Karnataka Bandh: "ನಾಯಿ, ನಾಮರ್ದ ಅಂತ ಯಾರಿಗ್ ಹೇಳ್ತೀರಾ? ನೀವು ಏನ್ ಮಾಡಿದ್ದೀರಾ ಹೇಳಿ": ಪ್ರೇಮ್ ತಿರುಗೇಟು
ಕರ್ನಾಟಕ ಬಂದ್ಗೆ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಬೆಂಬಲ ನೀಡಿದೆ. ಫಿಲ್ಮ್ ಚೇಂಬರ್ ಬಳಿ ನಡೆದ ಧರಣಿ ಹೋರಾಟದಲ್ಲಿ ನಟರಾದ ಶಿವರಾಜ್ಕುಮಾರ್, ದರ್ಶನ್, ಧ್ರುವ ಸರ್ಜಾ ಸೇರಿದಂತೆ ಹಲವರು ಭಾಗಿ ಆಗಿದ್ದರು. ಅತ್ತ ಮಂಡ್ಯದಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಪ್ರತಿಭಟನೆಯಲ್ಲಿ ಭಾಗಿ ಆಗಿದ್ದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಇತ್ತೀಚೆಗೆ ಬೆಂಗಳೂರು ಬಂದ್ಗೆ ಕರೆ ನೀಡಲಾಗಿತ್ತು. ಆದರೆ ಅಂದು ಕನ್ನಡ ಸಿನಿಮಾ ತಾರೆಯರು ಸಕ್ರಿಯವಾಗಿ ಹೋರಾಟದಲ್ಲಿ ಭಾಗಿ ಆಗಿರಲಿಲ್ಲ. ಇದಕ್ಕೆ ಕೆಲ ಕನ್ನಡ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದರು.

'ಕನ್ನಡಿಗರ ರಕ್ಷಣ ವೇದಿಕೆ' ಅಧ್ಯಕ್ಷ ಪ್ರಕಾಶ್ ಎಂಬುವವರು ಕನ್ನಡ ಸಿನಿಮಾ ಕಲಾವಿದರ ಬಗ್ಗೆ ನೀಡಿದ್ದ ಹೇಳಿಕೆ ಅಭಿಮಾನಿಗಳನ್ನು ಕೆರಳಿಸಿತ್ತು. ಪ್ರಕಾಶ್ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದರು. ಸಿನಿಮಾ ತಾರೆಯರನ್ನು ನಾಯಿ, ನರಿ ಎಂದು ಕರೆದು ಅವಮಾನಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಇಂದು(ಸೆಪ್ಟೆಂಬರ್ 29) ಮಂಡ್ಯದಲ್ಲಿ ಕನ್ನಡಪರ ಸಂಘಟನೆಗಳ ಧರಣಿಯಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಭಾಗಿಯಾಗಿ ಮಾತನಾಡಿದರು.
ಚಿತ್ರರಂಗದವರ ಬಗ್ಗೆ ಕೆಟ್ಟದಾಗಿ ಮಾತನಾಡಿದವರಿಗೆ ಪ್ರೇಮ್ ತಿರುಗೇಟು ನೀಡಿದ್ದಾರೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. "ಕನ್ನಡ ನೆಲ ಜಲ ಭಾಷೆ ವಿಷಯ ಬಂದಾಗ ಕನ್ನಡ ಚಿತ್ರರಂಗ ಸದಾ ಮುಂದೆ ನಿಂತಿದೆ. ನಾನು ಪ್ರತ್ಯೇಕವಾಗಿ ಪ್ರಕಾಶ್ ಎಂಬುವವರಿಗೆ ಹೇಳ್ತಿದ್ದೀನಿ. ಅಂತಹ ಪದಗಳನ್ನು ಬಳಸಬಾರದು. ನಾಯಿ, ನಾಮರ್ದ ಅಂತ ಯಾಕೆ ಹೇಳ್ತೀರಾ? ನೀವು ಏನು ಮಾಡಿದ್ದೀರಾ ಅದು ಮೊದಲು ಹೇಳಿ. ನಾವು ಏನು ಮಾಡಿದ್ದೇವೆ ಎಂದು ನಾವು ಹೇಳ್ತಿವಿ ಬನ್ನಿ. ಇದೇ ಶಿವರಾಜ್ಕುಮಾರ್, ದರ್ಶನ್, ಸುದೀಪ್, ಯಶ್, ಪ್ರೇಮ್ ಏನು ಮಾಡಿದ್ದಾರೆ ಅನ್ನೋದನ್ನು ಹೇಳ್ತೀವಿ" ಎಂದಿದ್ದಾರೆ.
"ಕನ್ನಡಪರ ಸಂಘಟನೆಯವರು ಎಷ್ಟು ಜನ, ಏನೆಲ್ಲಾ ತ್ಯಾಗ ಮಾಡಿದ್ದಾರೆ. ಕನ್ನಡ ಸಿನಿಮಾಗಳಿಗಾಗಿ ಕನ್ನಡ ಪರ ಸಂಘಟನೆಯವರು ಹೋರಾಟ ಮಾಡಿದ್ದಾರೆ. ಆದರೆ ಅವರು ಆ ರೀತಿ ಮಾತನಾಡಬಾರದು. ಅವರು ಯಾರು ಗೊತ್ತಿಲ್ಲ. ಅವರನ್ನು ಸೈಡಿಗೆ ನಿಲ್ಲಿಸಿಬಿಡಿ. ಅವರನ್ನು ಬೆಂಬಲಿಸಬಾರದು ಲೈಫ್ ಲಾಂಗ್. ನಾವು ಕಲಾವಿದರು ಸದಾ ನಿಮ್ಮಲ್ಲರ ಜೊತೆ ಇರ್ತೀವಿ. ನಾನು ರೈತರ ಜೊತೆ ಸದಾ ನಿಲ್ಲುತ್ತೇನೆ. ಯಾಕಂದ್ರೆ ಆ ಕಷ್ಟ ನಮಗೆ ಗೊತ್ತು."
ಸಾಲ ಮಾಡಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲಾ ಬರೀ ರಾಜಕೀಯ. ದಯವಿಟ್ಟು ನೀವು ಅರ್ಥ ಮಾಡ್ಕೊಳ್ಳಿ. ನಾವು ಸದಾ ನಿಮ್ಮೊಟ್ಟಿಗೆ ಇರ್ತೀವಿ. ಕಾವೇರಿ ನಮ್ಮದು. ನಾವು ಯಾವತ್ತು ಯಾರಿಗೂ ಅನ್ಯಾಯ ಮಾಡಿಲ್ಲ. ಮಾಡೋದು ಬೇಡ. 28 ಜನ ಎಂಪಿಗಳು ಯಾರು ಇದ್ದಾರೆ ಅಷ್ಟು ಜನ ಹೋಗಿ ದೆಹಲಿಗೆ ಹೋಗಿ ಹೋರಾಟ ಮಾಡಿಲಿ. ಇಲ್ಲಿ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ" ಎಂದು ಪ್ರೇಮ್ ಮಂಡ್ಯದಲ್ಲಿ ಹೇಳಿದ್ದಾರೆ.
ಪ್ರತಿಭಟನೆ ವೇಳೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದ 'ಕನ್ನಡಿಗರ ರಕ್ಷಣ ವೇದಿಕೆ' ಅಧ್ಯಕ್ಷ ಪ್ರಕಾಶ್, "ಕನ್ನಡ ಕಲಾವಿದರ ಸಹಕಾರ ಎಂದರೆ ನಾವು ಬೇರೆ ಏನು ಅಪೇಕ್ಷೆಪಡುತ್ತಿಲ್ಲ. ಈ ನಾಡಿನ ನೆಲ ಜಲ ಭಾಷೆ ಗಡಿಗೆ ಸಮಸ್ಯೆ ಆದಾಗ ಅವರು ಟೊಂಕ ಕಟ್ಟಿ ನಿಲ್ಲಬೇಕು. ಅಣ್ಣಾವ್ರು ಇದ್ದಿದ್ದರೆ ಈ ನಾಯಿ ನರಿಗಳನ್ನು ಯಾವನ್ನು ಕರೀತಿದ್ದ. ಅಣ್ಣಾವ್ರು ಒಂದು ಕೂಗು ಹಾಕಿದ್ದ ಇಡೀ ಕರ್ನಾಟಕನೇ ಬಂದ್ ಆಗ್ತಿತ್ತು. ನಾವ್ಯಾರು ರೋಡಿಗಿಳಿಯುವ ಅವಶ್ಯಕತೆ ಇರುತ್ತಿರಲಿಲ್ಲ"
"ರಾಜ್ಕುಮಾರ್, ವಿಷ್ಣುವರ್ಧನ್, ಶಂಕರ್ನಾಗ್, ಅಂಬರೀಶ್ರಂತಹ ನಾಲ್ಕು ರತ್ನಗಳು ಹೋದಮೇಲೆ ಅವರ ಜಾಗ ತುಂಬುವಂತ ಈ ನಾಲ್ಕು ಜನ ಸುದೀಪ್, ಶಿವರಾಜ್ಕುಮಾರ್, ಯಶ್, ದರ್ಶನ್ ಇದ್ದಾರೆ. ಆದರೆ ಇವರ ಹೇಳಿಕೆ ಹೇಗಿದೆ ಅಂದರೆ ದುರಂಹಕಾರ. ಇವರಿಗೆ ಹಣದ ಮದ ಏರಿರಬೇಕು. ನಮ್ಮ ಸ್ನೇಹಿತರು ಹೇಳುತ್ತಿದ್ದರು. ಅವರಿಗೆ ಸಂಭಾವನೆ ಕೊಟ್ಟರೆ ಎಲ್ಲಿಗೆ ಬೇಕಾದರೂ ಬರ್ತಾರೆ ಅಂತ."
"ಯಶ್, ಸುದೀಪ್, ದರ್ಶನ್, ಶಿವರಾಜ್ಕುಮಾರ್ ನಿಮಗೆಲ್ಲರಿಗೂ ಎಷ್ಟೆಷ್ಟು ಸಂಭಾವನೆ ಬೇಕು ಹೇಳಿ. ಏಳು ಕೋಟಿ ಕನ್ನಡಿಗರ ಬಳಿ ನಾವು ಭಿಕ್ಷೆ ಬೇಡಿ ನಿಮ್ಮ ಮುಖದ ಮೇಲೆ ಎಸೆಯುತ್ತೇವೆ. ಆಗಾದರೂ ನೀವು ರೈತರ ಪರ ಹೋರಾಟಕ್ಕೆ ಬರ್ತೀರಾ ನೋಡೋಣ" ಎಂದು ಹೇಳಿದ್ದರು. ಪ್ರಕಾಶ್ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು.


Click it and Unblock the Notifications











