ನಿನ್ನ ಕಿವಿಯಲ್ಲಿ ನಾನು ಸದಾ ಹೇಳುತ್ತಿದ್ದ ಮಾತುಗಳನ್ನು ನೆನಪಿಸಿಕೋ, ಕಣ್ಣೀರಾದ ಸಪ್ತಮಿ ಗೌಡ...!
ಸಾಕಷ್ಟು ಜನ ಮುದ್ದು ಮುದ್ದಾದ ನಾಯಿಗಳನ್ನು ಮನೆಮಕ್ಕಳಂತೆ ಪ್ರೀತಿಕೊಟ್ಟು, ಹಾರೈಕೆ ಮಾಡಿ ಸಾಕಿರುತ್ತಾರೆ. ಸಾಕಿದ ಶ್ವಾನಗಳೊಂದಿಗೆ ಅವಿನಾಭಾವ ಸಂಬಂಧ ಬೆಸೆದುಕೊಂಡಿರುತ್ತಾರೆ. ಹೀಗಾಗಿಯೇ ಮನೆಯ ಒಬ್ಬ ಸದಸ್ಯನಂತೆ ಇರುವ ನಾಯಿ ಸಾವನ್ನಪ್ಪಿದಾಗ ವಿಪರೀತ ದುಃಖ ಪಡುತ್ತಾರೆ. ತಮ್ಮ ಮುದ್ದು ನಾಯಿಯನ್ನೂ ನೆನೆದು ಕಣ್ಣೀರಾಗುತ್ತಾರೆ. ಸಪ್ತಮಿ ಗೌಡ ಇದಕ್ಕೆ ಮತ್ತೊಂದು ಉದಾಹರಣೆ.
ಹೌದು, ಕಾಂತಾರ ಮೂಲಕ ಭಾಷೆಯ ಭೇದ ಭಾವ ಇಲ್ಲದೇ, ಎಲ್ಲ ವರ್ಗದ ಜನರ ಹೃದಯವನ್ನ ಗೆದ್ದ ಸಪ್ತಮಿಗೌಡ ನಾಯಿಯನ್ನು ಸಾಕಿದ್ದರು. ಅದಕ್ಕೆ ಸಿಂಬಾ ಎಂದು ನಾಮಕರಣವನ್ನು ಮಾಡಿದ್ದರು. ಕಳೆದ ಹದಿನೈದು ವರ್ಷಗಳಿಂದ ತುಂಬಾ ಪ್ರೀತಿಯಿಂದ ಸಾಕಿದ್ದರು. ಆದರೆ ಈಗ ಸಿಂಬಾ ಅಸುನೀಗಿದೆ. ಹೀಗಾಗಿಯೇ ದುಃಖ ತಡೆಯಲಾಗದೇ ಸಪ್ತಮಿ ಗೌಡ ತಮ್ಮ ಸಿಂಬಾ ಜೊತೆ ತಾವು ಮಾಡಿದ ಹದಿನೈದು ವರ್ಷಗಳ ಪ್ರಯಾಣವನ್ನು ನೆನಪು ಮಾಡಿಕೊಂಡಿದ್ದಾರೆ ಸಿಂಬಾ ಜೊತೆಗಿನ ಫೋಟೊಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ.

ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿರುವ ಸಪ್ತಮಿ ಗೌಡ ನನಗೆ ಏನು ಹೇಳಬೇಕೆಂದು ತಿಳಿಯುತ್ತಿಲ್ಲ, ಸಿಂಬಾ ಗುಂಡು ಇಲ್ಲದೇ ಒಂದು ದಿನ ನಾವು ಬದುಕಬೇಕಾಗುತ್ತೆ ಎಂದು ಯಾವತ್ತು ಕಲ್ಪನೆಯನ್ನು ಕೂಡ ಮಾಡಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ. ನಾನು ಅವನು ಸಾವು ಇರದ ಜೀವಿಯೆಂದು ಮೊದಲಿಂದ ಅಂದುಕೊಂಡಿದ್ದೇ ನನ್ನ ಪಾಲಿಗೆ ಅವನು ಯಾವಾಗಲೂ ಹಾಗೆಯೇ ಇರುತ್ತಾನೆ ಎಂದು ಬರೆದುಕೊಂಡಿರುವ ಸಪ್ತಮಿ ಗೌಡ ನಮ್ಮ ಮನೆಗೆ ಬಂದಾಗ ನಿನಗೆ ನಡೆಯಲು ಕೂಡ ಆಗುತ್ತಿರಲಿಲ್ಲ ಆದರೆ ಇವತ್ತು ನಮ್ಮೆಲ್ಲರ ಮನಸಿನಲ್ಲಿ ನಿನ್ನ ಹೆಜ್ಜೆ ಗುರುತುಗಳಿವೆ ಎಂದು ಹೇಳಿದ್ದಾರೆ.
ನನ್ನ ಬದುಕಿನ ಬಹುಮುಖ್ಯ ಭಾಗವೇ ಆಗಿದ್ದೇ ನೀನು, ನಿನ್ನ ಜೊತೆಗಿನ ನೆನಪುಗಳನ್ನು ನಾನು ಯಾವತ್ತು ಮರೆಯುವುದಿಲ್ಲ ಎಂದಿರುವ ಸಪ್ತಮಿ ಗೌಡ ನಿನ್ನ ಕಿವಿಯಲ್ಲಿ ನಾನು ಸದಾ ಹೇಳುತ್ತಿದ್ದ ಮಾತುಗಳನ್ನು ನೆನಪಿಸಿಕೋ ಸಿಂಬಾ ಮುಂದೊಂದು ದಿನ ನಿನ್ನನ್ನು ನಾನು ಭೇಟಿಯಾದಾಗ ಬಾಲ ಅಲ್ಲಾಡಿಸು, ಕಿವಿಗಳನ್ನು ನೆಟ್ಟಗೆ ಮಾಡಿಕೊಂಡು ಬಾ, ಕೋಪ ಮಾಡಿಕೊಳ್ಳಬೇಡ ಎಂದು ಹೇಳಿದ್ದಾರೆ. ನಿನಗೆ ಕೈ ತುಂಬಾ ಗೊಂಬೆ, ತಿಂಡಿ ಮತ್ತು ಪ್ರೀತಿ ಸಿಗುವಂತೆ ನಾನು ಮುಂದೆ ನೋಡಿಕೊಳ್ಳುತ್ತೇನೆ ಎಂದು ಭಾವುಕರಾಗಿದ್ದಾರೆ.
ಇನ್ನೂ ಸಪ್ತಮಿ ಗೌಡ ಅವರ ಸಾಕು ನಾಯಿ ಸಿಂಬಾ ಗುಂಡು ನಿಧನಕ್ಕೆ ಅನೇಕರು ಸಂತಾಪವನ್ನೂ ಸೂಚಿಸಿದ್ದು, ಚಿತ್ರರಂಗದ ಸಹೋದ್ಯೋಗಿಯಾದ ಮಿಲನಾ ನಾಗರಾಜ್ ಕೂಡ ಕಾಮೆಂಟ್ ಮಾಡಿದ್ಧಾರೆ. ಇನ್ನುಳಿದಂತೆ ಕಳೆದ ಐದು ವರ್ಷಗಳಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್.. ಕಾಂತಾರ.. ಯುವ..ಹೀಗೆ ಕನ್ನಡದಲ್ಲಿ ಮೂರು ಚಿತ್ರಗಳನ್ನು ಮಾಡಿರುವ ಸಪ್ತಮಿ ಗೌಡ, ಹಿಂದಿಯಲ್ಲಿ ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ಕೂಡ ಅಭಿನಯಿಸಿದ್ಧಾರೆ.
ಇನ್ನು, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಅವರು ನಡೆದು ಹೋದ ಹಾದಿಯಲ್ಲೇ ಹೆಜ್ಜೆಯನ್ನು ಇಟ್ಟಿರುವ ಸಪ್ತಮಿ ಗೌಡ ತೆಲುಗಿನಲ್ಲಿ ಕೂಡ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳಲಿದ್ದಾರೆ. ಜಯಂ ಹೀರೋ ನಿತಿನ್ ಅವರ ಮುಂದಿನ ಚಿತ್ರ ತಮ್ಮುಡು ಚಿತ್ರದಲ್ಲಿ ನಾಯಕಿಯ ಪಾತ್ರ ಬಣ್ಣ ಹಚ್ಚಲಿದ್ಧಾರೆ.
ಈ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಪ್ತಮಿ ಗೌಡ ತೂಕ ಇಳಿಸಿಕೊಂಡಿದ್ದಾರೆ. ಸ್ಲಿಮ್ ಆಗಿದ್ದಾರೆ. ಇನ್ನೂ ರೇಸ್ ಕೋರ್ಸ್ ಮೈದಾನದಲ್ಲಿನ ಜಾಕಿಗಳಿಗೂ ಸೆಡ್ಡು ಹೊಡೆಯುವಂತೆ ಸಪ್ತಮಿ ಗೌಡ ಈ ಚಿತ್ರಕ್ಕೆ ಕುದುರೆ ಸವಾರಿಯನ್ನ ಕಲಿತಿದ್ದಾರೆ.ವಕೀಲ್ ಸಾಬ್ ಅಂತಹ ಚಿತ್ರವನ್ನ ನಿರ್ದೇಶಿಸಿರುವ ವೇಣು ಶ್ರೀರಾಮ್ ಈ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ಟಾಲಿವುಡ್ನ ಖ್ಯಾತ ನಿರ್ಮಾಪಕ ದಿಲ್ ರಾಜು ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











