ವರಾಹಂ ರೂಪಂ ಹಾಡಿನ ಮೇಲೆ ಕೇಸ್ ಹಾಕಿದ್ದು ಹಣಕ್ಕಾಗಿನಾ? ನಮ್ಮ ಬೇಡಿಕೆ ಇಷ್ಟೇ ಎಂದ ತೈಕ್ಕುಡಂ ಬ್ರಿಡ್ಜ್
ಕಾಂತಾರ ಚಿತ್ರ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನಕ್ಕೆ ಮನಸೋತ ಸಿನಿ ಪ್ರೇಕ್ಷಕರು ಮುಗಿಬಿದ್ದು ಚಿತ್ರ ವೀಕ್ಷಿಸುತ್ತಿದ್ದಾರೆ. ಮೊದಲಿಗೆ ಕನ್ನಡದಲ್ಲಿ ಹಿಟ್ ಆದ ಕಾಂತಾರ ಚಿತ್ರಕ್ಕೆ ಬೃಹತ್ ಡಬಿಂಗ್ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಡಬ್ ಮಾಡಲಾಯಿತು ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೂ ಸಹ ಕಾಂತಾರ ಗೆದ್ದು ಬೀಗಿದೆ.
ಯಾರೂ ಊಹಿಸಿರದ ರೀತಿ ಕಾಂತಾರ ಚಿತ್ರ ಗೆಲುವು ಸಾಧಿಸಿದ್ದು ಸದ್ಯ ಮುನ್ನೂರು ಕೋಟಿ ಗಳಿಕೆ ಮಾಡುವ ಸನಿಹದಲ್ಲಿದೆ. ಹೀಗೆ ಚಿತ್ರ ಎಲ್ಲಾ ಭಾಷೆಗಳಲ್ಲೂ ಹಿಟ್ ಆದ ಮೇಲೆ ಕೆಲವೊಂದಷ್ಟು ವಿವಾದಗಳಿಗೂ ಒಳಗಾಯಿತು. ಇತ್ತ ಕನ್ನಡದಲ್ಲಿ ನಟ ಚೇತನ್ ಅಹಿಂಸಾ ಕಾಂತಾರ ಚಿತ್ರದಲ್ಲಿ ತೋರಿಸಲಾಗಿರುವ ಭೂತ ಕೋಲ ಆಚರಣೆ ಹಿಂದೂ ಧರ್ಮದ್ದಲ್ಲವೇ ಅಲ್ಲ ಎಂದು ಹೇಳಿ ವಿವಾದ ಎಬ್ಬಿಸಿದರೆ ಅತ್ತ ಕೇರಳದ ತೈಕ್ಕುಡಂ ಬ್ರಿಡ್ಜ್ ಎಂಬ ಮ್ಯೂಸಿಕ್ ಬ್ಯಾಂಡ್ ಸಂಸ್ಥೆ ಕಾಂತಾರ ಚಿತ್ರದ ಹಿಟ್ ಹಾಡು ವರಾಹ ರೂಪಂ ನಮ್ಮ ನವರಸಮ್ ಹಾಡಿನಾ ಕಾಪಿ ಎಂದು ಕೇಸ್ ಹಾಕಿತು.
ಹೌದು, ತೈಕುಡಂ ಬ್ರಿಡ್ಜ್ ಕೇಸ್ ಹಾಕುವ ಮುನ್ನವೇ ವರಾಹ ರೂಪಂ ಹಾಡು ಕದ್ದ ಮಾಲು ಎಂಬ ಟ್ರೋಲ್ ಶುರುವಾಗಿತ್ತು. ಆರಂಭದಲ್ಲಿ ಸುಮ್ಮನಿದ್ದ ತೈಕ್ಕುಡಂ ಬ್ರಿಡ್ಜ್ ಕಾಂತಾರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಟ್ ಆದ ಬಳಿಕ ಕಾಪಿ ರೈಟ್ ಕೇಸ್ ದಾಖಲಿಸಿತು. ಅದರ ಮೇಲೆಗೆ ಕೇರಳ ಕೋರ್ಟ್ ಕಾಂತಾರ ಚಿತ್ರದಲ್ಲಿ ಹಾಡನ್ನು ಬಳುವಂತಿಲ್ಲ ಎಂದು ತಡೆ ನೀಡಿ ತೀರ್ಪು ಘೋಷಿಸಿತು. ಆದರೆ ಕಾಂತಾರ ಚಿತ್ರದಿಂದ ಈ ಹಾಡನ್ನು ಕೈಬಿಡಲಿಲ್ಲ, ಎಂದಿನಂತೆ ಚಿತ್ರಮಂದಿರದಲ್ಲಿ ಹಾಗೂ ಅಂತರ್ಜಾಲದಲ್ಲಿ ವರಾಹ ರೂಪಂ ಹಾಡು ಸದ್ದು ಮಾಡುತ್ತಲೇ ಇದೆ. ಇನ್ನು ಕೇಸ್ ಹಾಕಿದ್ದರ ಹಿಂದಿನ ಉದ್ದೇಶವೇನು ಎಂಬುದನ್ನು ತೈಕ್ಕುಡಂ ಬ್ರಿಡ್ಜ್ ಬಿಚ್ಚಿಟ್ಟಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್ನ ಸದಸ್ಯನಾದ ವಿಯಾನ್ ಫರ್ನಾಂಡಿಸ್ ಹಾಡು ಕದ್ದ ಕೇಸ್ ಕುರಿತು ಮಾತನಾಡಿದ್ದಾರೆ.

ಹಣ ಪಡೆಯುವ ಉದ್ದೇಶದಿಂದ ನಾವು ಕೇಸ್ ಹಾಕಲಿಲ್ಲ
ವರಾಹ ರೂಪಂ ಹಾಡಿನ ಕೇಸ್ ಕುರಿತು ಮಾತನಾಡಿರುವ ತೈಕ್ಕುಡಂ ಬ್ರಿಡ್ಜ್ನ ವಿಯಾನ್ ಹಣ ಪಡೆಯುವ ಉದ್ದೇಶದಿಂದ ನಾವು ಕೇಸ್ ಹಾಕಲಿಲ್ಲ, ಈಗಲೂ ಸಹ ಚಿತ್ರತಂಡ ನಮಗೆ ಕ್ರೆಡಿಟ್ ನೀಡಿ ಹಾಡನ್ನು ಉಪಯೋಗಿಸಿದರೆ ನಮ್ಮ ಯಾವುದೇ ಅಭ್ಯಂತರವೂ ಇಲ್ಲ, ಈಗ ಹೊಂಬಾಳೆ ಫಿಲ್ಮ್ಸ್ ಯಾವ ನಡೆ ಇಡುತ್ತೆ ಎಂಬುದು ಮುಖ್ಯ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ತಮ್ಮ ಸಂಸ್ಥೆ ಹಣಕ್ಕಾಗಿ ಕೇಸ್ ದಾಖಲಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಹಣ ಬಲವಿದ್ದ ಮಾತ್ರಕ್ಕೆ ಇದರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ
ಇನ್ನೂ ಮುಂದುವರಿದು ಮಾತನಾಡಿರುವ ವಿಯಾನ್ 'ಸ್ವತಂತ್ರ ಬ್ಯಾಂಡ್ ದೊಡ್ಡ ನಿರ್ಮಾಣ ಸಂಸ್ಥೆಯೊಂದಿಗೆ ಹೋರಾಡುತ್ತಿರುವುದು ಇದೇ ಮೊದಲು. ತಮಗಿರುವ ರೀಚ್, ಅಧಿಕಾರ ಮತ್ತು ಹಣದಿಂದ ಪಾರಾಗಬಹುದು ಎಂದು ಅವರು ಭಾವಿಸಬಹುದು, ಆದರೆ ಅದು ಸಾಧ್ಯವಿಲ್ಲ. ನಮಗೆ, ಇದು ಇಡೀ ಸಂಗೀತದ ಜಗತ್ತಿಗೆ ನಾವು ನೀಡುವ ಉದಾಹರಣೆ. ಈ ದೂರಿನ ಅಂತಿಮ ಕೇಸ್ನಲ್ಲಿ ಅಂತಿಮವಾಗಿ ಯಾವ ತೀರ್ಪು ಬರುತ್ತದೆಯೋ ಬರಲಿ, ಸುಮ್ಮನೆ ಕುಳಿತುಕೊಳ್ಳದೇ ಹೋರಾಟ ಮಾಡಿದ ತೃಪ್ತಿಯಂತೂ ನಮಗೆ ಇದ್ದೇ ಇರುತ್ತದೆ' ಎಂದು ತಿಳಿಸಿದರು.

ಮೊದಲಿಗೆ ಕೇಸ್ ಹಾಕಿರಲಿಲ್ಲ
ಇನ್ನು ವರಾಹ ರೂಪಂ ಮೊದಲೇ ಏಕೆ ಕೇಸ್ ಹಾಕಲಿಲ್ಲ ಎಂಬುದರ ಬಗ್ಗೆ ಕೂಡ ವಿಯಾನ್ ತಿಳಿಸಿದ್ದಾರೆ. 'ಹಾಡುಗಳಲ್ಲಿ ಸಾಮ್ಯತೆ ಇರುವುದು ಸಾಮಾನ್ಯ ಅಂತ ಸುಮ್ಮನಿದ್ವಿ, ಆದರೆ ಸಾಕಷ್ಟು ಕಾಲ್ ಹಾಗೂ ಮೆಸೇಜ್ ಬರಲು ಶುರುವಾದವು. ಅಲ್ಲದೇ ವರಾಹಂ ರೂಪಂ ಹಾಡಿನ ಸಾವಿರಾರು ಕಾಮೆಂಟ್ಗಳನ್ನು ಡಿಲಿಟ್ ಮಾಡಲಾಯಿತು. ಆದರೂ ಸಹ ನಾವು ಸಾಕಷ್ಟು ಬಾರಿ ಹಾಡನ್ನು ಕೇಳಿ ಸಾಮ್ಯತೆಯನ್ನು ಖಚಿತಪಡಿಸಿಕೊಂಡೆವು' ಎಂದು ವಿಯಾನ್ ತಿಳಿಸಿದ್ದಾರೆ.

ನಮ್ಮನ್ನು ಉಲ್ಲೇಖಿಸಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ
'ಕಾಂತಾರ ಚಿತ್ರತಂಡಕ್ಕೆ ಈ ಕುರಿತು ಹಲವಾರು ಬಾರಿ ಎಚ್ಚರಿಕೆಯನ್ನು ನೀಡಿದ್ದೆವು, ಯುಟ್ಯೂಬ್ನಿಂದ ಒಂದು ವಿಡಿಯೋವನ್ನು ತೆಗೆಯಲಾಗಿದೆ. ಆದರೆ ಸಂಗೀತ ನಿರ್ದೇಶಕ ಅಜನೀಶ್ ಲೋಕ್ನಾಥ್ ಯುಟ್ಯೂಬ್ ಚಾನೆಲ್ನಲ್ಲಿರುವ ವಿಡಿಯೊ ಹಾಗೆಯೇ ಇದೆ. ಆದರೆ ಈ ವಿಡಿಯೊ ಕಾಮೆಂಟ್ ಡಿಸೇಬಲ್ ಮಾಡಲಾಗಿದೆ. ಇಷ್ಟೆಲ್ಲಾ ಮಾಡುವ ಬದಲು ಹಾಡಿಗೂ ಮುನ್ನ ಸ್ಪೂರ್ತಿ ಪಡೆದಿದ್ದೇವೆ ಎಂದು ನಮ್ಮ ಬ್ಯಾಂಡ್ ಅನ್ನು ಒಮ್ಮೆ ಉಲ್ಲೇಖಿಸಿದ್ದರೂ ನಾವು ಸುಮ್ಮನೆ ಇರುತ್ತಿದ್ದೆವು' ಎನ್ನುತ್ತಾರೆ ವಿಯಾನ್ ಫೆರ್ನಾಂಡಿಸ್


Click it and Unblock the Notifications











