"ರಿಷಬ್ ಶೆಟ್ಟಿ ಸಂಸಾರ ಹಾಳು ಮಾಡಲು ಸಂಚು"; ಪಂಜುರ್ಲಿ ದೈವ ಅಭಯ
ನಟ, ನಿರ್ದೇಶಕ ರಿಷಬ್ ಶೆಟ್ಟಿ ಸದ್ಯ 'ಕಾಂತಾರ- ಚಾಪ್ಟರ್-1' ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಟೋಬರ್ 2ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಇದೆಲ್ಲದರ ನಡುವೆ ರಿಷಬ್ ಶೆಟ್ಟಿ ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ವಾರ್ಷಿಕ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ.
ಮಂಗಳೂರಿನ ಬಾರೆಬೈಲ್ ವಾರಾಹಿ ಪಂಜುರ್ಲಿ ದೈವದ ನೇಮೋತ್ಸವದಲ್ಲಿ ಭಾಗಿ ಆಗಿ ದೈವದಲ್ಲಿ ರಿಷಬ್ ಶೆಟ್ಟಿ ತಮ್ಮ ಕಷ್ಟ ಹೇಳಿಕೊಂಡು ನೋವನ್ನು ತಿಳಿಸಿದ್ದಾರೆ. ಕೂಡಲೇ ದೈವ ಸಂತೈಸಿ ಧೈರ್ಯ ತುಂಬಿದೆ. "ಜಗತ್ತಿನೆಲ್ಲೆಡೆ ನಿನಗೆ ಶತ್ರುಗಳಿದ್ದಾರೆ, ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನಿನ್ನ ಕೆಲಸ ಫಲ ನೀಡದಂತೆ ಹಾಳು ಮಾಡಲು ಭಾರೀ ಸಂಚು ನಡೆದಿದೆ. ಈಗ ಗಂಡಾಂತರ ಬಂದಿದೆಯೆಂದು ನೀನು ಬಂದಿದ್ದೀಯಾ, ನೀನು ನಂಬಿದ ದೈವ ಕೈಬಿಡಲ್ಲ" ಎಂದು ದೈವ ಅಭಯ ನೀಡಿದೆ.

"ನಿನಗೆ ಯಾರು ಕೇಡು ಬಗೆದಿದ್ದಾರೆಂದು ಈಗ ನಾನು ಹೇಳಲ್ಲ, ಆದರೆ ಕೇಡು ತಾಗದಂತೆ ನಾನು ನೋಡಿಕೊಳ್ತೇನೆ. ನನಗೆ ಸೇವೆ ನೀಡುವ ಹರಕೆ ಕಟ್ಟಿಕೋ, 5 ತಿಂಗಳಲ್ಲಿ ನಿನಗೆ ಒಳ್ಳೆದು ಮಾಡುತ್ತೇನೆ" ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ವಾರಾಹಿ ಪಂಜುರ್ಲಿ ದೈವ ಮಾತು ನೀಡಿದೆ. ಪತ್ನಿ ಪ್ರಗತಿ ಶೆಟ್ಟಿ ಹಾಗೂ ಮಕ್ಕಳ ಜೊತೆ ಬೆಂಗಳೂರಿನಿಂದ ರಿಷಬ್ ಶೆಟ್ಟಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಎರಡು ವರ್ಷಗಳ ಹಿಂದೆ ಮಂಗಳೂರು ಸಮೀಪದ ಬಂಟ್ವಾಳ ತಾಲೂಕಿನ ಮುತ್ತೂರು ಶ್ರೀ ನಟ್ಟಿಲ ಪಂಜುರ್ಲಿ ದೈವದ ನೇಮೋತ್ಸವದಲ್ಲಿ ಕೂಡ ರಿಷಬ್ ಶೆಟ್ಟಿ ಭಾಗವಹಿಸಿದ್ದರು. 'ಕಾಂತಾರ-1' ಚಿತ್ರಕ್ಕೆ ದೈವ ಅಭಯ ನೀಡಿತ್ತು. 'ಕಾಂತಾರ' ಸಿನಿಮಾ ಮಾಡುವಾಗಲೂ ದೈವದ ಅಭಿಯ ಪಡೆದು ಸಿನಿಮಾ ಯಶಸ್ಸು ಕಂಡ ಬಳಿಕ ಅದ್ಧೂರಿ ಭೂತಕೋಲ ನೇಮೋತ್ಸವ ನಡೆಸಿದ್ದರು.
ಎರಡು ವರ್ಷಗಳ ಹಿಂದೆ ಯುಗಾದಿ ಹಬ್ಬದ ದಿನ 'ಕಾಂತಾರ-1' ಸಿನಿಮಾ ಸ್ಕ್ರಿಪ್ಟ್ ಪೂಜೆ ಪ್ರಾರಂಭಿಸಲಾಗಿತ್ತು. ಕೆರಾಡಿಯ ಆನೆಗುಡ್ಡೆ ದೇವಸ್ಥಾನದಲ್ಲಿ ಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿತ್ತು. 'ಕಾಂತಾರ-1' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಹೊಂಬಾಳೆ ಸಂಸ್ಥೆ ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಿನಿಮಾ ತೆರೆಗೆ ತರುವ ಪ್ರಯತ್ನ ಮಾಡ್ತಿದೆ.
ಮತ್ತೊಮ್ಮೆ ರಿಷಬ್ ಶೆಟ್ಟಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ದೊಡ್ಡ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ. ನೂರಾರು ಜನ ಚಿತ್ರಕ್ಕಾಗಿ ಹಗಳಿರುವ ಶ್ರಮಿಸುತ್ತಿದ್ದಾರೆ. ಹಾಲಿವುಡ್ ತಂತ್ರಜ್ಞರು ಕೂಡ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ತುಳು ಹಾಗೂ ಇಂಗ್ಲೀಷ್ ಸೇರಿ ಒಟ್ಟು 7 ಭಾಷೆಗಳಲ್ಲಿ ಸಿನಿಮಾ ತೆರೆಗೆ ತರುವ ಲೆಕ್ಕಾಚಾರ ನಡೀತಿದೆ. ಸಿನಿಮಾ 1000 ಕೋಟಿ ಕಲೆಕ್ಷನ್ ಮಾಡುತ್ತದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.
'ಕಾಂತಾರ-1' ಸಿನಿಮಾ ಬಿಡುಗಡೆ ಆಗುವ ದಿನವೇ ಧನುಷ್ ನಿರ್ದೇಶಿಸಿ ನಟಿಸಿರುವ ಇಡ್ಲಿ 'ಕಡೈ' ಸಿನಿಮಾ ಕೂಡ ತೆರೆಗೆ ಬರ್ತಿದೆ. ಇನ್ನು 'ಕಾಂತಾರ-1' ಸಿನಿಮಾ ಬಳಿಕ ಒಂದು ತೆಲುಗು ಹಾಗೂ ಒಂದು ಹಿಂದಿ ಚಿತ್ರದಲ್ಲಿ ನಟಿಸೋಕೆ ರಿಷಬ್ ಶೆಟ್ಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ತೆಲುಗಿನ ಜೈ ಹನುಮಾನ್ ಹಾಗೂ ಬಾಲಿವುಡ್ನ ಛತ್ರಪತಿ ಶಿವಾಜಿ ಚಿತ್ರಗಳಲ್ಲಿ ಡಿವೈನ್ ಸ್ಟಾರ್ ನಟಿಸಲಿದ್ದಾರೆ. ಈ ಎರಡು ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.


Click it and Unblock the Notifications











