ಕರ್ನಾಟಕ ಬಂದ್: ಚಿತ್ರಮಂದಿರಗಳಲ್ಲಿ ಮಾರ್ನಿಂಗ್ ಶೋ ಕ್ಯಾನ್ಸಲ್
ಮಹಾರಾಷ್ಟ್ರೀಗರ ಕನ್ನಡ ವಿರೋಧಿ ನೀತಿ ಹಾಗೂ ಕನ್ನಡಿಗರ ಮೇಲಿನ ದಬ್ಬಾಳಿಕೆ ಖಂಡಿಸಿ ಇಂದು(ಮಾರ್ಚ್ 22) ಕರ್ನಾಟಕ ಬಂದ್ ಆಚರಿಸಲಾಗುತ್ತಿದೆ. ವಿವಿಧ ಕನ್ನಡಪರ ಸಂಘಟನೆಗಳು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಹೋರಾಟಕ್ಕೆ ಕೈ ಜೋಡಿಸಿವೆ. ಆದರೆ ಕರ್ನಾಟಕ ಬಂದ್ಗೆ ಬೆಂಗಳೂರಿನಲ್ಲಿ ನಿರಸ
ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಅಖಂಡ ಕರ್ನಾಟಕ ಬಂದ್ಗೆ ಓಲಾ ಉಬರ್ ಡ್ರೈವರ್ಸ್ ಅಂಡ್ ಓನರ್ಸ್ ಅಸೋಸಿಯೇಷನ್, ಆಟೊ ರಿಕ್ಷಾ ಸಂಘಟನೆಗಳು ಬೆಂಬಲ ಸೂಚಿಸಿವೆ. ಹೋಟೆಲ್ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು ಮಾಲೀಕರು ಕೇವಲ ನೈತಿಕ ಬೆಂಬಲ ಮಾತ್ರ ನೀಡಿದ್ದಾರೆ. ಕೆಎಸ್ಆರ್ಟಿಸಿ, ಮೆಟ್ರೊ ಬೆಂಬಲ ನೀಡಿಲ್ಲ. ಬೆಳಗ್ಗೆ 10 ಗಂಟೆಯವರೆಗೆ ಬಸ್ ಸಂಚಾರ ಸಹಜವಾಗಿದೆ. ಮಧ್ಯಾಹ್ನದ ಬಳಿಕ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ನಡೆಯಲಿದೆ.

ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ಗೆ ಚಿತ್ರರಂಗ ನೈತಿಕ ಬೆಂಬಲ ನೀಡುತ್ತಿದೆ. ಚಿತ್ರಮಂದಿರಗಳಲ್ಲಿ ಬೆಳಗಿನ ಆಟ(ಮಾರ್ನಿಂಗ್ ಶೋ) ಮಾತ್ರ ಪ್ರದರ್ಶನವಾಗುತ್ತಿಲ್ಲ. ಮಧ್ಯಾಹ್ನ(ಮ್ಯಾಟ್ನಿ)ದ ಶೋ ಆರಂಭವಾಗಲಿದೆ. ಬಂದ್ ಹಿನ್ನೆಲೆ ಬೆಳಗ್ಗೆ ಚಿತ್ರಮಂದಿರಗಳ ಗೇಟ್ ಕ್ಲೋಸ್ ಆಗಿದೆ. ಥಿಯೇಟರ್ ಕ್ಲೋಸ್ ಆಗಿರುವ ಹಿನ್ನೆಲೆ ಜನರಿಲ್ಲದೇ ಥಿಯೇಟರ್ ಆವರಣ ಬಣಗುಡುತ್ತಿದೆ.
ಕೆಜಿ ರಸ್ತೆಯ ತ್ರಿವೇಣಿ, ಅನುಪಮಾ, ಸಂತೋಷ್, ನರ್ತಕಿ ಚಿತ್ರಮಂದಿರಗಳ ಗೇಟ್ ತೆರೆದಿಲ್ಲ. ಬಂದ್ ಕಾರಣ ಸಿನಿರಸಿಕರು ಕೂಡ ಚಿತ್ರಮಂದಿರಗಳ ಕಡೆ ಸುಳಿಯುತ್ತಿಲ್ಲ. ದೊಡ್ಡ ಸಿನಿಮಾಗಳ ಬಿಡುಗಡೆ ಇಲ್ಲದೇ ಈಗಾಗಲೇ ಚಿತ್ರಮಂದಿರಗಳು ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಸಮಯದಲ್ಲಿ ಕರ್ನಾಟಕ ಬಂದ್ ಕಾರಣಕ್ಕೆ ಶೋಗಳನ್ನು ಕ್ಯಾನ್ಸಲ್ ಮಾಡುವಂತಹ ಸಂದರ್ಭ ಎದುರಾಗಿದೆ.
ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ಗೆ ಫಿಲ್ಮ್ ಚೇಂಬರ್ ಬೆಂಬಲ ಸೂಚಿಸಿತ್ತು. ಈ ಬಗ್ಗೆ ನಿನ್ನೆ(ಮಾರ್ಚ್ 22) ಮಾಧ್ಯಮದವರ ಜೊತೆ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಮಾತನಾಡಿದ್ದರು. "ಕರ್ನಾಟಕ ಬಂದ್ಗೆ ಚಿತ್ರರಂಗದ ಬೆಂಬಲ ಇದೆ. ಆದರೆ ಯಾವುದೇ ಕಾರಣಕ್ಕೂ ಸಿನಿಮಾ ಚಿತ್ರೀಕರಣ ನಿಲ್ಲಿಸುವುದಿಲ್ಲ. ಚಿತ್ರ ಪ್ರದರ್ಶಕರು ಕೂಡ ಬೆಂಬಲ ಸೂಚಿಸಿದ್ದು ನಾಳೆ ಬೆಳಗ್ಗೆ ಮೊದಲ ಶೋ ಪ್ರದರ್ಶನ ಇರುವುದಿಲ್ಲ. ಮಧ್ಯಾಹ್ನದ ನಂತರ ಎಂದಿನಂತೆ ಸಿನಿಮಾ ಪ್ರದರ್ಶನ ನಡೆಯುತ್ತದೆ" ಎಂದಿದ್ದರು.
"ಅಣ್ಣಾವ್ರ ಕಾಲದಿಂದಲೂ ಕನ್ನಡ ನೆಲ, ಜಲ, ಭಾಷೆಗೆ ಸಂಕಷ್ಟ ಎದುರಾದಾಗ ಚಿತ್ರರಂಗ ಬೆಂಬಲಕ್ಕೆ ನಿಂತಿದೆ. ಇದು ರಾಜ್ಯದ ಹಿತದೃಷ್ಟಿಯಿಂದ ಮಾಡುತ್ತಿರುವ ಬಂದ್, ಹಾಗಾಗಿ ಚಿತ್ರರಂಗದ ಎಲ್ಲಾ ವಲಯಗಳ ಬೆಂಬಲ ಇರುತ್ತದೆ. ಚಿತ್ರೀಕರಣ ನಿಲ್ಲಿಸಲು ಸಾಧ್ಯವಿಲ್ಲ. ಚಿತ್ರತಂಡಗಳು ಸ್ವಯಂಪ್ರೇರಿತರಾಗಿ ಚಿತ್ರೀಕರಣ ನಿಲ್ಲಿಸಿದರೆ ಅದಕ್ಕೆ ನಮ್ಮ ಸ್ವಾಗತ ಇದೆ. ನಿರ್ಮಾಪಕರ ಸಂಘ, ಕಲಾವಿದರ ಸಂಘವೂ ಬೆಂಬಲ ಸೂಚಿಸುತ್ತದೆ" ಎಂದು ನರಸಿಂಹಲು ಮಾಹಿತಿ ನೀಡಿದ್ದರು.


Click it and Unblock the Notifications











