ಇದು ರಿಷಬ್ ಶೆಟ್ಟಿ ಮಾಡಿದ ಚಿತ್ರವಲ್ಲ; ವಿದೇಶದಲ್ಲಿ 'ಕಾಂತಾರ' ವೀಕ್ಷಿಸಿದ ಜಗ್ಗೇಶ್ ಹೇಳಿದ್ದಿಷ್ಟು

ರಿಷಬ್ ಶೆಟ್ಟಿ ನಟಿಸಿರುವ ಹಾಗೂ ನಿರ್ದೇಶಿಸಿರುವ ಕಾಂತಾರ ಚಿತ್ರ ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿಯೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಮೊದಲಿಗೆ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿದ್ದ ಕಾಂತಾರ ಚಿತ್ರ ಈಗ ತೆಲುಗು, ತಮಿಳು ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಡಬ್ ಆಗುವುದರ ಮೂಲಕ ಪ್ಯಾನ್ ಇಂಡಿಯಾ ಚಿತ್ರವಾಗಿ ಮಾರ್ಪಟ್ಟಿದೆ.
ಚಿತ್ರವನ್ನು ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಸಿನಿಪ್ರೇಕ್ಷಕರು ಸಹ ವೀಕ್ಷಿಸಿ ಕೊಂಡಾಡುತ್ತಿದ್ದಾರೆ. ಕೇವಲ ಸಿನಿಪ್ರೇಕ್ಷಕರು ಮಾತ್ರವಲ್ಲದೆ ಸ್ಞಾರ್ ನಟರು ಹಾಗೂ ನಟಿಯರು ಚಿತ್ರವನ್ನು ವೀಕ್ಷಿಸಿ ರಿಶಬ್ ಶೆಟ್ಟಿಗೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಈ ಸಾಲಿಗೆ ಇದೀಗ ನವರಸ ನಾಯಕ ಜಗ್ಗೇಶ್ ಕೂಡ ಸೇರಿಕೊಂಡಿದ್ದಾರೆ.
ಚಂದನವನದ ಹಿರಿಯ ಕಲಾವಿದ ಜಗ್ಗೇಶ್ ಸದಾ ಕನ್ನಡ ಚಿತ್ರಗಳ ಬೆಂಬಲಕ್ಕೆ ನಿಲ್ಲುವಂಥ ನಟ. ಅದರಲ್ಲಿಯೂ ಉತ್ತಮ ಕನ್ನಡ ಚಿತ್ರಗಳು ಬಂದಾಗ ಅವುಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಯುವ ಪ್ರತಿಭೆಗಳ ಬೆನ್ನು ತಟ್ಟುವ ಹವ್ಯಾಸವನ್ನು ಹೊಂದಿರುವ ಜಗ್ಗೇಶ್ ಕಾಂತಾರ ಚಿತ್ರವನ್ನು ವಿದೇಶದಲ್ಲಿ ವೀಕ್ಷಿಸಿದ್ದಾರೆ. ಈ ಕುರಿತು ತಡರಾತ್ರಿ ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಜಗ್ಗೇಶ್ ಚಿತ್ರದ ಬಗ್ಗೆ ಈ ಕೆಳಕಂಡಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಿಷಬ್ ಶೆಟ್ಟಿ, ಕಾಂತಾರ ಚಿತ್ರವನ್ನು ಕೊಂಡಾಡಿದ ಜಗ್ಗೇಶ್
ಕನ್ನಡ ಚಿತ್ರರಂಗದ ಒಳಿತು ಬಯಸಿ ಬದುಕುತ್ತಿರುವ ಜೀವ ನನ್ನದು ಎಂದು ಬರೆಯಲು ಆರಂಭಿಸಿದ ಜಗ್ಗೇಶ್ ತಾನು ಬಾಲ್ಯದಿಂದಲೂ ಕನ್ನಡ ಹಾಗೂ ರಾಜಣ್ಣನ ಹುಚ್ಚು ಅಭಿಮಾನಿ ಎಂದಿದ್ದಾರೆ. ಸದ್ಯ ಅಮೆರಿಕ ಪ್ರವಾಸದಲ್ಲಿರುವ ತಾನು ಅಲ್ಲಿಯೇ ಕಾಂತಾರ ಚಿತ್ರವನ್ನು ವೀಕ್ಷಿಸಿರುವುದಾಗಿ ಬರೆದುಕೊಂಡಿದ್ದಾರೆ. ಇನ್ನೂ ಮುಂದುವರೆದು ವರ್ಷಕ್ಕೊಮ್ಮೆ ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತೇನೆ, ಅಂಥ ನಾಡಿನಿಂದ ಹುಟ್ಟಿ ಬಂದ ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಎಂಥ ಅದ್ಭುತ ಕೊಡುಗೆ, ಆತ ಎಂಥ ಅದ್ಭುತ ನಟ ಮತ್ತು ನಿರ್ದೇಶಕ ಎಂದು ಜಗ್ಗೇಶ್ ಕೊಂಡಾಡಿದ್ದಾರೆ.

ಕೊನೆಯ 25 ನಿಮಿಷ ನಾನಿಲ್ಲಿರುವೆ ಎಂಬುದೇ ಮರೆತುಹೋಯಿತು!
ಇನ್ನು ಕಾಂತಾರ ಚಿತ್ರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದು ಚಿತ್ರದ ಕ್ಲೈಮ್ಯಾಕ್ಸ್, ಚಿತ್ರದ ಕೊನೆಯಲ್ಲಿ ರಿಷಬ್ ಶೆಟ್ಟಿಯ ಆ ಅತ್ಯದ್ಬುತ ನಟನೆ. ಈ ಭಾಗ ಜಗ್ಗೇಶ್ ಅವರಿಗೂ ಕೂಡ ಸಖತ್ ಇಷ್ಟವಾಗಿದೆ. ಕ್ಲೈಮ್ಯಾಕ್ಸ್ ಕುರಿತು ವಿಶೇಷವಾಗಿ ಬರೆದುಕೊಂಡಿರುವ ಜಗ್ಗೇಶ್ ಕೊನೆಯ 25 ನಿಮಿಷಗಳ ಕಾಲ ನಾನಿಲ್ಲಿರುವೆ ಎಂಬುದೇ ಮರೆತುಹೋಯಿತು, ಮೌನ ನನ್ನನ್ನು ಆವರಿಸಿತು ಎಂದಿದ್ದಾರೆ.

ಇದು ರಿಷಬ್ ಮಾಡಿದ್ದಲ್ಲ
ನನಗನಿಸಿದ್ದು ಈ ಅತ್ಯದ್ಬುತ ಚಿತ್ರ ಮಾಡಿರುವುದು ರಿಷಬ್ ಶೆಟ್ಟಿ ಅಲ್ಲ, ಆತನ ವಂಶೀಕರ ತಂದೆ ತಾಯಿ ಆಶೀರ್ವಾದ ಹಾಗೂ ನಶಿಸುತ್ತಿರುವ ಆಧ್ಮಾತ್ಮಿಕ ಭಾವನೆಯನ್ನು ಮನುಷ್ಯರಿಗೆ ನೆನಪಿಸಲು ದೇವರೇ ಬಂದು ಆತನ ಕೈಯಲ್ಲಿ ಇಂತಹ ಅದ್ಭುತ ಸಿನಿಮಾ ಮಾಡಿಸಿದ್ದಾರೆ, ದೇವರು ಆತನಿಗೆ ನೂರು ಕಾಲ ಆಯುಷ್ಯ, ಆರೋಗ್ಯ ಕೊಡಲಿ ಕನ್ನಡ ಚಿತ್ರರಂಗಕ್ಕೆ ಆತನ ಕಲಾಸೇವೆ ಹೀಗೇ ಮುಂದುವರಿಯಲಿ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.


Click it and Unblock the Notifications











