CCL 2024: ಬೆಂಗಾಲ್ ಟೈಗರ್ಸ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ ಕರ್ನಾಟಕ ಬುಲ್ಡೋಜರ್ಸ್
ಸಿಸಿಎಲ್ 2024 ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಫೈನಲ್ ತಲುಪಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ತಂಡದ ವಿರುದ್ಧ ಗೆದ್ದು ಅಂತಿಮ ಹಣಾಹಣಿಗೆ ಸಜ್ಜಾಗಿದೆ. ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಬೆಂಗಾಲ್ ಟೈಗರ್ಸ್ ತಂಡ 10 ಓವರ್ಗಳಲ್ಲಿ 3 ಕಳೆದುಕೊಂಡು 86 ಕಲೆ ಹಾಕಿತ್ತು.
ಜಾಮಿ 30 ಎಸೆತಗಳಲ್ಲಿ 50 ರನ್ ಸಿಡಿಸಿ ಗಮನ ಸೆಳೆದರು. ಬಳಿಕ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಬುಲ್ಡೋಜರ್ಸ್ ತಂಡ 4 ವಿಕೆಟ್ ಕಳೆದುಕೊಂಡು 114 ರನ್ ಗಳಿಸಿತು. 10 ಎಸೆತಗಳಲ್ಲಿ ಜೆಕೆ 24 ರನ್ ಪೇರಿಸಿದರು. ಈ ಮೂಲಕ ಸ್ಯಾಂಡಲ್ವುಡ್ ತಂಡ 28 ರನ್ಗಳ ಮುನ್ನಡೆಯನ್ನು ಸಾಧಿಸಿ ಎದುರಾಳಿ ತಂಡವನ್ನು 2ನೇ ಇನ್ನಿಂಗ್ಸ್ಗೆ ಆಹ್ವಾನಿಸಿತು.

ಬೆಂಗಾಲ್ ಟೈಗರ್ಸ್ ತಂಡ 2ನೇ ಇನ್ನಿಂಗ್ಸ್ನಲ್ಲಿ ಒಳ್ಳೆ ಟಾರ್ಗೆಟ್ ಅನ್ನೇ ನೀಡಿತು. ಕೇವಲ 28 ರನ್ಗಳ ಹಿನ್ನೆಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ತಂಡಕ್ಕೆ ಯೂಸುಫ್ 34 ರನ್ಗಳೊಂದಿಗೆ ನೆರವಾದರು. ಒಟ್ಟು 10 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಬೆಂಗಾಲ್ ಟೈಗರ್ಸ್ ತಂಡ 127 ರನ್ ಗಳಿಸಿ ಪಂದ್ಯ ಗೆಲ್ಲುವ ಆಶಾಭಾವನೆಯಲ್ಲಿತ್ತು. ಒಟ್ಟಾರೆ 2ನೇ ಇನ್ನಿಂಗ್ಸ್ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ 100 ರನ್ಗಳ ಗುರಿ ನೀಡಿತು.
100 ರನ್ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ್ದ ಕರ್ನಾಟಕ ಬುಲ್ಡೋಜರ್ಸ್ ನಿಧಾನವಾಗಿ ಗುರಿ ಮುಟ್ಟುವ ಪ್ರಯತ್ನ ಮಾಡಿತು. ಪ್ರತಿ ಓವರ್ಗೆ 10 ರನ್ಗಳನ್ನು ತಂಡ ಗಳಿಸಬೇಕಾಗಿತ್ತು. ಹಾಗಾಗಿ ದೊಡ್ಡ ಹೊಡೆತಗಳಿಗೆ ಕೈ ಹಾಕದೇ ಒಂದು, ಎರಡು ರನ್ ಕದಿಯುತ್ತಾ ಆಗೊಮ್ಮೆ ಈಗೊಮ್ಮೆ ಬೌಂಡರಿ ಬಾರಿಸುತ್ತಾ ಅಂತಿಮವಾಗಿ 8 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಸಿಸಿಎಲ್ 2024ರಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡ 3ನೇ ಬಾರಿ ಟ್ರೋಫಿ ಎತ್ತಿ ಹಿಡಿಯುವ ಹುಮ್ಮಸ್ಸಿನಲ್ಲಿದೆ. 2013 ಹಾಗೂ 2014ರಲ್ಲಿ ಎರಡು ಬಾರಿ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಸಿಸಿಎಲ್ ಟ್ರೋಫಿಗೆ ಮುತ್ತಿಟ್ಟಿತ್ತು.
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಕರ್ನಾಟಕ ಬುಲ್ಡೋಜರ್ಸ್ ನೇರವಾಗಿ ಫೈನಲ್ ಪ್ರವೇಶಿಸಿದೆ. ಇಂದು(ಮಾರ್ಚ್ 16) ನಡೆಯುವ ಮತ್ತೊಂದು ಕ್ವಾಲಿಫೈಯರ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ಇನ್ನೊಂದು ಅವಕಾಶ ಸಿಗುತ್ತಿದೆ. ಮುಂಬೈ ಹೀರೊಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ನಾಳೆ(ಮಾರ್ಚ್ 17) ಫೈನಲ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಎದುರಿಸಲಿದೆ.
ಅಂದಹಾಗೆ ಟೆಸ್ಟ್ ಪಂದ್ಯಗಳ ರೀತಿ 10 ಓವರ್ಗಳ ನಾಲ್ಕು ಇನ್ನಿಂಗ್ಸ್ಗಳಾಗಿ ಸಿಸಿಎಲ್ ಪಂದ್ಯಗಳು ನಡೆಯುತ್ತಿವೆ. ಪ್ರತಿ ತಂಡಕ್ಕೆ 2 ಇನ್ನಿಂಗ್ಸ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಅವಕಾಶ ಸಿಗುತ್ತದೆ. ಕೇರಳದ ತಿರುವಂತಪುರಂನ ಗ್ರೀನ್ ಫೀಲ್ಡ್ ಮೈದಾನದಲ್ಲಿ ಕರ್ನಾಟಕ ಬುಲ್ಡೋಜರ್ಸ್ Vs ಬೆಂಗಾಲ್ ಟೈಗರ್ಸ್ ಮೊದಲ ಕ್ವಾಲಿಫೈಯರ್ ಪಂದ್ಯ ನಡೀತು.
ಫೈನಲ್ ಪ್ರವೇಶಿಸಿದ ಸಂಭ್ರಮದಲ್ಲಿ ನಟ ಸುದೀಪ್ ಸೆಲ್ಫಿ ವೀಡಿಯೋ ಮಾಡಿ ತಂಡದ ಜೊತೆ ಪೋಸ್ ಕೊಟ್ಟಿದ್ದಾರೆ. ಅಂತಿಮ ಹಣಾಹಣಿಗೆ ಕರ್ನಾಟಕ ಬುಲ್ಡೋಜರ್ಸ್ ತಂಡ ಪ್ರವೇಶಿಸಿದ್ದಕ್ಕೆ ಚಿಯರ್ಅಪ್ ಮಾಡಿದ್ದಾರೆ. ಸದ್ಯ ಆ ವೀಡಿಯೋ ವೈರಲ್ ಆಗುತ್ತಿದೆ.
ಭಾರತೀಯ ಚಿತ್ರರಂಗದ 8 ಭಾಷೆಗಳ ಸಿನಿಮಾ ಕಲಾವಿದರು, ತಂತ್ರಜ್ಞರು 8 ಬೇರೆ ಬೇರೆ ತಂಡಗಳಾಗಿ ಈ ಬಾರಿಯ ಸಿಸಿಎಲ್ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಸುದೀಪ್ ಕ್ಯಾಪ್ಟನ್ ಆಗಿ ತಂಡ ಮುನ್ನಡೆಸುತ್ತಿದ್ದಾರೆ. ನಟರಾದ ಪ್ರದೀಪ್, ಡಾರ್ಲಿಂಗ್ ಕೃಷ್ಣ, ಜೆಕೆ, ರಾಜೀವ್, ಪ್ರತಾಪ್, ಕರಣ್, ಪೆಟ್ರೋಲ್ ಪ್ರಸನ್ನ, ಮಂಜುನಾಥ್, ಚಂದನ್, ಸುನೀಲ್ ರಾವ್ ತಂಡದಲ್ಲಿದ್ದಾರೆ.


Click it and Unblock the Notifications











