ಬಂಡಾಯ ಕವಿ ಸಿದ್ದಲಿಂಗಯ್ಯರನ್ನು ಕಸಿದುಕೊಂಡ ಕೋವಿಡ್
'ಇಕ್ಕರ್ಲಾ ವದೀರ್ಲಾ, ಈ ನನ್ಮಕ್ಕುಳ್ ಚರ್ಮ ಎಬ್ರಲಾ' ಎಂದು ಕರ್ನಾಟಕ ದಲಿತ ಹೋರಾಟಕ್ಕೆ ಹೊಸ ಚುರುಕು ತಂದುಕೊಟ್ಟ ನಾಡಿನ ಖ್ಯಾತ ಕವಿ ಸಿದ್ದಲಿಂಗಯ್ಯ ಅವರು ಕೋವಿಡ್ನಿಂದಾಗಿ ನಿಧನ ಹೊಂದಿದ್ದಾರೆ.
Recommended Video
ಕೋವಿಡ್ ಪಾಸಿಟಿವ್ ಆಗಿದ್ದ ಸಿದ್ದಲಿಂಗಯ್ಯ ಅವರನ್ನು ಮೇ 4ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿದ್ದಲಿಂಗಯ್ಯ ಅವರಿಗೆ ಆರಂಭದಲ್ಲಿ ಬೆಡ್ ಸಿಕ್ಕಿರಲಿಲ್ಲವಾದರೂ ಸಂಘ-ಸಂಸ್ಥೆಗಳು ಮತ್ತು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರ ನೆರವಿನಿಂದ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವು ದಿನಗಳ ಬಳಿಕ ಕೋವಿಡ್ ವಿರುದ್ಧ ಹೋರಾಡಿ ಇಂದು ಅವರು ನಿಧನ ಹೊಂದಿದ್ದಾರೆ. ಆ ಮೂಲಕ ನಾಡಿನ ದಲಿತ ಹೋರಾಟ ದನಿ ಕಳೆದುಕೊಂಡಂತಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿಯ ಮಂಚನಬೆಲೆ ಗ್ರಾಮದಲ್ಲಿ ಹುಟ್ಟಿದ ಸಿದ್ದಲಿಂಗಯ್ಯ ಅವರು ಶಿಕ್ಷಣ ಮಾಡಿದ್ದು ಬೆಂಗಳೂರಿನಲ್ಲಿ. ಅಧ್ಯಾಪಕ, ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ ಸಿದ್ದಲಿಂಗಯ್ಯ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಎರಡು ಬಾರಿ ವಿಧಾನ ಪರಿಷತ್ ಸದಸ್ಯರೂ ಆಗಿದ್ದರು ಸಿದ್ದಲಿಂಗಯ್ಯ.

ಬಂಡಾಯ ಕವಿ, ದಲಿತ ಕವಿ ಎಂದೇ ಖ್ಯಾತರಾಗಿದ್ದ ಸಿದ್ದಲಿಂಗಯ್ಯ ಅವರು 'ಹೊಲೆಮಾದಿಗರ ಹಾಡು', 'ಕಪ್ಪು ಕಾಡಿನ ಹಾಡು', 'ಸಾವಿರಾರು ನದಿಗಳು' ಇನ್ನೂ ಹಲವಾರು ಕವನ ಸಂಕಲನಗಳ ಮೂಲಕ ಬಂಡಾಯದ ದನಿಗೆ ಶಕ್ತಿ ತುಂಬಿದ್ದರು.
ಸಿದ್ದಲಿಂಗಯ್ಯ ಕೇವಲ ಬಂಡಾಯ ಕವಿತೆ ಮಾತ್ರವೇ ಆಗಿರದೆ, 'ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ' ಎಂಬ ಸುಮಧುರ ಪ್ರೇಮಗೀತೆಯನ್ನೂ ರಚಿಸಿದ್ದಾರೆ. ಸಿದ್ದಲಿಂಗಯ್ಯ ಅವರ ಈ ಕವಿತೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾದಲ್ಲಿ ಹಾಡಾಗಿದೆ.
'ಏಕಲವ್ಯ', 'ನೆಲಸಮ', 'ಪಂಚಮ' ನಾಟಕಗಳನ್ನು ಬರೆದಿರುವ ಸಿದ್ದಲಿಂಗಯ್ಯನವರ ಆತ್ಮತಥೆ 'ಊರು ಕೇರಿ'. ಎರಡು ಭಾಗಗಳಲ್ಲಿ ಪ್ರಕಟವಾಗಿರುವ ಊರು-ಕೇರಿ ರಂಗ ಪ್ರಯೋಗಗಳನ್ನು ಸಹ ಕಂಡಿದೆ.
ಸಿದ್ದಲಿಂಗಯ್ಯ ಅವರ ಅಗಲಿಕೆಗೆ ನಾಡಿನ ಸಾಹಿತಿಗಳು, ಹೋರಾಟಗಾರರು, ರಾಜಕಾರಣಿಗಳು, ಸಿನಿಮಾ ಕರ್ಮಿಗಳು ಕಂಬನಿ ಮಿಡಿದಿದ್ದಾರೆ.


Click it and Unblock the Notifications











