'ಕಾಂತಾರ- ಚಾಪ್ಟರ್- 1' ಬಿಗ್ ಅಪ್ಡೇಟ್ ಬಂದೇಬಿಡ್ತು; ಈ ಸಲ ಆಸ್ಕರ್ವರೆಗೆ..
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣದ ಈ ವರ್ಷದ ಬಹುನಿರೀಕ್ಷಿತ ಸಿನಿಮಾ 'ಕಾಂತಾರ-1. ಮತ್ತೊಮ್ಮೆ ರಿಷಬ್ ಶೆಟ್ಟಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ನಟಿಸಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಇದೀಗ ಚಿತ್ರತಂಡ ಹೊಸ ಹೆಜ್ಜೆ ಇಟ್ಟಿದೆ. ಅಕ್ಟೋಬರ್ 2ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ.
ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ರೇಂಜ್ನಲ್ಲಿ 'ಕಾಂತಾರ- ಚಾಪ್ಟರ್- 1' ಚಿತ್ರ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ 2 ವರ್ಷದ ಹಿಂದೆ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ 'ಕಾಂತಾರ' ಸಿನಿಮಾ ಬಳಿಕ ಪರಭಾಷಿಕರು ಬೇಡಿಕೆ ಮೇರೆಗೆ ಡಬ್ ಆಗಿ ಬಿಡುಗಡೆ ಆಗಿತ್ತು. ವಿಶ್ವದ ಮೂಲೆ ಮೂಲೆಯಲ್ಲಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಿತ್ತು. 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಗೆದ್ದಿತ್ತು. ಇದೀಗ ಪ್ರೀಕ್ವೆಲ್ ಸರದಿ.

ಒಂದಷ್ಟು ವಿಘ್ನಗಳ ಬಳಿಕ ಇದೀಗ 'ಕಾಂತಾರ- ಚಾಪ್ಟರ್- 1' ಸಿನಿಮಾ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದೆ. ಈ ಬಾರಿ ಹಾಲಿವುಡ್ ತಂತ್ರಜ್ಞರು ಕೂಡ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಚಿತ್ರಕ್ಕಾಗಿ ಹಾಲಿವುಡ್ ಸ್ಟಂಟ್ ಮಾಸ್ಟರ್ ಟೊಡರ್ ಲ್ಯಾಜರೋವ್ ಸ್ಟಂಟ್ಸ್ ಕಂಪೋಸ್ ಮಾಡಿದ್ದಾರೆ. ಕಳರಿ ಪಯಟ್ಟು ಕಲಿತು ರಿಷಬ್ ಶೆಟ್ಟಿ ಬಹಳ ಅದ್ಭುತವಾಗಿ ನಟಿಸಿದ್ದಾರೆ. ಮೊದಲ ಭಾಗ ಸಿನಿಮಾ ರಿಷಬ್ ರಾಷ್ಟ್ರಪ್ರಶಸ್ತಿ ಗೆದ್ದಿದ್ದರು. ಈ ಬಾರಿ ಅದಕ್ಕಿಂತಲೂ ದೊಡ್ಡ ವೇದಿಕೆಗಳಲ್ಲಿ ಸಿನಿಮಾ ಸದ್ದು ಮಾಡುವ ಲೆಕ್ಕಾಚಾರ ಶುರುವಾಗಿದೆ.
'ಕಾಂತಾರ' ಸೀಕ್ವೆಲ್ ರಿಲೀಸ್ ಡೇಟ್ ಬದಲಾಗುತ್ತದೆ ಎನ್ನುವ ಗುಸುಗುಸು ಪದೇ ಪದೆ ಕೇಳಿಬಂದಿತ್ತು. ಆದರೆ ಅದಕ್ಕೆ ಚಿತ್ರತಂಡ ಸ್ಪಷ್ಟನೆ ಕೊಟ್ಟಿದೆ. ಅಕ್ಟೋಬರ್ 2ಕ್ಕೆ ಸಿನಿಮಾ ತೆರೆಗೆ ಬರುವುದು ಖಚಿತ ಎಂದಿದೆ. ಇದೀಗ ಸಿನಿಮಾ ಪ್ರಮೋಷನ್ ಬಗ್ಗೆ ಅಪ್ಡೇಟ್ ಬಂದಿದೆ. ಈಗಾಗಲೇ ಚಿತ್ರತಂಡ ಅದಕ್ಕಾಗಿ ಭರ್ಜರಿ ಸಿದ್ಧತೆ ಆರಂಭಿಸಿದೆ. ಹೊಂಬಾಳೆ ಗ್ರೂಪ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಚೆಲುವೆ ಗೌಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
"ಲೈಟ್ಸ್.. ಕ್ಯಾಮರಾ.. ಕೌಂಟ್ಡೌನ್... 'ಕಾಂತಾರ' ಚಾಪ್ಟರ್-1 ಕ್ಯಾಂಪೇನ್ ಶುರು. ಅಕ್ಟೋಬರ್ 2ರಂದು ಚಿತ್ರಮಂದಿರಗಳಲ್ಲಿ ಸಿಗೋಣ" ಎಂದು ಅವರು ಬರೆದುಕೊಂಡಿದ್ದಾರೆ. ತಂಡ ಕೂತು ಸಿನಿಮಾ ಪ್ರಚಾರಕ್ಕೆ ಚರ್ಚೆ ನಡೆಸುತ್ತಿರು ಫೋಟೊ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಇದಕ್ಕೆ ಅಭಿನಂದನೆ ತಿಳಿಸಿದ್ದಾರೆ. 'ಕಾಂತಾರ-1' ಚಿತ್ರವನ್ನು ಆಸ್ಕರ್ ಪ್ರಶಸ್ತಿ ರೇಸ್ಗೆ ಕೊಂಡೊಯ್ಯುವುದಾಗಿ ಈ ಹಿಂದೆ ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳಿದ್ದರು. ಅದಕ್ಕೆ ತಕ್ಕಂತೆ ಸಿನಿಮಾ ಪ್ರಮೋಷನ್ ಪ್ಲ್ಯಾನ್ ಮಾಡಲಾಗುತ್ತಿದೆ.
ಈ ಹಿಂದೆ ನಿರ್ದೇಶಕ ರಾಜಮೌಳಿ ತಮ್ಮ 'ಆರ್ಆರ್ಆರ್' ಚಿತ್ರವನ್ನು ಹಾಲಿವುಡ್ ವೇದಿಕೆಗಳಿಗೆ ಕೊಂಡೊಯ್ದಿದ್ದು ಗೊತ್ತೇಯಿದೆ. ಅದಕ್ಕಾಗಿ ಹಾಲಿವುಡ್ ಮಟ್ಟದಲ್ಲಿ ಭರ್ಜರಿ ಪ್ರಚಾರ ಮಾಡಿದ್ದರು. ಕೊನೆಗೆ ಚಿತ್ರದ 'ನಾಟು ನಾಟು' ಗೀತೆಗೆ ಆಸ್ಕರ್ ಪ್ರಶಸ್ತಿ ಸಿಕ್ಕಿತ್ತು. ಭಾರತೀಯ ಸಿನಿಮಾಗಳಿಗೆ ಇನ್ನು ಅಕಾಡೆಮಿ ಅವಾರ್ಡ್ಸ್ ಎನ್ನುವುದು ಕೈಗೆಟುಕದ ಕುಸುಮವೇ ಆಗಿದೆ. ಅಲ್ಲೊಂದು ಇಲ್ಲೊಂದು ಪ್ರಶಸ್ತಿ ಬಂದಿದೆ. ಈ ಹಾದಿಯಲ್ಲಿ ಮತ್ತಷ್ಟು ಸಾಗಬೇಕಿದೆ.
'ಕಾಂತಾರ-1' ಸಿನಿಮಾ ಬಗ್ಗೆ ಹೆಚ್ಚು ಮಾಹಿತಿಯನ್ನು ರಿಷಬ್ ಶೆಟ್ಟಿ ಬಿಟ್ಟುಕೊಟ್ಟಿಲ್ಲ. ಯಾರೆಲ್ಲಾ ನಟಿಸಿದ್ದಾರೆ ಎನ್ನುವುದು ಕೂಡ ಗುಟ್ಟಾಗಿಯೇ ಇದೆ. ಕಳರಿ ಪಯಟ್ಟು ವಿದ್ಯೆ ಕಲಿತು ರಿಷಬ್ ನಟಿಸಿರುವ ಬಗ್ಗೆ ಮಾತ್ರ ಮಾಹಿತಿ ಸಿಕ್ಕಿದೆ. ಕೇರಳ ಮೂಲದ ಸಹ ಕಲಾವಿದರನ್ನು ಹೆಚ್ಚಾಗಿ ಬಳಸಿಕೊಂಡು ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಇತ್ತೀಚೆಗೆ ರಿಷಬ್ ಶೆಟ್ಟಿ ಪತ್ನಿ ಸಮೇತ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಹಾಗಾಗಿ ಶೀಘ್ರದಲ್ಲೇ ದೊಡ್ಡ ಅಪ್ಡೇಟ್ ಸಿಗುವ ನಿರೀಕ್ಷೆಯಿದೆ.


Click it and Unblock the Notifications











