ನಿಖಿಲ್ ಕುಮಾರಸ್ವಾಮಿಗೆ ಬಿಗ್ ಶಾಕ್; ರಾಮನಗರದಲ್ಲಿ 11 ಸಾವಿರ ಮತಗಳ ಅಂತರದಲ್ಲಿ ಸೋಲು
ಸ್ಯಾಂಡಲ್ವುಡ್ ನಟ ನಿಖಿಲ್ ಕುಮಾರಸ್ವಾಮಿ ಈ ಬಾರಿಯ ವಿಧಾನಸಭೆ ಚುನಾವಣೆಗೆ ರಾಮನಗರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಜಿದ್ದಾಜಿದ್ದಿನಿಂದ ಕೂಡಿದ್ದ ಸ್ಪರ್ಧೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಎದುರು ನಿಖಿಲ್ ಕುಮಾರಸ್ವಾಮಿಗೆ ಸೋಲಾಗಿದೆ. ಈ ಹಿಂದೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಎದುರು ನಿಖಿಲ್ ಸೋತಿದ್ದರು. ಅದರಿಂದ ಹೊರ ಬರುವ ಮುನ್ನ ಮತ್ತೊಮ್ಮೆ ಸೋಲು ಎದುರಾಗಿದೆ.
ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ರಾಮನಗರದಲ್ಲಿ ನಿಖಿಲ್ ಅನಾಯಾಸವಾಗಿ ಗೆಲ್ಲುತ್ತಾರೆ ಅಂತ್ಲೇ ಎಲ್ಲರೂ ಅಂದುಕೊಂಡಿದ್ದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ರಾಮನಗರದ ವಿವಿಧ ಕಾರ್ಯಕ್ರಮಗಳಲ್ಲಿ ನಿಖಿಲ್ ಭಾಗವಹಿಸಿ ಅಲ್ಲಿನ ಜನರಿಗೆ ಹತ್ತಿರವಾಗಿದ್ದರು. ಆದರೆ ಚುನಾವಣೆಯಲ್ಲಿ ಶಾಕ್ ಎದುರಾಗಿದೆ. ನಿಖಿಲ್ ಎದುರು ಕಾಂಗ್ರೆಸ್ ಅಭ್ಯರ್ಥಿಯಾಗಿ ಇಕ್ಬಾಲ್ ಹುಸೇನ್ ಕಣದಲ್ಲಿದ್ದರು. 15 ಸಾವಿರ ಮತಗಳ ಅಂತರದಿಂದ ಇದೀಗ ಇಕ್ಬಾಲ್ ಹುಸೇನ್ ಗೆಲುವು ಸಾಧಿಸಿದ್ದಾರೆ.

'ಜಾಗ್ವಾರ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದಿದ್ದ ನಿಖಿಲ್ ಕುಮಾರಸ್ವಾಮಿ 'ಕುರುಕ್ಷೇತ್ರ', 'ಸೀತಾರಾಮ ಕಲ್ಯಾಣ', 'ರೈಡರ್' ಸಿನಿಮಾಗಳಲ್ಲಿ ನಟಿಸಿದ್ದರು.2018ರಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಗೆದ್ದಿದ್ದರು. ನಂತರ ರಾಮನಗರವನ್ನು ಪತ್ನಿ ಅನಿತಾ ಕುಮಾರಸ್ವಾಮಿಗೆ ಬಿಟ್ಟುಕೊಟ್ಟಿದ್ದರು. ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅಲ್ಲಿ ಗೆದ್ದಿದ್ದರು. ಈ ಬಾರಿ ಆ ಕ್ಷೇತ್ರವನ್ನು ಮಗನಿಗಾಗಿ ತ್ಯಾಗ ಮಾಡಿದ್ದರು. ಆದರೆ ಪ್ರಯೋಜನವಾಗಲಿಲ್ಲ.
ತಾತ ಮಾಜಿ ಪ್ರಧಾನಿ, ತಂದೆ ಮಾಜಿ ಸಿಎಂ ಆಗಿದ್ದರೂ ನಿಖಿಲ್ ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಸಾಕಷ್ಟು ತಯಾರಿಯೊಂದಿಗೆ ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಭರವಸೆಯ ನಟನಾಗಿ ಹೊಮ್ಮಿದ್ದರು. ಆದರೆ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಿದ್ದರು. ಜಿದ್ದಾ ಜಿದ್ದಿನಿಂದ ಕೂಡಿದ್ದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅಂಬರೀಶ್ ಗೆದ್ದಿದ್ದರು. ಜೆಡಿಎಸ್ ಪಕ್ಷದ ಎಲ್ಲಾ ತಂತ್ರಗಳು ವಿಫಲವಾಗಿತ್ತು. ಆ ನಂತರ ನಿಖಿಲ್ ಮತ್ತೆ ಸಿನಿಮಾಗಳಲ್ಲಿ ನಟಿಸ್ತಿದ್ದರು.
ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಸಿನಿಮಾಗಳ ಜೊತೆ ಜೊತೆಗೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಇತ್ತೀಚೆಗೆ ಸಿನಿಮಾ ಕೆಲಸಗಳನ್ನು ಪಕ್ಕಕ್ಕಿಟ್ಟು ಸಂಪೂರ್ಣವಾಗಿ ವಿಧಾನಸಭೆ ಚುನಾವಣೆ ಕಡೆ ಗಮನ ಹರಿಸಿದ್ದರು. ರಾಮನಗರದಲ್ಲಿ ಈ ಸೋಲನ್ನು ಅವರ ನಿರೀಕ್ಷಿರಲಿಲ್ಲ. ಬಹಳ ಸುಲಭವಾಗಿ ಗೆಲ್ಲುತ್ತಾರೆ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಮತದಾರರು ಕಾಂಗ್ರೆಸ್ ಕೈ ಹಿಡಿದಿದ್ದಾರೆ.
ಮುಂದೆ ನಿಖಿಲ್ ಕುಮಾರಸ್ವಾಮಿ ಮತ್ತೆ ರಾಜಕೀಯರಂಗದಲ್ಲಿ ಮುಂದುವರೆಯುತ್ತಾರಾ? ಇಲ್ಲ ಸಂಪೂರ್ಣವಾಗಿ ಸಿನಿಮಾಗಳತ್ತ ಮುಖ ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. 'ರೈಡರ್' ನಂತರ 'ಯದುವೀರ್' ಎನ್ನುವ ಸಿನಿಮಾ ಘೋಷಿಸಿದ್ದರು. ಆದರೆ ಸಿನಿಮಾ ಶೂಟಿಂಗ್ ಶುರುವಾಗಲೇ ಇಲ್ಲ. ಇತ್ತೀಚೆಗೆ ಹುಟ್ಟುಹಬ್ಬದ ಸಂಭ್ರಮದಲ್ಲಿ ನಿಖಿಲ್ ಹೊಸ ಸಿನಿಮಾ ಘೋಷಣೆ ಆಗಿತ್ತು. ಕೆ.ಪಿ ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆಯ ಜಿ. ಮನೋಹರನ್ ಈ ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಲಾಗಿತ್ತು.
ಹೊಸ ಪ್ರತಿಭೆ ಮನೋಹರ ಇನ್ನು ಹೆಸರಿಡದ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಇದೊಂದು ಸ್ಪೋರ್ಟ್ಸ್ ಕುರಿತ ಅನ್ನುವುದು ಪೋಸ್ಟರ್ ನೋಡಿದರೆ ಗೊತ್ತಾಗುತ್ತದೆ. ಆದರೆ ಸಿನಿಮಾ ಯಾವಾಗ ಶುರುವಾಗುತ್ತದೆ ಎನ್ನುವುದ ಬಗ್ಗೆ ಮಾಹಿತಿ ಇಲ್ಲ.


Click it and Unblock the Notifications











