Don't Miss!
- News Narayana Murthy: ಮೊಮ್ಮಗನಿಗೆ ₹240 ಕೋಟಿ ಷೇರು ಉಡುಗೊರೆಯಾಗಿ ಕೊಟ್ಟ ಮೂರ್ತಿ
- Automobiles ಭಾರತದ ರಸ್ತೆಯಲ್ಲಿ ಘರ್ಜಿಸಲು ಬಂದ ಪವರ್ಫುಲ್ ಎಪ್ರಿಲಿಯಾ ಬೈಕ್ ವಿತರಣೆ ಮಾಹಿತಿ ಬಹಿರಂಗ
- Finance ಸಾಂಬಾರು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿ, ಇಂದು 276ಕ್ಕೂ ಹೆಚ್ಚು ಚಿನ್ನಾಭರಣ ಮಳಿಗೆಗಳ ಒಡೆಯ!
- Lifestyle ಹಸುವಿನ ಹಾಲಿನಿಂದ ಇಡೀ ವಿಶ್ವಕ್ಕೆ ಇನ್ಸುಲಿನ್..! ಹೊಸ ಅಧ್ಯಯನದಲ್ಲಿ ಬಹಿರಂಗ.!
- Sports ಆರ್ಸಿಬಿ ಸ್ಟಾರ್ ಶ್ರೇಯಾಂಕಾ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು?; ಶಿಕ್ಷಣ, ವಯಸ್ಸು, ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ
- Technology Samsung: ಸ್ಯಾಮ್ಸಂಗ್ನ ಮುಂಬರುವ ಫೋಲ್ಡಬಲ್ ಫೋನ್ ನೀವು ಊಹಿಸಲಾಗದ ಅಗ್ಗದ ಬೆಲೆಗೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಗಂಧದ ಗುಡಿ' ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿ
ಪುನೀತ್ ರಾಜ್ಕುಮಾರ್ ಅಗಲಿ ವರ್ಷವಾಗುತ್ತಾ ಬಂತು. ಅಪ್ಪು ಅಗಲಿದ ಬಳಿಕ ಅವರು ನಾಯಕ ನಟನಾಗಿ ನಟಿಸಿದ್ದ 'ಜೇಮ್ಸ್' ಸಿನಿಮಾ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಯಿತು. ಬಳಿಕ ಅಪ್ಪು ಅತಿಥಿ ಪಾತ್ರದಲ್ಲಿ ನಟಿಸಿದ್ದ 'ಲಕ್ಕಿ ಮ್ಯಾನ್' ಸಿನಿಮಾ ಬಿಡುಗಡೆ ಆಗಿ ಹಿಟ್ ಆಯಿತು. ಇದಗ ಅಪ್ಪು ಅವರ ಕಟ್ಟ ಕಡೆಯ ಡಾಕ್ಯುಸಿನಿಮಾ 'ಗಂಧದ ಗುಡಿ' ಬಿಡುಗಡೆಗೆ ಸಜ್ಜಾಗಿದೆ.
'ಗಂಧದ ಗುಡಿ' ಸಿನಿಮಾದ ಬಳಿಕ ಪುನೀತ್ ರಾಜ್ಕುಮಾರ್ ಅವರನ್ನು ಅವರ ಪ್ರೀತಿಯ ಅಭಿಮಾನಿಗಳು ಇನ್ನೆಂದೂ ಹೊಸದೊಂದು ಕತೆಯಲ್ಲಿ, ಹೊಸದೊಂದು ಪಾತ್ರದಲ್ಲಿ ಬೆಳ್ಳಿತೆರೆ ಮೇಲೆ ಕಾಣಲಾರರು. 'ಬೆಟ್ಟದ ಹೂ'ವಿನ ಹುಡುಗ 'ಗಂಧದ ಗುಡಿ'ಯಲ್ಲಿ ಅಸ್ತಂಗತನಾಗಲಿದ್ದಾನೆ.
ಪುತ್ರ ಶೋಕಂ ನಿರಂತರಂ ಎಂಬಂತೆ ಮನೆಯ ಮಗನಂತೆ ಎಂದು ಭಾವಿಸಿದ್ದ ಅಪ್ಪುವಿನ ಅಗಲಿಕೆ ಶೋಕವನ್ನು ಇಡೀ ಕರ್ನಾಟಕದ ಜನತೆ ಇಂದಿಗೂ ಆಚರಿಸುತ್ತಿದೆ. ಇಂಥಹಾ ಸಮಯದಲ್ಲಿ ಪುನೀತ್ ರಾಜ್ಕುಮಾರ್ ಅವರು ಕಟ್ಟ ಕಡೆಯದಾಗಿ ಕಾಣಿಸಿಕೊಂಡಿರುವ 'ಗಂಧದ ಗುಡಿ' ಡಾಕ್ಯುಸಿನಿಮಾ ಬಿಡುಗಡೆಗೆ ತಯಾರಾಗಿದೆ.
ಪುನೀತ್ ರಾಜ್ಕುಮಾರ್ ಅವರ ಕಾಲಾನಂತರದಿಂದ ಈ ವರೆಗೆ ಗೌರವಯುತವಾಗಿ, ಪ್ರೀತಿಪೂರ್ವಕವಾಗಿ ನಡೆದುಕೊಂಡಿರುವ ರಾಜ್ಯ ಸರ್ಕಾರ ಇನ್ನೊಂದು ಅಂತಿಮ ಕಾರ್ಯವನ್ನು ಮಾಡಲೇ ಬೇಕಿದೆ. ಅಪ್ಪುವಿನ ಕೊನೆಯ ಬೆಳ್ಳಿತೆರೆ ಪ್ರದರ್ಶನವನ್ನು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಕಣ್ತುಂಬಿಕೊಳ್ಳಲು ಅನುವು ಮಾಡಿಕೊಡಲು ಸರ್ಕಾರ ಸಹಕರಿಸಲೇ ಬೇಕಿದೆ.
ಪುನೀತ್ ರಾಜ್ಕುಮಾರ್ ಅವರ ಕನಸಿನ ಕೂಸು 'ಗಂಧದ ಗುಡಿ'ಯನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಈಗಾಗಲೇ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಧರಿಸಿದ್ದಾರೆ. ಈ ಡಾಕ್ಯುಸಿನಿಮಾವನ್ನು ಹೆಚ್ಚಿನ ಜನ ವೀಕ್ಷಿಸಲೆಂಬ ಸದುದ್ದೇಶದಿಂದ ಸರ್ಕಾರವು ಸ್ವಯಂ ಪ್ರೇರಿತವಾಗಿ ತೆರಿಗೆ ವಿನಾಯಿತಿ ನೀಡಬೇಕಿದೆ.
ಈ ಡಾಕ್ಯುಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡುವುದು ಒಂದು ರೀತಿಯಲ್ಲಿ ಸರ್ಕಾರದ ಕರ್ತವ್ಯ ಸಹ ಹೌದೆನ್ನಬಹುದು. ಏಕೆಂದರೆ 'ಗಂಧದಗುಡಿ' ಕಮರ್ಷಿಯಲ್ ಸಿನಿಮಾ ಅಲ್ಲ, ಬದಲಿಗೆ ಕರ್ನಾಟಕದ ಸುಂದರ ಪ್ರವಾಸಿ ತಾಣಗಳ ದೃಶ್ಯ ಚಿತ್ರಣ, ಐತಿಹಾಸಿಕ ಸ್ಥಳಗಳ ಮಾಹಿತಿಗಳನ್ನು ಒಳಗೊಂಡ, ರಾಜ್ಯದ ಪ್ರವಾಸೋದ್ಯಮಕ್ಕೆ ದೊಡ್ಡ ಮಟ್ಟದಲ್ಲಿ ಬೂಸ್ಟ್ ನೀಡಬಲ್ಲ ದೃಶ್ಯ ಜೋಡಣೆಗಳನ್ನೊಳಗೊಂಡ ಡಾಕ್ಯುಸಿನಿಮಾ.
'ಗಂಧದ ಗುಡಿ'ಗೆ ತೆರಿಗೆ ವಿನಾಯಿತಿ ನೀಡಿ
ಸರ್ಕಾರ ಹಲವು ಸಂದರ್ಭಗಳಲ್ಲಿ ಪುನೀತ್ ರಾಜ್ಕುಮಾರ್ ಅವರನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡಿದೆ. ಅದರಲ್ಲಿಯೂ ತಮ್ಮ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಸರ್ಕಾರ ಅತಿಯಾಗಿ ನೆಚ್ಚಿಕೊಂಡಿದ್ದ ನಟರೆಂದರೆ ಅದು ಪುನೀತ್ ರಾಜ್ಕುಮಾರ್. ಸರ್ಕಾರಕ್ಕೆ ಕೆಲಸ ಮಾಡುವುದೆಂದರೆ ನೇರವಾಗಿ ಜನರಿಗೆ ಕೆಲಸ ಮಾಡಿದಂತೆ ಎಂದು ಭಾವಿಸಿ ಹಣ ಪಡೆಯದೆ ಉಚಿತವಾಗಿ ಸರ್ಕಾರಿ ಜಾಹೀರಾತುಗಳಲ್ಲಿ ಪುನೀತ್ ಕಾಣಿಸಿಕೊಂಡಿದ್ದರು. ಇದೀಗ ಸರ್ಕಾರವು, 'ಗಂಧದ ಗುಡಿ'ಗೆ ತೆರಿಗೆ ವಿನಾಯಿತಿ ನೀಡುವ ಮೂಲಕ ಋಣಭಾರ ಮುಕ್ತಿ ಹೊಂದಬಹುದಾಗಿದೆ.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಲಾಗಿತ್ತು
ಈ ಹಿಂದೆ ಪುನೀತ್ ರಾಜ್ಕುಮಾರ್ ನಟನೆಯ 'ಜೇಮ್ಸ್' ಸಿನಿಮಾ ಬಿಡುಗಡೆ ಆದಾಗಲೂ ತೆರಿಗೆ ವಿನಾಯಿತಿಗಾಗಿ ಅಪ್ಪು ಅಭಿಮಾನಿಗಳು ಮನವಿ ಮಾಡಿದ್ದರು. ಆದರೆ ಆಗ ತೆರಿಗೆ ವಿನಾಯಿತಿ ಸಿಕ್ಕಿರಲಿಲ್ಲ. 'ಜೇಮ್ಸ್' ಸಿನಿಮಾದ ಬದಲಿಗೆ ವಿವಾದಾತ್ಮಕ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್'ಗೆ ಕರ್ನಾಟಕದಲ್ಲಿ ತೆರಿಗೆ ವಿನಾಯಿತಿ ನೀಡಲಾಗಿತ್ತು. ಆ ನಂತರ ಚಿತ್ರತಂಡದ ಒತ್ತಾಯದ ಬಳಿಕ, '777 ಚಾರ್ಲಿ' ಸಿನಿಮಾ ಬಿಡುಗಡೆ ಆಗಿ ಕೆಲದಿನಗಳ ಆದ ಬಳಿಕ ಆ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಲಾಯಿತು. ಈಗ ಸರ್ಕಾರಕ್ಕೆ ಮತ್ತೊಂದು ಅವಕಾಶ ಒದಗಿ ಬಂದಿದೆ. 'ಗಂಧದ ಗುಡಿ' ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿ ಅಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಬಹುದಾಗಿದೆ.
'ಗಂಧದ ಗುಡಿ'ಯನ್ನು ಹೆಚ್ಚು ಮಂದಿಗೆ ತಲುಪಿಸಲು ನೆರವಾಗುತ್ತದೆ
'ಗಂಧದ ಗುಡಿ' ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿದರೆ, ರಾಜ್ಯದ ಘನತೆ ಸಾರುವ ಪುನೀತ್ ರಾಜ್ಕುಮಾರ್ ಅವರ ಪ್ರಯತ್ನಕ್ಕೆ ಸರ್ಕಾರ ಬೆಂಬಲಿಸದಂತಾಗುತ್ತದೆ. ತೆರಿಗೆ ವಿನಾಯಿತಿಯಿಂದ ಟಿಕೆಟ್ ಬೆಲೆಗಳು ಕಡಿಮೆಯಾಗಿ ಹೆಚ್ಚು ಹೆಚ್ಚು ಮಂದಿ ಚಿತ್ರಮಂದಿರಕ್ಕೆ ಬಂದು ಪುನೀತ್ ರಾಜ್ಕುಮಾರ್ ಅವರನ್ನು ಕೊನೆಯ ಬಾರಿ ಚಿತ್ರಮಂದಿರದಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆ. ಒಟ್ಟಾರೆ, 'ಗಂಧದ ಗುಡಿ'ಯನ್ನು ಹೆಚ್ಚು ಮಂದಿಗೆ ತಲುಪಿಸಬೇಕು, ತಮ್ಮ ರಾಜ್ಯದ ನೈಸರ್ಗಿಕ ವೈಭವವನ್ನು ಎಲ್ಲರಿಗೂ ಪರಿಚಯಿಸಬೇಕು ಎನ್ನುವ ಪುನೀತ್ ರಾಜ್ಕುಮಾರ್ ಅವರ ಕನಸಿಗೆ ಬೆಂಬಲ ನೀಡಿದಂತಾಗುತ್ತದೆ.
ಅಕ್ಟೋಬರ್ 28 ರಂದು ಬಿಡುಗಡೆ ಆಗಲಿದೆ
'ಗಂಧದ ಗುಡಿ' ಸಿನಿಮಾ ಅಲ್ಲ. ಇಲ್ಲಿ ಪುನೀತ್ ರಾಜ್ಕುಮಾರ್ ನಟಿಸಿಲ್ಲ ಬದಲಿಗೆ ಅವರೇ ಅವರಾಗಿದ್ದಾರೆ. ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟ, ಬಯಲುಸೀಮೆಗಳಿಗೆ ತೆರಳಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ಣಾರೆ ಆನಂದಿಸಿ ಅದನ್ನು ಕ್ಯಾಮೆರಾದಲ್ಲಿ ದಾಖಲು ಮಾಡಿಕೊಂಡಿದ್ದಾರೆ. ಈ ಯಾತ್ರೆಯಲ್ಲಿ ಅವರಿಗೆ ಅಮೋಘ ವರ್ಷ ಸಹ ಜೊತೆಯಾಗಿದ್ದಾರೆ. ಈ ಡಾಕ್ಯುಸರಣಿಯು ಅಕ್ಟೋಬರ್ 28 ರಂದು ತೆರೆಗೆ ಬರಲಿದೆ.