ರಾಜ್ಕುಮಾರ್-ಪುನೀತ್ ಜೀವನ ಚರಿತ್ರೆ ಸಾರುವ ಸ್ಮಾರಕ ನಿರ್ಮಾಣ: ಸಿಎಂ ಘೋಷಣೆ
ಪುನೀತ್ ರಾಜ್ಕುಮಾರ್ ಹಾಗೂ ಡಾ ರಾಜ್ಕುಮಾರ್ ಅವರ ಜೀವನ ಚರಿತ್ರೆ ಸಾರುವ ಸ್ಮಾರಕ ನಿರ್ಮಾಣ ಆಗಬೇಕೆಂಬುದು ಅಭಿಮಾನಿಗಳ ಆಸೆ, ಅವರ ಆಸೆಯಂತೆ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಬೆಂಗಳೂರಿನ 100 ಫೀಟ್ ರಿಂಗ್ ರಸ್ತೆಗೆ ಪುನೀತ್ ರಾಜ್ಕುಮಾರ್ ಹೆಸರು ನಾಮಕರಣ ಮಾಡುವ 'ಬಾನದಾರಿಯಲ್ಲಿ ಪುನೀತ ಪಯಣ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಮೇಲಿನಂತೆ ಘೋಷಣೆ ಮಾಡಿದ್ದಾರೆ.
ಪುನೀತ್ ರಾಜ್ಕುಮಾರ್ ಹಾಗೂ ಅಣ್ಣಾವ್ರ ಸಮಾಧಿ ಸ್ಥಳದಲ್ಲಿ ಅಪ್ಪು ಅವರ ಮತ್ತು ಡಾ. ರಾಜ್ಕುಮಾರ್ ಜೀವನ ಚರಿತ್ರೆ ಹೇಳುವಂತಹ ಅದ್ಭುತವಾದ ಸ್ಮಾರಕವನ್ನು ನಮ್ಮ ಸರ್ಕಾರದ ವತಿಯಿಂದ ನಿರ್ಮಾಣ ಮಾಡುತ್ತೇವೆ. ಅಪ್ಪು ಅವರ ಸ್ಮಾರಕ ಮಾಡುವ ಭಾಗ್ಯ ನನ್ನದು. ಅಲ್ಲದೇ ಅವರಿಗೆ ಕರ್ನಾಟಕ ರತ್ನ ಕೊಡುವಂತಹ ಭಾಗ್ಯ ಕೂಡ ನನ್ನದಾಗಿತ್ತು' ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಾನು ಬೀದರ್, ಚಾಮರಾಜ ನಗರ, ಕಲಬುರಗಿ ಔರಾದ್ ಅಂಥಹಾ ರಾಜ್ಯದ ಗಡಿಯಲ್ಲಿನ ಕೊನೆಯ ಗ್ರಾಮಗಳಿಗೆ ಹೋಗಿದ್ದೇನೆ ಅಲ್ಲಿಯೂ ಸಹ ಅಪ್ಪು ಚಿತ್ರಗಳು ನನ್ನನ್ನು ಸ್ವಾಗತಿಸಿವೆ. ಒಮ್ಮೆಯಂತೂ ಯಾವುದೋ ಗ್ರಾಮಕ್ಕೆ ಹೋದಾಗ ಅಲ್ಲಿ, ಅಪ್ಪು ಅಭಿಮಾನಿಗಳು ಬಂದು ಅಪ್ಪುವಿನ ಚಿತ್ರ ಹಿಡಿದುಕೊಂಡು ನಮ್ಮೊಂದಿಗೆ ಚಿತ್ರ ತೆಗೆಸಿಕೊಳ್ಳಬೇಕು ಎಂದರು ಇದನ್ನೆಲ್ಲ ನೋಡಿ ನನಗೆ ಆಶ್ಚರ್ಯವಾಗುತ್ತದೆ. ಅಪ್ಪು ಹೇಗೆ ಬದುಕಿದ್ದರು ಎಂಬುದಕ್ಕೆ ಇದು ನಿದರ್ಶನ ಎಂದರು ಸಿಎಂ.
''ಡಾ ರಾಜ್ಕುಮಾರ್ ಅವರ ಕುಟುಂಬದ ಜೊತೆ ನನಗೆ ಹಲವು ವರ್ಷಗಳ ಒಡನಾಟ ಇದೆ. ಎಲ್ಲರನ್ನೂ ನಗುವಿನಿಂದ ಮತ್ತು ಹೃದಯ ಶ್ರೀಮಂತಿಕೆಯಿಂದ ಗೆದ್ದ ವ್ಯಕ್ತಿ ಅಪ್ಪು. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ಹಲವರು ನಮ್ಮನ್ನ ಬಿಟ್ಟು ಹೋಗಿದ್ದಾರೆ'' ಎಂದು ಬೊಮ್ಮಾಯಿ ಹೇಳಿದರು.
ಬೊಮ್ಮಾಯಿ ಮಾತ್ರವೇ ಅಲ್ಲದೆ, ಕಂದಾಯ ಸಚಿವ ಆರ್ ಅಶೋಕ್, ಸಂಸದ ತೇಜಸ್ವಿ ಸೂರ್ಯ, ನಟ ಅಭಿಷೇಕ್ ಅಂಬರಿಶ್ ಇನ್ನೂ ಹಲವರು ವೇದಿಕೆ ಮೇಲೆ ಪುನೀತ್ ರಾಜ್ಕುಮಾರ್ ಅವರನ್ನು ಸ್ಮರಿಸಿಕೊಂಡರು. ಅಪ್ಪುವಿನ ಚಿತ್ರವಿದ್ದ ಬಲೂನುಗಳನ್ನು ಇದೇ ಸಮಯದಲ್ಲಿ ಆಗಸಕ್ಕೆ ಹಾರಿ ಬಿಡಲಾಯ್ತು.


Click it and Unblock the Notifications











