ರಾಷ್ಟ್ರಪತಿ ಭವನದಲ್ಲಿ ಮುಖಾಮುಖಿಯಾದ ಆಮಿರ್ ಖಾನ್ ಮತ್ತು ಸಿಎಂ ಸಿದ್ದರಾಮಯ್ಯ .ಕುತೂಹಲ ಹೆಚ್ಚಿಸಿದ ಭೇಟಿ !
ಚಿತ್ರರಂಗ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು. ಹಲವಾರು ತಾರೆಯರು ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದಾರೆ. ಆ ಪೈಕಿ ಕೆಲವರು ಗೆದ್ದಿದ್ದಾರೆ. ಯಶಸ್ವಿಯಾಗಿದ್ದಾರೆ. ಇನ್ನು ಕೆಲವರು ಹೀಗೆ ಬಂದು ಹಾಗೇ ಹೋಗಿದ್ದಾರೆ. ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಿದಂತೆ ರಾಜಕಾರಣದಲ್ಲಿ ನಿಂತವರ ಸಂಖ್ಯೆ ಕಡಿಮೆಯೇ. ಇನ್ನು ಕೆಲವರು ಸಕ್ರಿಯ ರಾಜಕಾರಣಕ್ಕೆ ಬರದಿದ್ದರೂ ರಾಜಕಾರಣಿಗಳ ಪರವಾಗಿ ರಾಜಕೀಯ ಪಕ್ಷಗಳ ಪರವಾಗಿ ಪ್ರಚಾರ ಮಾಡುತ್ತಲೇ ಬಂದಿದ್ದಾರೆ.
ಇನ್ನು .. ಎಡ-ಬಲ ಯಾವುದೇ ಇರಲಿ ಹಲವು ರಾಜಕಾರಣಿಗಳ ಮತ್ತು ಚಿತ್ರರಂಗದವರ ವೇದಾಂತ-ಸಿದ್ಧಾಂತ ಒಂದೇ. ಕೆಲವರು ಎಡಕ್ಕೆ ಹೊರಳಿದರೆ. ಇನ್ನು ಕೆಲವರು ಇಲ್ಲಿ ಬಲಕ್ಕೆ ಹೊರಳಿದವರು ಇದ್ದಾರೆ. ಹೀಗಿರುವಾಗ ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಕರುನಾಡಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.

ತಮ್ಮ ಈ ಭೇಟಿಯ ಕ್ಷಣಗಳನ್ನು ಸಿಎಂ ಸಿದ್ಧರಾಮಯ್ಯ ಖುಷಿಯಿಂದ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೂಡ ಹಂಚಿಕೊಂಡಿದ್ಧಾರೆ. ಆಮಿರ್ ಖಾನ್ ಅವರನ್ನು ಬಾಯ್ತುಂಬ ಹೊಗಳಿದ್ಧಾರೆ.
ಈ ಕುರಿತು ದೆಹಲಿಯಲ್ಲಿ ಇಂದು ರಾಷ್ಟ್ರಪತಿಗಳ ಭೇಟಿಗಾಗಿ ರಾಷ್ಟ್ರಪತಿ ಭವನಕ್ಕೆ ತೆರಳಿದ ವೇಳೆ ಬಾಲಿವುಡ್ನ ಸಂವೇದನಾಶೀಲ ನಟ, ನಿರ್ದೇಶಕ ಅಮಿರ್ ಖಾನ್ ಅವರು ಆಕಸ್ಮಿಕವಾಗಿ ಎದುರಾದರು. ಸಿನೆಮಾ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ, ಧನಾತ್ಮಕ ಬದಲಾವಣೆಗೆ ತುಡಿಯುವ ಅವರೊಳಗಿನ ಸಮಾಜಮುಖಿ ವ್ಯಕ್ತಿತ್ವ ನಟನೆಯನ್ನು ಮೀರಿ ಜನರಿಗೆ ಅವರನ್ನು ಹೆಚ್ಚು ಆಪ್ತವಾಗಿಸಿದೆ, ಅವರ ಮುಂದಿನ ಚಿತ್ರಗಳಿಗೆ ಶುಭವಾಗಲಿ ಎಂದು ಹಾರೈಸಿ, ಆರೋಗ್ಯದ ಕಾಳಜಿ ವಹಿಸುವಂತೆ ಸಲಹೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಸೋಶಿಯಲ್ ಬರೆದುಕೊಂಡಿದ್ದಾರೆ.
ಅಂದ್ಹಾಗೇ ಸಿಎಂ ಸಿದ್ಧರಾಮಯ್ಯ ರಾಜ್ಯದ ಏಳು ಮಸೂದೆಗಳಿಗೆ ಅನುಮೋದನೆ ನೀಡುವಂತೆ ಕೋರಿ ಸಚಿವರಾದ ಮಹದೇವಪ್ಪ.. ಕೆಜೆ ಜಾರ್ಜ್.. ಸತೀಶ್ ಜಾರಕಿಹೊಳ್ಳಿ ಜೊತೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಈ ಭೇಟಿಯ ಹಿನ್ನೆಲೆ ರಾಷ್ಟ್ರಪತಿ ಭವನಕ್ಕೆ ತೆರಳಿದಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಆಮಿರ್ ಖಾನ್ ಮುಖಾಮುಖಿಯಾಗಿದ್ದಾರೆ. ಪರಸ್ಪರ ಉಭಯ ಕುಶಲೋಪರಿಯನ್ನು ವಿಚಾರಿಸಿದ್ದಾರೆ.
ಇನ್ನು 'ಸಿತಾರೆ ಜಮೀನ್ ಪರ್' ವಿಶೇಷ ಚೇತನ ಮಕ್ಕಳ ಸುತ್ತ ಸುತ್ತುವ ಸಿನಿಮಾ. ನಗಿಸುತ್ತಲೇ ಅಳಿಸುವ ಭಾವನಾತ್ಮಕವಾದ ಸಿನಿಮಾ. ತಮ್ಮ ಈ ಚಿತ್ರಕ್ಕೆ ಎಲ್ಲೆಡೆ ಪ್ರಶಂಸೆ ಸಿಗುತ್ತಿರುವ ಹಿನ್ನೆಲೆ ಬಿಡುವು ಮಾಡಿಕೊಂಡು ಚಿತ್ರ ನೋಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲು ಆಮಿರ್ ಖಾನ್ ರಾಷ್ಟ್ರಪತಿ ಭವನಕ್ಕೆ ಬಂದಿದ್ದರು ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.
ಇದೇ ಸಮಯದಲ್ಲಿ ಸಿಎಂ ಸಿದ್ಧರಾಮಯ್ಯ ಕೂಡ ಭೇಟಿಯಾಗಿದ್ದು ಮುಂಬರುವ ದಿನಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಅಭಿನಯದ ಸಿತಾರೆ ಜಮೀನ್ ಪರ್ ಚಿತ್ರವನ್ನು ನೋಡುತ್ತಾರಾ ಎನ್ನುವ ಕುತೂಹಲ ಸದ್ಯ ರಾಜಕೀಯದ ಪಡಸಾಲೆಯಲ್ಲಿ ಮತ್ತು ಚಿತ್ರರಂಗದಲ್ಲಿ ಮನೆ ಮಾಡಿದೆ.
ಇನ್ನುಳಿದಂತೆ ಬಾಕಿ ಉಳಿದಿರುವ ರಾಜ್ಯದ ಏಳು ಮಸೂದೆಗಳಿಗೆ ಅನುಮೋದನೆ ನೀಡುವಂತೆ
ರಾಷ್ಟ್ರಪತಿಗಳಿಗೆ ಮನವಿಯನ್ನು ಸಿಎಂ ಸಿದ್ಧರಾಮಯ್ಯ ಮಾಡಿದ್ದು, ಆ ಏಳು ಅನುಮೋದನೆಗಳು ಈ ಕೆಳಗಿನಂತಿವೆ.
ಏಳು ಮಸೂದೆಗಳು !
1. ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿ) ತೆರಿಗೆ ಮಸೂದೆ 2024.
2.ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು (ಕರ್ನಾಟಕ ತಿದ್ದುಪಡಿ) ಮಸೂದೆ, 2015
3. ನೋಟರಿಗಳು (ಕರ್ನಾಟಕ ತಿದ್ದುಪಡಿ) ಮಸೂದೆ, 2025
4. ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ, 2024.
5. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಕಾಯ್ದೆ, 2025.
6. ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ, 2025
7. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ (ತಿದ್ದುಪಡಿ) ಕಾಯ್ದೆ,


Click it and Unblock the Notifications











