'ವರಾಹ ರೂಪಂ' ಮೇಲೆ ಮತ್ತೊಂದು ಕೇಸ್; ಚಿತ್ರಮಂದಿರದಲ್ಲಿ ಪ್ರಸಾರವಾಗಲ್ವಾ ಹಾಡು?

ಸದ್ಯ ವಿಶ್ವದಾದ್ಯಂತ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕಾಂತಾರ ಚಿತ್ರದ ನಾಗಾಲೋಟವನ್ನು ನಿಲ್ಲಿಸುವವರು ಯಾರು ಸಹ ಇಲ್ಲ. ಕಡಿಮೆ ವೆಚ್ಚದಲ್ಲಿ ತಯಾರಾಗಿ ಮೊದಲಿಗೆ ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡಿದ್ದ ಕಾಂತಾರ ಚಿತ್ರ ಸದ್ಯ ವಿವಿಧ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಚಿತ್ರವಾಗಿ ಕೋಟಿ ಕೋಟಿ ಬಾಚಿ ಅಬ್ಬರಿಸುತ್ತಿದೆ.
ಸದ್ಯ ಎಲ್ಲಾ ಭಾಷೆಗಳೂ ಸೇರಿದಂತೆ ವಿಶ್ವದಾದ್ಯಂತ ಸುಮಾರು ಮುನ್ನೂರು ಕೋಟಿ ಕಲೆಕ್ಷನ್ ಮಾಡಿರುವ ಕಾಂತಾರ ಚಿತ್ರ ಈ ವರ್ಷ ಬಿಡುಗಡೆಗೊಂಡು ಅತ್ಯಧಿಕ ಲಾಭ ಗಳಿಸಿದ ಸಿನಿಮಾ ಎಂಬ ಹೆಸರನ್ನು ಸಂಪಾದಿಸಿದೆ. ಹೀಗಿರುವಾಗಲೇ ಚಿತ್ರದ ವಿರುದ್ಧ ಕೆಲ ವಿವಾದಗಳು ಸಹ ಉಂಟಾಗಿವೆ. ಮೊದಲಿಗೆ ಚಿತ್ರದ ವಿರುದ್ಧ ನಟ ಚೇತನ್ ಕುಮಾರ್ ಹೇಳಿಕೆಗಳನ್ನು ನೀಡುವುದರ ಮೂಲಕ ವಿವಾದ ಎಬ್ಬಿಸಿದ್ದರು.
ಇನ್ನು ಇದಕ್ಕೂ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಕಾಂತಾರ ಚಿತ್ರದ ಹಾಡುಗಳನ್ನು ಅನ್ಯ ಭಾಷೆಯ ಹಾಡುಗಳಿಂದ ಕದಿಯಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೂ ಆ ಹಾಡಿನ ಮಾಲೀಕರಿಂದ ಯಾವುದೇ ರೀತಿಯ ದೂರುಗಳು ಕೇಳಿ ಬಂದಿರಲಿಲ್ಲ. ಆದರೆ ಕಳೆದ ವಾರವಷ್ಟೇ ಕೇರಳದ ತೈಕ್ಕುಡಂ ಬ್ರಿಡ್ಜ್ ಎಂಬ ಬ್ಯಾಂಡ್ ವರಹ ರೂಪಂ ಹಾಡಿಗೂ ಹಾಗೂ ತಮ್ಮ 'ನವರಸಮ್' ಹಾಡಿಗೂ ಅಪಾರವಾದ ಸಾಮ್ಯತೆಗಳಿವೆ ಎಂದು ಕಾಂತಾರ ವಿರುದ್ಧ ದೂರನ್ನು ಸಲ್ಲಿಸಿತ್ತು. ಈ ಸಂಬಂಧ ಕೋಯಿಕೋಡ್ ಸ್ಥಳೀಯ ನ್ಯಾಯಾಲಯ ವರಾಹ ರೂಪಂ ಹಾಡಿಗೆ ತಡೆಯಾಜ್ಞೆ ನೀಡಿತ್ತು. ಇದಾದ ಬೆನ್ನಲ್ಲೇ ಇದೀಗ ಮತ್ತೊಂದು ಆಡಿಯೋ ಕಂಪೆನಿ ವರಾಹ ರೂಪಂ ಹಾಡಿನ ವಿರುದ್ಧ ಕಾಪಿರೈಟ್ ದೂರು ದಾಖಲಿಸಿದ್ದು, ಕೋಯಿಕೋಡ್ ಬಳಿಕ ಕೇರಳದ ಮತ್ತೊಂದು ಸ್ಥಳೀಯ ನ್ಯಾಯಾಲಯ ಹಾಡಿಗೆ ತಡೆಯಾಜ್ಞೆ ನೀಡಿದೆ ಹಾಗೂ ಕಾಂತಾರ ತಂಡಕ್ಕೆ ಸಂಕಷ್ಟ ಎದುರಾಗಿದೆ.

ಮಾತೃಭೂಮಿ ಮ್ಯೂಸಿಕ್ ಕಂಪೆನಿಯಿಂದ ಕೇಸ್
ಇನ್ನು ಕೋಯಿಕೋಡ್ ನ್ಯಾಯಾಲಯಕ್ಕೆ ನವರಸನ್ ಹಾಡಿನ ಸಂಯೋಜಕ ಸಂಸ್ಥೆ ತೈಕ್ಕುಡಂ ಬ್ರಿಡ್ಜ್ ದೂರನ್ನು ದಾಖಲಿಸಿತ್ತು. ಆದರೆ ಇದೀಗ ಪಾಲಕ್ಕಾಡ್ ಸ್ಥಳೀಯ ನ್ಯಾಯಾಲಯಕ್ಕೆ ಮಾತೃಭೂಮಿ ಕಪ್ಪ ಟಿವಿ ಮತ್ತೊಂದು ಕಾಪಿರೈಟ್ ದೂರನ್ನು ನೀಡಿದೆ. ಈ ದೂರಿನ ಮೇರೆಗೆ ವಿಚಾರಣೆ ನಡೆಸಿದ ಪಾಲಕ್ಕಾಡ್ ಸ್ಥಳೀಯ ನ್ಯಾಯಾಲಯ ಚಿತ್ರಮಂದಿರದಲ್ಲಿ ಆಗಲಿ ಅಥವಾ ಯಾವುದೇ ಅಪ್ಲಿಕೇಶನ್ನಲ್ಲಾಗಲಿ ವರಾಹ ರೂಪಂ ಹಾಡನ್ನು ಪ್ರಸಾರ ಮಾಡುವಂತಿಲ್ಲ ಎಂದು ತಡೆಯಾಜ್ಞೆ ನೀಡಿದೆ. ಈ ಸಂಬಂಧ ಹಾಡು ಸಂಯೋಜಿಸಿದ ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್, ಕಾಂತಾರ ಚಿತ್ರದ ಕೇರಳ ಚಿತ್ರ ವಿತರಕರಾದ ಪೃಥ್ವಿರಾಜ್ ಸುಕುಮಾರನ್ ಹಾಗೂ ಹಾಡುಗಳನ್ನು ಪ್ರಸಾರ ಮಾಡುತ್ತಿರುವ ವಿವಿಧ ಅಪ್ಲಿಕೇಶನ್ಗಳಿಗೆ ಕೋರ್ಟ್ ಆದೇಶವನ್ನು ಹೊರಡಿಸಲಿದೆ.

ಚಿತ್ರಮಂದಿರದಲ್ಲಿ ಹಾಡು ಪ್ರಸಾರ ನಿಲ್ಲಿಸುತ್ತಾ ಹೊಂಬಾಳೆ ಫಿಲ್ಮ್ಸ್?
ಮೊದಲಿಗೆ ಕೋಯಿಕೋಡ್ ಕೋರ್ಟ್ ವರಾಹ ರೂಪಂ ಹಾಡು ಪ್ರಸಾರ ನಿಲ್ಲಿಸುವಂತೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಆದೇಶ ಹೊರಡಿಸಿದರೂ ಸಹ ಚಿತ್ರಮಂದಿರದಲ್ಲಿ ಹಾಡು ಪ್ರಸಾರ ಮಾತ್ರ ನಿಂತಿರಲಿಲ್ಲ. ಅಷ್ಟೇ ಅಲ್ಲದೆ ಇನ್ನಿತರ ಮ್ಯೂಸಿಕ್ ಅಪ್ಲಿಕೇಶನ್ಗಳಲ್ಲೂ ಹಾಡು ಲಭ್ಯವಿತ್ತು. ಆದರೆ ಇದೀಗ ಮಾತೃಭೂಮಿ ಕಪ್ಪ ಟಿವಿ ಕೂಡ ದೂರನ್ನು ಸಲ್ಲಿಸಿದ್ದು, ಪಾಲಕ್ಕಾಡ್ ಕೋರ್ಟಿನ ಆದೇಶಕ್ಕೆ ಹೊಂಬಾಳೆ ಫಿಲ್ಮ್ಸ್ ಮಣಿಯುತ್ತಾ ಅಥವಾ ಹಾಡು ಪ್ರಸಾರವನ್ನು ಮುಂದುವರೆಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ದೂರು ದಾಖಲಿಸಿದವರ ಬೇಡಿಕೆ ಏನು?
ತೈಕ್ಕುಡಂ ಬ್ರಿಡ್ಜ್ ಆಡಿಯೋ ಸಂಸ್ಥೆಯ ಪ್ರಮುಖ ಸದಸ್ಯ ವಿಯಾನ್ ಫೆರ್ನಾಂಡಿಸ್ ಮಾತನಾಡಿ ತಾವು ಕಾಂತಾರ ಚಿತ್ರದ ವರಾಹ ರೂಪಂ ಹಾಡಿನ ವಿರುದ್ಧ ಮೊದಲಿಗೆ ಕೇಸ್ ಹಾಕಬೇಕು ಎಂಬ ಉದ್ದೇಶ ಹೊಂದಿರಲಿಲ್ಲ ಆದರೆ ಈ ಕುರಿತಾಗಿ ಸಾಕಷ್ಟು ಮೆಸೇಜ್ ಹಾಗೂ ಕರೆ ಬಂದ ಕಾರಣದಿಂದಾಗಿ ತಾವು ಹಾಡನ್ನು ಸಾಕಷ್ಟು ಬಾರಿ ಆಲಿಸಿ ಸಾಮ್ಯತೆ ಇದ್ದ ಕಾರಣದಿಂದಾಗಿ ಕೇಸ್ ಹಾಕಲಾಯಿತು ಎಂದಿದ್ದರು. ಅಷ್ಟೇ ಅಲ್ಲದೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಿಂದ ಹಣ ಕೀಳುವ ಉದ್ದೇಶದಿಂದ ನಾವು ಈ ಕೇಸ್ ದಾಖಲಿಸಿಲ್ಲ ಬದಲಾಗಿ ನಮಗೆ ಕೊಡಬೇಕಾದ ಕ್ರೆಡಿಟ್ಸ್ ನೀಡಿದರೆ ಸಾಕು ಅವರು ಹಾಡನ್ನು ಬಳಸಿಕೊಳ್ಳಬಹುದು ಎಂದು ವಿಯಾನ್ ಫೆರ್ನಾಂಡಿಸ್ ತಿಳಿಸಿದ್ದರು.


Click it and Unblock the Notifications











