Exclusive: 'ಕಾಂತಾರ' ಎಫೆಕ್ಟ್.. ಶೀಘ್ರದಲ್ಲೇ ರಿಷಬ್ ಶೆಟ್ಟಿ ನಟನೆಯ 'ಅಟ್ಯಾಕ್' ಸಿನಿಮಾ ರಿಲೀಸ್: ಅಣಜಿ ನಾಗರಾಜ್
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಸದ್ದು ಮಾಡ್ತಿದೆ. ಇಡೀ ಭಾರತೀಯ ಚಿತ್ರರಂಗವೇ ಕರಾವಳಿ ಮಣ್ಣಿನ ಕಥೆಯ ಸಿನಿಮಾ ಬಗ್ಗೆ ಮಾತನಾಡುತ್ತಿದೆ. ರಿಷಬ್ ಮುಂದಿನ ಸಿನಿಮಾ ಯಾವುದು ಎಂದು ಪರಭಾಷಿಕರು ಕೇಳ್ತಿದ್ದಾರೆ. ಇಂತಹ ಹೊತ್ತಲ್ಲೇ ರಿಷಬ್ ಶೆಟ್ಟಿ ನಟನೆಯ 'ಅಟ್ಯಾಕ್' ಚಿತ್ರಕ್ಕೆ ಜೀವ ಬಂದಿದೆ.
ರಿಷಬ್ ಶೆಟ್ಟಿ ರಾತ್ರೋರಾತ್ರಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಪರಭಾಷಾ ಫಿಲ್ಮ್ ಮೇಕರ್ಸ್ ಕೂಡ 'ಬೆಲ್ಬಾಟಂ' ಹೀರೊ ಜೊತೆ ಸಿನಿಮಾ ಮಾಡಲು ಮುಗಿಬಿದ್ದಿದ್ದಾರೆ. ಸಹಜವಾಗಿಯೇ ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಯಾವುದು ಎನ್ನುವ ಚರ್ಚೆ ಶುರುವಾಗಿದೆ. ಸದ್ಯ ಮೂರ್ನಾಲ್ಕು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಆದರೆ ಎಲ್ಲಕ್ಕಿಂತ ಮೊದಲು 'ಅಟ್ಯಾಕ್' ಸಿನಿಮಾ ರಿಲೀಸ್ ಆಗುವ ಸುಳಿವು ಸಿಗುತ್ತಿದೆ. ಇದು ರಿಷಬ್ ಶೆಟ್ಟಿ 9 ವರ್ಷಗಳ ಹಿಂದೆ ನಟಿಸಿದ್ದ ಸಿನಿಮಾ. 'ಕಾಂತಾರ' ಸಕ್ಸಸ್ ಬೆನ್ನಲ್ಲೇ ಎಲ್ಲರೂ ಮರತೇಬಿಟ್ಟಿದ್ದ ಸಿನಿಮಾವನ್ನು ರಿಲೀಸ್ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.
ಎಲ್ಲಲ್ಲೂ ರಿಷಬ್ ಶೆಟ್ಟಿ ಕ್ರೇಜ್ ಜೋರಾಗಿದೆ. ಪರಭಾಷಿಕರು ಕೂಡ ರಿಷಬ್ ಯಾರು? ಹಿನ್ನೆಲೆ ಏನು? ಎಂದು ಗೂಗಲ್ ಮಾಡಿ ಹುಡುಕುತ್ತಿದ್ದಾರೆ. ಅವರ ಹಿಂದಿನ ಸಿನಿಮಾಗಳನ್ನು ಓಟಿಟಿಯಲ್ಲಿ ನೋಡ್ತಿದ್ದಾರೆ. ಇಂತಹ ಹೊತ್ತಲೇ ನಿರ್ಮಾಪಕ ಅಣಜಿ ನಾಗರಾಜ್ ರಿಷಬ್ ಆರಂಭದ ದಿನಗಳಲ್ಲಿ ನಟಿಸಿದ್ದ 'ಅಟ್ಯಾಕ್' ಸಿನಿಮಾ ರಿಲೀಸ್ ಮಾಡಲು ಹೊರಟಿದ್ದಾರೆ. ಈ ಬಗ್ಗೆ ನಿರ್ಮಾಪಕ ಅಣಜಿ ನಾಗರಾಜ್ ಫಿಲ್ಮಿಬೀಟ್ಗೆ ಮಾಹಿತಿ ನೀಡಿದ್ದಾರೆ.

ರಿಷಬ್ ಶೆಟ್ಟಿ ನಟನೆಯ 'ಅಟ್ಯಾಕ್'
ಅಣಜಿ ನಾಗರಾಜ್ ನಿರ್ಮಾಣದ 'ಅಟ್ಯಾಕ್' ಸಿನಿಮಾ ಕಾರಣಾಂತರಗಳಿಂದ ಡಬ್ಬಾ ಸೇರಿತು. 'ಕಾಂತಾರ' ಸಕ್ಸಸ್ ಬೆನ್ನಲ್ಲೇ ಈ ಚಿತ್ರವನ್ನು ರಿಲೀಸ್ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಮರೆತೇ ಹೋಗಿದ್ದ ಚಿತ್ರವನ್ನು ಎಡಿಟ್ ಮಾಡಿ ಫೈನಲ್ ಕಾಪಿ ಸಿದ್ಧ ಪಡಿಸುತ್ತಿದ್ದಾರೆ. ಅರವಿಂದ್ ಕೌಶಿಕ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಬಹಳ ವಿಭಿನ್ನ ಕಥೆಯನ್ನು ಅಷ್ಟೇ ವಿಭಿನ್ನವಾಗಿ ಕಟ್ಟಿಕೊಡಲಾಗಿತ್ತು.

'ಅಟ್ಯಾಕ್' ಸಿನಿಮಾದಲ್ಲಿ ವಿಭಿನ್ನ ಕಾನ್ಸೆಪ್ಟ್
ರಿಷಬ್ ಶೆಟ್ಟಿ ಹೀರೊ ಆಗಬೇಕು ಎನ್ನುವ ಕನಸಿನೊಂದಿಗೆ ಚಿತ್ರರಂಗಕ್ಕೆ ಬಂದವರು. ಹೆಸರುಘಟ್ಟದ ಸಿನಿಮಾ ಇನ್ಸಿಟ್ಯೂಟ್ನಲ್ಲಿ ಸಿನಿಮಾ ನಿರ್ಮಾಣದ ಪಟ್ಟುಗಳನ್ನು ಕಲಿತಿದ್ದರು. ಆರಂಭದ ದಿನಗಳಲ್ಲಿ ಒಂದಷ್ಟು ಸಿನಿಮಾಗಳಿಗೆ ಹೀರೊ ಆಗಿ ಆಯ್ಕೆ ಆದರೂ ಅವೆಲ್ಲಾ ನಿಂತು ಹೋಗಿತ್ತು. 'ತುಗ್ಲಕ್' ಸಿನಿಮಾ ನಂತರ ಅರವಿಂದ್ ಕೌಶಿಕ್ ಜೊತೆ ಸೇರಿ ರಿಷಬ್ ಶೆಟ್ಟಿ ನಟಿಸಿದ ಸಿನಿಮಾ 'ಅಟ್ಯಾಕ್'. ಸಿಂಗಲ್ ಟೇಕ್ನಲ್ಲಿ ಮಾಡಿದ್ದ ವಿಭಿನ್ನ ಸಿನಿಮಾ ಇದು ಎಂದು ಅಣಜಿ ನಾಗರಾಜ್ ಹೇಳಿದ್ದಾರೆ.

ಸಿದ್ಧವಾಗ್ತಿದೆ 'ಅಟ್ಯಾಕ್' ಫೈನಲ್ ಕಾಪಿ
ಛಾಯಾಗ್ರಾಹಕರಾಗಿದ್ದ ಅಣಜಿ ನಾಗರಾಜ್ ಮುಂದೆ ಸಿನಿಮಾ ನಿರ್ಮಾಪಕರರಾದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಶಾಸ್ತ್ರಿ' ಸೇರಿ ಒಂದಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಒಂದೇ ಟೇಕ್ನಲ್ಲಿ 'ಅಟ್ಯಾಕ್' ಸಿನಿಮಾವನ್ನು ಮಾಡಿ ಮುಗಿಸಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾ ಆಗ ರಿಲೀಸ್ ಆಗಿರಲಿಲ್ಲ. "ಅದನ್ನು ಮತ್ತೆ ಚೆಕ್ ಮಾಡುತ್ತಿದ್ದೇವೆ. ಆಗ ಕಾಪಿ ತೆಗೆದಿರಲಿಲ್ಲ, ಈಗ ಕಾಪಿ ಸಿದ್ಧಮಾಡುತ್ತಿದ್ದೇವೆ. ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಮಾತನಾಡುತ್ತೇವೆ" ಎಂದು ನಿರ್ಮಾಪಕ ಅಣಜಿ ನಾಗರಾಜ್ ಮಾಹಿತಿ ನೀಡಿದ್ದಾರೆ.

ರಿಷಬ್ ಶೆಟ್ಟಿ 5 ಜನ ಹೀರೊಗಳು
'ಕಾಂತಾರ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಇಂತಹ ಸಮಯದಲ್ಲಿ 'ಅಟ್ಯಾಕ್' ಸಿನಿಮಾ ಮಾಡಲು ಮುಂದಾಗಿದ್ದೇವೆ. ಡಿಸೆಂಬರ್ ವೇಳೆಗೆ ಸಿನಿಮಾ ರಿಲೀಸ್ ಆಗಲಿದೆ. "ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಚೇತನ್ ಚಂದ್ರ, ಪಟ್ರೆ ಅಜಿತ್, ಅಚ್ಯುತ್ ಕುಮಾರ್, ರವಿಶಂಕರ್ ಗೌಡ, ಸತ್ಯ ಸೇರಿದಂತೆ ಪ್ರತಿಭಾನ್ವಿತ ಕಲಾವಿದರು ಚಿತ್ರದಲ್ಲಿದ್ದಾರೆ. ಒಂದು ಮುಕ್ಕಾಲು ಗಂಟೆಗಳಲ್ಲಿ ಈ ಸಿನಿಮಾ ಚಿತ್ರೀಕರಣ ಮಾಡಿದ್ದೇವೆ" ಎಂದು ಹೇಳಿದ್ದಾರೆ.


Click it and Unblock the Notifications











