ಸೋನು ನಿಗಮ್ಗೆ ಬಿಗ್ ಶಾಕ್; ಕನ್ನಡ ಹಾಡು ಹಾಡುವ ಅವಕಾಶ ಕೊಡದಿರಲು ಚಿತ್ರರಂಗ ನಿರ್ಧಾರ
ಇತ್ತೀಚೆಗೆ ಬಾಲಿವುಡ್ ಗಾಯಕ ಸೋನು ನಿಗಮ್ ಕನ್ನಡಿಗರನ್ನು ಕೆಣಕಿದ್ದರು. ಬಳಿಕ ಕ್ಷಮೆ ಕೇಳುವ ಬದಲು ತಮ್ಮ ಹೇಳಿಕೆಗೆ ಸಮರ್ಥನೆ ಕೊಡುವ ಪ್ರಯತ್ನ ಮಾಡಿದ್ದರು. ಈಗಾಗಲೇ ಸೋನು ನಿಗಮ್ ವಿರುದ್ಧ ಎಫ್ಐಆರ್ ಸಹ ದಾಖಲಾಗಿದೆ. ಅಷ್ಟೇ ಅಲ್ಲ, ಇದೀಗ ಕನ್ನಡ ಚಿತ್ರರಂಗದಿಂದ ಅವರನ್ನು ದೂರ ಇಡಲು ನಿರ್ಧರಿಸಲಾಗಿದೆ.
ಇನ್ನು ಮುಂದೆ ಸೋನು ನಿಗಮ್ ಅವರಿಗೆ ಕನ್ನಡ ಸಿನಿಮಾಗಳಲ್ಲಿ ಹಾಡಲು ಅವಕಾಶ ಕೊಡದಿರಲು ಫಿಲ್ಮ್ ಚೇಂಬರ್ ತೀರ್ಮಾನಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಮಾತನಾಡಿದ್ದಾರೆ. "ಸೋನು ನಿಗಮ್ ಕನ್ನಡಿಗರ ಬಗ್ಗೆ ಕೇವಲವಾಗಿ ಮಾತಾಡಿದ್ದಾರೆ. ಅವರು ಕ್ಷಮೆ ಕೇಳ್ತಾರೆ ಅಂತ ನಾವು ಭಾವಿಸಿದ್ದೆವು. ಇದುವರೆಗೂ ಸೋನು ನಿಗಮ್ ಕ್ಷಮೆ ಕೇಳಿಲ್ಲ. ಹಾಗಾಗಿ ನಾವು ಈ ಕ್ಷಣದಿಂದಲೇ ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದ ದೂರ ಇಡುವ ಕೆಲಸ ಮಾಡ್ತೀವಿ" ಎಂದು ಹೇಳಿದ್ದಾರೆ.

ಫಿಲ್ಮ್ ಚೇಂಬರ್ ಕಚೇರಿಯಲ್ಲಿ ನಡೆದು ಸುದ್ದಿಗೋಷ್ಠಿಯಲ್ಲಿ ಸಂಗೀತ ಸಂಯೋಜಕರ ಸಂಘ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘದ ಸದಸ್ಯರು ಭಾಗಿಯಾಗಿದ್ದರು. ಸಂಗೀತ ಸಂಯೋಜಕರ ಸಂಘದ ಪ್ರತಿನಿಧಿಯಾಗಿ ಧರ್ಮವಿಶ್ ಆಗಮಿಸಿದ್ದರು. "ನಾವು ಎಲ್ಲಾ ಸಂಗೀತ ನಿರ್ದೇಶಕರ ಜೊತೆ ಮಾತಾಡಿದ್ದೀವಿ. ನಾವೆಲ್ಲ ಸೋನು ನಿಗಮ್ ಅವರಿಗೆ ಅಸಹಕಾರ ತೋರುವುದಕ್ಕೆ ನಿರ್ಧಾರ ಮಾಡಿದ್ದೀವಿ. ನಾವು ಮಾತ್ರ ಅಲ್ಲ ಆಡಿಯೋ ಕಂಪನಿಗಳು ನಮಗೆ ಸಪೋರ್ಟ್ ಮಾಡಬೇಕು. ಸಂಗೀತ ನಿರ್ದೇಶಕರೆಲ್ಲರೂ ಅಸಹಕಾರ ತೋರುವುದಕ್ಕೆ ನಿರ್ಧಾರ ಮಾಡಿದ್ದೀವಿ" ಎಂದು ಧರ್ಮವಿಶ್ ತಿಳಿಸಿದ್ದಾರೆ.
ಅಸಹಕಾರ ಅಂದ್ರೆ ಬ್ಯಾನ್ ಇದ್ದಂತೆಯೇ ಎಂದು ಉಮೇಶ್ ಬಣಕಾರ್ ಹೇಳಿದ್ದಾರೆ. ಇದೇ ವಾರ ಮತ್ತೊಂದು ಸಭೆ ಕರೆದು ಅಸಹಕಾರ ಎಷ್ಟು ಅವಧಿ ಎನ್ನುವುದರ ಬಗ್ಗೆ ಚರ್ಚೆ ಮಾಡ್ತೇವೆ ಎಂದು ಮಾಹಿತಿ ನೀಡಿದ್ದಾರೆ. ಸಿನಿಮಾಗಳಲ್ಲಿ ಹಾಡು ಹಾಡುವುದು ಮಾತ್ರವಲ್ಲ ಕರ್ನಾಟಕದಲ್ಲಿ ಸೋನು ನಿಗಮ್ ಯಾವುದೇ ಕಾರ್ಯಕ್ರಮದಲ್ಲಿ ಹಾಡದಂತೆ ನೋಡಿಕೊಳ್ಳುವುದಾಗಿಯೂ ಹೇಳಿದ್ಧಾರೆ.
ಏಪ್ರಿಲ್ 25ರಂದು ಬೆಂಗಳೂರಿನಲ್ಲಿ ನಡೆದ ಸಂಗೀತಸಂಜೆ ಕಾರ್ಯಕ್ರಮದಲ್ಲಿ ಸೋನು ನಿಗಮ್ ಭಾಗಿ ಆಗಿದ್ದರು. ಈ ವೇಳೆ ಕನ್ನಡ ಹಾಡು ಹಾಡುವಂತೆ ಒಬ್ಬರು ಕೂಗಿ ಕೇಳಿದ್ದರು. ಕೂಡಲೇ ಪ್ರತಿಕ್ರಿಯಿಸಿದ್ದ ಸೋನು ನಿಗಮ್ "ಕನ್ನಡ.. ಕನ್ನಡ.. ಇದೇ ಕಾರಣದಿಂದ ಪಹಲ್ಗಾಮ್ ಘಟನೆ ನಡೆದಿದ್ದು" ಎಂದು ಹೇಳಿದ್ದರು. ಕನ್ನಡ ಹಾಡು ಕೇಳುವುದಕ್ಕೂ ಪಹಲ್ಗಾಮ್ ಘಟನೆಗೂ ಏನ್ ಸಂಬಂಧ? ಕರ್ನಾಟಕದಲ್ಲಿ ಕನ್ನಡ ಹಾಡು ಕೇಳುವುದು ಭಯೋತ್ಪಾದನೆಗೆ ಸಮವೇ? ಎಂದು ಕನ್ನಡಿಗರು ಕೆಂಡ ಕಾರುತ್ತಿದ್ಧಾರೆ.
ಕನ್ನಡ ಭಾಷೆ ಹಾಗೂ ಕನ್ನಡಿಗರ ಬಗ್ಗೆ ಉದ್ಧಟತನ ಮೆರೆದ ಗಾಯಕ ಸೋನು ನಿಗಮ್ಗೆ ತಕ್ಕ ಬುದ್ಧಿ ಕಲಿಸಲು ಕನ್ನಡ ಪರ ಸಂಘಟನೆಗಳು ಮುಂದಾಗಿವೆ. ಕನ್ನಡಿಗರಿಗೆ ಸೋನು ನಿಗಮ್ ಅವಮಾನ ಮಾಡಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಇದರ ಅನ್ವಯ ಸೋನು ನಿಗಮ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಗಾಯಕ ಸೋನು ನಿಗಮ್ ಅವರನ್ನು ಕೂಡಲೇ ಬಂಧಿಸಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ನಿಯೋಗ ಪೊಲೀಸ್ ಮಹಾ ನಿರ್ದೇಶಕರಿಗೂ ದೂರು ನೀಡಿ ಮನವಿ ಮಾಡಿದ್ದಾರೆ. ಇತ್ತೀಚೆಗೆ ತಮ್ಮ ಹೇಳಿಕೆ ಬಗ್ಗೆ ವೀಡಿಯೋ ಮಾಡಿ ಸೋನು ಪ್ರತಿಕ್ರಿಯಿಸಿದ್ದರು. "ನಾನು ವೇದಿಕೆಯಲ್ಲಿ ಹಾಡು ಹಾಡುತ್ತಿದ್ದಾಗ ಕೆಳಗಡೆ ನಾಲ್ಕೈದು ಗೂಂಡಾಗಳು ಇದ್ದರು. ಕೂಗಾಡುತ್ತಿದ್ದರು. ಕೆಲವರು ಅವರಿಗೆ ತಿಳಿ ಹೇಳುವ ಪ್ರಯತ್ನ ಮಾಡುತ್ತಿದ್ದರು. ಆದರೂ ಅವರು ಸುಮ್ಮನಾಗಲಿಲ್ಲ. ಹಾಗಾಗಿ ಪಹಲ್ಗಾಮ್ನಲ್ಲಿ ಪ್ಯಾಂಟ್ ಕಳಚುವಾಗ ಭಾಷೆ ಕೇಳಲಿಲ್ಲ ಎಂದು ಅವರಿಗೆ ಅರ್ಥ ಮಾಡಿಸುವುದು ಅನಿವಾರ್ಯವಾಗಿತ್ತು ಎಂದು ಹೇಳಿದ್ದರು.


Click it and Unblock the Notifications











