'ಕರಾವಳಿ' ವಿವಾದ; ಪ್ರಜ್ವಲ್ ದೇವರಾಜ್ಗೆ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವ ತಾಕತ್ತು ಇಲ್ವಾ?
ಗುರುದತ್ ಗಾಣಿಗ ನಿರ್ಮಿಸಿ ನಿರ್ದೇಶನ ಮಾಡಿರುವ 'ಕರಾವಳಿ' ಸಿನಿಮಾ ನಾನಾ ಕಾರಣಗಳಿಗೆ ಸುದ್ದಿ ಆಗ್ತಿದೆ. ಒಂದ್ಕಡೆ ಟ್ರೈಲರ್ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ತಿದೆ. ಮತ್ತೊಂದು ಕಡೆ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಎದುರಾದ ಕಿರಿಕ್ ಭಾರೀ ಚರ್ಚೆ ಹುಟ್ಟಾಕ್ಕಿದೆ. ಇಲ್ಲಿ ಯಾರದ್ದು ಸರಿ? ಯಾರದ್ದು ತಪ್ಪು ಎನ್ನುವ ಪ್ರಶ್ನೆ ಎದ್ದಿದೆ. ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ನಡೀತಿದೆ.
ಸಂಭಾವನೆ ವಿಚಾರಕ್ಕೆ ನಟ ಪ್ರಜ್ವಲ್ ದೇವರರಾಜ್ ಹಾಗೂ ನಿರ್ಮಾಪಕ ಕಮ್ ನಿರ್ದೇಶಕ ಗುರುದತ್ ಗಾಣಿಗ ನಡುವೆ ಕಿರಿಕ್ ಆಗಿರುವುದು ಜಗಜ್ಜಾಹೀರಾಗಿದೆ. ಈ ವಿಚಾರದಲ್ಲಿ ಇಬ್ಬರು ತಮ್ಮ ತಮ್ಮ ವಾದ ಮುಂದಿಟ್ಟಿದ್ದಾರೆ. 'ಕರಾವಳಿ' ಚಿತ್ರದ ಸಂಭಾವನೆಯಾಗಿ ಪ್ರಜ್ವಲ್ ದೇವರಾಜ್ ಅವರಿಗೆ 1.25 ಕೋಟಿ ರೂ. ಕೊಡುವುದಾಗಿ ಮಾತುಕತೆ ನಡೆದಿದೆ. ಈಗಾಗಲೇ 1 ಕೋಟಿ ರೂ. ತಲುಪಿದೆ. ಇನ್ನು 25 ಲಕ್ಷ ರೂ. ಬಾಕಿಯಿದೆ. ಆದರೆ 25 ಲಕ್ಷ ರೂ. ಜೊತೆಗೆ ಪ್ರಜ್ವಲ್ ತಮ್ಮ ಸಹಾಯಕರಿಗೆ 20 ಲಕ್ಷ ರೂ. ಸಂಭಾವನೆ ಕೇಳುತ್ತಿದ್ದಾರೆ. ಜೊತೆಗೆ ಜಿಎಸ್ಟಿ ಸೇರಿಸಿ ಕೊಡಬೇಕು ಎನ್ನುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇದಕ್ಕೆ ನಿರ್ಮಾಪಕರು ಒಪ್ಪದೇ ಇರುವುದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ ಎನ್ನಲಾಗ್ತಿದೆ.

ಬಾಕಿ ಪಾವತಿ ಮಾಡದೇ ನಾನು ಡಬ್ಬಿಂಗ್ ಮಾಡಲ್ಲ ಎಂದು ಪ್ರಜ್ವಲ್ ಪಟ್ಟು ಹಿಡಿದಿದ್ದಾರೆ. ನೀವು ಕೇಳಿದ್ದಷ್ಟು ಕೊಡೋಕೆ ಆಗಲ್ಲ, ಸದ್ಯ ಟ್ರೈಲರ್ ರಿಲೀಸ್ ಮಾಡೋಣ, ಮುಂದೆ ಮಾತಾಡೋಣ, ಸಿನಿಮಾ ಪ್ರಚಾರ ಶುರು ಮಾಡಬೇಕು ಎಂದು ಗುರುದತ್ ಸಾಹಸ ಮಾಡಿದ್ದಾರೆ. ಪ್ರಜ್ವಲ್ ಪಾತ್ರಕ್ಕೆ ಬೇರೆಯವರಿಂದ ಡಬ್ ಮಾಡಿಸಿ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಇದೇ ಕಾರಣಕ್ಕೆ ನಿನ್ನೆ(ಜುಲೈ 7) ನಡೆದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಪ್ರಜ್ವಲ್ ಗೈರಾಗಿದ್ದರು. ಕಾರ್ಯಕ್ರಮಕ್ಕೆ ಬಂದಿದ್ದ ಅವರ ಅಭಿಮಾನಿಗಳು 'ನಮ್ಮ ಬಾಸ್ ವಾಯ್ಸ್ ಇಲ್ದೆ ಹೇಗೆ ಟ್ರೈಲರ್ ರಿಲೀಸ್ ಮಾಡಿದ್ರಿ?' ಎಂದು ತಗಾದೆ ತೆಗೆದಿದ್ದಾರೆ.
ಬಿಸಿಬಿಸಿ ಚರ್ಚೆ
'ಕರಾವಳಿ' ಸಿನಿಮಾ ವಿವಾದದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಕನ್ನಡ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿರುವಾಗ ಒಳ್ಳೆ ಸಿನಿಮಾ ಮಾಡುವುದು ಬಿಟ್ಟು ಇಂತಹ ಈಗೋ, ಕಿರಿಕ್ ಎಲ್ಲಾ ಬೇಕಿತ್ತಾ? ಒಳ್ಳೆ ಸಿನಿಮಾ ಮಾಡಿದಂತೆ ಕಾಣ್ತಿದೆ. ಟ್ರೈಲರ್ ಸಖತ್ತಾಗಿದೆ. ಭಿನ್ನಾಭಿಪ್ರಾಯ ಪಕ್ಕಕ್ಕಿಟ್ಟು ಸಿನಿಮಾ ಬಿಡುಗಡೆ ಮಾಡಿ ಗೆಲ್ಲಿಸುವ ಪ್ರಯತ್ನ ಎಲ್ಲರೂ ಮಾಡಬೇಕಿತ್ತು. ಮುನಿಸಿಕೊಂಡಿರುವ ಪ್ರಜ್ವಲ್ ವಿಚಾರದಲ್ಲಿ ಒಂದು ಮೆಟ್ಟಿಲು ಕೆಳಗೆ ಇಳಿಯಬೇಕಿತ್ತು. ಸಿನಿಮಾ ದೊಡ್ಡದಾಗಿ ಗೆದ್ದರೆ ಮುಂದಿನ ಸಿನಿಮಾಗಳಿಗೆ ತಮ್ಮ ಸಂಭಾವನೆ ಹೆಚ್ಚಿಸಿಕೊಳ್ಳಬಹುದಿತ್ತು. ಅದು ಬಿಟ್ಟು ಜಿಎಸ್ಟಿ ಅದು ಇದು ಎಂದು ಕ್ಯಾತೆ ತೆಗೆಯುತ್ತಾ ಕೂರುವುದು ಸರಿಯಲ್ಲ. ಇದರಿಂದ ಸಾಧಿಸುವುದು ಏನು ಎಲ್ಲ ಎನ್ನುವುದು ಕೆಲವರ ವಾದ.
₹1 ಕೋಟಿ ಕೊಟ್ಟಿದ್ದೇ ಹೆಚ್ಚು!
ಪ್ರಜ್ವಲ್ ದೇವರಾಜ್ ಸಿನಿಮಾಗಳು ದೊಡ್ಡದಾಗಿ ಸದ್ದು ಮಾಡಿದ್ದೇ ಇಲ್ಲ. 'ಜಂಟಲ್ಮನ್' ಬಳಿಕ ಅವರ ಯಾವುದೇ ಸಿನಿಮಾ ಗೆದ್ದಿಲ್ಲ. ಅದು ಕೂಡ ನಿರ್ದೇಶಕ ಜಡೇಶ್ ಅವರಿಂದ ಗೆದ್ದಿದ್ದ ಸಿನಿಮಾ. ಅದು ಬಿಟ್ಟು ಇತ್ತೀಚೆಗೆ ಯಾವ ಸಿನಿಮಾ ಕೂಡ 1.50 ಕೋಟಿ ರೂ. ಕಲೆಕ್ಷನ್ ಮಾಡಿಲ್ಲ. ಹಾಗಿರುವಾಗ ಇಷ್ಟೆಲ್ಲಾ ಹಗ್ಗಜಗ್ಗಾಟ ಯಾಕೆ ಬೇಕಿತ್ತು? ಎಂದು ಸಾಕಷ್ಟು ಜನ ಬೇಸರ ವ್ಯಕ್ತಪಡಿಸಿ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇದಕ್ಕೆ ಅಭಿಮಾನಿಗಳು ತಿರುಗೇಟು ನೀಡುತ್ತಿದ್ದಾರೆ.
ಪ್ರಜ್ವಲ್ ಬೆಂಬಲಕ್ಕೆ ಫ್ಯಾನ್ಸ್
ವಿವಾದದ ಬೆನ್ನಲ್ಲೇ ನಟ ಪ್ರಜ್ವಲ್ ದೇವರಾಜ್ ಗ್ಯಾರಂಟಿ ನ್ಯೂಸ್ ವಾಹಿನಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಕಳೆದ ವರ್ಷ ಇದೇ ರೀತಿ ನಿರ್ಮಾಪಕರಿಗೋಸ್ಕರ ಒಂದೂವರೆ ಕೋಟಿ ಸಂಭಾವನೆ ಬಿಟ್ಟಿದ್ದೀನಿ" ಎಂದಿದ್ದಾರೆ. ಇಲ್ಲಿ ಸಂಭಾವನೆ ಅಂದ್ರೆ ಹಣ ಕೂಡ ಮುಖ್ಯವಾಗುತ್ತದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟ ಒಂದು ಚಿತ್ರಕ್ಕಾಗಿ ಎರಡ್ಮೂರು ವರ್ಷ ಕಾಯುತ್ತಾರೆ. ಲುಕ್ ಚೇಂಜ್ ಮಾಡದೇ ಆ ಪಾತ್ರಕ್ಕಾಗಿ ಶ್ರಮಿಸುತ್ತಾರೆ ಅಂದ್ರೆ ಅದಕ್ಕೆ ತಕ್ಕ ಬೆಲೆ ಸಿಗಲೇಬೇಕು. ನಿರ್ಮಾಪಕರು ಹೇಳಿದ ಸಂಭಾವನೆ ಕೊಡಲೇಬೇಕು. ಇಲ್ಲದಿದ್ದರೆ ಮೋಸ ಆಗುತ್ತದೆ. ಸಂಭಾವನೆ ಪೂರ್ತಿ ಕೊಡುವರೆಗೆ ಡಬ್ಬಿಂಗ್ ಮಾಡಲ್ಲ ಎಂದು ಕಲಾವಿದರು ಪಟ್ಟು ಹಿಡಿಯುವುದು ಹೊಸದೇನು ಅಲ್ಲ. ಅದಕ್ಕೆ ದೊಡ್ಡ ಇತಿಹಾಸವೇ ಇದೆ. ಪ್ರಜ್ವಲ್ ದೇವರಾಜ್ ಬೇಡಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ.
ರಾಜ್ ಎಂಟ್ರಿಯಿಂದ ತಿಕ್ಕಾಟ?
ಪ್ರಜ್ವಲ್ ದೇವರಾಜ್ 'ಕರಾವಳಿ' ಚಿತ್ರದ ಹೀರೊ ಆಗಿದ್ದರೂ ಮತ್ತೊಂದು ಪ್ರಮುಖ ಪಾತ್ರದಲ್ಲಿ ರಾಜ್. ಬಿ ಶೆಟ್ಟಿ ನಟಿಸಿದ್ದಾರೆ. ಮಾವೀರ ಪಾತ್ರಕ್ಕೆ ದೊಡ್ಡ ನಟ ಬರ್ತಾರೆ ಎಂದು ಪ್ರಜ್ವಲ್ ಅವರಿಗೆ ಮೊದಲೇ ಗೊತ್ತಿತ್ತು. ಬೇರೆ ಯಾರೋ ಮಾಡಬೇಕಿದ್ದ ಈ ಪಾತ್ರವನ್ನು ಕೊನೆ ರಾಜ್ ಬಿ ಶೆಟ್ಟಿ ಮಾಡುವಂತಾಯ್ತು ಎಂದು ಚಿತ್ರತಂಡ ಹೇಳಿದೆ. ಸದ್ಯ ಟ್ರೈಲರ್ನಲ್ಲಿ ಕೂಡ ಅವರ ಪಾತ್ರ ಹೈಲೆಟ್ ಮಾಡಿರುವುದು ಗೊತ್ತಾಗುತ್ತಿದೆ. ಸ್ವತಃ ರಾಜ್ ಮಾತನಾಡಿ ಚಿತ್ರದಲ್ಲಿ "ನನ್ನದು ಅತಿಥಿ ಪಾತ್ರ ಅಷ್ಟೇ" ಎಂದಿದ್ದಾರೆ. ಆದರೆ ಆ ಪಾತ್ರವನ್ನು ತೋರಿಸಿರುವ ರೀತಿ ದೊಡ್ಡದಾಗಿದೆ. ಇದೇ ಕಾರಣಕ್ಕೆ ಪ್ರಜ್ವಲ್ ಅವರಿಗೆ ಬೇಸರ ಮೂಡಿದೆ ಎನ್ನುವ ಗುಸುಗುಸು ಶುರುವಾಗಿದೆ. ಈ ಮಾತನ್ನು ಇಬ್ಬರೂ ಒಪ್ಪಲು ಸಿದ್ಧರಿಲ್ಲ.
ಕೂಸು ಬಡವಾಯ್ತು
ಒಟ್ಟಾರೆ ಗಂಡ- ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಗಾದೆ ಮಾತಿನಂತೆ ನಟ- ನಿರ್ಮಾಪಕನ ಜಗಳದಲ್ಲಿ ಸಿನಿಮಾ ಬಡವಾಗುತ್ತಿದೆ. 'ಕರಾವಳಿ' ಟ್ರೈಲರ್ ಹಿಟ್ ಆಗಿದೆ. ಪ್ರಜ್ವಲ್ ದೇವರಾಜ್ ಪರ್ಫಾರ್ಮೆನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಆದರೆ ಅವರ ಧ್ವನಿ ಮಾತ್ರ ಮಿಸ್ ಆಗಿದೆ ಎನ್ನುವ ಬೇಸರ ಇದೆ. ಕರಾವಳಿ ಸಂಸ್ಕೃತಿ ಜೊತೆಗೆ ಕಂಬಳವನ್ನು ಹೈಲೆಟ್ ಮಾಡಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಕಂಬಳ ಕ್ರೀಡೆಯನ್ನು ತೆರೆಮೇಲೆ ಬಹಳ ರೋಚಕವಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಟ್ರೈಲರ್ ರೀತಿಯಲ್ಲೇ ಸಿನಿಮಾ ಬಂದುಬಿಟ್ಟರೆ 100 ಕೋಟಿ ರೂ. ಕಲೆಕ್ಷನ್ ಪಕ್ಕಾ ಎಂದು ಪ್ರೇಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಈ ಕಿರಿಕ್ ಯಾಕೆ ಬೇಕು ಎಂದು ಕೇಳುತ್ತಿದ್ದಾರೆ.


Click it and Unblock the Notifications