ಮಧ್ಯರಾತ್ರಿ ಆ ನಿರ್ಮಾಪಕ ನನ್ನ ರೂಮಿನ ಬಾಗಿಲು ಬಡಿದಿದ್ದ ; ಸಾಗರದಲ್ಲಿ ನಡೆದ ಕರಾಳ ಘಟನೆ ನೆನೆದು ಬಿಕ್ಕಿದ ಕಾಂತಾರ ನಟಿ
ಹೆಣ್ಣುಮಕ್ಕಳನ್ನು ಕಾಮದ ಸರಕಿನಂತೆ ನಡೆಸಿಕೊಳ್ಳೋ ದುಷ್ಟರ ವಿರುದ್ಧ ಆರಂಭ ಮಾಡಲಾಗಿದ್ದ ಅಭಿಯಾನ ಮೀಟೂ. 8-9 ವರ್ಷಗಳ ಹಿಂದೆ ಆರಂಭವಾಗಿದ್ದ ಈ ಮೀಟೂ ಅಭಿಯಾನದಡಿ ಹಳ್ಳ ಹಿಡಿದಿದ್ದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಅನೇಕ ನಟಿಯರು ತಮ್ಮ ಸಹ ನಟರು, ನಿರ್ಮಾಪಕರ ಹಾಗೂ ನಿರ್ದೇಶಕರ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದರು.
ಆ ನಿರ್ಮಾಪಕ ನೈಟ್ ಔಟಿಗೆ ಕರೆದ, ಈ ನಾಯಕ ಡೇಟಿಂಗ್ ಕರೆದ, ಚಿತ್ರೀಕರಣದ ಸಮಯದಲ್ಲಿ ಬೇಕಂತಲೇ ಬಿಗಿಯಾಗಿ ಅಪ್ಪಿದ, ಪಾತ್ರಕ್ಕಾಗಿ ಪಲ್ಲಂಗ ಏರುವಂತೆ ಹೇಳಿದ, ಹೀಗೆ ಇತ್ಯಾದಿ ಇತ್ಯಾದಿ ಆರೋಪಗಳೆಲ್ಲವೂ ಬಣ್ಣದ ಲೋಕದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದವು. ಆದರೆ ಆ ನಂತರ ಆ ವಿಷಯ ಹಾಗೇ ತಣ್ಣಗಾಯಿತು.

ಆದರೆ 2024ರಲ್ಲಿ ಮಲಯಾಳಂ ಚಿತ್ರರಂಗದ ಕುರಿತು ಹೇಮಾ ಆಯೋಗ ವರದಿ ನೀಡಿದ ಬೆನ್ನಲ್ಲಿ ಮೀಟೂ ಬಿರುಗಾಳಿ ಮತ್ತೆ ಎದ್ದಿತ್ತು. ಕೇವಲ ಮಲಯಾಳಂನಲ್ಲಿ ಅಷ್ಟೇ ಅಲ್ಲ ಭಾರತದ ಬೇರೆ ಬೇರೆ ಭಾಷೆಯಲ್ಲಿ ಕೂಡ ಕಾಮುಕರು ತುಂಬಿ ತುಳುಕುತ್ತಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿ ಬಂದಿತ್ತು.
ಇದಕ್ಕೆ ಪೂರಕವಾಗಿ ಬೇರೆ ಬೇರೆ ಭಾಷೆಯಲ್ಲಿನ ನಟಿಯರು ತಮಗಾದ ಕಹಿ ಅನುಭವ ಹಂಚಿಕೊಂಡಿದ್ದರು. ಈಗಲೂ ಹಂಚಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಈಗ ಪ್ರತಿಮಾ ನಾಯಕ್ ಕೂಡ ಸೇರಿಕೊಂಡಿದ್ಧಾರೆ.
ಹೌದು, ಪ್ರತಿಮಾ ನಾಯಕ್.. ರಂಗಭೂಮಿಯಲ್ಲಿ ಅರಳಿದ ಪ್ರತಿಭೆ. ಕಲೆಯನ್ನೇ ಉಸಿರಾಗಿಸಿಕೊಂಡ ಪ್ರತಿಮಾ "ಶಾಖಾಹಾರಿ".. "ಮತ್ಸ್ಯಗಂಧ".. "ಕಾಂತಾರ".. "ಪೀಟರ್".. ಸೇರಿ ಇಲ್ಲಿಯವರೆಗೆ ಕನ್ನಡದಲ್ಲಿ ಸರಿ ಸುಮಾರು ಅರವತ್ತು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಇಂಥಾ ಪ್ರತಿಮಾ ನಾಯಕ್ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಬಿಕ್ಕಿದ್ದಾರೆ. ಈ ಕುರಿತು ''ಕನ್ನಡ ಪಿಚ್ಚರ್''ಗೆ ನೀಡಿದ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿರುವ ಪ್ರತಿಮಾ ನಾಯಕ್, ಸಾಗರದಲ್ಲಿ ಒಂದು ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕಿದ್ದಾರೆ.
ನಡುರಾತ್ರಿ ನಿರ್ಮಾಪಕ ಬಂದು ಬಾಗಿಲು ರೂಮ್ ಬಡೆದಿದ್ದ ಎಂದು ಹೇಳಿದ್ದಾರೆ.

ಸಾಗರದಲ್ಲಿ ಒಂದು ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು, ಆ ಸಮಯದಲ್ಲಿ ದಿನವಿಡೀ ಶೂಟಿಂಗ್ ಮುಗಿಸಿ ರೂಮ್ಗೆ ಬಂದಾಗ ಈ ಘಟನೆ ನಡೆಯಿತು ಎಂದು ಹೇಳಿರುವ ಪ್ರತಿಮಾ ನಾಯಕ್, ಮಧ್ಯರಾತ್ರಿ 12 ಗಂಟೆಗೆ ಯಾರೋ ಬಂದು ರೂಮ್ ಬಾಗಿಲನ್ನು ಜೋರಾಗಿ ಬಡಿದಿದ್ದರು ಎಂದು ಹೇಳಿದ್ದಾರೆ. ಯಾರೆಂದು ಕಿಟಕಿಯಲ್ಲಿ ನೋಡಿದಾಗ ಅಲ್ಲಿ ಆ ಸಿನಿಮಾದ ನಿರ್ಮಾಪಕ ನಿಂತಿದ್ದರು ಎಂದು ಆ ದಿನವನ್ನು ನೆನಪು ಮಾಡಿಕೊಂಡಿದ್ದಾರೆ.
ನಿರ್ಮಾಪಕರನ್ನು ಕಂಡು ನಾನು ಯಾಕೆ ಸರ್ ಈಗ ಇಷ್ಟೊತ್ತಲ್ಲಿ ಬಂದಿದ್ದೀರಾ.? ಎಂದು ಪ್ರಶ್ನೆಯನ್ನು ಕೇಳಿದೆ ಎಂದು ಹೇಳಿರುವ ಪ್ರತಿಮಾ ನಾಯಕ್,ಆಗ ಆ ನಿರ್ಮಾಪಕ ನಿಮ್ಮ ಪಾತ್ರದ ಬಗ್ಗೆ ಡಿಸ್ಕಸ್ ಮಾಡಬೇಕು, ಬಾಗಿಲು ತೆರೆಯಿರಿ ಎಂದು ಹೇಳಿದ್ದ ಎಂದಿದ್ದಾರೆ.
ಪಾತ್ರದ ಬಗ್ಗೆ ಚರ್ಚೆ ಮಾಡಲು ಇದು ಸಮಯವಲ್ಲ. ಏನಿದ್ದರೂ ಬೆಳಗ್ಗೆ ಡೈರೆಕ್ಟರ್ ಜೊತೆ ಮಾತಾಡಿ, ಎಂದು ನಾನು ಅವರಿಗೆ ಆಗ ಹೇಳಿದ್ದೇ, ಬಾಗಿಲು ತೆಗೆಯಲು ಸಾಧ್ಯವಿಲ್ಲ ಎಂದು ಕೂಡ ನೇರವಾಗಿ ಹೇಳಿದ್ದೇ ಎಂದು ಹೇಳಿರುವ ಪ್ರತಿಮಾ ನಾಯಕ್ ನನ್ನ ಈ ನಡೆಯಿಂದ ನಿರ್ಮಾಪಕರಿಗೆ ಕೋಪ ನೆತ್ತಿಗೇರಿತ್ತು ಎಂದು ಹೇಳಿದ್ದಾರೆ.
ಬಾಗಿಲು ತೆರೆಯದಿದ್ದಕ್ಕೆ ಆ ನಿರ್ಮಾಪಕ ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ ಎಂದು ಹೇಳಿರುವ ಪ್ರತಿಮಾ ನಾಯಕ್, ಮರು ದಿನ ಕಾಡಿನ ನಡುವೆ ಚಿತ್ರದ ಚಿತ್ರೀಕರಣ ಇತ್ತು, ಈ ಸಮಯದಲ್ಲಿ ಪಿರಿಯಡ್ಸ್ ಸಮಸ್ಯೆಯಿಂದ ನನ್ನ ಆರೋಗ್ಯ ಹಾಳಾಗಿತ್ತು ಎಂದು ಹೇಳಿದ್ದಾರೆ.
ಆರೋಗ್ಯ ಹಾಳಾಗಿತ್ತು, ಅತೀವ ನೋವು ಇತ್ತು, ಹೀಗಾಗಿ ನಾನು ನನ್ನ ರೂಮಿಗೆ ಹೋಗಲು ಗಾಡಿಯ ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡೆ ಎಂದು ಹೇಳಿರುವ ಪ್ರತಿಮಾ, ಆ ನಿರ್ಮಾಪಕ ಉದ್ದೇಶಪೂರ್ವಕವಾಗಿಯೇ ಗಾಡಿ ಕಳಿಸದೆ ಸತಾಯಿಸಿದ್ದ ಎಂದು ಹೇಳಿದ್ದಾರೆ.
ಮುಂದುವರೆದು ಗಂಟೆಗಳ ಕಾಲ ಕಾದರೂ ಯಾರೂ ಸಹಾಯಕ್ಕೆ ಬಾರದಿದ್ದಾಗ, ಅನಿವಾರ್ಯವಾಗಿ ಆ ಕಾಡಿನ ದಾರಿಯಲ್ಲೇ ಸುಮಾರು 2-3 ಕಿಲೋಮೀಟರ್ ನಡ್ಕೊಂಡು ಮುಖ್ಯ ರಸ್ತೆಗೆ ಬಂದು ತಲುಪಿದೆ ಎಂದು ಹೇಳಿರುವ ಪ್ರತಿಮಾ ನಾಯಕ್, ಆ ನಂತರ ಆ ನಿರ್ಮಾಪಕ ಕಾರು ತೆಗೆದುಕೊಂಡು ಬಂದ, ಏನಮ್ಮಾ ಸೀನ್ ಕ್ರಿಯೇಟ್ ಮಾಡ್ತಾ ಇದ್ದೀಯಾ? ನೀನು ಬಾಗಿಲು ತೆಗಿತಿಯೋ ಇಲ್ವೋ ನೋಡ್ತೀನಿ ಎಂದು ಬೆದರಿಕೆ ಹಾಕಿದ ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲ ನಿನ್ನನ್ನೂ ಈ ಇಂಡಸ್ಟ್ರಿಯಲ್ಲಿ ಇಲ್ಲದ ಹಾಗೆ ಮಾಡ್ತೀನಿ ಎಂದು ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದ ಎಂದು ಕೂಡ ಹೇಳಿರುವ ಪ್ರತಿಮಾ ನಾಯಕ್, ಆಗ ನಾನು ನನಗೆ ಈ ಇಂಡಸ್ಟ್ರಿಯಿಂದಲೇ ಬದುಕಬೇಕೆಂದು ಏನಿಲ್ಲ, ನನ್ನ ಕೆಲಸವನ್ನು ನಾನು ದೇವರೆಂದು ನಂಬಿದ್ದೇನೆ, ನೀನು ಏನು ಮಾಡ್ತೀಯೋ ಮಾಡಿಕೋ, ನಾನು ನಿನ್ನ ಗಾಡಿಯಲ್ಲಿ ಬರಲ್ಲ, ಎಂದು ನೇರವಾಗಿಯೇ ಹೇಳಿದ್ದೇ ಎಂದು ಆ ದಿನವನ್ನು ಮೆಲುಕು ಹಾಕಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಆ ನಿರ್ಮಾಪಕ ನನ್ನ ವಿರುದ್ಧ ಅಪಪ್ರಚಾರವನ್ನು ಕೂಡ ಮಾಡಿದ ಎಂದು ಹೇಳಿರುವ ಪ್ರತಿಮಾ ನಾಯಕ್, ಪ್ರತಿಮಾ ಕೆಲಸ ಕೆಡಿಸ್ತಾರೆ, ಕಿರಿಕಿರಿ ಮಾಡ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು ಎಂದು ಹೇಳಿದ್ದಾರೆ. ಇದರಿಂದಾಗಿ ಒಂದೆರಡು ವರ್ಷ ಅವಕಾಶಗಳು ಕಡಿಮೆಯಾಗಿದ್ದವು, ಆದರೆ, ಸತ್ಯ ಹೊರ ಬರಲು ಹೆಚ್ಚು ದಿನ ಬೇಕಾಗಲಿಲ್ಲ ಎಂದಿದ್ದಾರೆ.


Click it and Unblock the Notifications