ಕರ್ನಾಟಕದಲ್ಲಿ ಹೊಸ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ: ಸಾರಾ ಗೋವಿಂದು
ಯುಎಫ್ಓ ಅಂಡ್ ಕ್ಯೂಬ್ ಸಂಸ್ಥೆಯ ವಿರುದ್ಧ ಸಿಡಿದೆದ್ದಿರುವ ದಕ್ಷಿಣ ಭಾರತದ ನಿರ್ಮಾಪಕರು ತಮ್ಮ ಹೋರಾಟವನ್ನ ಮುಂದುವರೆಸಲು ನಿರ್ಧರಿಸಿದ್ದಾರೆ. ಅನಿರ್ದಿಷ್ಟಕಾಲದವರೆಗೂ ಯಾವುದೇ ಹೊಸ ಸಿನಿಮಾ ಬಿಡುಗಡೆ ಮಾಡದಿರಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ತಿಳಿಸಿದ್ದಾರೆ.
ಈ ಬಗ್ಗೆ ಇಂದು ಬೆಂಗಳೂರಿನ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಯಿತು. ಈ ಸುದ್ದಿಗೋಷ್ಠಿಯಲ್ಲಿ ತಮಿಳು ನಿರ್ಮಾಪಕ ಸಂಘದ ಅಧ್ಯಕ್ಷ ನಟ ವಿಶಾಲ್, ಉಪಾಧ್ಯಕ್ಷ ಪ್ರಕಾಶ್ ರೈ, ಹಾಗೂ ಕನ್ನಡ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾರಾ ಗೋವಿಂದು, ಕನ್ನಡ ನಿರ್ಮಾಪಕ ಸಂಘದ ಅಧ್ಯಕ್ಷ ಮುನಿರತ್ನ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಸದ್ಯ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿರುವ ಚಿತ್ರಗಳಿಗೆ ಯಾವುದೇ ಸಮಸ್ಯೆ ಇಲ್ಲ. ಅದನ್ನ ಹೊರತು ಪಡಿಸಿ ಹೊಸ ಸಿನಿಮಾ ಯಾವುದು ತೆರೆಕಾಣುವುದಿಲ್ಲ. ಪರಭಾಷೆ ಚಿತ್ರಗಳಿಗೂ ಮನವಿ ಮಾಡಿಕೊಂಡಿದ್ದೇವೆ. ಈ ವಿಚಾರದಲ್ಲಿ ತಮಿಳು ಚಿತ್ರರಂಗ ಹಾಗೂ ಕರ್ನಾಟಕ ಚಿತ್ರರಂಗ ಒಟ್ಟಿಗೆ ಇದೆ ಎಂದು ಸಾರಾ ಗೋವಿಂದು ಹೇಳಿದರು.

ಈ ಬಗ್ಗೆ ಮಾತನಾಡಿದ ತಮಿಳು ನಿರ್ಮಾಪಕ ಸಂಘದ ಅಧ್ಯಕ್ಷ ನಟ ವಿಶಾಲ್ ''ಯುಎಫ್ಓ ಅಂಡ್ ಕ್ಯೂಬ್ ಸಂಸ್ಥೆಯ ಜೊತೆಗಿನ ಮಾತುಕತೆ ಮುರಿದು ಬಿದ್ದಿದೆ. ಹೋರಾಟ ಮುಂದುವರೆಸುತ್ತೇವೆ. ನಮ್ಮ ಬೇಡಿಕೆಗೆ ಮನ್ನಣೆ ಸಿಗುವವರೆಗೂ ಪ್ರತಿಭಟನೆ ನಿಲ್ಲಿಸಲ್ಲ. ಈ ವಿಚಾರದಲ್ಲಿ ಇಡೀ ದಕ್ಷಿಣ ಚಿತ್ರರಂಗ ಒಟ್ಟಾಗಿದೆ. ಕನ್ನಡ ಚಿತ್ರೋಧ್ಯಮಕ್ಕೆ ವಿಶೇಷವಾದ ಧನ್ಯವಾದ ಅರ್ಪಿಸಿದರು.
ಕಳೆದ ಕೆಲ ದಿನಗಳಿಂದ ಚಿತ್ರಪ್ರದರ್ಶನ ನಿಲ್ಲಿಸಿರುವ ದಕ್ಷಿಣ ಚಿತ್ರರಂಗ ''ಮಾರ್ಚ್ 15 ರಿಂದ ಸಿನಿಮಾಗೆ ಸಂಬಂಧಪಟ್ಟಂತೆ ಯಾವುದೇ ಚಟುವಟಿಕೆಯ ನಡೆಯಲ್ಲ. ಸಿನಿಮಾ ಮುಹೂರ್ತ, ಆಡಿಯೋ ರಿಲೀಸ್, ಸಿನಿಮಾ ಬಿಡುಗಡೆ ಆಗಲ್ಲ ಎಂದು'' ವಿಶಾಲ್ ನಿರ್ಧಾರ ಘೋಷಿಸಿದರು. ಆದ್ರೆ, ಕರ್ನಾಟಕದಲ್ಲಿ ಸಿನಿಮಾ ಪ್ರದರ್ಶನದ ಹೊರತು ಪಡಿಸಿ ಬೇರೆ ಚಟುವಟಿಕೆಗಳು ನಡೆಯಲಿದೆ ಎಂದು ಸಾರಾ ಗೋವಿಂದು ತಿಳಿಸಿದರು.
ಯುಎಫ್ಓ ಅಂಡ್ ಕ್ಯೂಬ್ ಅವರು ಯಾವುದೇ ಒಮ್ಮತಕ್ಕೆ ಬಂದಿಲ್ಲ ಅಂದ್ರೆ ಪರ್ಯಾಯ ಮಾರ್ಗವನ್ನ ಕಂಡುಕೊಳ್ಳುವ ಯೋಚನೆ ಮಾಡಿದ್ದೇವೆ. ನಾವೇ ಬಂಡವಾಳ ಹಾಕಿ ಕೆಲಸ ಮಾಡ್ತೀವಿ ಎಂಬ ತೀರ್ಮಾನಕ್ಕೆ ಬರಲಾಗಿದೆ.


Click it and Unblock the Notifications











