"ನಮಗೆ ತೆಲುಗು, ತಮಿಳು ಅರ್ಥ ಆಗುತ್ತೆ.. ಡಬ್ ಆದ್ರು ನಾವು ಒರಿಜಿನಲ್ ಭಾಷೆಯಲ್ಲೇ ಸಿನ್ಮಾ ನೋಡ್ತಿವಿ":ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲ್ಲೇ ಸಿನಿಮಾ ತೆಲುಗಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಈ ವೀಕೆಂಡ್ನಲ್ಲೇ 'ಸಪ್ತ ಸಾಗರಾಲು ದಾಟಿ' ಹೆಸರಿನಲ್ಲಿ ಸಿನಿಮಾ ಆಂಧ್ರ, ತೆಲಂಗಾಣ ಹಾಗೂ ಓವರ್ಸೀಸ್ನಲ್ಲಿ ರಿಲೀಸ್ ಆಗಲಿದೆ.
ಹೇಮಂತ್ ರಾವ್ ನಿರ್ದೇಶನದ ರೊಮ್ಯಾಂಟಿಕ್ ಸಿನಿಮಾ ಪ್ರೇಕ್ಷಕರಿಗೆ ಮೋಡಿ ಮಾಡ್ತಿದೆ. ಈಗಾಗಲೇ ಕನ್ನಡ ವರ್ಷನ್ ಹೈದರಾಬಾದ್ನಲ್ಲಿ ಕೆಲ ಶೋಗಳಲ್ಲಿ ಪ್ರದರ್ಶನ ಕಂಡು ಅಲ್ಲಿನ ಪ್ರೇಕ್ಷಕರ ಗಮನ ಸೆಳೆದಿದೆ. ಅದೇ ಕಾರಣಕ್ಕೆ ಚಿತ್ರವನ್ನು ತೆಲುಗಿಗೆ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಏಕಕಾಲದಲ್ಲಿ ಚಿತ್ರವನ್ನು ಕನ್ನಡ ಸೇರಿದಂತೆ 4 ಭಾಷೆಗಳಿಗೆ ಡಬ್ ಮಾಡಲಾಗಿತ್ತು. ಸದ್ಯ ತೆಲುಗು ವರ್ಷನ್ ರಿಲೀಸ್ ಆಗ್ತಿದ್ದು ಮುಂದೆ ಮಲಯಾಳಂ, ತಮಿಳು ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸುವ ಸಾಧ್ಯತೆಯಿದೆ.

ಸದ್ಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ತೆಲುಗು ವರ್ಷನ್ ಪ್ರಮೋಷನ್ಗಾಗಿ ನಟ ರಕ್ಷಿತ್ ಶೆಟ್ಟಿ ಹೈದರಾಬಾದ್ನಲ್ಲಿ ಬೀಡು ಬಿಟ್ಟಿದ್ದಾರೆ. ಇತ್ತೀಚೆಗೆ ಟ್ರೈಲರ್ ರಿಲೀಸ್ ಕಾರ್ಯಕ್ರಮ ನಡೀತು. ಸದ್ಯ ತೆಲುಗು ಸಂದರ್ಶನಗಳಲ್ಲಿ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದ ಬಗ್ಗೆಯೂ ಚರ್ಚಿಸುತ್ತಿದ್ದಾರೆ.
ಬೇರೆ ಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್ ಆದರೂ ಕನ್ನಡ ವರ್ಷನ್ಗೆ ಕಡಿಮೆ ಶೋ ಕೊಡ್ತಾರೆ, ಮೂಲ ಭಾಷೆಯಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡ್ತಾರೆ ಎನ್ನುವ ಆರೋಪ ಇದೆ. ಇದೇ ಕಾರಣಕ್ಕೆ ಕಾರಣಕ್ಕೆ ಸಾಕಷ್ಟು ಬಾರಿ ಕರ್ನಾಟಕದಲ್ಲಿ ಬೇರೆ ಭಾಷೆಯ ಸಿನಿಮಾಗಳನ್ನು ಬಾಯ್ಕಾಟ್ ಮಾಡುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿರುತ್ತದೆ. ಈ ವಿಚಾರದ ಬಗ್ಗೆ ತೆಲುಗು ಸಂದರ್ಶನವೊಂದರಲ್ಲಿ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ.
"ಕರ್ನಟಕದ ಪ್ರೇಕ್ಷಕರು ಆಯಾ ಭಾಷೆಯ ಸಿನಿಮಾಗಳನ್ನು ಮೂಲ ಭಾಷೆಯಲ್ಲಿಯೇ ನೋಡಲು ಬಯಸುತ್ತಾರೆ. ಆದರೆ ಬೇರೆ ರಾಜ್ಯದ ಜನ ತಮ್ಮ ಭಾಷೆಯಲ್ಲೇ ಇತರ ಭಾಷೆಯ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಾರೆ. ಕರ್ನಾಟಕದಲ್ಲಿ 80ರ ದಶಕದಿಂದಲೂ ಮೂಲ ಭಾಷೆಯಲ್ಲಿಯೇ ನೋಡುತ್ತಿದ್ದಾರೆ. ಅದಕ್ಕೆ ಸಾಕಷ್ಟು ಕಾರಣಗಳಿವೆ ಅಂತ ನನಗೆ ಅನ್ನಿಸುತ್ತದೆ"
"ಭೌಗೋಳಿಕವಾಗಿ ಕರ್ನಾಟಕವನ್ನು ನೋಡಿದರೆ ಸ್ವಾತಂತ್ರ ಸಿಗುವುದಕ್ಕೂ ಮುನ್ನ ಅದು ಬರೀ ಮೈಸೂರು ಆಗಿತ್ತು. ಉತ್ತರ ಕರ್ನಾಟಕ ಕೆಲ ಭಾಗ ಹೈದರಾಬಾದ್ ಸಂಸ್ಥಾನಕ್ಕೆ ಸೇರಿತ್ತು. ಮತ್ತೊಂದು ಭಾಗ ಬಾಂಬೆಗೆ ಸೇರಿತ್ತು. ಕೆಳಗಿನ ಭಾಗ ಮದ್ರಾಸ್ಗೆ ಸೇರಿತ್ತು. ಕರ್ನಾಟಕ ಅಂದ್ರೆ ಬರೀ ಮೈಸೂರು ಇತ್ತು. ಸ್ವಾತಂತ್ರ್ಯ ನಂತರ ಕನ್ನಡ ಮಾತನಾಡುವ ಭಾಗವನ್ನೆಲ್ಲಾ ಸೇರಿಸಿ ಕರ್ನಾಟಕ ರಾಜ್ಯ ಮಾಡಲಾಯಿತು"
"ನಾವು ಎಲ್ಲಾ ಕಡೆಯಿಂದ ಬಂದಿದ್ದೀವಿ ಅನ್ನೋದು ಸತ್ಯ. ನಮಗೆ ಎಲ್ಲಾ ಭಾಷೆಗಳು ಅರ್ಥ ಆಗುತ್ತದೆ. ಹಾಗಾಗಿ ಎಲ್ಲಾ ಭಾಷೆಯ ಸಿನಿಮಾಗಳನ್ನು ಆಯಾ ಭಾಷೆಯಲ್ಲೇ ನೋಡುತ್ತೇವೆ. ಮಾತನಾಡಲು ಬರದಿದ್ದರೂ ತಮಿಳು ಅರ್ಥವಾಗುತ್ತದೆ. ತೆಲುಗು, ಹಿಂದಿ ಕೂಡ ಅರ್ಥವಾಗುತ್ತದೆ. ಮಲಯಾಳಂ ಕೊಂಚ ಕಷ್ಟ ಆಗುತ್ತದೆ" ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
"ಇನ್ನು ರಾಜಮೌಳಿ ಚಿತ್ರಗಳಿಗೆ ಕರ್ನಾಟಕದಲ್ಲಿ ಒಳ್ಳೆಯ ಮಾರ್ಕೆಟ್ ಇದೆ. ಅವರು ಸಿನಿಮಾ ಮಾಡಿದ್ದಾರೆ ಅಂದ್ರೆ ಜನ ಮುಗಿಬಿದ್ದು ನೋಡುತ್ತಾರೆ. ಯಾಕಂದರೆ ಬಾಹುಬಲಿ ಭಾಗ-1, ಭಾಗ-2 ಹಾಗೂ 'RRR' ಸಿನಿಮಾಗಳು ಅಲ್ಲಿ ಎಷ್ಟು ಕಲೆಕ್ಷನ್ ಮಾಡ್ತು ಅನ್ನೋದು ನನಗೆ ಗೊತ್ತು. ಇನ್ನುಳಿದಂತೆ ಅಲ್ಲು ಅರ್ಜುನ್, ಮಹೇಶ್ ಬಾಬು, ಜ್ಯೂ. ಎನ್ಟಿಆರ್ ಅವರ ಸಿನಿಮಾಗಳಿಗೂ ಅಲ್ಲಿ ಒಳ್ಳೆ ಮಾರ್ಕೆಟ್ ಇದೆ. ಯಾರು ನಂಬರ್ ವನ್ ಎನ್ನುವುದು ಗೊತ್ತಿಲ್ಲ" ಎಂದಿದ್ದಾರೆ.


Click it and Unblock the Notifications











