'ಕಾಂತಾರ' ಹೆಸರಿಗೆ ಮತ್ತೊಂದು ದಾಖಲೆ; ಯಾವ ಕನ್ನಡ ಚಿತ್ರವೂ ಈ ಸಾಧನೆ ಮಾಡಿಲ್ಲ!
ಸೆಪ್ಟೆಂಬರ್ 30ರ ಶುಕ್ರವಾರದಂದು ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡಿದ್ದ ರಿಷಬ್ ಶೆಟ್ಟಿ ನಿರ್ದೇಶನದ ಹಾಗೂ ನಟನೆಯ ಕಾಂತಾರ ಚಿತ್ರ ಸದ್ಯ 3 ವಾರಗಳನ್ನು ಪೂರೈಸಿ ಯಶಸ್ವಿಯಾಗಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಕಾಂತಾರ ಈಗಾಗಲೇ ಎಲ್ಲ ಭಾಷೆಯೂ ಸೇರಿದಂತೆ 150 ಕೋಟಿ ಕ್ಲಬ್ ಸೇರಿದ್ದು ಇನ್ನೂರು ಕೋಟಿಯತ್ತ ದಾಪುಗಾಲಿಟ್ಟಿದೆ.
ಇನ್ನು ಮೊದಲ 3 ವಾರಕ್ಕೆ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿ ಬೊಬ್ಬಿರಿದಿರುವ ಕಾಂತಾರ ಚಿತ್ರಕ್ಕೆ ಮುಂಬರುವ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ರಜಾದಿನಗಳು ಮತ್ತಷ್ಟು ಕಲೆಕ್ಷನ್ ಮಾಡುವುದಕ್ಕೆ ಅನುವು ಮಾಡಿಕೊಡಲಿವೆ. ಇನ್ನು ವಾರಾಂತ್ಯದ ರಜಾ ದಿನಗಳು ಮಾತ್ರವಲ್ಲದೇ ರಜಾ ರಹಿತ ದಿನಗಳಲ್ಲಿಯೂ ಸಹ ಕಾಂತಾರ ಅಬ್ಬರ ಅಷ್ಟಿಷ್ಟಲ್ಲ. ಶಾಲಾ ಕಾಲೇಜು ಮತ್ತು ಕಚೇರಿಗಳು ಇರುವ ದಿನ ಕೂಡ ಕಾಂತಾರ ಚಿತ್ರ ಅನೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಇನ್ನು ಕಲೆಕ್ಷನ್ ವಿಚಾರದಲ್ಲಿ ಮಾತ್ರವಲ್ಲದೇ ರೀಚ್ ವಿಚಾರದಲ್ಲಿಯೂ ಸಹ ಕಾಂತಾರ ಕನ್ನಡದ ಯಾವುದೇ ಚಿತ್ರ ಮಾಡದಿದ್ದಂತಹ ದಾಖಲೆಗಳನ್ನು ಬರೆಯುತ್ತಿದೆ. ಈಗಾಗಲೇ ಕನ್ನಡ ಚಿತ್ರಗಳು ಇದುವರೆಗೂ ಬಿಡುಗಡೆಗೊಳ್ಳದೆ ಇದ್ದಂತಹ ಕೆಲವು ಸ್ಥಳಗಳಲ್ಲಿ ತೆರೆಕಂಡಿರುವ ಕಾಂತಾರ ಇದೀಗ ಅಂತಹದ್ದೇ ಮತ್ತೊಂದು ದಾಖಲೆ.

ವಿಯೆಟ್ನಾಂನಲ್ಲಿ ತೆರೆಗೆ
ವಿಯೆಟ್ನಾಮ್ ದೇಶದಲ್ಲಿ ಸಾಕಷ್ಟು ಕನ್ನಡ ಚಿತ್ರಗಳು ಬಿಡುಗಡೆ ಕಂಡಿವೆ. ಆದರೆ ಅಲ್ಲಿನ ಹೋ ಚಿ ಮಿನ್ ನಗರದಲ್ಲಿ ಇಲ್ಲಿಯವರೆಗೂ ಯಾವುದೇ ಕನ್ನಡ ಚಿತ್ರ ಕೂಡ ತೆರೆ ಕಂಡಿರಲಿಲ್ಲ. ಆದರೆ ಈ ಬಾರಿಯ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ 1ರಂದು ಕಾಂತಾರ ಚಿತ್ರವನ್ನು ಹೋ ಚಿ ಮಿನ್ ನಗರದಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ. ಈ ಮೂಲಕ ಅಲ್ಲಿನ ಕನ್ನಡ ಸಿನಿ ಪ್ರೇಕ್ಷಕರು ಹಾಗೂ ಸಿನಿಪ್ರಿಯರು ಕಾಂತಾರ ಚಿತ್ರವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಮಹಾರಾಷ್ಟ್ರದಲ್ಲೂ ಇಂಥದ್ದೇ ದಾಖಲೆ ಬರೆದಿತ್ತು ಕಾಂತಾರ
ಕೇವಲ ವಿಯೆಟ್ನಾಮ್ ಮಾತ್ರವಲ್ಲದೆ ಈ ಹಿಂದೆಯೇ ಕಾಂತಾರ ಕನ್ನಡ ಅವತರಣಿಕೆ ಇಂತಹದ್ದೇ ದಾಖಲೆಯನ್ನು ಭಾರತದಲ್ಲಿಯೇ ಬರೆದಿತ್ತು. ಮಹಾರಾಷ್ಟ್ರದ ಮರಾಠ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡ ಮೊದಲ ಕನ್ನಡ ಚಿತ್ರ ಎಂಬ ದಾಖಲೆಯನ್ನು ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ತನ್ನ ಹೆಸರಿಗೆ ಬರೆದುಕೊಂಡಿತ್ತು. ಕಾಂತಾರಕ್ಕೂ ಮುನ್ನ ಕನ್ನಡ ಭಾಷೆಯ ಯಾವುದೇ ಚಿತ್ರ ಕೂಡ ಮರಾಠಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿರಲಿಲ್ಲ.

ಕಾಂತಾರ ಬಜೆಟ್ ಎಷ್ಟು?
ಕಾಂತಾರ ಚಿತ್ರದ ಬಜೆಟ್ ಕುರಿತು ಹೊಂಬಾಳೆ ಫಿಲ್ಮ್ಸ್ ಎಲ್ಲಿಯೂ ಬಾಯಿಬಿಟ್ಟಿಲ್ಲ. ಆದರೆ ಈ ಕುರಿತು ಖಾಸಗಿ ವಾಹಿನಿ ಸಂದರ್ಶನದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ ತಂದೆ ಭಾಸ್ಕರ್ ಶೆಟ್ಟಿ 7 ಕೋಟಿ ಖರ್ಚಿನಲ್ಲಿ ಮುಗಿಯಬೇಕಿದ್ದ ಚಿತ್ರಕ್ಕೆ 16 ಕೋಟಿ ಖರ್ಚಾಯಿತು ಎಂದರು. ಇನ್ನು ಬಜೆಟ್ ಇಷ್ಟು ಬೃಹತ್ ವ್ಯತ್ಯಾಸವಾಗಲು ಕಾರಣವನ್ನೂ ಸಹ ಭಾಸ್ಕರ್ ಶೆಟ್ಟಿ ಬಿಚ್ಚಿಟ್ಟಿದ್ದಾರೆ. ಚಿತ್ರದ ಚಿತ್ರೀಕರಣಕ್ಕಾಗಿ ಹಾಕಿದ್ದ ಮಣ್ಣೇ ಕರಗಿ ಹೋಗಿತ್ತು, ನಿರ್ಮಿಸಿದ್ದ ರಸ್ತೆಯೇ ನಾಪತ್ತೆಯಾಗಿ ಕೆಸರಾಗಿತ್ತು, ಅದಕ್ಕೆ ಜಲ್ಲಿ ಹಾಕಬೇಕಿತ್ತು, ಅಷ್ಟೇ ಅಲ್ಲದೇ ಆರು ತಿಂಗಳ ಕಾಲ ಮಳೆ ಸುರಿದು ಚಿತ್ರೀಕರಣಕ್ಕೆ ಅಡ್ಡಿಯಾಗಿತ್ತು, ಚಿತ್ರೀಕರಣಕ್ಕಾಗಿ ಬಳಸಿದ್ದ ಸಾಮಗ್ರಿಗಳು ಕಾಣೆಯಾಗಿದ್ದವು ಈ ಎಲ್ಲಾ ಕಾರಣಗಳಿಂದ ಚಿತ್ರದ ಬಜೆಟ್ ಏರಿಕೆಯಾಗಿತ್ತು ಎಂದು ಭಾಸ್ಕರ್ ಶೆಟ್ಟಿ ತಿಳಿಸಿದರು.


Click it and Unblock the Notifications











