ಕರ್ನಾಟಕ ಬಾವುಟ ಹಾರಿಸುವುದಕ್ಕೆ ಸಂದರ್ಭ ಬೇಕಾ, ಜಾಗ ಬೇಕಾ, ನಮ್ಮ ಬಾವುಟ- ಸುದೀಪ್
ಈ ಬಾರಿ ಸಿಸಿಎಲ್ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಗೆದ್ದು ಬೀಗಿತ್ತು. ಕಳೆದ ಭಾನುವಾರ(ಫೆಬ್ರವರಿ 1) ಕೊಯಂಬತ್ತೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಗೆದ್ದು ಕಿಚ್ಚನ ಪಡೆ ಟ್ರೋಫಿ ಎತ್ತಿ ಹಿಡಿದಿತ್ತು. ಸುದ್ದಿಗೋಷ್ಠಿ ನಡೆಸಿ ಆ ಸಂಭ್ರಮವನ್ನು ಇಡೀ ತಂಡ ಹಂಚಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ಕೇಳಿದ ಸಾಕಷ್ಟು ಪ್ರಶ್ನೆಗಳಿಗೆ ಕಿಚ್ಚ ಸುದೀಪ್ ಉತ್ತರಿಸಿದ್ದರು. ಕರ್ನಾಟಕ ಬುಲ್ಡೋಜರ್ಸ್ ತಂಡದ ಕ್ಯಾಪ್ಟನ್ ಆಗಿ ಸುದೀಪ್ ಗಮನ ಸೆಳೆಯುತ್ತಿದ್ದಾರೆ. ವಿಕೆಟ್ ಕೀಪರ್ ಆಗಿ ಮಾತ್ರವಲ್ಲದೇ ಬ್ಯಾಟಿಂಗ್ನಲ್ಲಿ ಕೂಡ ಖದರ್ ತೋರಿಸುತ್ತಾ ಬರ್ತಿದ್ದಾರೆ. ಇನ್ನು ಕೊಯಂಬತ್ತೂರಿನ ಮೈದಾನದಲ್ಲಿ ಎರಡು ಬಾರಿ ಪಂದ್ಯ ಗೆದ್ದು ಸುದೀಪ್ ಕನ್ನಡ ಬಾವುಟ ಹಾರಿಸಿದ್ದರು.

ಕೆಲ ದಿನಗಳ ಹಿಂದೆ ತಮಿಳುನಾಡಿನಲ್ಲಿ ಕನ್ನಡ ಬಾವುಟಕ್ಕೆ ಅವಮಾನವಾಗಿತ್ತು. ಕರ್ನಾಟದ ವಾಹನದ ಮೇಲಿದ್ದ ಬಾವುಟವನ್ನು ತೆಗೆಸಲಾಗಿತ್ತು. ಅದರ ಬೆನ್ನಲ್ಲೇ ತಮಿಳುನಾಡಿನಲ್ಲೇ ಕಿಚ್ಚ ಸುದೀಪ್ ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದ್ದು ವೈರಲ್ ಆಗಿತ್ತು. ಜನವರಿ 25ರಂದು ನಡೆದ ಪಂದ್ಯದಲ್ಲಿ ಭೋಜ್ಪುರಿ ದಬಾಂಗ್ಸ್ ವಿರುದ್ಧ ಗೆದ್ದು ಸುದೀಪ್ ಕನ್ನಡ ಧ್ವಜ ಹಿಡಿದು ಸಂಭ್ರಮಿಸಿದ್ದರು. ಬಳಿಕ ಜನವರಿ 31ರಂದು ಸೆಮಿಫೈನಲ್ ಪಂದ್ಯದಲ್ಲಿ ಚೆನ್ನೈ ವಿರುದ್ಧವೇ ಗೆದ್ದು ಖುಷಿಪಟ್ಟಿದ್ದರು.
ಪಂದ್ಯದ ಬಳಿಕ ಕನ್ನಡ ಧ್ವಜ ಹಿಡಿದು ಸುದೀಪ್ ಸಂಭ್ರಮಿಸಿದ ವಿಡಿಯೋಗಳು ವೈರಲ್ ಆಗಿತ್ತು. ಕಳೆದ ವರ್ಷ ಚೆನ್ನೈ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಬುಲ್ಡೋಜರ್ಸ್ ತಂಡ ಸೋತಿತ್ತು. ಮೈಸೂರಿನಲ್ಲಿ ಆ ಪಂದ್ಯ ನಡೆದಿತ್ತು. ಅದಕ್ಕೆ ಮುಯ್ಯಿ ಎನ್ನುವಂತೆ ಕೊಯಂಬತ್ತೂರಿನಲ್ಲಿ ಕಿಚ್ಚನ ಪಡೆ ಅಬ್ಬರಿಸಿತ್ತು. ಕನ್ನಡ ಬಾವುಟಕ್ಕೆ ಅವಮಾನವಾದ ಜಾಗದಲ್ಲೇ ಮತ್ತೆ ಬಾವುಟ ಹಾರಿಸಿದ್ದರ ಬಗ್ಗೆ ಕಿಚ್ಚನಿಗೆ ಪ್ರಶ್ನೆ ಎದುರಾಗಿತ್ತು.
"ಕನ್ನಡ ಬಾವುಟ ಹಾರಿಸುವುದಕ್ಕೆ ಸಂದರ್ಭ ಬೇಕಾ? ಜಾಗ ಬೇಕಾ? ನಮ್ಮ ಬಾವುಟ, ಬುರ್ಜ್ ಖಲೀಫಾ ಮೇಲೆ ಹಾರಿಸಿದ್ದೀವಿ. ನಮ್ಮೂರಲ್ಲಿ ಹಾರಿಸೋಕೆ ಏನು?" ಎಂದು ಸುದೀಪ್ ಉತ್ತರಿಸಿದ್ದಾರೆ. ಕಿಚ್ಚನ ಹೇಳಿಕೆ ವೈರಲ್ ಆಗುತ್ತಿದೆ. ಇನ್ನು ಸಿಸಿಎಲ್ ಟೂರ್ನಿಯಲ್ಲಿ ಬೆಂಬಲಕ್ಕೆ ನಿಂತ ಎಲ್ಲರಿಗೂ ಸುದೀಪ್ ಧನ್ಯವಾದ ತಿಳಿಸಿದರು.
ಚೆನ್ನೈ ವಿರುದ್ಧ ಸೆಮಿಫೈನಲ್ ಒಂದ್ಯ ಗೆದ್ದ ಬಗ್ಗೆ ಸುದೀಪ್ ಮಾತನಾಡಿದ್ದಾರೆ. "ಲೀಗ್ ಹಂತದಲ್ಲೇ ಸೋತ್ರೆ ಪರವಾಗಿಲ್ಲ, ನಮ್ಮ ತಂಡ ಚೆನ್ನಾಗಿಲ್ಲ ಅಂದುಕೊಳ್ಳಬಹುದು. ಕೆಲವೊಮ್ಮೆ ಬ್ಯಾಡ್ಲಕ್ ಏನಂದ್ರೆ, ಒಂದು ಪಂದ್ಯ ಗೆದ್ದು ಬಂದವರ ವಿರುದ್ಧ 3 ಪಂದ್ಯ ಗೆದ್ದು ಸೆಮಿಫೈನಲ್ ಆಡ್ತಿರ್ತೀವಿ. ಅಲ್ಲಿ ಸೋಲುವುದು, ವೈರಲ್ ವಿಡಿಯೋಗಿಂತ ಕೆಟ್ಟದಾಗಿ ಇರುತ್ತೆ. ಕಳೆದ ಬರಿ ಆ ರೀತಿ ಆಗಿತ್ತು" ಎಂದು ನೆನಪಿಸಿಕೊಂಡಿದ್ದಾರೆ.
ಕಳೆದ ಬಾರಿ ನಾವೇ ಒಂದು ತಂಡದ ವಿರುದ್ಧ ಗೆದ್ದು, ಮತ್ತೊಂದು ಟೀಮ್ ಅನ್ನು ಸೆಮಿಫೈನಲ್ಗೆ ಕರೆಸಿಕೊಂಡಿದ್ವಿ. ಕೊನೆಗೆ ಸೆಮಿಫೈನಲ್ನಲ್ಲಿ ಅವರ ವಿರುದ್ಧವೇ ಸೋತಿರ್ತೀವಿ. ಈ ಬಾರಿ ಒಂದು ಹಠ ಇತ್ತು. ಅವರ ಊರಲ್ಲೇ ಹೊಡೀಬೇಕು ಅಂತ. ಅದೇ ರೀತಿ ಹೊಡೆದ್ವಿ. ಅದಕ್ಕೆ ಕಾರಣ ನಮ್ಮ ತಂಡ ಎಂದು ಚೆನ್ನೈ ವಿರುದ್ಧದ ಸೆಮಿಫೈನಲ್ ಪಂದ್ಯದ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿದ್ದಾರೆ.
ಸಿಸಿಎಲ್ ಆರಂಭದ ದಿನಗಳಲ್ಲಿ ಅಂಬರೀಷ್ ತಂಡದ ಜೊತೆ ನಿಲ್ಲುತ್ತಿದ್ದರು. ಅವರ ಬಗ್ಗೆ ಸುದೀಪ್ ಮಾತನಾಡಿ "ಕೆಲವರು ನಮ್ಮ ಜೊತೆ ಇದ್ದರೂ ಇಲ್ಲದಂತೆ, ಮತ್ತೆ ಕೆಲವರು ಇಲ್ಲದೇ ಇದ್ದರು ಜೊತೆಗಿದ್ದಂತೆ. ಅಂಬರೀಷ್ ಅವರು ದೊಡ್ಡ ಶಕ್ತಿ, ದೊಡ್ಡ ಎಂಟರ್ಟೈನ್ಮೆಂಟ್ ಆಗಿದ್ದರು. ಅವರು ಇದ್ದಿದ್ದರೆ ಇನ್ನು ಚೆನ್ನಾಗಿ ಇರ್ತಿತ್ತು. ನಮ್ಮ ಅಮ್ಮ ಕೂಡ ಇರಬೇಕಿತ್ತು. ಆದರೆ ಅವರ್ಯಾರು ಇಲ್ಲ ಎಂದು ನಾನು ಎಂದೂ ಅಂದುಕೊಂಡಿಲ್ಲ ಎಂದು ಸುದೀಪ್ ಹೇಳಿದ್ದಾರೆ.


Click it and Unblock the Notifications











