ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ: ಸುದೀಪ್, ಶಿವಣ್ಣ, ಧ್ರುವ, ರಮ್ಯಾ ಪ್ರಚಾರ ನಡೆಸಿದ ಅಭ್ಯರ್ಥಿಗಳ ಭವಿಷ್ಯ ಏನಾಗಲಿದೆ?
ಕರ್ನಾಟಕದ 16ನೇ ವಿಧಾನಸಭೆ ಚುನಾವಣೆಯ ಫಲಿಶಾಂಶ ಇಂದು(ಮೇ 13) ಹೊರ ಬೀಳಲಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಕಳೆದೊಂದು ತಿಂಗಳಿನಿಂದ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಅಭ್ಯರ್ಥಿಗಳು ಮತದಾನದ ಬಳಿಕ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಈ ಬಾರಿ ಸಿನಿಮಾ ತಾರೆಯರು ವಿವಿಧ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಆ ಅಭ್ಯರ್ಥಿಯ ಭವಿಷ್ಯವೂ ನಿರ್ಧಾರವಾಗಲಿದೆ.
ತಾರೆಯರ ಆಗಮನದಿಂದ ಈ ವರ್ಷ ಚುನಾವಣೆ ಪ್ರಚಾರ ಕಾವು ಪಡೆದುಕೊಂಡಿತ್ತು. ನಟರಾದ ದರ್ಶನ್, ಸುದೀಪ್, ಶಿವರಾಜ್ಕುಮಾರ್, ಧ್ರುವ ಸರ್ಜಾ, ದುನಿಯಾ ವಿಜಯ್, ನಟಿ ರಮ್ಯಾ ಸೇರಿದಂತೆ ಹಲವರು ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಮತಬೇಟೆ ನಡೆಸಿದ್ದರು. ಬಿಸಿಲು, ಮಳೆ ಲೆಕ್ಕಿಸದೇ ರೋಡ್ಶೋ, ಸಮಾವೇಶಗಳನ್ನು ನಡೆಸಿ ಮತಯಾಚಿಸಿದರು. ಪ್ರಚಾರದ ವೇಳೆ ಆರೋಪ ಪ್ರತ್ಯಾರೋಪ, ಟೀಕೆ ಕೂಡ ನಡೀತು. ಬರೀ ಕನ್ನಡ ಕಲಾವಿದರು ಮಾತ್ರವಲ್ಲದೇ ಪರಭಾಷಾ ತಾರೆಯರನ್ನು ಕೂಡ ಕರೆತಂದು ಪ್ರಚಾರ ಮಾಡಿ ಮತದಾರರನ್ನು ಸೆಳೆಯುವ ತಂತ್ರ ನಡೆಯಿತು.

ದರ್ಶನ್, ಸುದೀಪ್, ಶಿವಣರಂತಹ ಘಟಾನುಘಟಿಗಳು ಪ್ರಚಾರಕ್ಕೆ ಬಂದಿದ್ದರಿಂದ ಕಾರ್ಯಕರ್ತರು, ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಜಮಾಯಿಸಿ ಶಕ್ತಿ ಪ್ರದರ್ಶನ ನಡೆಯಿತು. ಸದ್ಯ ಸ್ಟಾರ್ಗಳು ಪ್ರಚಾರದ ನಡೆಸಿದ ಅಭ್ಯರ್ಥಿಗಳು ಗೆಲ್ತಾರಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಬರೀ ತಾರೆಯರನ್ನು ನೋಡಿ ಮತದಾರರು ಮತ ಚಲಾಯಿಸುವುದಿಲ್ಲ. ಆಯಾ ಕ್ಷೇತ್ರದ ಅಭ್ಯರ್ಥಿಗಳ ತಾಕತ್ತು ಕೂಡ ಅಲ್ಲಿ ಮುಖ್ಯವಾಗುತ್ತದೆ. ಚಿತ್ರರಂಗದ ಮಟ್ಟಿಗೆ ಭಾರೀ ಕುತೂಹಲ ಮೂಡಿಸಿರುವುದು ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ಫಲಿತಾಂಶ. ಕಾರಣ ಇಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಒಂದ್ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ನಟ ದರ್ಶನ್ ಹಾಗೂ ನಿರ್ಮಾಪತಿ ಉಮಾಪತಿ ಈಗ ದೂರಾಗಿದ್ದಾರೆ. ಉಮಾಪತಿ ಎದುರು ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರ ದರ್ಶನ್ ಪ್ರಚಾರ ನಡೆಸಿದ್ದರು. ಉಮಾಪತಿ ಪರೋಕ್ಷವಾಗಿ ಟಾಂಗ್ ಕೊಟ್ಟರೆ ದರ್ಶನ್ ನೇರವಾಗಿಯೇ ವಾಗ್ದಾಳಿ ನಡೆಸಿದ್ದರು. ಬೊಮ್ಮನಹಳ್ಳಿಯಲ್ಲಿ ಸತೀಶ್ ರೆಡ್ಡಿ ಕೈ ಮೇಲಾಗುವ ಸಾಧ್ಯತೆಯಿದೆ. ಆದರೂ ಉಮಾಪತಿ ಕೂಡ ಪ್ರಬಲ ಪೈಪೋಟಿ ನೀಡಲಿದ್ದಾರೆ. ಸತೀಶ್ ರೆಡ್ಡಿ ಅವರು ದರ್ಶನ್ ಸರ್ನ ಪ್ರಚಾರಕ್ಕೆ ಕರೆಸಿದರೆ ನಮ್ಮ ಕಾರ್ಯಕರ್ತರೇ ನನಗೆ ಸ್ಟಾರ್ಗಳ ಎಂದಿದ್ದರು.
ಬೊಮ್ಮನಹಳ್ಳಿಯ ನಂತರ ರಾಮನಗರ ಕ್ಷೇತ್ರದ ಫಲಿತಾಂಶ ಕೂಡ ಇದೇ ರೀತಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಅಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ರಾಮನಗರದ ಜೆಡಿಎಸ್ ಭದ್ರ ಕೋಟೆ ಎನ್ನಲಾಗುತ್ತದೆ. ನಿಖಿಲ್ ಎದುರು ಬಿಜೆಪಿ ಅಭ್ಯರ್ಥಿಯಾಗಿ ಗೌತಮ್ ಗೌಡ, ಇಕ್ಬಾಲ್ ಹುಸೇನ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಪೈಪೋಟಿ ನೀಡಿದ್ದಾರೆ. ಬಿಜೆಪಿ ನಾಯಕರು ಮೋದಿ, ಅಮಿತ್ ಶಾನ ಕರೆಸಿದ್ದಾರೆ, ನಮಗೆ ನಮ್ಮ ಕಾರ್ಯಕರ್ತರೇ ಸ್ಟಾರ್ ಪ್ರಚಾರಕರು ಎಂದು ಹೇಳಿದ್ದರು.
ಚಿಕ್ಕಬಳ್ಳಾಪುರ ಕ್ಷೇತ್ರದ ಫಲಿತಾಂಶ ಕೂಡ ಕುತೂಹಲ ಮೂಡಿಸಿದೆ. ಅದಕ್ಕೆ ಕಾರಣ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ ಪರ ದರ್ಶನ್, ಸುದೀಪ್ ಮಾತ್ರವಲ್ಲೇ ತೆಲುಗು ನಟ ಬ್ರಹ್ಮಾನಂದಂ ಕೂಡ ಪ್ರಚಾರ ನಡೆಸಿ ಮತಯಾಚಿಸಿದ್ದಾರೆ. ಕಾಂಗ್ರೆಸ್ನಿಂದ ಪ್ರದೀಪ್ ಈಶ್ವರ್ ಅಯ್ಯರ್, ಜೆಡಿಎಸ್ನಿಂದ ಕೆ. ಪಿ ಬಚ್ಚೇಗೌಡ ಕಣದಲ್ಲಿದ್ದಾರೆ. ದರ್ಶನ್ ಹಾಗೂ ಸುದೀಪ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಗೊತ್ತೇಯಿದೆ. ಆದರೆ ಬಿಜೆಪಿ ಅಭ್ಯರ್ಥಿ ಇಬ್ಬರನ್ನು ಬೇರೆ ಬೇರೆ ದಿನ ತಮ್ಮ ಕ್ಷೇತ್ರಕ್ಕೆ ಕರೆಸಿ ಬಿರುಸಿನ ಪ್ರಚಾರ ನಡೆಸಿದರು.
ಈ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿರುವ ವರುಣ ಹೈವೋಲ್ಟೇಜ್ ಕ್ಷೇತ್ರ ಎನಿಸಿಕೊಂಡಿತ್ತು. ಕಾರಣ ಕೊನೆ ಕ್ಷಣದದಲ್ಲಿ ಬಿಜೆಪಿ ಹೈ ಕಮಾಂಡ್ ವಿ. ಸೋಮಣ್ಣ ಅವರನ್ನು ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಸಿತ್ತು. ಇಬ್ಬರು ಕೂಡ ಭಾರೀ ಪ್ರಚಾರ ನಡೆಸಿದರು. ಸಿದ್ದು ಪರ ನಟ ಶಿವರಾಜ್ಕುಮಾರ್ ಪ್ರಚಾರ ನಡೆಸಿದ್ದು ವಿಶೇಷ. ಇದೇ ಕಾರಣಕ್ಕೆ ಶಿವಣ್ಣ ಸಾಕಟ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಹಾಗಾಗಿ ವರುಣ ಕ್ಷೇತ್ರದ ಫಲಿತಾಂಶ ಕೂಡ ಭಾರೀ ಕುತೂಹಲ ಮೂಡಿಸಿದೆ. ಅಲ್ಲಿ ಸಿದ್ದು ಗೆಲ್ಲೋದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ನಟ ಸುದೀಪ್ ಚುನವಾಣೆ ಹತ್ತಿರವಾಗುತ್ತಿದ್ದಂತೆ ತಮಗೆ ಆಪ್ತರಾದ ಸಿಎಂ ಬಸವರಾಜ ಬೊಮ್ಮಾಯಿಗೆ ಬೆಂಬಲ ಸೂಚಿಸಿದರು. ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಪರ ಸಮಾವೇಶದಲ್ಲಿ ಭಾಗವಹಿಸಿ, ರೋಡ್ ಶೋ ನಡೆಸಿ ಕಿಚ್ಚ ಮತಬೇಟೆ ನಡೆಸಿದರು. ಅಲ್ಲಿ ಜೆಡಿಎಸ್ನಿಂದ ಶಶಿಧರ್ ಚನ್ನಬಸಪ್ಪ ಯಲಿಗಾರ್, ಕಾಂಗ್ರೆಸ್ನಿಂದ ಯಾಸಿರ್ ಅಹಮದ್ ಖಾನ್ ಕಣದಲ್ಲಿ ಇದ್ದಾರೆ. ಈ ಬಾರಿಯೂ ಬಿಜೆಪಿ ಬಹುಮತ ಗಳಿಸಿದರೆ ಬೊಮ್ಮಾಯಿ ಮತ್ತೆ ಸಿಎಂ ಆಗುವ ಸಾಧ್ಯತೆಯಿದೆ.
ಇನ್ನುಳಿದಂತೆ ನಟ ದರ್ಶನ್ ಯಾವುದೋ ಒಂದು ಪಕ್ಷಕ್ಕೆ ಸೀಮಿತವಾಗದೇ ಎಲ್ಲಾ ಪಕ್ಷಗಳ ತಮ್ಮ ಆಪ್ತರ ಪರ ಪ್ರಚಾರ ನಡೆಸಿದರು. ಯಲಹಂಕ ಕೇಶವ್ ರಾಜಣ್ಣ, ಮದ್ದೂರಿನಲ್ಲಿ ಕದಲೂರು ಉದಯ್, ಆರ್. ಆರ್ ನಗರದ ಮುನಿರತ್ನ, ದಾಸರಹಳ್ಳಿ ಮುನಿರಾಜು, ಮೇಲುಕೋಟೆ ದರ್ಶನ್ ಪುಟ್ಟಣ್ಣಯ್ಯ, ಹಿರೇಕೆರೂರು ಬಿ ಸಿ ಪಾಟೀಲ್, ಶ್ರೀರಂಗಪಟ್ಟಣ ಸಚ್ಚಿದಾನಂದ ಸೇರಿದಂತೆ ಹಲವು ಅಭ್ಯರ್ಥಿಗಳ ಪರಮತಬೇಟೆ ನಡೆಸಿದ್ದರು.
ಬೊಮ್ಮಾಯಿ ಹೊರತುಪಡಿಸಿ ಶಿಕಾರಿಪುರದಲ್ಲಿ ವಿಜಯೇಂದ್ರ, ವರುಣ ಕ್ಷೇತ್ರದಲ್ಲಿ ವಿ. ಸೋಮಣ್ಣ, ಗುಂಡ್ಲುಪೇಟೆ ಸಿ.ಎಸ್.ನಿರಂಜನಕುಮಾರ್, ಆರ್ಆರ್ ನಗರದಲ್ಲಿ ಮುನಿರತ್ನ, ಲಿಂಗಸುಗೂರು, ರಾಯಚೂರು ಸೇರಿದಂತೆ ಹಲವು ಭಾಗಗಳಲ್ಲಿ ಸುದೀಪ್ ಪ್ರಚಾರ ನಡೆಸಿದ್ದರು. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಬೇಟೆ ನಡೆಸಿದ್ದರು.
ಅರಕಲಗೂಡು ಪಕ್ಷೇತರ ಅಭ್ಯರ್ಥಿ ಕೃಷ್ಣೇಗೌಡ ಪರ ಧ್ರುವ ಸರ್ಜಾ ಪ್ರಚಾರ ನಡೆಸಿದ್ದರು. ನಂತರ ಪದ್ಮನಾಭನಗರದಲ್ಲಿ ಆರ್. ಅಶೋಕ್, ಕೆ. ಆರ್ ಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿದ್ದರು. ಇನ್ನು ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾದ ರಮ್ಯಾ ವರುಣ ಕ್ಷೇತ್ರದಲ್ಲಿ ಸಿದ್ದಾರಾಮಯ್ಯ ಪರ ಪ್ರಚಾರ ನಡೆಸಿದ್ದರು. ಇನ್ನು ದರ್ಶನ್ ಧ್ರುವ ನಾರಾಯಣ, ಎಂ. ಬಿ ಪಾಟೀಲ್ ಪರವಾಗಿಯೂ ಮತ ಹೇಳಿದ್ದರು.


Click it and Unblock the Notifications











