಿ" ಎಂದು ಸರ್ಕಾರಗಳನ್ನು ಕುಟುಕಿದ್ದಾರೆ.
ನಟ ಕಿಶೋರ್ ಮಾಡಿರುವ ಪೋಸ್ಟ್ ಬಗ್ಗೆ ಕಾಮೆಂಟ್ ಬಾಕ್ಸ್ನಲ್ಲಿ ಪರ ವಿರೋಧ ಚರ್ಚೆ ನಡೀತಿದೆ. ಇನ್ನು ನಟ ಕಿಶೋರ್ ಕಳೆದ ವರ್ಷ ರಿಲೀಸ್ ಆಗಿದ್ದ 'ಕಾಂತಾರ' ಚಿತ್ರದ ಅರಣ್ಯ ಇಲಾಖೆ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ 'ಪೊನ್ನಿಯಿನ್ ಸೆಲ್ವನ್'- 2 ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











