'ಕಾಂತಾರ' ಕೆಣಕಿದ್ದ ಚೇತನ್ಗೆ ಸಂಕಷ್ಟ; ದಾಖಲಾಯಿತು ಎಫ್ಐಆರ್
ಆ ದಿನಗಳು ಮೂಲಕ ಚಿತ್ರರಂಗ ಪ್ರವೇಶಿಸಿದ್ದ ನಟ ಚೇತನ್ ಕುಮಾರ್ ಸದ್ಯ ಸ್ಯಾಂಡಲ್ವುಡ್ನಲ್ಲಿ ಟ್ರೆಂಡಿಂಗ್ ಪಟ್ಟಿಯಲ್ಲಿರುವ ನಟ. ಹಾಗಂದ ಮಾತ್ರಕ್ಕೆ ಚೇತನ್ ಟ್ರೆಂಡ್ ಆಗುತ್ತಿರುವುದು ಯಾವುದೋ ಹೊಸ ಚಿತ್ರದಿಂದಲ್ಲ ಬದಲಾಗಿ ಕಾಂತಾರ ಕಾಂಟ್ರವರ್ಸಿಯಿಂದ. ಹೌದು, ಕಾಂತಾರ ಚಿತ್ರ ವೀಕ್ಷಿಸಿದ್ದ ಚೇತನ್ ಕಾಂತಾರ ಚಿತ್ರದಲ್ಲಿ ಬರುವ ಭೂತಕೋಲ ಆಚರಣೆಯನ್ನು ತಪ್ಪಾಗಿ ತೋರಿಸಲಾಗಿದೆ ಎಂದಿದ್ದರು.
ಭೂತಕೋಲ ಆಚರಣೆ ಹಿಂದೂ ಸಂಸ್ಕೃತಿಯದ್ದಲ್ಲ ಅದು ಮೂಲ ನಿವಾಸಿಗಳ ಅಚರಣೆ, ಮೂಲ ನಿವಾಸಿಗಳು ಹಿಂದೂ ಧರ್ಮ ಹುಟ್ಟುವುದಕ್ಕೂ ಮುನ್ನ ಇದ್ದರು, ಆಗಿನಿಂದಲೂ ನಡೆದು ಬಂದಿರುವ ಆಚರಣೆ ಹಿಂದೂ ಧರ್ಮಕ್ಕೆ ಹೇಗೆ ಸೇರುತ್ತೆ ಎಂದು ಚೇತನ್ ವಾದಿಸಿದ್ದರು.
ಹೀಗೆ ಕಾಂತಾರ ಚಿತ್ರದಲ್ಲಿ ಭೂತಕಾಲದ ಬಗ್ಗೆ ತಪ್ಪಾಗಿ ತೋರಿಸಿದ್ದಾರೆ ಎಂದು ಕಿಡಿಕಾರಿದ ನಟ ಚೇತನ್ ಅಹಿಂಸಾ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ.

ಭಜರಂಗದಳದಿಂದ ದೂರು ದಾಖಲು
ಹಿರಿಯ ಅಧಿಕಾರಿಯೋರ್ವರು ನೀಡಿರುವ ಮಾಹಿತಿ ಪ್ರಕಾರ ಭಜರಂಗದಳದ ಕಾರ್ಯಕರ್ತರಾದ ಶಿವಕುಮಾರ್ ಎಂಬುವವರು ನಟ ಚೇತನ್ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ಈ ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 505ರ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ. ಇನ್ನು ಈ ಕುರಿತಾಗಿ ನಟ ಚೇತನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಲಾಗುವುದು ಹಾಗೂ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

ಹಲವು ಠಾಣೆಗಳಲ್ಲಿ ದೂರು
ಇನ್ನು ಚೇತನ್ ಭೂತಕೋಲ ಹಿಂದೂ ಧರ್ಮಕ್ಕೆ ಸೇರಿದ್ದಲ್ಲ ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಹಲವಾರು ಠಾಣೆಗಳಲ್ಲಿ ಚೇತನ್ ವಿರುದ್ಧ ದೂರು ದಾಖಲಾಗಿದ್ದವು. ಚೇತನ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಹಲವು ಸಂಘಟನೆಗಳು ಕಿಡಿ ಕಾರಿದ್ದವು. ಒಂದೆಡೆ ಚೇತನ್ ಅಹಿಂಸಾ ವಿರುದ್ಧ ವಿರೋಧ ಕೇಳಿ ಬಂದರೆ ಮತ್ತೊಂದೆಡೆ ಕೆಲ ಸಂಘಟನೆಗಳು ಚೇತನ್ ಪರ ಬ್ಯಾಟ್ ಬೀಸಿದ್ದವು.

ಫೇಸ್ ಬುಕ್ ಮೂಲಕ ಕಾಂತಾರ ವಿರುದ್ಧ ಮಾತನಾಡಿದ್ದ ಚೇತನ್
ಕಾಂತಾರ ಚಿತ್ರದ ಬಹು ಮುಖ್ಯ ಅಂಶವಾದ ಭೂತಕೋಲದ ಕುರಿತು ಬರೆದುಕೊಂಡಿರುವ ಚೇತನ್ ಅಹಿಂಸಾ ರಿಷಬ್ ಶೆಟ್ಟಿ ಅವರು ಚಿತ್ರದಲ್ಲಿ ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರಿದ್ದು ಎಂದು ಹೇಳಿದ್ದಾರೆ, ಆದರೆ ಇದು ನಿಜವಲ್ಲ ಎಂದಿದ್ದರು. ಇನ್ನೂ ಮುಂದುವರಿದು ಬರೆದುಕೊಂಡಿರುವ ಚೇತನ್ ಅಹಿಂಸಾ ಪಂಬದ / ನಲಿಕೆ / ಪರವರ ಬಹುಜನ ಸಂಪ್ರದಾಯಗಳು ವೈದಿಕ ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕೂ ಮೊದಲೇ ಇದ್ದವು, ಹೀಗಾಗಿ ಅವು ಹಿಂದೂ ಧರ್ಮಕ್ಕೆ ಸೇರುವುದಿಲ್ಲ ಅವು ಹಿಂದೂ ಧರ್ಮಕ್ಕೂ ಮುನ್ನ ಇದ್ದ ಮೂಲನಿವಾಸಿಗಳ ಆಚರಣೆ ಎಂಬರ್ಥದಲ್ಲಿ ಚೇತನ್ ಅಹಿಂಸಾ ತಿಳಿಸಿದ್ದರು. ಮೂಲನಿವಾಸಿಗಳ ಆಚರಣೆಯನ್ನು ಪರದೆಯ ಮೇಲಾಗಲಿ ಅಥವಾ ಹೊರಗಡೆಯಾಗಲಿ ಸತ್ಯ ಸಂಗತಿಗಳೊಂದಿಗೆ ತೋರಿಸಿ ಎಂದು ಬರೆದುಕೊಂಡಿದ್ದರು.


Click it and Unblock the Notifications











